
ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ- 2026
ಅರಕಲಗೂಡು: ಸಾಮಾಜಿಕ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಸಾರುವ ಮುಖ್ಯ ಸಂಪ್ರದಾಯವಾಗಿರುವ ಭಾರತೀಯ ಹಬ್ಬಗಳು ಸಮಾಜದಲ್ಲಿ ಪ್ರೀತಿಯನ್ನು ಹರಡುವ ಸಾಧನವಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಜಮೀರ್ ಅಹಮದ್ ಅಭಿಪ್ರಾಯಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮೈಸೂರಿನ ಶ್ರೀರಾಮಪುರದ ಕ್ರೈಸ್ಟ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ರಾಮನಾಥಪುರ ಹೋಬಳಿಯ ಲಕ್ಕೂರು ಗ್ರಾಮದಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರ- 2026 ರ ಪ್ರಯುಕ್ತ “ಹಬ್ಬಗಳು – ಸಹೋದರತ್ವ ಮತ್ತು ಏಕತೆಯ ಸಂಕೇತ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಹಬ್ಬಗಳು ಕುಟುಂಬ ಮತ್ತು ಸಮುದಾಯಗಳ ನಡುವಿನ ಬಾಂಧವ್ಯವನ್ನು ವೃದ್ಧಿಗೊಳಿಸುತ್ತವೆ. ವೈವಿಧ್ಯತೆಯಲ್ಲಿ ಏಕತೆಯನ್ನು ರೂಪಿಸುತ್ತವೆ. ಜಾತಿ-ಧರ್ಮದ ಗಡಿಯನ್ನು ಮೀರಿ ಜೊತೆಗೂಡಿ ಆಚರಣೆ ಮಾಡುವುದು ಸಾಮಾನ್ಯವಾಗಿ ಭಾರತೀಯ ಸಂಸ್ಕೃತಿಯಲ್ಲಿ ಕಾಣಬಹುದು. ಹಬ್ಬಗಳು ಸಾಂಸ್ಕೃತಿಕ ಮೌಲ್ಯಗಳನ್ನು ಮುಂದಿನ ತಲೆಮಾರುಗಳಿಗೆ ಹಸ್ತಾಂತರಿಸುವ ಸಾಧನವಾಗಿವೆ.
“ಎಳ್ಳು ಬೆಲ್ಲ ತಿನ್ನು ಒಳ್ಳೆಯ ಮಾತು ಹೇಳು” ಎಂದು ಹೇಳುವುದರ ಮೂಲಕ ದ್ವೇಷ ಮರೆತು ಸ್ನೇಹ ಬೆಳೆಸುವುದು ಮುಖ್ಯ ಉದ್ದೇಶವನ್ನು ಮಕರ ಸಂಕ್ರಾಂತಿ ಹೊಂದಿದೆ. ಹಬ್ಬದ ದಿನ ಮಕ್ಕಳು ಮತ್ತು ಬಂಧುಗಳು ಮನೆ ಮನೆಗಳಲ್ಲಿ ಎಳ್ಳು ಬೆಲ್ಲ ಹಂಚಿ, ಜಗಳ-ವೈರತ್ವಗಳನ್ನು ಮರೆತು ಒಗ್ಗಟ್ಟು ಸೃಷ್ಟಿಸುತ್ತಾರೆ. ದಾನ ಮತ್ತು ಹಂಚಿಕೆಯಿಂದ ಪುಣ್ಯ ಫಲ ದೊರೆಯುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗಮೇಶ್ವರ ಸಮಿತಿ ಅಧ್ಯಕ್ಷರಾದ ಹಿರಣ್ಯ ಅಜ್ಞಾನದ ಮೇಲೆ ಜ್ಞಾನದ ಜಯವನ್ನು ಸಾಧಿಸುವ, ಪ್ರೀತಿ ಮತ್ತು ಸೌಹಾರ್ದತೆಯನ್ನು ಪಸರಿಸುವ ವಿಶೇಷತೆಯನ್ನು ಭಾರತೀಯ ಹಬ್ಬಗಳು ಹೊಂದಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಸಂಗಮೇಶ್ವರ ಸಮಿತಿಯ ಉಪಾಧ್ಯಕ್ಷರಾದ ಮೋಹನ ಎಲ್ ಎನ್., ಕಾರ್ಯದರ್ಶಿ ಅನಂತರಾಜು ಎಲ್. ಜಿ., ನಿರ್ದೇಶಕರುಗಳಾದ ಗಣೇಶ ನಾಯಕ, ಯೋಗ ನರಸಿಂಹ, ಜವರೇಗೌಡ ಎಲ್. ಡಿ., ಮುಖಂಡರುಗಳಾದ ಚಂದ್ರೇಗೌಡ, ತಿಮ್ಮಯ್ಯ, ಶಿವರಾಮೇಗೌಡ, ಗ್ರಾಮದ ಯುವಕರು, ಎನ್ಎಸ್ಎಸ್ ಶಿಬಿರಾಧಿಕಾರಿ ವೇದರಾಜು ಕೆ.ಎ., ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಸೌಬಿಯಾ ಬಿ.ಬಿ., ಶಶಿಕಿರಣ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪೃಥ್ವಿ ನಿರೂಪಿಸಿದರು.
- ಕರುನಾಡ ಕಂದ ಪತ್ರಿಕೆ




















