ಬಳ್ಳಾರಿ / ಕಂಪ್ಲಿ : ಇ.ಡಿ ಅಧಿಕಾರಿಗಳು ನಮ್ಮ ಮನೆ ಮೇಲೆ ದಾಳಿ ಮಾಡಿರುವುದು ನಿಜ. ಆದರೆ, ಅಧಿಕಾರಿಗಳು ಕೆಲ ವಿಷಯಗಳನ್ನು ನಮ್ಮೊಂದಿಗೆ ಚರ್ಚಿಸಿ, ನಂತರ ಬಂದ ದಾರಿಗೆ ಸುಂಕವಿಲ್ಲದಂತೆ ಹೋಗಿದ್ದಾರೆ. ಇದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ಇದಕ್ಕೆ ನಾವು ಜಗ್ಗುವುದಿಲ್ಲ ಎಂದು ಶಾಸಕ ಜೆ. ಎನ್. ಗಣೇಶ ಹೇಳಿದರು.
ಅವರು ಗುರುವಾರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಸಂಸದರ ಮತ್ತು ಶಾಸಕರ ಮೇಲೆ ಇ.ಡಿ ದಾಳಿ ಮಾಡಿಸಿ, ಬಿಜೆಪಿಯವರು ಇ.ಡಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯ ಕುತಂತ್ರದಿಂದ ಕಾಂಗ್ರೆಸ್ ಶಾಸಕರ ವರ್ಚಸ್ಸು ಕುಗ್ಗಿಸುವ ಫಲ ನೀಡಲಿಲ್ಲ. ಜನರಿಗೆ ತಪ್ಪು ಸಂದೇಶ ರವಾನಿಸುವ ಕೆಲಸ ಮಾಡುತ್ತಿದ್ದಾರೆ. ವಾಲ್ಮೀಕಿ ನಿಗಮಕ್ಕೆ ಸಂಬಂಧಿಸಿದ ಶೇ.90 ರಷ್ಟು ಹಣ ವಾಪಸ್ಸಾಗಿದೆ. ಈ ಹಿಂದೆ ನಡೆದ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಇಡಿ ಅಧಿಕಾರಿಗಳು ಪಡೆದುಕೊಂಡರು. ಕಾನೂನಾತ್ಮಕವಾಗಿ ಪ್ರತಿಯೊಂದು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿರುವೆ. ಲೋಕಸಭೆಯಲ್ಲಿ ಜನರು ಪಂಚಯೋಜನೆಗಳನ್ನು ಮನಗಂಡು ಕಾಂಗ್ರೆಸ್ ಬಾವುಟ ಹಾರಿಸಿದ್ದಾರೆ. ನಮ್ಮ ಮೇಲೆ ಯಾವುದೇ ಒಂದು ಕಪ್ಪುಚುಕ್ಕಿ ಇಲ್ಲ. ಇಡಿಯಿಂದ ನಮ್ಮ ವರ್ಚಸ್ಸು ಮತ್ತಷ್ಟು ಹೆಚ್ಚಾಗಿದೆ. ಕ್ಷೇತ್ರದಲ್ಲಿ ಕೆಲಸ ಮಾಡಲು ಇನ್ನಷ್ಟು ಶಕ್ತಿ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪುರಸಭೆ ಸದಸ್ಯ ಸಿ. ಆರ್. ಹನುಮಂತ, ಕುರುಗೋಡು ಬ್ಲಾಕ್ ಅಧ್ಯಕ್ಷ ಚನ್ನಬಸವರಾಜಗೌಡ, ಮುಖಂಡರಾದ ಬಿ.ನಾರಾಯಣಪ್ಪ, ಕೆ. ಷಣ್ಮುಖಪ್ಪ, ಜಾಫರ್ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
