ವಿಜಯನಗರ ಜಿಲ್ಲೆ ಕೊಟ್ಟೂರು:
ಪಟ್ಟಣದ ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ವಿಶ್ವಗುರು, ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಅಮರೇಶ ಜಿ ಕೆ ತಹಶೀಲ್ದಾರರು ಬಸವಣ್ಣನವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಸಮ ಸಮಾಜ ನಿರ್ಮಾಣ ಮಾಡಿದ ಬಸವಣ್ಣನವರ ಬದುಕು ಎಲ್ಲರಿಗೂ ಆದರಣೀಯವಾಗಿದೆ, ಅವರ ಆದರ್ಶವನ್ನು ನಾವೆಲ್ಲರೂ ಪಾಲಿಸೋಣ ಎನ್ನುತ್ತಾ ಎಲ್ಲರಿಗೂ ಬಸವೇಶ್ವರರ ಜನ್ಮ ದಿನದ ಶುಭಾಷಯಗಳನ್ನು ಕೋರಿದರು.
ನಂತರ ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ರಿಜಿಸ್ಟ್ರಾರ್ ಡಾ|| ಮಹಬಲೇಶ್ವರಪ್ಪ ಇವರು ಬಸವಣ್ಣನವರು ಜಾತಿಗೆ ಸೀಮಿತಗೊಳ್ಳದೆ ಕಾಯಕಕ್ಕೆ ಬೆಲೆ ಕೊಟ್ಟರು, ಪ್ರತಿಯೊಬ್ಬರೂ ಸತ್ಯಶುದ್ಧ ಕಾಯಕವನ್ನು ಮಾಡಬೇಕು. ಕಾಯಕದಿಂದ ಬಂದದ್ದರಲ್ಲಿ ಹೆಚ್ಚಿನದನ್ನು ದಾಸೋಹದ ಮೂಲಕ ಸಮಾಜಕ್ಕೆ ಹಂಚಬೇಕು ಎನ್ನುವ ತತ್ವವನ್ನು ಜಾರಿಗೆ ತಂದರು. ದೇವರು ಮತ್ತು ಭಕ್ತರ ಮಧ್ಯೆ ಇದ್ದ ಪೂಜಾರಿ ಶೋಷಣೆಯ ಸಂಕೇತವೆಂದು ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸಿ ಅಂಗೈಯಲ್ಲಿ ಇಷ್ಟ ಲಿಂಗವನ್ನು ಕೊಟ್ಟು ಎಲ್ಲರಿಗೂ ದೈವವನ್ನು ಆರಾಧಿಸಲು ಅವಕಾಶ ಕಲ್ಪಿಸಿ, ಜೀವ ಸಂಸ್ಕೃತಿ ಉಳಿಯಬೇಕು, ಊಳಿಗ ಮಾನ್ಯ ಪದ್ದತಿ, ಬಂಡವಾಳ ಶಾಹಿ ಪದ್ದತಿ ಅಳಿಯಬೇಕು ಎನ್ನುತ್ತಾ, ಇಡೀ ವಿಶ್ವಕ್ಕೇ “ಪ್ರಜಾಪ್ರಭುತ್ವ” ಪದ್ದತಿಯನ್ನು ಮೊಟ್ಟ ಮೊದಲು ಪರಿಚಯಿಸಿದರು. ಆ ಮೂಲಕ ಎಲ್ಲರೂ ನಮ್ಮವರು ಎನ್ನುವ ಭಾವನೆಯನ್ನು ಸಮಾಜದಲ್ಲಿ ತಂದರು ಎಂದು ಹೇಳಿದರು.
ಎ ಪಿ ಎಂ ಸಿ ಉಪಾಧ್ಯಕ್ಷರು ಹಾಗೂ ಪಂಚಮ ಸಾಲಿ ಮುಖಂಡರಾದ ಶಿವಣ್ಣನವರು ನಾವೆಲ್ಲರೂ ಬರೀ ಜನ್ಮ ದಿನಾಚರಣೆಗೆ ಸೀಮಿತಗೊಳ್ಳದೇ ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು. ಜಿಲ್ಲಾ ಡಿ ಎಸ್ ಎಸ್ ಮುಖಂಡರಾದ ತೆಗ್ಗಿನಕೇರಿ ಕೊಟ್ರೇಶ್ ಇವರು ಬಸವಣ್ಣನವರು ತುಳಿತಕ್ಕೊಳಗಾದವರ ಧ್ವನಿ, ನೊಂದವರ ದೇವರಾಗಿದ್ದರು. ಇವನಾರವ ಎನ್ನದೇ ಇವ ನಮ್ಮವ ಎಂದು ಎಲ್ಲರನ್ನೂ ಅಪ್ಪಿಕೊಂಡು ಆದರ್ಶ ವ್ಯಕ್ತಿಯಾಗಿದ್ದರು ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಯೋಗೀಶ್ವರ ದಿನ್ನೆ ಇವರು ಬಸವಣ್ಣನವರು ವಚನಗಳ ಮೂಲಕ ಸಮಾಜಕ್ಕೆ ನೀಡಿದ ಸಂದೇಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡರೆ ಸಾಕು ವ್ಯಕ್ತಿತ್ವ ವಿಕಸನವಾಗಿ ಸಮ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಮ ಸಾಲಿ ಸಮಾಜದ ಅಧ್ಯಕ್ಷರಾದ ಚಾಪಿ ಚಂದ್ರಪ್ಪ, ತಾಲೂಕು ಜಂಗಮ ಸಮಾಜದ ಅಧ್ಯಕ್ಷರಾದ ಅಡಿಕಿ ಮಂಜುನಾಥ, ತಾಲೂಕು ಕ.ಸಾ.ಪ ಅಧ್ಯಕ್ಷರಾದ ದೇವರಮನಿ ಕೊಟ್ರೇಶ್, ವಿವಿಧ ಸಮಾಜದ ಮುಖಂಡರು, ಶಿಕ್ಷಣ ಇಲಾಖೆಯ ಇ ಸಿ ಒ ನಿಂಗಪ್ಪ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಶಶಿಕಲಾ, ಕಂದಾಯ ನಿರೀಕ್ಷಕ ಹಾಲಸ್ವಾಮಿ, ಗ್ರಾ.ಆ.ಅ. ಹರೀಶ್, ಸಿಬ್ಬಂದಿ ಮಂಜುನಾಥ, ವಾಲಿ ಮಂಗಳ, ವನಜಾಕ್ಷಿ, ಸೌಭಾಗ್ಯಮ್ಮ , ಭೂಮಾಪಕ ನಾಗರಾಜ ಹಾಗೂ ಇತರರು ಇದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ, ನಿರೂಪಿಸಿದರು.
ವರದಿ ಶಶಾಂಕ್ ಪಿ
