ಬಳ್ಳಾರಿ: ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ, ವಾರ್ಡನ್ ಮೇಲೂ ಹಲ್ಲೆ ಮಾಡಿ, ಮತ್ತು ಓರ್ವ ವಿದ್ಯಾರ್ಥಿಯ ಹತ್ಯೆಗೆ ಕಾರಣವಾಗಿದ್ದ ಅಪ್ರಾಪ್ತ ಬಾಲಕ ಕೊನೆಗೂ ಪತ್ತೆಯಾಗಿದ್ದಾನೆ. ಹೌದು ಬಳ್ಳಾರಿ ಜಿಲ್ಲೆಯ ಗೋನಾಳ ಪ್ರದೇಶದಲ್ಲಿ ನಡೆದ ದುರಂತ ಘಟನೆ ಜಿಲ್ಲೆಯಾದ್ಯಂತ ಆಘಾತ ಮೂಡಿಸಿತ್ತು. ಖಾಸಗಿ ವಸತಿ ಶಾಲೆಯೊಂದರಲ್ಲಿ ನಡೆದ ಹಲ್ಲೆಯಲ್ಲಿ ಒಬ್ಬ ಬಾಲಕ ಸಾವನ್ನಪ್ಪಿದ್ದು, ಏಳು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಕೊನೆಗೂ ಇದಕ್ಕೆ ಕಾರಣವಾದ ಅಪ್ರಾಪ್ತ ಬಾಲಕನನ್ನು ಪೊಲೀಸರು ಸೋಮವಾರ ತಮ್ಮ ಸುಪರ್ದಿಗೆ ಪಡೆದಿದ್ದಾರೆ.
ಬಾಲಕನು ಹತಾಶೆಯಿಂದ ಈ ಕೃತ್ಯವೆಸಗಿರುವುದು ಗೊತ್ತಾಗಿದೆ. ಆತನನ್ನು ನಗರದ ಶ್ರೀರಾಮಪುರ ಕಾಲೋನಿಯ ರೂಪನಗುಡಿ ರಸ್ತೆಯಲ್ಲಿ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸ್ಟೆಲ್ ವಾತಾವರಣ ತನಗೆ ಇಷ್ಟವಿರಲಿಲ್ಲ ಎಂದು ಬಾಲಕ ಪ್ರಾಥಮಿಕ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಬಾಲಕನ ವಿಚಾರಣೆಯನ್ನು ಅತ್ಯಂತ ಎಚ್ಚರಿಕೆಯಿಂದ ಮಾಡುತ್ತಿದ್ದೇವೆ. ಇದಕ್ಕಾಗಿ ವೈದ್ಯಕೀಯ ತಜ್ಞರು, ಅಧಿಕಾರಿಗಳ ತಂಡ ರಚನೆ ಮಾಡಿಕೊಳ್ಳುತ್ತಿದ್ದೇವೆ. ಇದರಲ್ಲಿ ಪೊಲೀಸರು, ಮಾನಸಿಕ ತಜ್ಞರು, ವೈದ್ಯರು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಇರಲಿದ್ದಾರೆ. ಈ ಬಗ್ಗೆ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ವಿಮ್ಸ್) ಜತೆಗೆ ಮಾತನಾಡಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ ತಿಳಿಸಿದರು.
‘ಘಟನೆಗೆ ಕಾರಣವೇನು ಎಂಬುದರ ತನಿಖೆ ನಡೆಯುತ್ತಿದೆ. ಶಾಲೆಯವರು ಹಾಸ್ಟೆಲ್ಗೆ ಅನುಮತಿ ಪಡೆದಿದ್ದರೇ ಎಂಬುದರ ಬಗ್ಗೆ ಪರಿಶೀಲಿಸಲು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಪತ್ರ ಬರೆಯಲಾಗಿದೆ. ಶಾಲೆಯ ವೈಫಲ್ಯದ ಬಗ್ಗೆಯೂ ತನಿಖೆ ಮಾಡುತ್ತೇವೆ’ ಎಂದು ಹೇಳಿದರು.
ಘಟನೆ ಬಳಿಕ ಬಾಲಕ ಬಳ್ಳಾರಿ ನಗರದಲ್ಲೇ ಇದ್ದ. ದೇವಸ್ಥಾನಗಳಲ್ಲಿ ನೀಡುವ ಪ್ರಸಾದ ಸೇವಿಸುತ್ತಾ ಎರಡು ದಿನ ಕಳೆದಿದ್ದ ಎನ್ನಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















