ಕಂಪ್ಲಿ: ಪ್ರತಿಯೊಬ್ಬರೂ ಸಮಾಧಿಯ ಚಿಂತನೆ ಮಾಡದೆ ಸಮಾಜದ ಚಿಂತನೆ ಮಾಡಿದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯವೆಂದು ಕೊಟ್ಟೂರು ಸಂಸ್ಥಾನ ಮಠದ ಕುರುಗೋಡು ಮತ್ತು ಗರಗ ನಾಗಲಾಪುರ ಶಾಖಾಮಠಗಳ ಪೀಠಾಧಿಪತಿ ಶ್ರೀ ನಿರಂಜನ ಪ್ರಭುಸ್ವಾಮಿಗಳು ತಿಳಿಸಿದರು.
ಅವರು ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಕಂಪ್ಲಿ ಮಂಡಲ ಹಿಂದೂ ಸಮ್ಮೇಳನ ಸಮಿತಿ ಏರ್ಪಡಿಸಿದ್ದ ಹಿಂದೂ ಸಮ್ಮೇಳನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ, ಸನಾತನ ಪರಂಪರೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು, ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ನಮ್ಮ ಸನಾತನ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಈನಿಟ್ಟಿನಲ್ಲಿ ಪಾಲಕರು, ಪೋಷಕರು ಮನೆಯಲ್ಲಿ ತಮ್ಮ ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿಗಳನ್ನು ಕಲಿಸಿಕೊಡಬೇಕು. ಯವಜನತೆ ಆಧುನಿಕತಂತ್ರಜ್ಞಾನಕ್ಕೆ ಮಾರು ಹೋಗದೇ ನಮ್ಮ ಪುರಾಣ, ಇತಿಹಾಸಗಳನ್ನು ಅರಿತೊಕೊಳ್ಳುವಲ್ಲಿ ಗಮನ ಹರಿಸಬೇಕು, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ಅದನ್ನು ಜ್ಞಾನಕ್ಕೆ ತಕ್ಕಷ್ಟು ಬಳಸಬೇಕು ಎಂದ ಅವರು ದೇಶದಲ್ಲಿ ಜಾತಿ ಭೇದ ಮರೆತು ಎಲ್ಲರೂ ಒಂದೇ ಎನ್ನುವ ಭಾವನೆಯನ್ನು ಹೊಂದಿದಾಗ ಮಾತ್ರ ಹಿಂದುತ್ವ ಗಟ್ಟಿಗೊಳ್ಳುತ್ತದೆ. ಹಿಂದೂ ಸಮಾಜ ಒಗ್ಗೂಡಬೇಕೆಂದರೆ ನಾನೊಬ್ಬ ಭಾರತೀಯ ಎಂಬ ಭಾವನೆ ಮೂಡಿದಾಗ ಮಾತ್ರ ಸಾಧ್ಯ. ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ನಿಂತಿರುವ ಭಾರತ ದೇಶವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಇದನ್ನೇ ನಂಬಿ ಮನೆಯಲ್ಲಿ ಕುಳಿತರೆ ಹಿಂದೂಗಳಿಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನುವುದನ್ನು ಅರಿತುಕೊಂಡು ಎಲ್ಲಾ ಹಿಂದೂಗಳು ಸಂಘಟಿತರಾಗಬೇಕು. ಪ್ರತಿವರ್ಷವೂ ಇಂತಹ ಹಿಂದೂ ಸಮ್ಮೇಳನಗಳನ್ನು ಪ್ರತಿ ಹಳ್ಳಿಗಳಲ್ಲಿ ಸಂಘಟಿಸಬೇಕು ಎಂದರು.
ಹಿಂದೂ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವಕ್ತಾರರಾದ ಕೇಶವ ಜೀ ಮಾತನಾಡಿ, ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ಮತ್ತು ಹಿಂದೂ ಸಮಾಜ ಇವುಗಳು ಭಾರತದ ಆತ್ಮಗಳಾಗಿವೆ. ಇಂತಹ ಹಿಂದೂ ಸಮಾಜವನ್ನು ಜಾಗೃತಿಗೊಳಿಸುವ ಹಾಗೂ ಒಗ್ಗೂಡಿಸುವ ಮತ್ತು ನಮ್ಮ ದೇಶವನ್ನು ಮತ್ತೆ ವಿಶ್ವಗುರುವನ್ನಾಗಿ ಮಾಡುವ ಮಹತ್ತರ ಗುರಿಯೊಂದಿಗೆ ದೇಶಾದ್ಯಂತ ನಗರ, ಪಟ್ಟಣ, ಗ್ರಾಮ, ಗ್ರಾಮಗಳಲ್ಲಿ ಹಿಮದೂ ಸಮ್ಮೇಳನಗಳನ್ನು ಏರ್ಪಡಿಸಲಾಗುತ್ತಿದೆ. ಇಡೀ ಹಿಂದೂ ಸಮಾಜವನ್ನು ಒಂದು ಗೂಡಿಸುವ ಏಕೈಕ ಉದ್ದೇಶವೇ ಈ ಹಿಂದೂ ಸಮ್ಮೇಳನದ ಮೂಲ ಉದ್ದೇಶವಾಗಿದೆ. ಆದರೆ, ನಮ್ಮನ್ನಾಳಿದ ಬ್ರಿಟೀಷರು ಭಾರತದ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅಪಪ್ರಚಾರ ಮಾಡಿದ್ದರು. ಎಲ್ಲರನ್ನೂ ಸ್ವೀಕಾರ ಮಾಡುವ ಏಕೈಕ ಧರ್ಮವೇ ಹಿಂದೂ ಧರ್ಮವಾಗಿದೆ. ಹಿಂದೂ ಸಮಾಜದ ಬದಲಾವಣೆಗ ಅತೀ ವೇಗ ಪಡೆದುಕೊಳ್ಳಬೇಕಾಗಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಹಿಂದೂಗಳು ಪಂಚ ತತ್ವಗಳಾದ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನೆ, ಸ್ವ ಆಧಾರಿತ ಜೀವನ ಮತ್ತು ನಾಗರೀಕ ಕರ್ತವ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಮತ್ತು ಇವುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದರು.
ಇದಕ್ಕೂ ಮುನ್ನ ಗೊಮಾತೆಗೆ ಪೂಜೆ ಸಲ್ಲಿಸುವ ಮೂಲಕ ಮತ್ತು ಸಸಿಗೆ ನೀರೆರೆದು, ಜ್ಯೊತಿ ಬೆಳಗುವ ಮೂಲಕ ಹಿಂದೂ ಸಮ್ಮೇಳನಕ್ಕೆ ಸ್ವಾಮೀಜಿಗಳು, ಗಣ್ಯರು ಚಾಲನೆ ನೀಡಿದರು.
ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ಎಚ್.ಶಿವಶಂಕರಗೌಡ, ಹಿಂದೂ ಸಮ್ಮೇಳನ ಸಮಿತಿ ಮಂಡಲ ಅಧ್ಯಕ್ಷ ಎನ್.ಎಂ.ಪತ್ರೆಯ್ಯಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಕರಿಬಸವಯ್ಯಸ್ವಾಮಿ ಇದ್ದರು. ಎಸ್.ರೇಣೂಕಾರಾಜ್ ಸ್ವಾಗತಿಸಿದರೆ, ರಾಜು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಸಮಾಜಗಳ ಮುಖಂಡರು, ಯುವಕರು, ಮಹಿಳೆಯರು, ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















