
ಬಳ್ಳಾರಿ / ಕಂಪ್ಲಿ : ಇಂದಿನಿಂದ ಎಸ್. ಎಸ್. ಎಲ್. ಸಿ.
ಪರೀಕ್ಷೆಗೆ ಕಂಪ್ಲಿ ತಾಲೂಕು ಸಜ್ಜಾಗಿದೆ ಪರೀಕ್ಷೆ ಸಿದ್ಧತೆ ಕುರಿತು ಬಿಇಒ ಮಾಹಿತಿ ನೀಡಿದರು.
ಕಂಪ್ಲಿ ತಾಲೂಕಿನಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾ. 18ರಿಂದ ಏಪ್ರಿಲ್ 2ರ ವರೆಗೂ ನಡೆಯಲಿದ್ದು ಶಿಕ್ಷಣ ಇಲಾಖೆ ಪರೀಕ್ಷೆಗಳನ್ನು ಪಾರದರ್ಶಕತೆಯಿಂದ ನಡೆಸಲು ಸಕಲ ಸಿದ್ಧತೆ ಕೈಗೊಂಡಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 6ಕೇಂದ್ರಗಳು, 91 ಕೊಠಡಿಗಳನ್ನು ಗುರುತಿಸಲಾಗಿದೆ. ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಬಾಲಕಿಯರು 961, ಬಾಲಕರು 1073, ಒಟ್ಟು 2034 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ.
ಸಿಸಿ ಕ್ಯಾಮೆರಾ ಅಳವಡಿಕೆ : ಎಸ್ ಎಸ್ ಎಲ್ ಸಿ ಪರೀಕ್ಷೆಯ 6 ಕೇಂದ್ರಗಳ 91 ಕೊಠಡಿಗಳಿಗೆ 110 ಸಿಸಿ ಕ್ಯಾಮೆರಾ ಅಳವಡಿಕೆ ಕಾರ್ಯ ನಡೆಸಲಾಗಿದೆ.
ಎಲ್ಲಾ ಕೇಂದ್ರಗಳಲ್ಲೂ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಕಸ್ಟೋಡಿಯನ್ನರು, ಸ್ಥಾನಿಕ ಜಾಗೃತದಳ ಅಧಿಕಾರಿಗಳು, ಮೊಬೈಲ್ ಸ್ವಾಧೀನಾಧಿಕಾರಿಗಳು, ಕೊಠಡಿ ಮೇಲ್ವಿಚಾರಕರು, ಹೆಚ್ಚುವರಿ ಸಿಬ್ಬಂದಿ ಒಟ್ಟು 150 ಜನ ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಕುರುಗೋಡು ಬಿಇಒ ಸಿದ್ದಲಿಂಗಯ್ಯ ಮೂರ್ತಿ ನೇತೃತ್ವದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಕಲ ಸಿದ್ದತೆ ಮಾಡಿದ್ದಾರೆ.
6 ಪರೀಕ್ಷೆ ಕೇಂದ್ರಗಳು :
1ನೇ ಪರೀಕ್ಷೆ ಕೇಂದ್ರ ಷಾಮಿಯ ಚಂದ್ ಸರ್ಕಾರಿ ಪ್ರೌಢಶಾಲೆ ಬಾಲಕರ ಕಂಪ್ಲಿ.
2ನೇ ಪರೀಕ್ಷೆ ಕೇಂದ್ರ ಬಾಲಕಿಯರ ಪ್ರೌಢಶಾಲೆ ಕಂಪ್ಲಿ. 3ನೇ ಪರೀಕ್ಷೆ ಕೇಂದ್ರ ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆ.
4 ಪರೀಕ್ಷೆ ಕೇಂದ್ರ ಎಮಿಗನೂರು ಸರ್ಕಾರಿ ಪ್ರೌಢಶಾಲೆ. 5ನೇ ಪರೀಕ್ಷೆ ಕೇಂದ್ರ ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಗ್ಗನಹಳ್ಳಿ.
6ನೇ ಪರೀಕ್ಷೆ ಕೇಂದ್ರ ಓದ್ಸೋ ಜಡೆಮ್ಮ
ಗುರುಸಿದ್ದಯ್ಯ ಪ್ರೌಢಶಾಲೆ,
ಸಣಾಪುರು ರಸ್ತೆ,
ಕಂಪ್ಲಿ,
ಈ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಈ ಎಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲು ಸೂಕ್ತವಾದ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಈ ಕೊಠಡಿಗಳಲ್ಲಿ ಕುಡಿಯುವ ನೀರು, ಗಾಳಿ, ಬೆಳಕು ಇರುವಂತೆ ವ್ಯವಸ್ಥೆ ಮಾಡಲಾಗಿದೆ.
