ಪುರಾತನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ಬ್ರಾಹ್ಮಿ ಮುಹೂರ್ತವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಮಾನ್ಯವಾಗಿ ಧ್ಯಾನ,ಪೂಜೆ ಅಥವಾ ಇತರೇ ಯಾವುದೇ ಧಾರ್ಮಿಕ ಆಚರಣೆಗಳಿಗೆ ಕೂಡಾ ಸಾಂಪ್ರದಾಯಿಕವಾಗಿ ಈ ಮುಹೂರ್ತವೇ ಸೂಕ್ತವೆಂದು ಪರಿಗಣಿಸಲಾಗುತ್ತದೆ ಹಾಗಾದರೆ ಬ್ರಾಹ್ಮಿ ಮುಹೂರ್ತ ಎಂದರೇನು?ಈ ಸಮಯವನ್ನು ಪರಿಗಣನೆ ಮಾಡಲು ಕಾರಣವೇನು? ಇದರಿಂದ ಉಂಟಾಗುವ ಲಾಭವೇನು? ಎನ್ನುವ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ.ಮುಂಜಾನೆಯ ಸಮಯಕ್ಕಿಂತ ಒಂದೂವರೆ ಗಂಟೆ ಪೂರ್ವದ ಸಮಯವನ್ನು ಬ್ರಾಹ್ಮಿ ಮುಹೂರ್ತ ಎನ್ನುವರು.ವೈದಿಕ ಸಂಪ್ರದಾಯದ ಪ್ರಕಾರ ಈ ಅವಧಿಯು ಪ್ರಾರ್ಥನೆ ಮತ್ತು ಧ್ಯಾನಕ್ಕೆ ಸೂಕ್ತ ಸಮಯವಾಗಿದ್ದು ವ್ಯಕ್ತಿಯ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತದಲ್ಲದೆ ಭರವಸೆ,ಸ್ಪೂರ್ತಿ ಮತ್ತು ಶಾಂತಿ ದೊರೆಯುವಂತೆ ಮಾಡುತ್ತಲ್ಲದೆ ಬ್ರಹ್ಮ ಜ್ಞಾನ, ಸರ್ವೋಚ್ಚ ಜ್ಞಾನ ಮತ್ತು ಶಾಶ್ವತವಾದ ಆನಂದವನ್ನು ಪಡೆಯಲು ಸಹಾಯವಾಗುತ್ತದೆ.ಪ್ರತಿಯೊಬ್ಬ ವ್ಯಕ್ತಿಯೂ ಉತ್ಸಾಹ ಶಾಲಿ,ಆರೋಗ್ಯವಂತನು ಮತ್ತು ಆಯುಷ್ಯವಂತನು ಆಗಲು,ಧರ್ಮ,ಮೋಕ್ಷಗಳ ಸಾಧನೆಗೆ ಮತ್ತು ಧರ್ಮದ ಮುಖಾಂತರ ಅರ್ಥ,ಕಾಮಗಳ ಸಾಧನೆಗೆ ಕೂಡ ಸಹಕಾರಿಯಾಗಿದೆ.ಇಂತಹ ಅಮೂಲ್ಯವಾದ ಬ್ರಾಹ್ಮಿ ಮುಹೂರ್ತವನ್ನು ಹೆಚ್ಚು ಬಳಕೆ ಮಾಡುವ ಪ್ರವೃತ್ತಿ ನಮ್ಮ ಜನರಲ್ಲಿ ಹೆಚ್ಚಾಗಬೇಕಾದದ್ದು ಕೂಡಾ ಅತ್ಯವಶ್ಯಕ.