ಹನಿಹನಿಯ ಚಿತ್ತಾರ ಭುವಿಯೊಡಲ ಸಾಕಾರ/
ಇನಿದನಿಯ ಕೇಳುತಲಿ ಖುಷಿಯದರ ಜನನ/
ಮನವಿಂದು ಕುಣಿದಿರಲು ಇಳೆತಂಪ ಪಸರಿರಲು/
ಗುನುಗುನುಗಿ ಹಾಡುನೀ – ಸಿರಿರಮಣಿಯೆ//
ಮಿಂಚುತಲಿ ಬಾನೆಲ್ಲ ಗುಡುಗಿನಲೆ ತೇಲುತಲಿ/
ಸಂಚನ್ನು ಹೂಡಿದ್ದ ಮಳೆರಾಯ ನಿನ್ನೆ/
ಸಿಂಚನದಿ ಭುವಿಯಲ್ಲಿ ಒಲವೆಂಬ ನವಭಾವ/
ವಂಚಿಸದೆ ತೋರಿಸಿಹ – ಸಿರಿರಮಣಿಯೆ//
ಬೆಳಗಾಗಿ ಬಾನಲ್ಲಿ ರವಿಯವನ ಕಿರಣವದು/
ಸೆಳೆಯುತಿದೆ ಗಾಳಿಯಲಿ ಹಕ್ಕಿಗಳ ಸಾಲು/
ಇಳೆನಿದಿರೆಯಿಂದೆದ್ದು ಸೊಬಗಿಂದ ನಸುನಗುತ/
ಕಳೆತುಂಬಿ ನಗುತಿಹಳು – ಸಿರಿರಮಣಿಯೆ//
ಹಸಿರೆಲ್ಲ ಹನಿಯಲ್ಲಿ ಮಿಂದೆದ್ದು ಹೊಳಪಾಗಿ/
ನಸುಕಿನಲಿ ಮುಗುಳುನಗೆ ಚೆಲ್ಲುತಿದೆ ನೋಡು/
ಮಿಸುಕಾಡಿ ನೀರಲ್ಲಿ ಮೀನಗಣ ಖುಷಿಯಿಂದ/
ರಸಭಾವ ಚಿಮ್ಮುತಿದೆ – ಸಿರಿರಮಣಿಯೆ//
✍🏻 ಅಶ್ವಿಜ ಶ್ರೀಧರ್, ಬೆಳ್ತಂಗಡಿ




















