

ಬಳ್ಳಾರಿ / ಕಂಪ್ಲಿ: ಪಟ್ಟಣದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ಸ್ವೀಕಾರ ಮಾಡಿದ ದಿನವನ್ನು ಸಂವಿಧಾನ ದಿನ್ನವಾಗಿ ಆಚರಣೆ ಮಾಡುತ್ತಿದ್ದು, ಬುಧವಾರ ಕಂಪ್ಲಿ ಪಟ್ಟಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವೃತ್ತವನ್ನು ತಳೀರು ತೋರಣ, ವಿದ್ಯುತ್ ದೀಪಗಳಿಂದ ರಂಗೋಲಿಗಳಿಂದ ಶೃಂಗರಿಸಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ನಂತರ ತಹಶೀಲ್ದಾರ್ ಜೂಗಲ್ ಮಂಜುನಾಯಕ, ತಾ.ಪಂ.ಇ.ಒ ಆರ್.ಕೆ.ಶ್ರೀಕುಮಾರ್, ದಲಿತ ಮುಖಂಡರಾದ ಕೆ.ಲಕ್ಷ್ಮಣ, ಬುಜ್ಜಿಕುಮಾರ್, ಸಿ.ಆರ್.ಹನುಮಂತ, ಜಿ.ರಾಮಣ್ಣ, ಸಣಾಪುರ ಮರಿಸ್ವಾಮಿ, ಎಂ.ಸಿ.ಮಾಯಪ್ಪ, ಚನ್ನಪ್ಪ, ಸಮಾಜ ಕಲ್ಯಾಣ ಇಲಾಖೆಯ ಕೆ.ವಿರೂಪಾಕ್ಷಪ್ಪ, ಶಿವಪ್ಪ ಸೇರಿದಂತೆ ವಿವಿಧ ಇಲಾಖೆಯ ಆಧಿಕಾರಿಗಳು ಸಿಬ್ಬಂದಿಗಳು ಡಾ.ಬಿ.ಆರ್.ಆಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅನೇಕ ದಲಿತ ಮುಖಂಡರು ಡಾ.ಬಿ.ಆರ್.ಅಂಬೇಡ್ಕರ್ ದೇವರಲ್ಲ, ಆದರೆ, ಬರೆದು ಸಂವಿಧಾನ ಜಾತಿ, ಮತ, ಧರ್ಮವನ್ನು ಮೀರಿದ ಬೃಹತ್ ಗ್ರಂಥವಾಗಿದೆ. ಇಂತಹ ಗ್ರಂಥವನ್ನು ನೀಡಿದ ಮಹಾನ್ ಮಾನವತಾವಾದಿ, ಭಾರತ ರತ್ನ, ಸಂವಿಧಾನ ಶಿಲ್ಪಿಯನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕೇವಲ ಕಾಟಾಚಾರಕ್ಕೆ ಸಂವಿಧಾನ ದಿನಾಚರಣೆಯನ್ನು ಆಚರಿಸದೆ ಪ್ರತಿಯೊಂದು ಸಮುದಾಯವನ್ನು ಸಂಘ-ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಚರಣೆ ಮಾಡಿದರೆ ಒಳಿತು. ಇದಕ್ಕಾಗಿ ಬಹಳಷ್ಟು ಮುಂಚಿತವಾಗಿಯೇ ಪೂರ್ವಭಾವಿ ಸಭೆಯನ್ನು ಕರೆದು ಆಚರಣೆ ಮಾಡಿದರೆ ಇನ್ನಷ್ಟು ಅರ್ಥ ಪೂರ್ಣವಾಗಿರುತ್ತದೆ. ಇಡೀ ಜಗತ್ತಿಗೇ ಮಾದರಿ ಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ಜಾತಿ, ಧರ್ಮ, ಸಮುದಾಯಕ್ಕೆ ಸೀಮಿತ ಮಾಡದೆ ಎಲ್ಲರೂ ಸ್ಮರಿಸುವಂತಾಗಲಿ ಎಂದರು.
