ರಾಯಚೂರು/ ಸಿಂಧನೂರು : ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಗುರುವಾರದಂದು ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ನಾವೀನ್ಯತಾ ಮೇಳವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಸ್ವಯಂ ತಯಾರಿಸಿದ 20ಕ್ಕೂ ಹೆಚ್ಚು ನವೀನ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ, ತಮ್ಮ ಸೃಜನಾತ್ಮಕತೆ ಮತ್ತು ಸಮಸ್ಯೆ ಪರಿಹಾರ ಕೌಶಲ್ಯಗಳನ್ನು ಮೆರೆದರು.
ಈ ಆವಿಷ್ಕಾರ ಮೇಳಕ್ಕೆ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭೇಟಿ ನೀಡಿ, ವಿದ್ಯಾರ್ಥಿಗಳ ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮೇಳವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಅನ್ವೇಷಣಾ ಮನೋಭಾವ ಬೆಳೆಸುವ ವೇದಿಕೆಯಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರಿ ಮುಖ್ಯಗುರು ರವೀಂದ್ರ ಗೌಡ ಅವರು ಮಾತನಾಡಿ, ಇಂದಿನ ದಿನಮಾನಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಕೌಶಲ್ಯಗಳು ಅತ್ಯಂತ ಅಗತ್ಯವಾಗಿವೆ. ಇಂತಹ ನಾವೀನ್ಯತಾ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆ ಕೌಶಲ್ಯಗಳನ್ನು ವೃದ್ಧಿಸಲು ಶಿಕ್ಷಕರು ಪ್ರೇರೇಪಿಸಬೇಕು ಎಂದು ಹೇಳಿದರು.
ಅದೇ ಸಂದರ್ಭದಲ್ಲಿ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ರಾಯಚೂರು ಜಿಲ್ಲೆಯ ವಲಯ ಮುಖ್ಯಸ್ಥರಾದ ಜ್ಯೋತಿಬಾ ಸೂರ್ಯವಂಶಿ ಅವರು ಪ್ರತಿಯೊಂದು ಮಾದರಿಯ ಸಾಧಕ-ಬಾಧಕಗಳನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ತಾಲ್ಲೂಕು ಸಂಚಾಲಕರಾದ ಶ್ರೀ ಶಿವಗೇನಪ್ಪ ಕೊಮ್ಮನೂರು ಗೌಡನಬಾವಿ ಅವರು ಅಚ್ಚುಕಟ್ಟಾಗಿ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ರಾಮದಾಸ್, ತುಳಸಿದಾಸ್, ವೀರೇಶಪ್ಪ, ಅಂಜನಾದೇವಿ, ವಾಸಂತಿ ಕೆ., ಖಾಜಾ ಬನ್ನಿ ರೇಷ್ಮಾ, ಚೆನ್ನವೀರಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















