ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರುಣಾಜನಕ ಕಥೆ

ಅಡುಗೆ ಮನೆಯಿಂದ ಸೆರಗನ್ನು ಗಟ್ಟಿಯಾಗಿ ಹಿಡಿದು ಸರ ಸರ ಹೊರನಡೆದ ಮನೆ ಕೆಲಸದ ನಿರ್ಮಲಳನ್ನು ಆ ಮನೆಗೆ ಹೊಸದಾಗಿ ಬಂದಿದ್ದ ಸೊಸೆ ಅನುಮಾನದಿಂದ ನೋಡುತ್ತಾಳೆ.

ಮಾರನೆಯ ದಿನವೂ ಮನೆಕೆಲಸದವಳು ಎಲ್ಲಾ ಕೆಲಸ ಮುಗಿಸಿ ಹೋಗುವಾಗ ಸೆರಗನ್ನು ಗಟ್ಟಿ ಹಿಡಿದು ಸರ ಸರ ಹೋಗುತ್ತಾಳೆ.
ಮತ್ತೆ ಆ ಮನೆಯ ಎರಡನೆ ಸೊಸೆ ಸಾನ್ವಿಗೆ ಅನುಮಾನ ಬಂದು ಅತ್ತೆಗೆ ಹೇಳುತ್ತಾಳೆ. ಮನೆಕೆಲಸದವಳು ಬಹುಷಃ ದಿನಾ ಏನನ್ನೋ ಕದ್ದು ಹೋಗುತ್ತಿದ್ದಾಳೆ ಅತ್ತೆ ವಿಚಾರಿಸಿ ಅನ್ನುತ್ತಾಳೆ.ಆಗ ಅತ್ತೆ, “ಸಾನ್ವಿ, ನಿರ್ಮಲ ಆತರಹದವಳಲ್ಲ ಪಾಪ ಅವಳ ಗಂಡ ಗಾರೆ ಕೆಲಸಕ್ಕೆ ಹೋದಾಗ ಬಿದ್ದು ಸೊಂಟ ಮುರಿದಿದೆ.
ಇಬ್ಬರು ಮಕ್ಕಳಂತೆ ಅವಳಿಗೆ, ಅದಕ್ಕೆ ಕೆಲಸಕ್ಕೆ ಬರುತ್ತಿದ್ದಾಳೆ. ಎರಡು ವರ್ಷದಿಂದ ನಮ್ಮ ಮನೆಯಲ್ಲಿ‌ ಕೆಲಸ ಮಾಡುತ್ತಿದ್ದಾಳೆ. ಯಾವ ವಸ್ತುವೂ ಇದುವರೆಗೂ ಕಳುವಾಗಿಲ್ಲ” ಅಂದಾಗ ಸಾನ್ವಿ, “ಇಲ್ಲ ಅತ್ತೆ, ನಾನೇ ನೋಡಿದೆ. ಸೆರಗಿನಲ್ಲಿ ಏನೋ ಹಿಡಿದಿದ್ದಳು” ಅನ್ನುವಳು .
ಅತ್ತೆಗೆ ಅನುಮಾನ ಬಾರದೇ ಇದ್ದರೂ ಸೊಸೆ ಮಾತಿಗೆ ಹೂಂ ಅನ್ನುವಳು.
ಮತ್ತೆ ಮಾರನೆಯ ದಿನ ಕೆಲಸದವಳಾದ ನಿರ್ಮಲ ಎಲ್ಲಾ ಕೆಲಸ ಮುಗಿಸಿ ಮತ್ತೆ ಸೆರಗನ್ನು ಬಿಗಿ ಹಿಡಿದು ಅಮ್ಮ ಬರ್ತೀನಿ ಅಂತ ಅವಸರದಲ್ಲಿ ಹೊರಗೆ ಹೋಗುವಳು. ಇದನ್ನು ಗಮನಿಸಿದ ಅತ್ತೆ ಯಾಕೀಗೆ ಹೋದಳು ಎಂದು ಅಡುಗೆ ಮನೆಗೆ ಹೋಗಿ ಎಲ್ಲಾ ವಸ್ತು ಪದಾರ್ಥಗಳನ್ನು ನೋಡುವಳು, ಎಲ್ಲಾ ಇರುತ್ತದೆ. ಯಾವ ವಸ್ತುವೂ ಕಾಣೆ ಯಾಗಿರುವುದಿಲ್ಲ.
ಮತ್ತೇಕೆ ಸೆರಗಿನಲ್ಲಿ ಏನನ್ನೋ ಬಚ್ಚಿಟ್ಟು ಕೊಂಡ ಹಾಗಿತ್ತು ಅಂತ ಅಂದು ಕೊಳ್ಳುವಳು.