ದಿನದ ೨೪ ಗಂಟೆಗಳ ಅವಧಿಯಲ್ಲಿ ಸತ್ವಗುಣಕಾಲ,ರಜಸ್ಸು ಗುಣಕಾಲ ಮತ್ತು ತಮೋಗುಣ ಕಾಲವೆಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಬೆಳಿಗ್ಗೆ ೪ ಗಂಟೆಯಿಂದ ೮ ಗಂಟೆಯವರೆಗೂ ಮತ್ತು ಸಾಯಂಕಾಲ ೪ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೂ ತಮೋಗುಣ ಇರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಒಂದು ದಿನದಲ್ಲಿ ೮ ಗಂಟೆಗಳ ಕಾಲ ಸತ್ವ ಗುಣವೇ ಪ್ರಧಾನವಾಗಿರುತ್ತದೆ ಬೆಳಗಿನ ಸಮಯ ೮ ಗಂಟೆಯಿಂದ ಸಂಜೆ ೪ ಗಂಟೆಯವರೆಗೂ ರಜೋಗುಣ ಪ್ರಧಾನವಾಗಿರುತ್ತದೆ.ಈ ಪದ್ಧತಿಗೆ ಅನುಗುಣವಾಗಿ ಆಧ್ಯಾತ್ಮಿಕ ಸಾಧನೆ, ವ್ಯವಹಾರಿಕ ಕೆಲಸಗಳು ಮತ್ತು ನಿದ್ರೆ ಆಯಾ ಕಾಲದ ಧರ್ಮಕ್ಕನುಗುಣವಾಗಿ ಮೂರು ಕೆಲಸಗಳು ಉತ್ತಮ ರೀತಿಯಲ್ಲಿ ಸಾಗುತ್ತವೆ. ಆಧ್ಯಾತ್ಮಿಕ ಸಾಧನೆಗೆ ಸತ್ವ ಗುಣದ ಕಾಲ , ನಿದ್ದೆಗೆ ತಮೋಗುಣದ ಕಾಲ ಮತ್ತು ಉಳಿದ ಚಟುವಟಿಕೆಗಳ ಸಾಧನೆಗೆ ರಜೋಗುಣ ಕಾಲವೇ ಹೆಚ್ಚು ಅನುಕೂಲಕರವಾಗಿರುತ್ತದೆ. ಕಾರಣವೇನೆಂದರೆ ಆಧ್ಯಾತ್ಮಿಕ ಸಾಧನೆಗೆ ತಿರುಳಾಗಿರುವ ಏಕಾಗ್ರತೆ ಸತ್ವ ಗುಣದಿಂದ ಮಾತ್ರ ಉಂಟಾಗುತ್ತದೆ,ಎಲ್ಲಾ ಚಟುವಟಿಕೆಗಳಿಗೆ ಬೇಕಾಗುವ ಕ್ರಿಯಾಶೀಲತೆ ರಜೋಗುಣ ದಿಂದ ಬರುತ್ತದೆ ಮತ್ತು ಕೊನೆಯದಾಗಿ ಎಲ್ಲವನ್ನೂ ಆವರಿಸಿಕೊಂಡು ಮೈ ಮರೆಯುವಂತೆ ಮಾಡುವ ನಿದ್ರೆಯು ತಮೋ ಗುಣದಿಂದ ಉಂಟಾಗುತ್ತದೆ.ನಿದ್ರೆ ಮತ್ತು ಏಕಾಗ್ರತೆ ಮಧ್ಯೆ ಸ್ವಲ್ಪ ಮಟ್ಟಿಗೆ ಸಾಮ್ಯವಿದೆ ನಿದ್ರೆಯಲ್ಲಿ ಎಲ್ಲಾ ಬಾಹ್ಯ ಮನೋವೃತ್ತಿ ಗಳು ಇರುವುದಿಲ್ಲ. ಏಕಾಗ್ರತೆಯಲ್ಲಿ ಧ್ಯೇಯ ಎನ್ನುವ ತತ್ವ ಬಿಟ್ಟು ಬೇರೆ ಯಾವ ಮನೋವೃತ್ತಿಯು ಇರುವುದಿಲ್ಲ ನಿದ್ರೆಯ ನಂತರ ಏಕಾಗ್ರತೆಗೆ ಹೆಚ್ಚು ಅನುಕೂಲ ಉಂಟಾಗಲು ಒಂದು ರೀತಿಯಲ್ಲಿ ಈ ಸಾಮ್ಯವು ಕಾರಣವಾಗಿದೆ.