ಬಳ್ಳಾರಿ / ಕಂಪ್ಲಿ : ಪಟ್ಟಣದ ಸಕ್ಕರೆ ಕಾರ್ಖಾನೆಯ ಬಳಿಯಲ್ಲಿರುವ ಸರ್ಕಾರಿ ಶಾಲಾ ಆವರಣದಲ್ಲಿ ಮೌಲಾನ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಗುರುತು ಹಾಕಿಸುವ ಸ್ಥಳಕ್ಕೆ ಸ್ಥಳೀಯ ಹಿರಿಯ ಮುಖಂಡ ರಾಮ್ಬಸವೇಶ್ವರಾವ್ ಹಾಗೂ ಬಳ್ಳಾರಿಯ ಡಾ.ಅರುಣಾ ಇವರು ಬುಧವಾರ ಭೇಟಿ ನೀಡಿ, ಇಲ್ಲಿನ ಜನರೊಂದಿಗೆ ಕೆಲ ಕಾಲ ಚರ್ಚಿಸಿದರು.
ನಂತರ ಮುಖಂಡ ರಾಮಬಸವೇಶ್ವರರಾವ ಮಾತನಾಡಿ, ಇಲ್ಲಿನ ಶಾಲಾ ಮಕ್ಕಳ ಶೈಕ್ಷಣಿಕ ಮಟ್ಟದ ಅಭಿವೃದ್ಧಿಯ ದೃಷ್ಠಿಯಿಂದ ಸಾಕಷ್ಟು ವರ್ಷಗಳ ಹಿಂದೆ ಸರ್ಕಾರಿ ಶಾಲೆ ಹುಟ್ಟಿಕೊಂಡಿದೆ. ಇದರಿಂದ ಅನೇಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿದೆ. ಮತ್ತು ಈಗಲೂ ಸಹ ಅಧಿಕ ಮಕ್ಕಳ ಸಂಖ್ಯೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿನ ಸರ್ಕಾರಿ ಶಾಲೆಗೆ ಇನ್ನಷ್ಟು ಕೊಠಡಿಗಳ ಅವಶ್ಯಕತೆ ಇದೆ. ಮತ್ತು ಪಾಠದ ಜೊತೆಗೆ ಆಟೋಟಕ್ಕಾಗಿ ಮೈದಾನ ಉಳಿಸಿಕೊಳ್ಳಲಾಗಿದೆ. ಆದರೆ, ಈಗ ಸ್ಥಳೀಯರ ಗಮನಕ್ಕೆ ಇಲ್ಲದೇ ಏಕಾಏಕಿಯಾಗಿ ಮೌಲಾನ ಆಜಾದ್ ಮಾದರಿ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರಿ ಶಾಲಾ ಆವರಣದಲ್ಲಿ ಸ್ಥಳ ಗುರುತು ಮಾಡಿರುವುದು ವಿಪರ್ಯಾಸವಾಗಿದೆ. ಇಲ್ಲಿನ ಮಕ್ಕಳ ಪಾಠದ ಜೊತೆಗೆ ಆಟಕ್ಕೆ ಮೈದಾನ ವಿದೆ. ಆದರೆ, ಇಲ್ಲಿರುವ ಮೈದಾನದಲ್ಲಿ ಆಜಾದ್ ಶಾಲೆ ನಿರ್ಮಿಸುವುದು ಯಾವ ನ್ಯಾಯ. ಆದ್ದರಿಂದ ಮಾನ್ಯ ಸ್ಥಳೀಯ ಶಾಸಕ ಗಣೇಶ್ ಇವರ ಗಮನಕ್ಕೆ ತರಲಾಗುವುದು. ಕೂಡಲೇ ಶಾಸಕರು ಮಧ್ಯ ಪ್ರವೇಶಿಸಿ, ಇಲ್ಲಿನ ಸಮಸ್ಯೆಯನ್ನು ಆಲಿಸಿ, ಆದಷ್ಟು ಬೇಗ ಆಜಾದ್ ಶಾಲೆ ಬೇರೆಡೆ ಸ್ಥಳಾಂತರಿಸುವ ಮೂಲಕ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದರು.
ಮುಖಂಡೆ ಡಾ.ಅರುಣಾ ಮಾತನಾಡಿ, ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಇರುವದೊಂದೆ ಆಟದ ಮೈದಾನ. ಆದರೆ, ಅಧಿಕಾರಿಗಳು ಆಜಾದ್ ಶಾಲೆ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಆಜಾದ್ ಶಾಲೆಗೆ ನಮ್ಮ ವಿರೋಧವಿಲ್ಲ. ಆದರೆ, ಇಲ್ಲಿ ಬಿಟ್ಟು ಬೇರೆಕಡೆ ಇರುವ ಸೂಕ್ತ ಸ್ಥಳದಲ್ಲಿ ಆಜಾದ್ ಶಾಲೆ ನಿರ್ಮಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ರಾಮಲಿಂಗಪ್ಪ, ಮುಖಂಡರಾದ ಎನ್.ಮನೋಜಗೌಡ ರಾಜಶೇಖರ್, ಎರ್ರಿಸ್ವಾಮಿ, ಟಿ.ವಿ.ಸುದರ್ಶನರೆಡ್ಡಿ, ಮಲ್ಲಪ್ಪ, ಆದಿ ನಾರಾಯಣಿ, ಸುಂಕಪ್ಪ, ರಬಿಯಾ ನಿಸಾರ್, ಲಲಿತಾ ಸೇರಿದಂತೆ ಎಸ್ ಡಿ ಎಂ ಸಿ ಯವರು, ಮುಖಂಡರು, ಹಳೇ ವಿದ್ಯಾರ್ಥಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