ಮಾರನೆಯ ದಿನವೂ ನಿರ್ಮಲ ಕೆಲಸ ಮುಗಿಸಿದ ನಂತರ ಸೆರಗನ್ನ ಹಿಡಿದು ಹೋಗುವಳು. ಮನೆ ಯಜಮಾನಿ ಮತ್ತೆ ಅಡುಗೆ ಮನೆ ಸರ್ಚ್ ಮಾಡಿದರೆ ಎಲ್ಲಾ ಹಾಗೆ ಇರುತ್ತಿತ್ತು. ಮತ್ತೆ ಪಾತ್ರೆಗಳಲ್ಲಿದ್ದ ಊಟ ಸಹ ಇರುತಿತ್ತು. ಯಾವುದೂ ಕಾಣೆಯಾಗಿರಲ್ಲ.
ಮತ್ತ್ಯಾಕೆ ಹಾಗೆ ನಿರ್ಮಲ ವರ್ತಿಸುವಳು ? ಕಂಡು ಹಿಡಿಯ ಬೇಕು ಎಂದು ಅಡುಗೆ ಮನೆಗೆ CC ಕ್ಯಾಮೆರಾ ಹಾಕಿಸುವಳು.
ಮಾರನೆಯ ದಿನ ಊಟದ ನಂತರ ಎಲ್ಲರೂ ಹೊರಗೆ ಬರದೆ ರೂಮ್ ನಲ್ಲಿಯೇ ಇರುವರು. ಗಮನಿಸಿದ ನಿರ್ಮಲ ಯಾವುದೇ ಟೆನ್ಷನ್ ಇಲ್ಲದೇ ಕೆಲಸ ಮುಗಿಸಿ ಮತ್ತೆ ಸೆರಗನ್ನು ಕೈಗಳಲ್ಲಿ ಹಿಡಿದು ಹೋಗುವಳು
ಅತ್ತೆ ಮತ್ತೆ ಸೊಸೆ ಮನೆಯವರೆಲ್ಲ ಕ್ಯಾಮೆರಾ ದ ಫೂಟೇಜ್ ನೋಡಲು ಉತ್ಸುಕರಾಗಿರುತ್ತಾರೆ. ಈಗ ನಿರ್ಮಲ ರೆಡ್ ಹ್ಯಾಂಡ್ ಆಗಿ ಸಿಗುತ್ತಾಳೆ ಅಂತ ವಿಡಿಯೋ ನೋಡುತ್ತಾರೆ.

ಎಂದಿನಂತೆ ನಿರ್ಮಲ ಮನೆಯವರೆಲ್ಲರ ಊಟದ ನಂತರ ಎಲ್ಲಾ ತಟ್ಟೆ ತೆಗೆದು ಸಿಂಕ್ ಬಳಿ ಇಡುತ್ತಾಳೆ. ಮೊದಲೇ ಶ್ರೀಮಂತರ ಮನೆ ತಟ್ಟೆಗಳಲ್ಲಿ ಅರ್ಧ ಊಟ ಹಾಗೆ ಬಿಟ್ಟಿರುತ್ತಾರೆ.
ಆಗ ನಿರ್ಮಲ ಆ ತಟ್ಟೆಗಳಲ್ಲಿ ಇದ್ದ ಉಳಿದ ಆಹಾರವನ್ನು ಕವರ್ ಗೆ ಹಾಕಿ ಪ್ಯಾಕ್ ಮಾಡುತ್ತಾಳೆ‌‌. ಸೈಡ್ ನಲ್ಲಿ ಇಟ್ಟು ಎಲ್ಲಾ ಕೆಲಸ ಮುಗಿಸಿ, ಆ ಕವರ್ ಗಳನ್ನು ಸೆರಗಲ್ಲಿ ಇಟ್ಟು ಕೈಯಲ್ಲಿ ಸೆರಗನ್ನು ಹಿಡಿದು ಸರ ಸರ ಹೊರಗೆ ಹೋಗುತ್ತಾಳೆ.

