ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಪೆನ್, ಪೆನ್ಸಿಲ್ ವಿತರಣೆ
ಜೀವನವೆಂಬ ಬಂಡಿ ನಡೆಯಲು ಶಿಕ್ಷಣ ಅತಿ ಮುಖ್ಯ : ಬಳೆ ಮಲ್ಲಿಕಾರ್ಜುನ
ಕಂಪ್ಲಿ: ಮಕ್ಕಳ ಭವಿಷ್ಯ ಉಜ್ವಲವಾಗಿರಲು ಶಿಕ್ಷಣ ಅತಿ ಅವಶ್ಯ. ವಿದ್ಯ, ವಿನಯ ಇಲ್ಲದವರು ಜೀವನದಲ್ಲಿ ಏನು ಸಾಧಿಸಲು ಸಾಧ್ಯವಿಲ್ಲ’ ಎಂದು ಕರವೇ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಕಂಪ್ಲಿ-ಕೋಟೆಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಕರವೇ ರಾಜ್ಯ ಉಪಾಧ್ಯಕ್ಷರಾದ ಚಾನಾಳ ರಾಜಶೇಖರ್ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ಬುಕ್ ಹಾಗು ಲೇಖನಿ ವಿತರಿಸಿದ ನಂತರ ಮಾತನಾಡಿ, ಬಂಡಿ ನಡೆಯಲು ಬಂಡಿಯ ಚಕ್ರ ಮುಖ್ಯ. ಚಕ್ರಕ್ಕೆ ಕೀಲು ಮುಖ್ಯ. ಹಾಗೆಯೇ ಜೀವನವೆಂಬ ಬಂಡಿ ನಡೆಯಲು ಶಿಕ್ಷಣ ಅತಿ ಮುಖ್ಯ. ಶಿಕ್ಷಣವೆಂದರೆ ಕೇವಲ ಪಠ್ಯ ಪುಸ್ತಕದ ವಿಷಯ ತಿಳಿಸುವುದಲ್ಲ. ಜೀವನದ ಹಾದಿ ತೋರಿಸುವ ಜತೆಗೆ ಮಾನವೀಯ ಮೌಲ್ಯಗಳು, ಸಂಸ್ಕಾರವು ಶಿಕ್ಷಣದಿಂದ ದೊರಕುತ್ತದೆ ಎಂದರು.
ಮುಖ್ಯಶಿಕ್ಷಕಿ ಕಂಬತ್ ಶ್ವೇತಾ ಮಾತನಾಡಿ, ಮಕ್ಕಳ ಭವಿಷ್ಯವನ್ನು ಚೆನ್ನಾಗಿ ರೂಪಿಸಿ ಕೊಳ್ಳಬೇಕಾದರೆ, ಉತ್ತಮ ಶಿಕ್ಷಣದ ಅಡಿಪಾಯ ಅಗತ್ಯವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ದಾನ ಧರ್ಮ ಮಾಡುವುದು ಕಡಿಮೆಯಾಗಿದೆ. ಇಂತದರಲ್ಲಿ ಬಳೆ ಮಲ್ಲಿಕಾರ್ಜುನ ಅವರು ಅಲ್ಪಸ್ವಲ್ಪ ದುಡಿಮೆಯಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ಬುಕ್, ಪೆನ್ನು, ಪೆನ್ಸಿಲ್, ಬುದ್ಧಿಮಾಂದ್ಯ ಮಕ್ಕಳಿಗೆ ಊಟ ಉಪಚಾರ ಹೀಗೆ ನಾನಾ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದು, ಇಂತಹ ಸಮಾಜ ಸೇವೆ ಮಾಡುತ್ತಿರುವುದು ಬಳೆ ಮಲ್ಲಿಕಾರ್ಜುನ ಇವರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರಕಲಿ ಹಾಗೂ ಪ್ರತಿಯೊಂದು ರಂಗದಲ್ಲಿ ಅಭಿವೃದ್ಧಿ ಕಾಣಲಿ ಎಂದರು.
ಇಲ್ಲಿನ ಶಾಲೆಯಲ್ಲಿ 150 ಮಕ್ಕಳಿಗೆ ನೋಟ್ಬುಕ್ ವಿತರಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪ್ರಧಾನ ಕಾರ್ಯದರ್ಶಿ ಮನೋಜ್ ಗೌಡ, ಗೌರವಾಧ್ಯಕ್ಷ ಮೇದರ ಶ್ರೀನಿವಾಸ, ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಮುಕ್ಕುಂದಿ ಮಮತಾ, ಪದಾಧಿಕಾರಿಗಳಾದ ಲಿಂಗೇಶ, ಜಿ.ಮಂಜುನಾಥ, ರಮೇಶ್, ಕಟ್ಟೆ ಮಂಜುನಾಥ, ಎನ್.ವಾಸು, ಕಟ್ಟೆ ಅಮರೇಶ, ತಿಪ್ಪೇಸ್ವಾಮಿ, ನಬಿಸಾಬ್, ರಾಘು, ರಾಜ ಹೊಸಗೆರೆ, ಹೊನ್ನಳ್ಳಿ ಶ್ರೀದೇವಿ, ವಿಜಯಲಕ್ಷ್ಮಿ ಸೇರಿದಂತೆ ಶಿಕ್ಷಕರಾದ ಜಿಲಾನ್, ವರ್ಷಾ ಮಜೂಂದಾರ್, ಕೋಲ್ಕಾರ್ ಉಮಾ, ಕೋಲ್ಕಾರ್ ಜಯಶ್ರೀ, ಜೆ.ಅಕ್ಷತಾ, ಗೌಸಿಯಾ, ಕಾವ್ಯ, ಸುನಿತಾ ಹಾಗೂ ಮಕ್ಕಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















