ಶಿವಮೊಗ್ಗ : ಬುದ್ದ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬೆಳಕು ನೀಡಿದ್ದು, ಆ ಮೂಲಕ ಶಾಂತಿ, ಸಹಬಾಳ್ವೆಯ ಮಾರ್ಗವನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಶಾಸಕರಾದ ಎಸ್.ಎನ್. ಚನ್ನಬಸಪ್ಪ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಭಗವಾನ್ ಶ್ರೀ ಬುದ್ದರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ದೇಶಕ್ಕೆ ಬುದ್ದ, ಬಸವ, ಅಂಬೇಡ್ಕರ್ ಜ್ಞಾನದ ಶಕ್ತಿ ಕೊಟ್ಟಿದ್ದಾರೆ. ಇವರುಗಳು ಆಧ್ಯಾತ್ಮಿಕ, ವೈಚಾರಿಕತೆ ನೆಲೆಗಟ್ಟಿನ ಮಾರ್ಗ ತೋರಿಸಿದ್ದು, ಅದರಲ್ಲಿ ಬುದ್ದ ಸದಾ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ಬುದ್ದನ ನಡವಳಿಕೆ, ಪದ್ದತಿ ಈ ದೇಶಕ್ಕೆ ಪೂರಕವಾಗಿತ್ತು. ಅಂಬೇಡ್ಕರ್ ಬುದ್ದನನ್ನು ಅಪ್ಪಿಕೊಂಡರು ಎಂದರು.
ಬುದ್ದ ಈ ದೇಶಕ್ಕೆ ಶಾಂತಿಯನ್ನು ಸಾರಿದ್ದಾರೆ. ಆ ದಿಸೆಯಲ್ಲೆ ಬೆಳಗ್ಗೆ ಎದ್ದ ತಕ್ಷಣ ನಾವು ಬುದ್ದನನ್ನು ನೆನೆಯುತ್ತೇವೆ. ಆತ ಸಹಜವಾದ ಕುಟುಂಬದಿಂದ ಬಂದ ವ್ಯಕ್ತಿಯಾಗಿದ್ದು, ಇವತ್ತು ಇಡೀ ಜಗತ್ತೇ ಮಾತಾಡುವಂತಾಗಿದೆ. ನಾವೆಲ್ಲಾ ಆತನಂತೆ ದ್ವೇಷವನ್ನು ಬಿಟ್ಟು ಒಬ್ಬರಿಗೊಬ್ಬರು ಈ ದೇಶದಲ್ಲಿ ಶರಣಾಗಬೇಕು. ಬುದ್ದಂ ಶರಣಂ ಗಚ್ಚಾಮಿ ಎಂಬ ಆಶಯವನ್ನು ಪ್ರತಿಯೊಬ್ಬ ವ್ಯಕ್ತಿ ತಮ್ಮೊಳಗೆ ಅಳವಡಿಸಿಕೊಳ್ಳಬೇಕು ಬುದ್ದ, ಬಸವ ಅಂಬೇಡ್ಕರ್ ಈ ದೇಶದ ತ್ರಿವೇಣಿ ಸಂಗಮ. ಈ ಮೂರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲಾ ನಡೆಯಬೇಕು ಎಂದರು.
ಶಿಕಾರಪುರದ ಹೊಸೂರಿನ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ರಘು ಆರ್. ಮಲ್ಲಣ್ಣರ್ ಮಾತನಾಡಿ, ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಬುದ್ದನ ತತ್ವಗಳು ಅನೇಕ ರೀತಿಯಲ್ಲಿ ಪ್ರಚಾರವಾಗಿದೆ. ತತ್ವಶಾಸ್ತ್ರದ ಪ್ರತಿಪಾದಕದ ೯ ನೇ ದರ್ಶನವನ್ನು ಬುದ್ದ ದರ್ಶನವೆಂದು ವಿದ್ವಾಂಸರುಗಳು ಹೇಳಿದ್ದು, ಇದನ್ನು ಪ್ರತೀಕಾರದ ದರ್ಶನವೆಂದು ಸಹ ಕರೆದಿದ್ದಾರೆ. ಈ ದೇಶದ ಎಲ್ಲಾ ಧರ್ಮಕ್ಕೆ ರಾಜಾಶ್ರಯವಿದೆ. ಆದರೆ ಬುದ್ದನ ಧರ್ಮಕ್ಕೆ ಯಾವುದೇ ರಾಜಾಶ್ರಯವಿಲ್ಲ. ಆದರೆ ಇಡೀ ದೇಶವೇ ಬುದ್ದ ತತ್ವದ ಮಾರ್ಗವನ್ನು ಒಪ್ಪಿಕೊಂಡು ಮುನ್ನಡೆಯುತ್ತಿದೆ.