ಇದನ್ನು ನೋಡಿದ ಮನೆಯವರೆಲ್ಲರೂ ಏನೂ ಅರ್ಥವಾಗದೇ ನಿರ್ಮಲ ಇದೇಕೆ ಎಂಜಲು ತಟ್ಟೆಯ
ಊಟ ಕಟ್ಟಿ ಕೊಂಡು ಹೋಗುತ್ತಾಳೆ ಏನಿದು ಅರ್ಥ ವಾಗುತ್ತಿಲ್ಲ ಅಂತ ಯೋಚಿಸುತ್ತಾರೆ.

ಮತ್ತೆ ಮಾರನೆಯ ದಿನದ ವಿಡಿಯೋ ನೋಡಿದಾಗಲೂ ನಿರ್ಮಲ ಎಂಜಲು ತಟ್ಟೆಯ ಊಟ ಕಟ್ಟಿ ಕೊಂಡು ಹೋಗುತ್ತಾಳೆ.

ಮನೆಯವರಿಗೆ ಅರ್ಥವಾಗಲ್ಲ ಇದೇನು ಮಾಡುತ್ತಿರುವಳು ಎಂದು ಕೊಂಡು, ಮನೆಯ ಯಜಮಾನಿ ಕಾರ್ ಡ್ರೈವರ್ ನ ಕರೆದು, “ನೋಡು ನೀನು ನಿರ್ಮಲಾಳನ್ನ ಫಾಲೋ ಮಾಡಿ, ಅವಳು ಪಾರ್ಸಲ್ ತೆಗೆದು ಕೊಂಡ ಊಟ ಏನು ಮಾಡುತ್ತಾಳೆ ಅಂತ ನೋಡಿ ನನಗೆ ಹೇಳಬೇಕು” ಅನ್ನುತ್ತಾಳೆ.

ಡ್ರೈವರ್ ಫಾಲೋ ಮಾಡುತ್ತಾನೆ, ನಿರ್ಮಲಾ ಹೋಗುತ್ತಿರುತ್ತಾಳೆ, ಒಂದು ಮನೆಗೆ ಹೋಗುತ್ತಾಳೆ . ಡ್ರೈವರ್ ಕಾರ್ ನಿಲ್ಲಿಸಿ ಆ ಮನೆಯ ಕಿಟಕಿ ಯಿಂದ ಎಲ್ಲಾ ನೋಡುತ್ತಾ ಇರುತ್ತಾನೆ.
ನಿರ್ಮಲ ಸೆರಗಿನಲ್ಲಿ ಇದ್ದ ಪಾರ್ಸಲ್ ತೆರೆದಾಗ ಡ್ರೈವರ್ ವಿಡಿಯೋ ಮಾಡೋಣ ಅಂತ ವಿಡಿಯೋ ಮಾಡುತ್ತಾನೆ

ಡ್ರೈವರ್ ತಾನು ತೆಗೆದ ವಿಡಿಯೋವನ್ನು ಮನೆಯ ಯಜಮಾನಿತಿಗೆ ಕಳಿಸುತ್ತಾನೆ.ಮತ್ತೆ ಮನೆಯವರೆಲ್ಲ ಕುಳಿತು ಆ ವಿಡಿಯೋ ನೋಡುತ್ತಾರೆ

ನಿರ್ಮಲಾ ಸೆರಗಿಂದ ತಂದಿದ್ದ ಕವರ್ ಗಳನ್ನ ಬಿಚ್ಚಿ ಮಕ್ಕಳನ್ನುಕರಿತಾಳೆ.ತಟ್ಟೆಗೆ ಆ ಊಟ ಹಾಕಿ ಕೊಡುತ್ತಾಳೆ
ಅನಾರೋಗ್ಯದಲ್ಲಿ ಸದಾ ಹಾಸಿಗೆಯ ಮೇಲೆ ಇದ್ದ ಗಂಡನಿಗೂ ಊಟ ಕೊಡುತ್ತಾಳೆ. ಅವಳ ಅತ್ತೆಗೂ ಊಟ ಕೊಡುತ್ತಾಳೆ.

