ಕಂಪ್ಲಿ: ಪುರಸಭೆ ವ್ಯಾಪ್ತಿಯ 10ನೇ ವಾರ್ಡು ಹರಿಜನಕೇರಿ ಪ್ರದೇಶದಲ್ಲಿ ಮಗುವಿಗೆ ಬೀದಿ ನಾಯಿ ಕಡಿದಿದ್ದು, ಮಗುವಿನ ಕಿವಿ, ತುಟಿ ಸೇರಿದಂತೆ ಇತರೆ ಕಡೆಗಳಲ್ಲಿ ಭಾರಿ ಪ್ರಮಾಣದ ಗಾಯಗಳಾಗಿದ್ದು, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್ ಗೆ ದಾಖಲಿಸಲಾಗಿದೆ.
ಕಳೆದ ಭಾನುವಾರ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಸಿ.ಎಸ್.ಆಕ್ಷತಾ ಎನ್ನುವ ಮಗುವಿಗೆ ಬೀದಿ ನಾಯಿಗಳು ಗುಂಪಾಗಿ ದಾಳಿ ಮಾಡಿ ಮನಸೋ ಇಚ್ಚೆ ಕಡಿದು ಭೀಕರವಾಗಿ ಗಾಯಗೊಳಿಸಿವೆ. ಭೀಕರವಾಗಿ ಗಾಯಗೊಳಿಸಿದ ಮಗುವನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸಗಾಗಿ ದಾಖಲಿಸಲಾಗಿದೆ.
ಆದರೆ, ಮಗುವಿಗೆ ದೊಡ್ಡ ಪ್ರಮಾಣದ ಗಾಯಗಳಾಗಿದ್ದರಿಂದ ಮತ್ತು ಕಿವಿ ಹಾಗೂ ತುಟಿಯನ್ನು ನಾಯಿಗಳು ಸೀಳಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಮ್ಸ್ ಆಸ್ಪತ್ರೆಯಲ್ಲಿ ಮಗುವಿನ ಕಿವಿ ಮತ್ತು ತುಟಿಗಳಿಗೆ ಹೊಲಿಗೆಗಳನ್ನು ಹಾಕಲಾಗಿದೆ. ಕಳೆದ ನಾಲ್ಕು ದಿನಗಳಿಂದ ಮಗುವಿಗೆ ಚಿಕಿತ್ಸೆಯನ್ನು ನೀಡುತ್ತಿದ್ದು, ಮಗು ಇನ್ನು ಚೇತರಿಸಿಕೊಂಡಿಲ್ಲವೆಂದು ಮಗುವಿನ ತಾತ ಸಿ.ಎಸ್.ವಿರೂಪಾಕ್ಷಿ ತಿಳಿಸಿದರು.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕವಾಗಿದ್ದು, ಈಗಾಗಲೇ ಹಲವಾರು ಭಾರಿ ಪಟ್ಟಣದಲ್ಲಿ ಬೀದಿ ನಾಯಿಗಳ ಕಡಿತದಿಂದ ಹಲವಾರು ಬಾಲಕರು ಗಾಯಗೊಂಡಿದ್ದು, ಇದೀಗ ಮತ್ತೊಂದು ಮಗುವಿಗೆ ಮರಣಾಂತಿಕವಾಗಿ ಗಾಯಗೊಳಿಸಿದ್ದು, ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟುವಂತೆ ಸಿ.ಎಸ್. ವಿರೂಪಾಕ್ಷಿ, ಸಿ.ಎಸ್. ಚೆನ್ನಯ್ಯ ಹಾಗೂ ಇತರರು ಆಗ್ರಹಿಸಿದ್ದಾರೆ.
ಮಗುವಿಗೆ ನಾಯಿಗಳ ಕಡಿತದಿಂದಾಗಿ ಭಾರಿ ಗಾಯಗಳಾಗಿದ್ದು,ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ಮಗುವಿನ ಚಿಕಿತ್ಸೆಗೆ ಹಾಗೂ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸಿ.ಎಸ್.ವಿರೂಪಾಕ್ಷಿ ಸ್ಥಳೀಯ ಆಡಳಿತ ಹಾಗೂ ಸರ್ಕಾರವನ್ನು ಆಗ್ರಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















