ಶಿವಮೊಗ್ಗ : ನಗರದ ಬಸ್ ನಿಲ್ದಾಣದ ಅವರಣದಲ್ಲಿರುವ ಅಂಗಡಿ ಮಳಿಗೆಗಳ ಬಾಡಿಗೆ ಕರಾರು ನವೀಕರಣಗೊಳಿಸುವಂತೆ ಖಾಸಗಿ ಬಸ್ ನಿಲ್ದಾಣ ಅಂಗಡಿ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದರು.
ಕರ್ನಾಟಕ ಸರ್ಕಾರದ ಸುತ್ತೋಲೆ ಕ್ರ.ಸಂ/ನಆಈ/೨೨೧/ಜಿ.ಇ.ಎಲ್ಎಲ್/೨೦೦೯ ದಿನಾಂಕ:೨೬-೧೦-೨೦೦೯ ರಿತ್ಯ ದಿನಾಂಕ : ೦೬-೦೧-೨೦೧೧ರ ಗುರುವಾರದಂದು ನಡೆದ ಸಭಾ ನಡಾವಳಿಯ ಅನುಸಾರ ಪ್ರತಿ ೧೨ ವರ್ಷಗಳ ಅಧಿಗೆ ಪ್ರತಿ ೩ ವರ್ಷಗಳಿಗೊಮ್ಮೆ ಕರಾರು ಪತ್ರ ನವೀಕರಣಗೊಳ್ಳಬೇಕಾಗಿರುತ್ತದೆ. ಆದರೆ ಸುಮಾರು ಎರಡು ವರ್ಷದಿಂದ ಬಾಡಿಗೆ ಕರಾರು ನವೀಕರಣಗೊಳಿಸಿದೆ ಇರುವುದು ನಮಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಕರಾರು ನವೀಕರಣಗೊಂಡರೆ ಸರ್ಕಾರಿ ಕಛೇರಿಗಳಲ್ಲಿ ಹಣಕಾಸು ಸಂಸ್ಥೆಗಳಲ್ಲಿ/ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ವ್ಯವಹಾರ ಮಾಡಲು ಅನುಕೂಲವಾಗುತ್ತದೆ. ಇಲ್ಲವೆಂದರೆ ಯಾರೂ ಕೂಡಾ ನಮ್ಮಲ್ಲಿ ಹಣದ ವ್ಯವಹಾರನ್ನು ಮಾಡುವುದಿಲ್ಲ ಇದ್ದರಿಂದ ನಮಗೆ ದಿನನಿತ್ಯ ಹಲವಾರು ಸಾಮಾಗ್ರಿಗಳನ್ನು ತಂದು ಹೂಡಿಕೆ ಮಾಡಲು ಅನಾನುಕೂಲವಾಗುತ್ತದೆ ಎಂದರು.
ಶೀಘ್ರದಲ್ಲಿ ಕರಾರನ್ನು ನವೀಕರಣಗೊಳಿಸಿ ನಮ್ಮ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಯುಕ್ತರಿಗೆ ಒಂದು ತಿಂಗಳ ಹಿಂದೆಯೇ ಮನವಿ ಸಲ್ಲಿಸಲಾಗಿದೆ. ಆದರೆ ಆಯುಕ್ತರು ಏಕೋ ಈ ಮಳಿಗೆ ಕರಾರು ನವೀಕರಣಗೊಳಿಸಲು ಅಸಡ್ಡೆ ತೋರುತ್ತಿದ್ದಾರೆಂದು ಆರೋಪಿಸಿದರು.
ಮಳಿಗೆ ಕರಾರು ನವೀಕರಣಗೊಂಡರೆ ಸುಮಾರು ೧೫% ಹೆಚ್ಚಳ ಬಾಡಿಗೆ ದೊರೆಯುತ್ತದೆ. ಇದ್ದರಿಂದ ಪಾಲಿಕೆಗೆ ಹೆಚ್ಚಿನ ಆದಾಯ ಕೂಡಾ ಕ್ರೂಢೀಕರಣವಾಗಲಿದೆ, ಇಷ್ಟೆಲ್ಲಾ ಅನುಕೂಲವಿದ್ದರೂ ಕೂಡ ಕರಾರು ನವೀಕರಣಗೊಳಿಸಲು ಮೀನಾಮೇಷ ಏಣಿಸುತ್ತಿರುವುದು ಶೋಚನಿಯ ಸಂಗತಿಯಾಗಿದೆ ಎಂದರು.
ಶೀಘ್ರದಲ್ಲಿ ಕರಾರು ನವೀಕರಣಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಖಾಸಗಿ ಬಸ್ ನಿಲ್ದಾಣ ಅಂಗಡಿ ವರ್ತಕರ ಸಂಘ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಒಮ್ಮತ ತೀರ್ಮಾನ ಕೈಗೊಳ್ಳಲಾಗಿದ್ದು ಆಯುಕ್ತರು ವರ್ತಕರ ಸಂಕಷ್ಟ ಅರಿತು ಕರಾರನ್ನು ನವೀಕರಣಗೊಳಿಸಿ ಕೊಟ್ಟು ನಮ್ಮ ವ್ಯವಹಾರಕ್ಕೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ವರದಿ: ಕೊಡಕಲ್ ಶಿವಪ್ರಸಾದ್, ಶಿವಮೊಗ್ಗ.
