ಬಳ್ಳಾರಿ / ಕಂಪ್ಲಿ : ವಿದ್ಯಾರ್ಥಿಗಳ ಜನಿವಾರ ತೆಗೆಸಿದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವ ಜತೆಗೆ ಕಾಶ್ಮೀರದಲ್ಲಿ ನಡೆದ ಅಮಾಯಕರ ಮೇಲಿನ ದಾಳಿ ಖಂಡಿಸಿ, ಕಂಪ್ಲಿ ತಾಲೂಕು ಜನಿವಾರ ಸಮುದಾಯಗಳ ಸಮಿತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡ ಶ್ರೀಧರ್ ಶ್ರೇಷ್ಠಿ ಮಾತನಾಡಿ, ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿ ಹಿಂದೂ ಸಂಪ್ರದಾಯದ ಆಚಾರ ವಿಚಾರವನ್ನು ಅಪಮಾನಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು. ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳಿಗೆ ಮಾರ್ಗದರ್ಶನ ತೋರುವ ಸಭ್ಯ ಬ್ರಾಹ್ಮಣ ಸಮುದಾಯವನ್ನು ಅಪಮಾನಿಸಿರುವವರು ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ.
ಮುಖಂಡ ಪಿ.ಬ್ರಹ್ಮಯ್ಯ ಮಾತನಾಡಿ, ಬೀದರ್ನಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆಗೆ ಅವಕಾಶ ಕೊಡದೇ, ವಿದ್ಯಾರ್ಥಿಯೊಬ್ಬನ ಜನಿವಾರ ಕಿತ್ತೆಸೆಯಲು ದರ್ಪ ಮೆರೆದ ವರ್ತನೆ ಅತ್ಯಂತ ಹೇಯ. ಈ ರೀತಿಯ ಬೌದ್ಧಿಕ ವಿಕೃತಿ ಹಾಗೂ ಮನುಷ್ಯತ್ವ ಇಲ್ಲದ ನಡೆ ಇನ್ನೊಂದಿರಲಾರದು, ಬಾಲ್ಯದಿಂದಲೂ ಕನಸು ಕಟ್ಟಿಕೊಂಡು ಭವಿಷ್ಯದ ತಿರುವಿನಲ್ಲಿ ಆಘಾತ ಎದುರಿಸಿ ವಿದ್ಯಾರ್ಥಿಯೊಬ್ಬನ ಎಂಜಿನಿಯರಿಂಗ್ ಪದವಿಯ ಕನಸಿನ ಮೇಲೆ ಅಟ್ಟಹಾಸಗೈದ ಸಿಇಟಿ ಪರೀಕ್ಷಾ ಸಿಬ್ಬಂದಿಯ ವರ್ತನೆ ಅತ್ಯಂತ ಖಂಡನೀಯವಾಗಿದೆ. ಕಾಶ್ಮೀರದಲ್ಲಿ ಅಮಾಯಕರ ಮೇಲಿನ ದಾಳಿಯು ಖಂಡನೀಯವಾಗಿದೆ ಎಂದರು.
ಇಲ್ಲಿನ ಉದ್ಭವ ದೇವಸ್ಥಾನದಿಂದ ಪ್ರಮುಖ ರಸ್ತೆಗಳ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಗ್ರೇಡ್-2 ತಹಶೀಲ್ದಾರ್ ಷಣ್ಮುಖಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಮಾಜದ ಮುಖಂಡರಾದ ಬ್ರಾಹ್ಮಣ ಸಮಾಜ ಅಧ್ಯಕ್ಷ ಡಿ. ಗೋಪಾಲ ಕೃಷ್ಣ, ಆರ್ಯವೈಶ್ಯ ಸಮಾಜ ಅಧ್ಯಕ್ಷ ಡಿ.ವಿ.ಸುಬ್ಬಾರಾವ್, ಸೋಮು ವಂಶ ಆರ್ಯ ಕ್ಷತ್ರಿಯ ಸಮಾಜ ಅಧ್ಯಕ್ಷ ಮಾರುತಿ ಚಿತ್ರಗಾರ, ದೈವಜ್ಞ ಬ್ರಾಹ್ಮಣ ಸಮಾಜ ಅಧ್ಯಕ್ಷ ಜಗದೀಶ ರಾಯ್ಕರ್, ವಿಶ್ವಕರ್ಮ ಸಮಾಜ ಅಧ್ಯಕ್ಷ ಡಿ. ರುದ್ರಪ್ಪ, ರಜಪೂತ ಸಮಾಜ ಅಧ್ಯಕ್ಷ ಕೆ. ಇಂದ್ರಜಿತ್ ಸಿಂಗ್ , ಭಾವಸಾರ ಕ್ಷತ್ರಿಯ ಸಮಾಜ ಅಧ್ಯಕ್ಷ ಪಿ.ವಿಶ್ವನಾಥ, ದೇವಾಂಗ ಸಮಾಜದ ಅಧ್ಯಕ್ಷ ಸಪ್ಪರದ ರಾಘವೇಂದ್ರ, ಪದ್ಮಶಾಲಿ ಸಮಾಜದ ಅಧ್ಯಕ್ಷ ಪಿ. ಬ್ರಹ್ಮಯ್ಯ, ಗೊಂದಳಿ ಸಮಾಜದ ಅಧ್ಯಕ್ಷ ಎಂ. ನಾಗರಾಜ, ಮರಾಠ ಸಮಾಜದ ಅಧ್ಯಕ್ಷ ಶ್ರೀ ಗಣೇಶ, ಸ್ವ ಸಾಕುಳಿ ಸಮಾಜ ಅಧ್ಯಕ್ಷ ಅಂಜಿನಪ್ಪ, ಕ್ಷತ್ರಿಯ ಸಮಾಜದ ಅಧ್ಯಕ್ಷ ಡಾ. ರಾಮ ರಾಜು, ಬಲಿಜ ಸಮಾಜದ ಅಧ್ಯಕ್ಷ ಇಂಗಳಿಗೆ ನಾರಾಯಣಪ್ಪ, ಮುಖಂಡರಾದ ಡಿ.ಮೌನೇಶ, ಡಿ. ಶ್ರೀಧರ ಶ್ರೇಷ್ಠಿ , ಷಣ್ಮುಖಪ್ಪ ಚಿತ್ರಗಾರ, ಕುಮಾರ , ಕೆ.ಶ್ರೀನಾಥ್, ಶಿವಕುಮಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