ಅವಳ ಅತ್ತೆ, “ಇವತ್ತು ಏನು ವಿಶೇಷ ನಿಮ್ಮ ಯಜಮಾನಿ ಮನೇಲಿ ? ಪಾಪ ಆ ಯಮ್ಮ ದಿನಾ ನಮಗೆಲ್ಲ ಇಷ್ಟೊಂದು ರುಚಿ ರುಚಿ ಯಾದ ಊಟ ಕಳಿಸುತ್ತಾರೆ. ನಿಮ್ಮ ಯಜಮಾನಿ ಅವರ ಗಂಡ ಮಕ್ಕಳು ತಣ್ಣಗೆ ಇರಲಿ ದೇವರು ಚೆನ್ನಾಗಿ ಇಟ್ಟಿರಲಿ
ಅವರ ಮನೆಯವರನ್ನೆಲ್ಲ” ಎಂದು ಹೇಳುತ್ತಾ ಊಟ ಮಾಡುತ್ತಾಳೆ.

ವಿಡಿಯೋ ದಲ್ಲಿ ಈ ದೃಷ್ಯ ನೋಡಿದ ಆ ಶ್ರೀಮಂತ ಕುಟುಂಬದವರೆಲ್ಲ ಕುಳಿತಲ್ಲಿಯೇ ಬಿಕ್ಕುತ್ತಾರೆ, ಅವರ ಕಣ್ಣುಗಳು ತೇವಗೊಳ್ಳುತ್ತವೆ.

ಮನೆಯ ಯಜಮಾನಿ ಮತ್ತೆ ಸೊಸೆಗೆ ಬಹಳ ದುಃಖವಾಗುತ್ತದೆ. ಇದ್ಯಾಕೆ ನಿರ್ಮಲ ಹೀಗೆ ಮಾಡಿದಳು.

ಮಾಡಿದ್ದ ಅಡಿಗೆಯನ್ನೇ ತೆಗೆದು ಕೊಂಡು ಹೋಗ ಬಹುದಿತ್ತಲ್ವಾ ಅಂತ ಮಾತಾಡಿ ಕೊಳ್ಳುತ್ತಾರೆ. ಬಹಳ ದುಃಖಿತರಾಗುತ್ತಾರೆ, ಪಾಪ ನಮ್ಮ ಎಂಜಲಿನ ಊಟ ಮಾಡಿದರಲ್ವಾ ಎಂದು.

ಮತ್ತೆ ಮಾರನೆಯ ದಿನ ಊಟದ ನಂತರ ನಿರ್ಮಲ ಎಲ್ಲಾ ತಟ್ಟೆ ಸಿಂಕ್ ಬಳಿ ಇಡುತ್ತಾಳೆ. ಆದರೆ ಮನೆಯ ಯಜಮಾನಿ ರೂಮಿಗೋಗದೆ ನೇರ ಅಡುಗೆ ಮನೆಗೆ ಹೋಗುತ್ತಾಳೆ.
ನಿರ್ಮಲಾಗೆ ಕಷ್ಟ ವಾಗುತ್ತದೆ. ಅಡುಗೆ ಮನೆಗುಡಿಸಿ ಹೊರೆಸಿ ಪಾತ್ರೆ ತೊಳೆಯಲೋಗುತ್ತಾಳೆ.ಆದರೆ ಯಜಮಾನಿ ಅಡುಗೆ ಮನೆಯಲ್ಲೇ ಇರುತ್ತಾಳೆ. ನಿರ್ಮಲಾ ತಟ್ಟೆಗಳಲ್ಲಿದ್ದ ಊಟ ನೋಡಿ ಕವರ್ ಗೆ ಹೇಗೆ ಹಾಕಿ ಕೊಳ್ಳುವುದು ಅಂತ ಹಾಗೆ ಇರ್ತಾಳೆ. ಆಗ ಮನೆ ಯಜಮಾನಿ ಏನ್ ನೋಡ್ತಿದ್ದೀಯ ಎಂಜಲು ತಟ್ಟೆ ಊಟ ಒಂದು ಬಟ್ಟಲಿಗೆ ಹಾಕಿ ಅದನ್ನು ಡಸ್ಟ್ ಬಿನ್ ಗೆ ಹಾಕು ಅನ್ನುವಳು.