ತಹಶೀಲ್ದಾರ್ ಜೂಗಲ್ ಮಂಜುನಾಯಕ, ಇ. ಒ ಆರ್.ಕೆ.ಶ್ರೀಕುಮಾರ್ ಸೇರಿದಂತೆ ಇತರರು ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ತಾಲ್ಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ದಲಿತ ಸಂಘಟನೆಗಳ ಮುಖಂಡರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದ್ದರು.
ಅದ್ದೂರಿ ಮೆರವಣಿಗೆ
ಸಂವಿಧಾನ ದಿನಾಚರಣೆಯ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿ ಇಟ್ಟು, ಪಟ್ಟಣದ ಸಾಂಗತ್ರಾಯ ಸಂಸ್ಕೃತ ಪಾಠಶಾಲೆಯ ಆವರಣದಿಂದ ಪ್ರಮುಖ ಬೀದಿಯಲ್ಲಿ ಅದ್ದೂರಿಯಿಂದ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ರಾಷ್ಟ್ರದ್ವಜವನ್ನು ಹಿಡಿದ, ಸಂವಿಧಾನದ ವಾಕ್ಯಗಳ ಪ್ಲೇಕಾರ್ಡ್ಗಳನ್ನು ಹಿಡಿದ ನೂರಾರು ವಿದ್ಯಾರ್ಥಿಗಳು, ಪೂರ್ಣಕುಂಭಗಳನ್ನು ಹೊತ್ತ ಮಹಿಳೆಯರು, ಜಾನಪದ ಕಲಾತಂಡಗಳು ಭಾಗವಹಿಸಿದ್ದವು.
ಮೆರವಣಿಗೆಯು ಪಟ್ಟಣದ ಭಾರತೀಯ ಶಿಶುವಿದ್ಯಾಲಯದಲ್ಲಿ ಸಮಾರೋಪಗೊಂಡಿತು.
ವೇದಿಕೆ ಕಾರ್ಯಕ್ರಮ
ಪಟ್ಟಣದ ಭಾರತೀಯ ಶಿಶು ವಿದ್ಯಾಲಯದ ಆವರಣದಲ್ಲಿ ಸಂವಿಧಾನ ದಿನಾಚರಣೆಯ ವೇದಿಕೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಜೂಗಲ್ ಮಂಜುನಾಯಕ ವಹಿಸಿದ್ದರು. ಸಂವಿಧಾನ ದಿನಾಚರಣೆ ಅಂಗವಾಗಿ ವಿಧ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂದ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಷಾಮಿಯಾಚಂದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಿದ್ದಣ್ಣ ಪರಮೇಶ್ವರಪ್ಪ ವಿಶೇಷ ಉಪನ್ಯಾಸ ನೀಡಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕೇವಲ ಮೀಸಲಾತಿಗಾಗಿ, ಒಂದು ಜಾತಿ, ಧರ್ಮ, ಮತ, ಪಂಥಗಳಿಗೆ ಸೀಮಿತಗೊಳಿಸದೇ ಅವರನ್ನು ಇಡೀ ದೇಶದ ಆಸ್ತಿಯನ್ನಾಗಿ ನೋಡಿದಾಗ ಮಾತ್ರ ಅವರು ರಚಿಸಿದ ಸಂವಿಧಾನಕ್ಕೆ ಅರ್ಥ ಬರಲಿದೆ ಎಂದರು.
ತಹಶೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ, ಪ್ರತಿಯೊಬ್ಬರೂ ಸಂವಿಧಾನವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕೇ ಹೊರತು ಸ್ವಂತಕ್ಕೆ ಬಳಸಿಕೊಳ್ಳಬಾರದು ಎಂದು ತಿಳಿಸಿದರು.
ದಲಿತ ಮುಖಂಡರಾದ ಕೆ.ಲಕ್ಷ್ಮಣ, ಸಣಾಪುರ ಮರಿಸ್ವಾಮಿ, ಎ.ಸಿ.ದಾನಪ್ಪ ಸೇರಿದಂತೆ ಇತರರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕಂದಾಯ, ತಾಲ್ಲೂಕು ಪಂಚಾಯತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ದಲಿತ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