ಬುದ್ದನ ಕೃತಿ, ತತ್ವದ ಮೇಲೆ ಇಂದಿಗೂ ಅತ್ಯಧಿಕವಾಗಿ ಸಂಶೋಧನೆ ನಡೆಯುತ್ತಿದೆ. ಜಗತ್ತಿನಲ್ಲಿ ಅಷ್ಟು ಸಂಶೋಧನೆ ಯಾವ ಕೃತಿಯ ಮೇಲೂ ನಡೆದಿಲ್ಲ. ರಾಜ ಕುಟುಂಬದಲ್ಲಿ ಹುಟ್ಟಿದ್ದರೂ ಯುದ್ಧಾಭ್ಯಾಸದಲ್ಲಿ ತೊಡಗದೆ ಬಾಲ್ಯದಿಂದಲೇ ಮನುಷ್ಯ ಪ್ರೀತಿ ಹೊಂದಿದ್ದ ಬುದ್ದ ಭವಿಷ್ಯದಲ್ಲಿ ಇಡೀ ಜಗತ್ತಿಗೆ ಮನುಷ್ಯ ಪ್ರೀತಿ ಹಾಗೂ ಶಾಂತಿಯನ್ನು ಸಾರಿದ. ರಾಜ ಕರ್ತವ್ಯವನ್ನು ತಿಳಿಸಿದ ತನ್ನ ತಾಯಿಗೆ ಮನುಷ್ಯ ಮನುಷ್ಯನನ್ನು ಕೊಲ್ಲುವುದು ಯಾವ ಕರ್ತವ್ಯವೆಂದು ಪ್ರಶ್ನಿಸಿದ. ತಂದೆ ಶುದ್ದೋಧನನು ಕೂಡಾ ಬುದ್ದನಿಗೆ ಸಾಮಾಜಿಕ ಅರಿವು ಮೂಡಿಸಲು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ, ಅಲ್ಲಿನ ರೈತರೊಂದಿಗೆ ಭೂಮಿಯಲ್ಲಿ ಉಳುಮೆ ಮಾಡುವುದು ಅವರೊಂದಿಗೆ ಸ್ನೇಹದಿಂದ ಬೆರೆಯುವುದನ್ನು ಕಲಿಸುತ್ತಿದ್ದ ಎಂದು ಹೇಳಿದರು.
ಬುದ್ದ ಅಂಡ್ ಇಸ್ ಧಮ್ಮದಲ್ಲಿ ಅಂಬೇಡ್ಕರ್, ರೋಹಿಣಿ ನದಿಯ ವಿವಾದದಲ್ಲಿ ಶಾಂತಿ ಸಂಧಾನ ಸಲಹೆ ನೀಡಿದ ಬುದ್ದ, ಆದರೆ ಕೋಸಲ ರಾಜ್ಯದ ಸೈನಿಕರು ಇದನ್ನು ಒಪ್ಪದೆ ಬುದ್ದನಿಗೆ ಸೈನಿಕರ ಒಮ್ಮತ ಅಭಿಪ್ರಾಯದಿಂದ ಯುದ್ದವನ್ನು ಒಪ್ಪಿಕೊಳ್ಳಬೇಕು, ಶುದ್ದೋಧನ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗುತ್ತದೆ ಹಾಗೂ ಸಿದ್ದಾರ್ಥನನ್ನು ಬಹಿಷ್ಕಾರ ಮಾಡಲಾಗುತ್ತದೆ ಎಂಬ ಮೂರು ಷರತ್ತು ವಿಧಿಸುತ್ತಾರೆ. ಬುದ್ದ ತಾನು ಬಹಿಷ್ಕಾರಕ್ಕೆ ಒಳಾಗುವುದಕ್ಕೆ ಆಯ್ಕೆ ಮಾಡಿಕೊಂಡು ರಾಜ್ಯವನ್ನು ತೊರೆದು ಹೋಗುತ್ತಾನೆ. ಅಲ್ಲಿಂದ ಆರಂಭವಾದ ಆತನ ಸನ್ಯಾಸಿಯ ಬದುಕು ನಂತರ ಸಮಾಜದಲ್ಲಿ ಜಾತಿ ತಾರತಮ್ಯ, ಪ್ರಾಣಿಬಲಿ ಇಂತಹ ಹಲವಾರು ಸಮಸ್ಯೆಗಳನ್ನು ನಾಶ ಮಾಡಲು ಮಾರ್ಗ ಅಹಿಂಸೆ, ಶಾಂತಿಯ ತತ್ವ ಮಾರ್ಗವನ್ನು ಕಂಡುಕೊಳ್ಳುತ್ತಾನೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೊಲೆ , ಸುಲಿಗೆ, ಅತ್ಯಾಚಾರಗಳಂತಹ ಅನಾಚಾರಗಳು ದೇಶದ ಉದ್ದಗಲಕ್ಕೂ ಹರಡಿದೆ. ಇದನ್ನು ನಾಶ ಮಾಡಲು ಬುದ್ದ ತತ್ವಗಳಿಂದ ಮಾತ್ರ ಸಾಧ್ಯ. ಈಗಿನ ಯುವಕರು ಕೆಟ್ಟಚಟಗಳಿಗೆ ದಾಸರಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದ ಆಚೆ ಬರಲು ಬುದ್ದ ತತ್ವವೇ ಸರಿಯಾದ ಮಾರ್ಗ. ಹಾಗೂ ಜಾತಿ, ಧಾರ್ಮಿಕ ಸಂಘರ್ಷದಲ್ಲಿ ಬೆಳೆಯುತ್ತಿದ್ದಾರೆ. ಇದು ಭವಿಷ್ಯದ ಭಾರತಕ್ಕೆ ಮಾರಕವಾಗುತ್ತಿದೆ. ಇವರಿಗೆ ಬುದ್ದ, ಬಸವ, ಅಂಬೇಡ್ಕರ್ ಅವರ ತತ್ವಗಳ ತಿಳಿಸುವ ಮೂಲಕ ಶಾಂತಿ, ಸಹಬಾಳ್ವೆಯನ್ನು ಕಲಿಸಬೇಕು ಎಂದರು.
