ಮಾರ್ಚ್ 11, ಗುರುವಾರದಂದು ಬೆಳಗಾವಿಯ ಮಹಾಂತ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಬೆಳಗಾವಿ ಜಿಲ್ಲೆ ಇವರು ಕೊಡುವ ದಿ. ಶಾಂತಾದೇವಿ ಮಹಾಲಿಂಗಪ್ಪ ಬಣಕಾರ ಇವರ ಹೆಸರಿನಲ್ಲಿರುವ ದತ್ತಿ ಪ್ರಶಸ್ತಿಯನ್ನು ಡಾ. ಸುನೀಲ ಪರೀಟ ಅವರು ಸಂಪಾದಿಸಿದ “ನಮ್ಮ ವೈದ್ಯೋನಾರಾಯಣ” ಕೃತಿಗೆ ನೀಡಿದರು.
ಈ ಪ್ರಶಸ್ತಿಯಲ್ಲಿ ನಗದು ಬಹುಮಾನ, ಪ್ರಶಸ್ತಿ ಪತ್ರ, ಪುಸ್ತಕ ಹಾಗೂ ಶಾಲನ್ನು ಹೊದಿಸಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ವಾಲಿಶೆಟ್ಟಿಯವರು ವಹಿಸಿಕೊಂಡಿದ್ದರು.
ಪ್ರಶಸ್ತಿಯ ಕುರಿತು ಆಶಯ ನುಡಿಯನ್ನು ಕಸಾಪ ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡರವರು ನುಡಿದರು. ಪ್ರಶಸ್ತಿ ಪುರಸ್ಕೃತರಾದ ಡಾ. ಸುನೀಲ ಪರೀಟ ಅವರು ಪುಸ್ತಕಗಳಿಗೆ ಪ್ರಶಸ್ತಿ ಬರುವುದು ಮಹತ್ವದಲ್ಲ, ಪುಸ್ತಕಗಳ ಬಗ್ಗೆ ಸಕಾರಾತ್ಮಕ ವಿಮರ್ಶೆಗಳು ಹಾಗೂ ಪ್ರಶಂಸನೀಯ ಮಾತುಗಳು ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತವೆ, ಪ್ರಶಸ್ತಿಗಳು ಸಾಹಿತಿಗಳಿಗೆ ಇನ್ನಷ್ಟು ಹೆಚ್ಚಿನ ಪ್ರೋತ್ಸಾಹ ಪ್ರೇರಣೆಯನ್ನು ನೀಡುತ್ತವೆ, ಜೊತೆಗೆ ಜವಾಬ್ದಾರಿಯನ್ನು ಕೂಡ ಹೆಚ್ಚಿಸುತ್ತದೆ ಎಂದು ಹೇಳಿದರು. ಡಾ. ವನಿತಾ ಮೆಟಗುಡ್ಡವರು ಸ್ತ್ರೀ ಸೌಂದರ್ಯವರ್ಧಕ ಶಾಸ್ತ್ರದ ಕುರಿತು ಉಪನ್ಯಾಸವನ್ನು ನೀಡಿದರು. ಕಸಾಪ ಕಾರ್ಯದರ್ಶಿಗಳಾದ ಎಂ. ವೈ. ಮೆಣಸಿನಕಾಯಿರವರು ಆರೋಗ್ಯ ರಕ್ಷಣೆಯ ಕುರಿತು ಹಿತನುಡಿಯನ್ನು ಹೇಳಿದರು. ಮುಖ್ಯ ಅತಿಥಿಗಳಾದ ಡಾ. ದಯಾನಂದ ಧನವಂತ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಾಹಿತ್ಯದ ಮಹತ್ವವನ್ನು ತಿಳಿಹೇಳಿದರು. ಡಾ. ಹೇಮಾ ಸೊನೊಳ್ಳಿ ರವರು ಎಲ್ಲರನ್ನೂ ಸ್ವಾಗತಿಸಿದರು, ಪ್ರೊ. ಮಂಜುನಾಥ ಕಲಾಲ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಉಪನ್ಯಾಸಕರಾದ ಸೋನಲ್ ರವರು ವಂದನಾರ್ಪಣೆ ಮಾಡಿದರು.
- ಕರುನಾಡ ಕಂದ ಪತ್ರಿಕೆ




