ನಿರ್ಮಲಾ ಒಳಗೆ ಅಳುತ್ತಾ ಅಯ್ಯೋ ಇವತ್ತು ಮನೆಗೆ ಏನೂ ತೆಗೆದು ಕೊಂಡು ಹೋಗಲು ಆಗಲ್ಲ ಮನೆಯವರೆಲ್ಲ ಉಪವಾಸ ಇರಬೇಕಾಗುತ್ತದೆ, ಅಂತ ಇದ್ದಾಗ ಯಜಮಾನಿ ಜೋರಾಗಿ ಯಾಕೆ ಬೇಗ ಬಟ್ಟಲಿಗೆ ಹಾಕು ಅಂದಾಗ ನಡುಗುವ ಕೈ ಯಿಂದ ಮನಸ್ಸಿಲ್ಲದೆ ತಟ್ಟೆಗಳ ಎಲ್ಲಾ ಊಟವನ್ನು ಬಟ್ಟಲಿಗೆ ಹಾಕುವಾಗ ಕರುಳೇ ಕಿತ್ತಂತಾಗುತ್ತದೆ ನಿರ್ಮಲಾಳಿಗೆ.ಆ ಊಟದಲ್ಲಿ ಮಕ್ಕಳು ಕಾಣಿಸುತ್ತಾರೆ.

ಯಜಮಾನಿ ನಿರ್ಮಲಾ ಅದನ್ನು ಹಾಗೆ ಡಸ್ಟ್ ಬಿನ್ ಗಾಕು ಇಲ್ಲ ವಾಸನೆ ಬರುತ್ತೆ ಅಂತ ಊಟಾನ ಡಸ್ಟ್ ಬಿನ್ ಗೆ ಹಾಕಿಸುತ್ತಾಳೆ. ನಿರ್ಮಲಾ ಮನಸ್ಸಲ್ಲೇ ಅಯ್ಯೋ ದೇವರೇ ಇಂದೇಕೆ ನನ್ನ ಮೇಲೆ ನಿನಗೆ ಅಷ್ಟೊಂದು ಕೋಪ ಊಟ ವೆಲ್ಲ ವ್ಯರ್ಥ ವಾಯ್ತು
ನನ್ನ ಮನೆಯವರೆಲ್ಲ ತಿನ್ನುತ್ತಾ ಇದ್ದರು ಇಂದು ಉಪವಾಸವೇ ಗತಿ ನಮಗೆ ಎಂದು ಎಲ್ಲಾ ಕೆಲಸ ಮುಗಿಸಿ ಅಮ್ಮ ಬರುತ್ತೇನೆ ಅಂತ ಹೇಳಿ ಹೋಗುವಾಗ ಬಹಳ ದುಃಖತಪ್ತಳಾಗಿ ಹೊರಗೆ ಹೋಗಿ ಚಪ್ಪಲಿ ಹಾಕಿ ಭಾರವಾದ ಹೆಜ್ಜೆ ಹಾಕುತ್ತಾ ಹೋಗುವಾಗ, ಮನೆಯ ಯಜಮಾನಿ ಜೋರಾಗಿ ನಿರ್ಮಲಾ ಅಂದಾಗ ಗಾಬರಿಯಿಂದ ನಿರ್ಮಲಾ ಹಿಂದೆ ತಿರುಗುತ್ತಾಳೆ
ಮನೆ ಯಜಮಾನಿ ನಿರ್ಮಲಾ ಹತ್ತಿರ ಬಂದು ಒಂದು ಬ್ಯಾಗ್ ಅನ್ನು ಕೊಡುತ್ತಾಳೆ. ನಿರ್ಮಲಾ ಏನಿದು ಅಂದಾಗ ಯಜಮಾನಿ ಊಟ ಇದೆ ಬಾಕ್ಸ್ ಗಳಲ್ಲಿ ಮನೆಗೆ ತೆಗೆದು ಕೊಂಡು ಹೋಗಿ ಮನೆಯವರಿಗೆ ಕೊಡು ಇನ್ನು ಮುಂದೆ ಹೋಗುವಾಗ ಊಟವನ್ನೂ ತೆಗೆದು ಕೊಂಡು ಹೋಗು. ಆದರೆ ಒಂದು ಮಾತು ಎಂಜಲು ತಟ್ಟೆಯ ಊಟ ಮಾತ್ರ ಬೇಡ ತೆಗೆದುಕೊಂಡು ಹೋಗಬೇಡ ಅಂದಾಗ ನಿರ್ಮಲಾ ಯಜಮಾನಿಯ ಬಳಿ ಮಂಡಿ ಊರಿ ಅಳುತ್ತಾ ಇರುತ್ತಾಳೆ ಗೊತ್ತಾಯ್ತಾ ಅಂತ.