ನಿಷೇಧ :
ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶ ನಿಷೇಧಿತವಾಗಿದ್ದು ಸಮೀಪವಿರುವ ಝರಾಕ್ಸ್, ಸೈಬರ್ ಕೇಂದ್ರಗಳನ್ನು ತೆರೆಯುವಂತಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಬೇರಾವುದೇ ಸಿಬ್ಬಂದಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಪರೀಕ್ಷಾ ಸಿಬ್ಬಂದಿ ಗುರುತಿನ ಚೀಟಿ ಧರಿಸಬೇಕು. ವಿದ್ಯಾರ್ಥಿಗಳಿಗೆ ಮೊಬೈಲ್, ಬ್ಲೂ ಟೂತ್ ವಿದ್ಯುನ್ಮಾನ ಉಪಕರಣ ನಿಷೇಧಿಸಲಾಗಿದೆ, ಕೇಂದ್ರದಲ್ಲಿ ಪರೀಕ್ಷಾ ಸಿಬ್ಬಂದಿಯನ್ನು ಹೊರತು ಪಡಿಸಿ ಅನ್ಯರಿಗೆ ಪ್ರವೇಶ ನಿಷೇಧ ಮಾಡಲಾಗಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಶೌಚಾಲಯ, ಸ್ವಚ್ಚತೆಗೆ ಆದ್ಯತೆ, ಕುಡಿಯುವ ನೀರಿನ ವ್ಯವಸ್ಥೆ, ಪ್ರತಿ ಕೇಂದ್ರಕ್ಕೆ ಆರೋಗ್ಯ ಸಿಬ್ಬಂದಿ, ಸಾರಿಗೆ ಬಸ್ ವ್ಯವಸ್ಥೆ, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸಿಬ್ಬಂದಿ, ಪರೀಕ್ಷಾ ಕೇಂದ್ರಗಳ ಭದ್ರತೆಗೆ ಪೊಲೀಸರನ್ನು ನಿಯೋಜಿಸಿದ್ದಾರೆ.
ವಿಶೇಷಚೇತನರಿಗೆ ಒಂದು ತಾಸು ಹೆಚ್ಚಿಗೆ :
ವಿಶೇಷಚೇತನರಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ವಾಚಕರು, ಸಹಾಯಕರು ಮತ್ತು ಸಹಾಯಕ ಬರಹಗಾರರನ್ನು ನೇಮಿಸಿಕೊಳ್ಳಬಹುದು. ಒಂದು ಗಂಟೆ ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ನೆಲ ಮಹಡಿಯಲ್ಲಿ ಆಸನದ ವ್ಯವಸ್ಥೆ ಮಾಡಲಾಗುತ್ತದೆ.
ಸಮಿತಿ ರಚನೆ :
ಮಾ. 18ರಿಂದ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆ ಪಾರದರ್ಶಕವಾಗಿ ನಡೆಸಲು ಎಲ್ಲಾ ಸಿದ್ದತೆಯನ್ನು ಕೈಗೊಂಡಿದೆ ಪೊಲೀಸ್ ಬಂದೋಬಸ್ತ್, ಸಿ.ಸಿ. ಕ್ಯಾಮೆರಾ, ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿದೆ. ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ವಿತರಿಸಲು ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗನ್ನೊಳಗೊಂಡ ಪ್ರಶ್ನೆಪತ್ರಿಕೆ ಪಾಲಕರ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಪ್ರಶ್ನೆ ಪತ್ರಿಕೆ ವಿತರಿಸುವ ವಾಹನಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಕುರುಗೋಡು ಬಿಇಒ ಸಿದ್ದಲಿಂಗಯ್ಯ ಮೂರ್ತಿ ತಿಳಿಸಿದ್ದಾರೆ.
ಕಂಪ್ಲಿ ತಾಲೂಕಿನಲ್ಲಿ ಒಟ್ಟು 6 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ತೊಂದರೆಯಾಗದಂತೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಪಾರದರ್ಶಕವಾಗಿ ಪರೀಕ್ಷೆಗಳು ನಡೆಯಲಿವೆ ಎಂದು ಕುರುಗೋಡು ಎಸ್ ಎಲ್ ಸಿ ಪರೀಕ್ಷೆ ನೋಡಲ್ ಅಧಿಕಾರಿ ವಿಶ್ವನಾಥ್ ಹೇಳಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















