ಬೆಳಗಾವಿ/ ಬೈಲಹೊಂಗಲ: ದೇಶದ ಜನತೆಯ ಹಸಿವು ನೀಗಿಸಲು1965ರಲ್ಲಿ ರಸಗೊಬ್ಬರ ಬಳಸಿ ಅಧಿಕ ಆಹಾರ ಧಾನ್ಯಗಳ ಉತ್ಪಾದನೆಗೆ ರೈತರಿಗೆ ವಿನಂತಿಸುತ್ತಿದ್ದ ಆಡಳಿತ ವರ್ಗ ಇಂದು ಭೂಮಿಯ ಉಳಿವಿಗಾಗಿ ಉತ್ತಮ ಆರೋಗ್ಯಕ್ಕಾಗಿ ರಸಗೊಬ್ಬರ ಬಳಸಬೇಡಿ ಎಂದು ಕೈ ಮುಗಿದು ವಿನಂತಿಸುತ್ತಿದ್ದೇವೆ, ಇತಿಹಾಸ ಮರಕಳಿಸುತ್ತದೆ ಎನ್ನವುದು ಅಕ್ಷರಶಃ ಸತ್ಯವಾಗಿದೆ ಎಂದು ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಎಚ್. ಡಿ. ಕೋಳೆಕರ ಹೇಳಿದರು.
ಸಮೀಪದ ಮರಕುಂಬಿ ಗ್ರಾಮದಲ್ಲಿ ಚಾಮುಂಡೇಶ್ವರಿ ಆತ್ಮಾ ಸಂಘ, ಕೃಷಿ ಇಲಾಖೆಯ ನೈಸರ್ಗಿಕ ಕೃಷಿ ಅಭಿಯಾನ, ಕೃಷಿ ಸಂಶೋಧನಾ ಕೇಂದ್ರ ಮತ್ತಿಕೊಪ್ಪ ಹಾಗೂ ಸೆಲ್ಕೊ ಇಲೆಕ್ಟ್ರೀಕಲ್ ಟ್ಯಾಕ್ಟರ್ ಕಂಪನಿ ಸಂಯೋಗದಲ್ಲಿ ಜರುಗಿದ ಕನ್ನೇರಿಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ನಡೆಸಿದ ಕಿಸಾನ್ ಗೋಷ್ಠಿಯ ವಾರ್ಷಿಕೊತ್ಸವದಲ್ಲಿ ಮಾತನಾಡಿ, ಇಂದು ಕೃಷಿ ಸಂಪೂರ್ಣವಾಗಿ ರಸಗೊಬ್ಬರ ಮೇಲೆ ಅವಲಿಂಬಿತವಾಗಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ಜಿಲ್ಲೆ ಒಂದರಲ್ಲಿ 10ಸಾವಿರ ಮೆ.ಟನ್ ಹೆಚ್ಚುವರಿಯಾಗಿ ಯುರಿಯಾ ಗೊಬ್ಬರ ನೀಡಿದರು ಇನ್ನು ಬೇಡಿಕೆ ಹೆಚ್ಚುತ್ತಿದೆ ಈ ರೀತಿಯಾದರೆ ನಮ್ಮ ಕೈಯಾರೆ ನಾವೇ ಕೃಷಿ ಭೂಮಿಯನ್ನು ಬರಡು ಭೂಮಿಯಾಗಿಸುತ್ತೇವೆ. 150ಕೋಟಿಗೆ ಸಮಿಪಿಸುತ್ತಿರುವ ದೇಶದ ಜನಸಂಖ್ಯೆಗೆ ಆಹಾರ ಉತ್ಪಾದನೆ ನಮ್ಮ ಮುಂದಿರುವ ದೊಡ್ಡಸಾವಲಾಗಿದ್ದರು ಭೂಮಿಗೆ ಕೇವಲ ಯುರಿಯಾ ಮಾತ್ರ ಬಳಸದೆ ಅದರ ಜೊತೆ 17 ಪೋಷಕಾಂಶಗಳು, ಡಿ.ಎ.ಪಿ, ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ಗೊಬ್ಬರ ಮಿತವಾಗಿ ಬಳಸಿ ಅತಿಯಾಗಿ ಕೊಟ್ಟಿಗೆ ಗೊಬ್ಬರ ಹಾಕುವದರಿಂದ ಮಣ್ಣಿನ ಫಲವತ್ತತೆ ಹೆಚ್ಷುವುದರೊಂದಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆದು ಕೃಷಿಯನ್ನು ಲಾಭದಾಯಕ ಮಾಡಬೇಕಾಗಿದೆ. ಸರ್ಕಾರದಿಂದ ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆಗೆ 50ಪ್ರತಿಶತ ಸಬ್ಸಿಡಿ ಇದೆ. ಮಿನಿ ಟ್ಯಾಕ್ಟರ್, ಕಬ್ಬು ಕಟಾವು ಯಂತ್ರ, ಕೃಷಿ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ಇಲಾಖೆಯಿಂದ ನೀಡುತಿದ್ದು ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಹೆಚ್ಚು ನೀರಾವರಿ ಜಮೀನುಳ್ಳ ರೈತರು ತಾಳೆ ಮರ ಬೆಳೆಯಿರಿ, ಹೊಲಗಳಿಗೆ ಬದು ನಿರ್ಮಾಣ ಮಾಡುವುದರಿಂದ ಓಡುವ ನೀರನ್ನು ನಡೆಯುವಂತೆ ಮಾಡಿ, ಕೃಷಿ ಹೊಂಡ ನಿರ್ಮಿಸಿ ಮಳೆ ನೀರನ್ನು ತಡೆದು ಇಂಗಿಸಿ ಅಂತರ್ಜಲ ಹೆಚ್ಚಿಸಬೇಕಾಗಿದೆ. ಮಾನ್ ಸೂನ್ ಹೊಡೆತದಿಂದ ಆಗುವ ನಷ್ಟವನ್ನು ಬೆಳೆಗಳಿಗೆ ವಿಮೆ ಮಾಡುವ ಮೂಲಕ ಆರ್ಥಿಕ ನಷ್ಟ ತಪ್ಪಿಸಬಹುದಾಗಿದೆ ಎಂದರು.
