ಕಲಬುರಗಿ: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲು ಕಲ್ಪಿಸುವ ಕರ್ನಾಟಕ ಸರ್ಕಾರದ ಕ್ರಮ ಮತ್ತು ಮೀಸಲು ನೀಡುವ ಮಸೂದೆ ಯಾವುದೇ ಚರ್ಚೆ ಇಲ್ಲದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿರುವುದು ಖಂಡನೀಯ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲು ನೀಡುವ ಮಸೂದೆ ಯಾವುದೇ ಚರ್ಚೆ ಇಲ್ಲದೆ ವಿಧಾನಸಭೆಯಲ್ಲಿ ಅಂಗೀಕಾರ, ಬೆಲೆ ಏರಿಕೆ ನಿಯಂತ್ರಿಸದ ಹಾಗೂ 18 ಶಾಸಕರ ಅಮಾನತು ಮಾಡಿದ ಕಾಂಗ್ರೆಸ್ ನಿಲುವುಗಳನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. 18 ಬಿಜೆಪಿ ಶಾಸಕರ ಅಮಾನತು ಬೆನ್ನಲ್ಲೇ ಮಸೂದೆ ಅಂಗೀಕಾರ ಸಮಂಜಸವಲ್ಲ ಮುಸ್ಲಿಂರಿಗೆ ಮೀಸಲು ಕಲ್ಪಿಸುವ ವಿಧೇಯಕ ಹಿಂಪಡೆಯುವವರೆಗೂ ಎಲ್ಲಾ ಹಂತಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮತ್ತೊಮ್ಮೆ ತನ್ನ ಹಳೇ ಚಾಳಿಯನ್ನು ಮುಂದುವರೆಸಿದೆ, ಸರಕಾರಿ ಕಾಮಗಾರಿಗಳಲ್ಲಿ ಮುಸ್ಲಿಂರಿಗೆ ಶೇ. 4ರಷ್ಟು ಮೀಸಲು, ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡುವ ಸಹಾಯಧನ 20ರಿಂದ 30 ಲಕ್ಷಕ್ಕೆ ಹೆಚ್ಚಳ, ಶಾದಿ ಭಾಗ್ಯಕ್ಕೆ ಹಣ ನೀಡುವ ನಿರ್ಧಾರ ತೆಗೆದುಕೊಂಡಿರುವುದು ಮತ್ತು ಮುಸ್ಲಿಂ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಗಾಗಿ ವಿಶೇಷ ಅನುದಾನ ನೀಡುವುದು, ಕಾಂಗ್ರೆಸ್ನ ಮತ ಓಲೈಕೆಯ ರಾಜಕಾರಣದ ಮುಂದುವರೆದ ಭಾಗವಾಗಿದೆ. ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತೇನೆ ಎಂದರು.
- ಕರುನಾಡ ಕಂದ