ಯಜಮಾನಿ ನೋಡು ನಿರ್ಮಲಾ ಊಟ ಕೇಳಿದ್ದರೆ ಕೊಡುತ್ತಿದ್ದೆವಲ್ಲ ಎಂಜಲ ತಟ್ಟೆಯದು ಯಾಕೆ ಅಂದಾಗ ಅಳುತ್ತಾ ನಿರ್ಮಲಾ.

ಅಮ್ಮ ನನ್ನ ಗಂಡ ಮೇಲಿಂದ ಬಿದ್ದು ಏಳಲಾಗದ ಪರಿಸ್ಥಿತಿ ಇಬ್ಬರು ಮಕ್ಕಳು ವಯಸ್ಸಾದ ಅತ್ತೆ, ನಾವು ಬಡವರು.
ನಿಮ್ಮಂತಹ ಶ್ರೀಮಂತರ ಮನೆಯಲ್ಲಿ ರುಚಿ ರುಚಿಯಾದ ಅಡುಗೆ ಮಾಡುವಿರಿ. ಅಂತಹ ಅಡುಗೆ ನಾವು ತಿನ್ನಲು ಸಾಧ್ಯವೇ ಇಲ್ಲ ಮತ್ತೆ ನೋಡೂ ಇಲ್ಲ .

ನಿಮ್ಮ ಮನೆಯಲ್ಲಿ ಬರೀ ತಟ್ಟೆಯಲ್ಲೇ ಎಲ್ಲಾ ಊಟ ಬಿಡ್ತಾರೆ ಎರಡು ಸ್ಪೂನ್ ತಿಂದು. ಎಂಜಲು ಸರಿಯಾಗಿ ಆಗಿರಲ್ಲ ಬರೀ ತುಪ್ಪ ಗೋಡಂಬಿ ಬಾಸುಮತಿ ಅನ್ನ ಅಂತಹ ಊಟ ಮುಸುರೆಗೆ ಹಾಕಲು ಮನಸ್ಸೇ ಬರ್ತಿರಲಿಲ್ಲ

ವಿಧ ವಿಧವಾದ ಅಡಿಗೆ ಮಾಡುತ್ತೀರಿ. ಅಂತ ಊಟ ನಾವು ತಿನ್ನಲು ಸಾಧ್ಯವಾ ?