ನೈಸರ್ಗಿಕ ಕೃಷಿ ಅಭಿಯಾನದ ವಿಶೇಷ ಕೃಷಿ ಅಧಿಕಾರಿ ಸಿ. ಆಯ್ ಹೂಗಾರ ಮಾತನಾಡಿ, ದೇಶದಲ್ಲಿ ಒಂದು ಕೋಟಿ ಎಕರೆ ಜಮೀನವನ್ನು ನೈಸರ್ಗಿಕ ಕೃಷಿಯತ್ತ ಕೊಂಡೊಯ್ಯವಲ್ಲಿ ಸಂಕಲ್ಪಮಾಡಿರುವ ಸರ್ಕಾರದ ನಿರ್ಧಾರದಂತೆ ಜಿಲ್ಲೆಯಲ್ಲಿ 7ಸಾವಿರ ರೈತರನ್ನು ಗುರುತಿಸಿದ್ದು ಪ್ರತಿ ರೈತರಿಂದ ಒಂದು ಎಕರೆ ನೈಸರ್ಗಿಕ ಕೃಷಿ ಮಾಡಲು ಉತ್ತೆಜಿಸಲಾಗಿದೆ ಎಂದರು.
ನರೇಗಾ ಅಡಿಯಲ್ಲಿ ತೋಟಗಾರಿಕೆ ಮತ್ತು ರೇಷ್ಮೇ ಬೆಳೆಗಾರರಂತೆ ಕೃಷಿಕರಿಗೂ ಪ್ರತಿ ಹಂಗಾಮಿನಲ್ಲಿ ಎಕರೆಗೆ 10ಕೂಲಿ ದಿನಗಳನ್ನು ನೀಡಲು ಸರ್ಕಾರಕ್ಕೆ ಕೃಷಿ ಅಧಿಕಾರಿಗಳು ವರದಿ ನೀಡಬೇಕು. ಬಿತ್ತನೆಗೆ ಮೊದಲೆ ರೈತರು ಬಯಸುವ ತಳಿಗಳ ಬೀಜಗಳನ್ನೆ ತರಸಬೇಕು. ಇಲೆಕ್ಟ್ರೀಕಲ್ ಟ್ಯಾಕ್ಟರ್ ಗಳನ್ನು ಸಬ್ಸಿಡಿಯಲ್ಲಿ ನೀಡಬೇಕು, ರೈತರ ಬೇಡಿಕೆಯ ಉತ್ತಮ ಗುಣಮಟ್ಟದ ರಾಸಾಯನಿಕಗಳನ್ನು ಕೃಷಿಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ವಿತರಿಸಬೇಕು ಕೃಷಿ ವಿಜ್ಞಾನಿಗಳು ರೈತರ ಜಮೀನುಗಳಿಗೆ ತೆರಳಿ ರೈತರು ಬೆಳೆ ಬೆಳೆಯುವಲ್ಲಿ ಅನುಭವಿಸುತ್ತಿರುವ ತೊಂದರೆಗಳಿಗೆ ವೈಜ್ಞಾನಿಕ ಪರಿಹಾರ ನೀಡಿದರೆ ಕೃಷಿಕರ ಜೀವನ ಸಮೃದ್ದವಾಗಲಿದೆ.
- ಎಫ್. ಎಸ್. ಸಿದ್ದನಗೌಡರ
ಮಾಜಿಅಧ್ಯಕ್ಷರು ಎ. ಪಿ. ಎಂ. ಸಿ ಸವದತ್ತಿ.
