ಬಳ್ಳಾರಿ / ಕಂಪ್ಲಿ : ಪ್ರತಿ ಊರು, ಕೇರಿ, ಹಾಡಿ, ಬೀದಿಗಳಲ್ಲಿ ‘ಸಂವಿಧಾನ ಸಂರಕ್ಷಕ ಪಡೆ’ ಹೆಸರಿನಲ್ಲಿ ದೇಶಪ್ರೇಮಿ ತಂಡಗಳನ್ನು ಕಟ್ಟುವ ಪ್ರಕ್ರಿಯೆಗೆ ಚಾಲನೆ ನೀಡುವ ಉದ್ದೇಶದಿಂದ ಇದೇ ಏಪ್ರಿಲ್ 26 ರಂದು ದಾವಣಗೆರೆಯಲ್ಲಿ ಬೆಳಿಗ್ಗೆ 11:00ಗೆ ಬೀರಲಿಂಗೇಶ್ವರ ದೇವಸ್ಥಾನದ ಆವರಣದ ಹೈಸ್ಕೂಲ್ ಫೀಲ್ಡ್ ಬಳಿ ಸಂವಿಧಾನ ಸಂರಕ್ಷಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಕರ ಸಮಾವೇಶದ ಕಂಪ್ಲಿ ಕ್ಷೇತ್ರದ ತಾಲೂಕು ಸಂಯೋಜಕರಾದ ವಸಂತರಾಜ ಕಹಳೆ ತಿಳಿಸಿದರು. ಅವರು ಪಟ್ಟಣದ ಡಾ|| ಬಿ. ಆರ್ . ಅಂಬೇಡ್ಕರ್ ವೃತ್ತದಲ್ಲಿ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ಸಂವಿಧಾನ ವಿರೋಧಿ ಶಕ್ತಿಗಳನ್ನು ಅಧಿಕಾರದಿಂದ ಕೆಳಗಿಳಿಸಿ, ಸಂವಿಧಾನ ಉಳಿಸುವ ಮಹತ್ತರ ಉದ್ದೇಶದಿಂದ ಈ ಸಮಾವೇಶ ನಡೆಯುತ್ತಿದೆ’ ‘ಮನುವಾದಿ ಶಕ್ತಿಗಳು ಭಾರತೀಯ ಧರ್ಮ ಗ್ರಂಥವಾದ ಸಂವಿಧಾನವನ್ನು ಬದಲಾಯಿಸುವ ಕುತಂತ್ರ ಮಾಡಿ, ಮರಳಿ ಮನುಧರ್ಮ ಶಾಸ್ತ್ರ ಜಾರಿ ಮಾಡುವ ಉದ್ದೇಶ ಹೊಂದಿವೆ. ಇದನ್ನು ತಡೆದು ಪ್ರೇಮ, ಕರುಣೆ, ಮೈತ್ರಿಯಪ್ರಬುದ್ಧ ಭಾರತದ ನಿರ್ಮಾಣ ಮಾಡುವ ಡಾ.ಬಿ.ಆರ್.ಅಂಬೇಡ್ಕರ್ರ ಕನಸನ್ನು ನನಸು ಮಾಡಲು ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಿದೆ’ ಪ್ರತಿಯೊಬ್ಬರೂ ಸಮಾವೇಶದ ಭಾಗವಾಗಲು ಮಾಧ್ಯಮದ ಮೂಲಕ ಕರೆ ನೀಡಿದರು.
ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ, ಚಿತ್ರನಟ ಪ್ರಕಾಶ್ರಾಜ್, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ಚಿಂತಕ ಪರಕಾಲ ಪ್ರಭಾಕರ್, ಮುಸ್ಲಿಂ ಸಮುದಾಯದ ಮುಖಂಡ ಮಹಮ್ಮದ್ ಸಲೀಂ, ಸಂಯುಕ್ತ ಕಿಸಾನ್ ಮೋರ್ಚಾದ ಸುನೀಲಂ, ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್, ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕ ಕೆ. ಎಂ. ರಾಮಚಂದ್ರಪ್ಪ, ದಲಿತ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಮಾವಳ್ಳಿ ಶಂಕರ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ’ ಎಂದರು.
ಈ ಸಂದರ್ಭದಲ್ಲಿ ಕೆ ನೀಲಪ್ಪ ಪೇಂಟರ್, ಇ ಧನಂಜಯ, ಶಾಂತಪ್ಪ ಪೂಜಾರಿ, ಎಚ್ ಯಲ್ಲಪ್ಪ, ಸೀಕ್ಲಿ ಬಸವರಾಜ್, ದನಕಾಯೋ ಬಸವರಾಜ, ಪರಶುರಾಮ, ಗಿರೀಶ್, ನಿರಂಜನಯ್ಯ ಸ್ವಾಮಿ, ಗಂಗಣ್ಣ ಸೇರಿದಂತೆ ಕರ್ನಾಟಕ ಜನಶಕ್ತಿ, ಭೀಮ್ ಆರ್ಮಿ, ಅಂಬೇಡ್ಕರ್ ಸೇನೆ ಹಾಗೂ ಡಿ ಎಸ್ ಎಸ್ ನ ಪದಾಧಿಕಾರಿಗಳು ಭಾಗಿಯಾಗಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