ಮನಸ್ಸಿನ ಸಾರ್ವತ್ರಿಕವಾದ ವಿಶೇಷತೆಯೆಂದರೆ ಸಮಾನವಾದ ವೃತ್ತಿಗಳು ಜಾಗೃತವಾಗಿರಬೇಕಾದರೆ ಸಮಾನವಾದ ವೃತ್ತಿಗಳು ಸುಲಭವಾಗಿ ಹುಟ್ಟಿಕೊಳ್ಳುತ್ತವೆ, ಉದಾಹರಣೆಗೆ ಯಾವುದೇ ಕಾರಣಕ್ಕೆ ಕುಟುಂಬದ ಸದಸ್ಯರ ಮೇಲೆ ಕೋಪ ಬಂದಾಗ ಅದೇ ಸಮಯದಲ್ಲಿ ಸಂಬಂಧವಿಲ್ಲದಿರುವ ವ್ಯಕ್ತಿಗಳ,ವಿಷಯಗಳ ಕುರಿತು ಕೋಪವು ಬೇಗನೇ ಬಂದು ಬಿಡುತ್ತದೆ,ಇದೇ ರೀತಿ ತೀರ್ಥಯಾತ್ರೆಗೆ ಹೋದಾಗ ಬೇರೆ ಬೇರೆ ತೀರ್ಥ ಕ್ಷೇತ್ರಗಳಲ್ಲಿ ಬೇರೆ ಬೇರೆ ದೇವರುಗಳಿದ್ದರೂ ಎಲ್ಲ ದೇವರುಗಳ ಕುರಿತು ಮನಸ್ಸಿನಲ್ಲಿ ಸಮಾನವಾದ ಭಕ್ತಿ ಬರುತ್ತಿರುತ್ತದೆ. ಮುಖ್ಯವಾಗಿ ಮೊದಲು ತನ್ನ ಇಷ್ಟ ದೇವರ ದರ್ಶನಕ್ಕೆ ಮತ್ತು ಪ್ರಾರ್ಥನೆಗೆ ಭಕ್ತಿಯು ಮನಸ್ಸಿನಲ್ಲಿ ಮೊದಲೇ ಜಾಗೃತಗೊಂಡಿರುತ್ತದೆ ನಿದ್ರೆಗೆ ಮತ್ತು ಏಕಾಗ್ರತೆಗೆ ಇರುವ ಒಂದು ವಿಧದ ಸಾಮ್ಯವು ಮನಸ್ಸಿಗೆ ಬೇಗನೇ ಏಕಾಗ್ರತೆ ಉಂಟಾಗಲು ಸಹಾಯವಾಗುತ್ತದೆ.ಬ್ರಾಹ್ಮಿ ಮುಹೂರ್ತದಿಂದ ಇದಲ್ಲದೇ ಇನ್ನೂ ಅನೇಕ ವಿಧದ ಅನುಕೂಲತೆಗಳು ಉಂಟಾಗುತ್ತವೆ. ಪ್ರಶಾಂತವಾದ ವಾತಾವರಣ,ವ್ಯವಹಾರಿಕತೆ, ಶಾರೀರಿಕ ಉತ್ಸಾಹ ಇನ್ನೂ ಅನೇಕ ಅನುಕೂಲತೆಗಳನ್ನು ಈ ಮುಹೂರ್ತವು ಹೊಂದಿದೆ.ಇವೆಲ್ಲವೂ ಇಡೀ ಅಹೋ ರಾತ್ರಿಗಳಲ್ಲಿ ಮತ್ತು ಯಾವ ಕಾಲದಲ್ಲಿಯೂ ಇಷ್ಟು ಇರುವುದಿಲ್ಲ ಗಾಳಿ ಬಂದಾಗ ತೂರಿಕೋ ಇದು ಕನ್ನಡದ ಒಂದು ಹಳೆಯ ಗಾದೆ ಮಾತು,ಹಳೆಯ ಕಾಲದಲ್ಲಿ ರೈತರು ಬೀಸುವ ಗಾಳಿಯಿಂದ ತಾವು ಬೆಳೆದ ಧಾನ್ಯಗಳ ತೂರುವಿಕೆಯನ್ನು ಮಾಡುತ್ತಿದ್ದರು. ಹೊಲದಿಂದ ಹೊಸದಾಗಿ ತಂದ ಧಾನ್ಯಗಳಲ್ಲಿ ಹೊಟ್ಟು,ಧೂಳು ಮತ್ತು ಕಸಗಳಿರುತ್ತಿದ್ದವು. ಬೀಸುತ್ತಿರುವ ಗಾಳಿಗೆ ಅನುಗುಣವಾಗಿ ಆ ಧಾನ್ಯಗಳನ್ನು ಎತ್ತರದಿಂದ ಚೆಲ್ಲಿದಾಗ ಹೊಟ್ಟು,ಧೂಳು ಮತ್ತು ಕಸ ಗಾಳಿಯಿಂದ ಆಚೆಗೆ ಒಯ್ಯಲ್ಪಡುತ್ತಿದ್ದವು ಅನಂತರವೇ ಸ್ವಚ್ಛವಾದ ಧಾನ್ಯ ದೊರಕುತ್ತಿತ್ತು ಗಾಳಿಯು ಕರೆದಾಗ ಬೀಸುವುದಿಲ್ಲ ಅದು ಬೀಸಿದಾಗಲೇ ರೈತನು ತನ್ನ ಕೆಲಸವನ್ನು ಮಾಡಿಕೊಳ್ಳುತ್ತಿದ್ದನು ಇದೇ ರೀತಿ ಎಲ್ಲಾ ಅನುಕೂಲತೆಗಳನ್ನು ಹೊಂದಿರುವ ಬ್ರಾಹ್ಮಿ ಮುಹೂರ್ತವು ಇದ್ದಾಗ ಮನಸ್ಸನ್ನು ಏಕಾಗ್ರತೆಗೊಳಿಸಲು ಮನಸ್ಸಿನಲ್ಲಿರುವ ಕಲ್ಮಶಗಳನ್ನು ತೆಗೆದು ಹಾಕಬೇಕು.ರೈತನಿಗೆ ಪ್ರತಿಯೊಂದು ಸಾರಿ ಬೀಸುವ ಗಾಳಿ ಎಷ್ಟು ಅಮೂಲ್ಯವೋ ಅದೇ ರೀತಿ ಸಾಧಕನಿಗೆ ಪ್ರತಿ ದಿನದ ಬ್ರಾಹ್ಮಿ ಮುಹೂರ್ತವು ಅಮೂಲ್ಯವಾಗಿರುತ್ತದೆ.ಈ ಕಾಲದಲ್ಲಿ ಹಳೆಯ ಕಾಲದ ತೂರುವಿಕೆಯಿಲ್ಲ,ಬದಲಾಗಿ ಯಂತ್ರಗಳು ಬಂದಿವೆ ಆದರೆ ಏಕಾಗ್ರತೆ ಸಾಧಿಸಲು ಯಾವುದೇ ಯಂತ್ರಗಳಿಲ್ಲ.ಇದ್ದ ಬ್ರಾಹ್ಮಿ ಮುಹೂರ್ತವನ್ನು ಸದುಪಯೋಗ ಪಡೆಸಿಕೊಳ್ಳುವುದು ಒಂದೇ ಇರುವ ಏಕೈಕ ಮಾರ್ಗವಾಗಿದೆ.ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಬೆಳಗಿನ ಬ್ರಾಹ್ಮಿ ಮುಹೂರ್ತವು ಏಕಾಗ್ರತೆ ಸಾಧನೆಗೆ ಮೊದಲ ಪ್ರಮುಖ ಮಾರ್ಗವಾಗಿದೆ.ಇದು ನನ್ನ ಅನುಭವಕ್ಕೆ ಕೂಡಾ ಬಂದಿದ್ದು ನಿಮಗೆ ತಿಳಿದುಕೊಳ್ಳುವ ಇಚ್ಛೆಯಿದ್ದರೆ ಒಂದು ಸಲ ಪ್ರಯತ್ನಿಸಿ ನೋಡಿ ಸತ್ಯವು ನಿಮಗೇ ತಿಳಿಯುತ್ತದೆ.
-ಸಂದೀಪ ಜೋಶಿ,
ಗಂಗಾವತಿ
9480149268

One Response
7026723665 ಮತ್ತು ಕಸಗಳಿರುತ್ತಿದ್ದವು. ಬೀಸುತ್ತಿರುವ ಗಾಳಿಗೆ ಅನುಗುಣವಾಗಿ ಆ ಧಾನ್ಯಗಳನ್ನು ಎತ್ತರದಿಂದ ಚೆಲ್ಲಿದಾಗ ಹೊಟ್ಟು,ಧೂಳು ಮತ್ತು ಕಸ ಗಾಳಿಯಿಂದ ಆಚೆಗೆ ಒಯ್ಯಲ್ಪಡುತ್ತಿದ್ದವು ಅನಂತರವೇ ಸ್ವಚ್ಛವಾದ ಧಾನ್ಯ ದೊರಕುತ್ತಿತ್ತು ಗಾಳಿಯು ಕರೆದಾಗ ಬೀಸುವುದಿಲ್ಲ ಅದು ಬೀಸಿದಾಗಲೇ ರೈತನು ತನ್ನ ಕೆಲಸವನ್ನು ಮಾಡಿಕೊಳ್ಳುತ್ತಿದ್ದನು ಇದೇ ರೀತಿ ಎಲ್ಲಾ ಅನುಕೂಲತೆಗಳನ್ನು ಹೊಂದಿರುವ ಬ್ರಾಹ್ಮಿ ಮುಹೂರ್ತವು ಇದ್ದಾಗ ಮನಸ್ಸನ್ನು ಏಕಾಗ್ರತೆಗೊಳಿಸಲು