ಭೂಮಿಯ ಫಲವತ್ತತೆಗಾಗಿ ರಾಸಾಯನಿಕ ಬಳಕೆ ಬಿಟ್ಟು ಸಾವಯವ ಕೃಷಿಯ ಕಡೆ ಗಮನ ಹರಿಸಬೇಕು. ರಸಗೊಬ್ಬರಿಗೆ ಸಬ್ಸಿಡಿ ನೀಡದೆ ಪ್ರತಿಯೊಬ್ಬ ರೈತರಿಗೆ ಉಚಿತವಾಗಿ ದೇಶಿ ಆಕಳ ನೀಡಿ ಸಾವಯವ ಕೃಷಿ ಅಭಿಯಾನಕ್ಕೆ ಸರ್ಕಾರ ಉತ್ತೇಜನ ನೀಡಬೇಕು.
- ಮಹಾಂತೇಶ ತೋಟಗಿ
ಉದಯೋನ್ಮುಖ ಸಾವಯವ ಕೃಷಿ ಪಂಡಿತ ಪ್ರಶಸ್ತಿ ವಿಜೇತ
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ಡಾ.ಎಸ್.ಎಮ್. ವಾರದ, ಸಾವಯವ ಕೃಷಿ ಪಂಡಿತ ವಿ.ಎಮ್ ಹೊಸೂರ, ಮುರಗೋಡ ಕೃಷಿ ಅಧಿಕಾರಿ ಮಧುಸೂಧನ ಅಮಠೆ ಮಾತನಾಡಿ, ಸಾವಯವ ಕೃಷಿ ಹಾಗೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೂರಾರು ರೈತರಿಗೆ ಉಚಿತ ಸಸಿ ನೀಡಲಾಯಿತು. ಇಲೆಕ್ಟ್ರೀಕಲ್ ಟ್ಯಾಕ್ಟರ್ ಹಾಗೂ ದ್ರೋಣ ಪ್ರಾತ್ಯಕ್ಷಿಕೆ ಮಾಡಲಾಯಿತು.
ವೇದಿಕೆಯ ಮೇಲೆ ಜಿಲ್ಲಾ ಕೃಷಿ ನಿರ್ದೇಶಕ ಸಲಿಂ ಸಂಗತ್ರಾಳ, ಗ್ರಾ. ಪಂ. ಉಪಾಧ್ಯಕ್ಷೆ ಸುವರ್ಣ ವಿವೇಕಿ, ಕಾರ್ತಿಕ್ ಪಾಟೀಲ, ಮಾಳಪ್ಪ ಮಮದಾಪೂರಿ, ಶಿವಾನಂದ ಕೌಜಲಗಿ, ರವಿ ಕುರಬೆಟ್ಟ ಎಟಿಎಂ ಶ್ವೇತಾ ಕೋಟಗಿ ಇದ್ದರು.
ಕಾರ್ಯಕ್ರಮದಲ್ಲಿ ಮಹಾಂತೇಶ ಹಿರೇಮಠ, ನಾಗರಾಜ ತಲ್ಲೂರ, ಅವಿನಾಶ ದೇಸಾಯಿ, ಜಗದೀಶ್ ಹಿರೇಮಠ, ದೊಡ್ಡಪ್ಪ ಹೂಲಿ, ರುದ್ರಪ್ಪ ಗೂಡಿಮನಿ, ಅನಂದ ವಾಲಿ, ಶ್ರೀಕಾಂತ ಸುಂಕದ, ಈರಣ್ಣ ಅಂಬಡಗಟ್ಟಿ, ರಾಜೇಶ ತುಡವೇಕರ, ಪ್ರವೀಣ ಸನಗೌಡರ, ಮಹಾದೇವಪ್ಪ ಕಮತಗಿ, ಮಲ್ಲಿಕಾರ್ಜುನ ಬೈಲವಾಡ, ಅಕ್ಷತಾ ಮೇಟಿ, ಶಿವನಾಯಕ ಕುಲವಳ್ಳಿ, ದೊಡ್ಡವ್ವ ಗುರಕನವರ, ಪಾತೀಮಾ ಸಣದಿ, ಗುರು ಖಟಾಪೂರಿಮಠ, ಮಲ್ಲನಗೌಡ ಪಾಟೀಲ, ಈರಪ್ಪ ಮೇಟಿ, ಫಕಿರಪ್ಪ ಮುತಗಿ, ಬಸವರಾಜ ಗುರಕನವರ, ಮಂಜುನಾಥ ಮೇಟಿ, ಬಸಪ್ಪ ಕೊಲಕಾರ ಹಾಗೂ ರೈತಮಹಿಳೆಯರು ಸೇರಿದಂತೆ ನುರಾರು ಕೃಷಿ ಸಾಧಕ ರೈತರು ವಿವಿಧ ಸ್ಥಳಗಳಿಂದ ಆಗಮಿಸಿದ್ದರು. ಮುರಗೋಡ ಕೃಷಿ ಇಲಾಖೆಯ ಬಿಟಿಎಮ್ ಬಸವರಾಜ ಬೀರುಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. - ಕರುನಾಡ ಕಂದ



















