
ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು
ಕೊಪ್ಪಳ / ಗಂಗಾವತಿ : ಬಣ್ಣಗಳ ಹಬ್ಬ ಹೋಳಿಯ ಸಡಗರದ ನಡುವೆಯೇ ನಗರದಲ್ಲಿ ಮಂಕು ಕವಿದಿದೆ. ಇಲ್ಲಿನ ಗಾಂಧಿನಗರದ ಇಬ್ಬರು ಯುವಕರು ಸ್ನಾನಕ್ಕೆಂದು ತೆರಳಿದ್ದಾಗ ತುಂಗಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ಜರುಗಿದೆ.
ಘಟನೆಯ ವಿವರ:
ಗಂಗಾವತಿ ಗಾಂಧಿನಗರದ ನಿವಾಸಿಗಳಾದ ಅಭಿಷೇಕ್ (18) ಹಾಗೂ ಸೂರ್ಯ (19) ಮೃತ ದುರ್ದೈವಿಗಳು. ಸ್ಥಳೀಯ ಹೋಳಿ ಆಚರಣೆ ಸಮಿತಿ ಆಯೋಜಿಸಿದ್ದ ಕಾಮನ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣ ಹಚ್ಚಿಕೊಂಡಿದ್ದ ಈ ಯುವಕರು, ನಂತರ ಸ್ನಾನ ಮಾಡಲೆಂದು ದೇವಘಾಟ ಸಮೀಪದ ನದಿಗೆ ತೆರಳಿದ್ದರು. ಈ ವೇಳೆ ನೀರಿನ ಆಳ ತಿಳಿಯದೆ ಇಳಿದಾಗ, ನದಿಯ ಒಳಗಿದ್ದ ಕಲ್ಲುಬಂಡೆಗಳ ಸಂಧಿಯಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಕಾರ್ಯಾಚರಣೆ:
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ನೆರವಿನೊಂದಿಗೆ ಹರಸಾಹಸ ಪಟ್ಟು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತ ಯುವಕರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಗಾಂಧಿನಗರದಲ್ಲಿ ಶೋಕದ ಛಾಯೆ ಆವರಿಸಿದೆ.
ಎಚ್ಚರಿಕೆ ಮೀರಿದ ಸಾಹಸ:
”ಸಣಾಪುರ ಸಮೀಪ ತುಂಗಭದ್ರಾ ನದಿಯು ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ, ಒಳಗಡೆ ಬಂಡೆಗಳ ನಡುವೆ ಸುಳಿ ಹಾಗೂ ರೌದ್ರಾವತಾರವನ್ನು ಹೊಂದಿರುತ್ತದೆ. ಪ್ರತಿ ವರ್ಷ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಇಲ್ಲಿಗೆ ತೆರಳದಂತೆ ಮುನ್ನೆಚ್ಚರಿಕೆ ನೀಡುತ್ತಲೇ ಇರುತ್ತದೆ. ಆದರೂ ಯುವಕರು ಜೀವದ ಹಂಗು ತೊರೆದು ನದಿಗೆ ಇಳಿಯುತ್ತಿರುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ.”
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