ನೀವೆಲ್ಲ ದಿನಾ ಸ್ನಾನ ಮಾಡಿ ನೀಟಾಗಿ ಇರ್ತೀರಿ ನೀವು ಬಿಟ್ಟ ಊಟ ಚೆನ್ನಾಗಿ ಇರುತ್ತೆ, ಅದಕ್ಕೆ ಅದನ್ನು ಬಿಸಾಡಲಾಗದೆ ಮನೆಗೆ ತೆಗೆದು ಕೊಂಡು ಹೋಗುತ್ತಿದ್ದೆ ಅಂದಾಗ…

ಯಜಮಾನಿ ಕಣ್ಣಂಚು ತೇವ ಗೊಳ್ಳುತ್ತದೆ. ಇನ್ಮೇಲೆ ದಿನಾ ಊಟ ತೆಗೆದು ಕೊಂಡು ಹೋಗು ಎಂದು ಹೇಳಿ ಕಳಿಸುತ್ತಾಳೆ.

ಮನೆಯವರಿಗೆಲ್ಲ ಇನ್ನು ಮುಂದೆ ತಟ್ಟೆಯಲ್ಲಿ ಊಟ ಯಾರೂ ಚೂರು ಬಿಡಬಾರದು. ಊಟ ಇರದ ಎಷ್ಟೋ ಜನ ತುತ್ತು ಅನ್ನಕ್ಕಾಗಿ ಬಾಯಿ ಬಿಡುವಾಗ ನಾವೆಲ್ಲ ಊಟ ವ್ಯರ್ಥ ಮಾಡಿದರೆ ಸರಿ ಯಲ್ಲ ಅಂತ ಹೇಳುತ್ತಾಳೆ.

ಒಂದು ವೇಳೆ ಯಜಮಾನಿ ಊಟ ಕದಿಯುವಾಗ ಹಾಗೆ ಬಯ್ದಿದ್ದರೆ ನಂತರ ಸತ್ಯ ಗೊತ್ತಾಗಿದ್ದಿದ್ದರೆ ತಾನು ತಪ್ಪಾಗಿ ಬಯ್ದೆ ಅನ್ನುವ ಪಾಪಪ್ರಜ್ಞೆ ಸದಾ ಇರುತ್ತಿತ್ತು. ಪರಿಸ್ಥಿತಿಯನ್ನು ಪ್ರಮಾಣಿಸಿದ ಮೇಲೆ ಸತ್ಯ ಗೊತ್ತಾಗಿದ್ದು.

ಜನ ಹೀಗೆ ಕಂಡದ್ದೇ ಸತ್ಯ ಎಂದು ತಿಳಿದುಕೊಳ್ಳುತ್ತಾರೆ…

ಯಾರೇ ಆಗಲಿ ಹಸಿವಿಗಾಗಿ ಊಟ ತಿಂಡಿ ಕದ್ದರೆ ಯಾರೂ ಹೊಡೆಯಬೇಡಿ.
ಒಬ್ಬ ಬನ್ ಕದ್ದ ಎಂದು ಕಂಬಕ್ಕೆ ಕಟ್ಟಿ ಹೊಡೆದರು. ಆದರೆ ಅವರೆಲ್ಲ ಹಸಿವನ್ನು ತಾಳಲಾರದೆ ಊಟ ಕದ್ದಿದ್ದು ಅನ್ನುವುದ ಮರೆತು ಮಾನವೀಯತೆ ತೋರದೆ ಹೋದರು.

ಹಣ ಒಡವೆ ಕದ್ದರೆ ತಪ್ಪು ಆದರೆ ಹಸಿವನ್ನು ತಾಳಲಾರದೆ ಊಟ ಕದ್ದರೆ ಅದು ಅವರ ತಪ್ಪಲ್ಲ.
ಒಂದು ಮಾತು ಹಸಿವಿಗಾಗಿ ಯಾರಾದರು ಊಟ ತಿಂಡಿ ಕದ್ದರೆ ಕಂಬಕ್ಕೆಲ್ಲ ಕಟ್ಟಿ ಹೊಡೆಯ ಬೇಡಿ ಸಾಧ್ಯವಾದರೆ ಊಟ ಕೊಡಿ…
ಅನ್ನದ ಪ್ರತಿ ಅಗುಳಿನಲ್ಲಿರುವವಳು ಅಮ್ಮ 🙏

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