ಭಾರತ ದೇಶದವರು ಬುದ್ದನನ್ನು ಅಹಿಂಸೆ, ಶಾಂತಿ ತತ್ವಗಳ ಒಳಗೊಂಡಂತೆ ಕಂಡರೆ, ವಿದೇಶಿಯರು ಬುದ್ದನನ್ನು ಒಬ್ಬ ರಾಜಕೀಯ ತಜ್ಞನಂತೆ ನೋಡಿದ್ದಾರೆ. ಬುದ್ದ ದೇಶದಲ್ಲಿನ ಶಾಸ್ತ್ರ, ಪುರಾಣ, ವೇದಗಳಿಗೆಲ್ಲಾ ವೈಜ್ಞಾನಿಕವಾಗಿ ಉತ್ತರ ಕೊಟ್ಟಿದ್ದಾರೆ. ದೇವರ ಬಗ್ಗೆ ಪರಿಪೂರ್ಣ ಜ್ಞಾನ ಹೊಂದಿದ್ದ ಬುದ್ದ, ನಿನಗೆ ನೀನೇ ಬೆಳಕು ಎಂದು ಜಗತ್ತಿಗೆ ಸತ್ಯ ಸಾರಿದ. ಯಾವುದೇ ದೇವರಿಲ್ಲ, ನಮಗಾಗುವ ಸಂಕಷ್ಟಗಳಿಗೆ, ದುಃಖಗಳಿಗೆ ದೇವರ ಬಳಿ ಹೋದರೆ ಪರಹಾರ ಸಿಗುವುದಿಲ್ಲ. ನಮ್ಮ ದುಃಖಕ್ಕೆ ಕಾರಣವೆನೆಂಬುದು ನಾವೇ ಹುಡುಕಿಕೊಳ್ಳಬೇಕು. ಕಾರ್ಯ, ಕಾರಣ ಸಂಬಂಧ ಕುರಿತು ಅರಿವು ಮೂಡಿಸಿಕೊಳ್ಳಬೇಕು. ಇಂತಹ ಮನಸ್ಸು ಮಾಡಿದರೆ ನೀವು ಬುದ್ದರಾಗುತ್ತಿರಾ ಎಂದಿದ್ದಾರೆ.
ಅನೇಕ ವಿದ್ವಾಂಸರು ಬುದ್ದನನ್ನು ವಿಜ್ಞಾನಿ ಎಂದು ಕರೆದಿದ್ದಾರೆ. ಬುದ್ದ ಇಸ್ ಎ ಡಾಕ್ಟರ್, ಸಂಘ ಇಸ್ ಎ ನರ್ಸ್, ಧಮ್ಮ ಇಸ್ ಎ ಮೆಡಿಸನ್ ಸಾರಿದ್ದಾರೆ. ಮುಕ್ತತೆ, ಸ್ವಾತ್ರಂತ್ರ್ಯ ಬುದ್ದನ ಧರ್ಮದಲ್ಲಿ ಇದೆ. ಅದಕ್ಕೆ ಅನೇಕ ಜಗತ್ತು ಇವರನ್ನು ಒಪ್ಪಿಕೊಂಡಿದೆ. ವಿಜ್ಞಾನ ಮತ್ತು ಪ್ರಕೃತಿಯ ನೆಲೆಗಟ್ಟಿನಲ್ಲಿ ತತ್ವವನ್ನು ಕಟ್ಟಿ ಜಗತ್ತಿಗೆ ಶಾಂತಿ, ಸಹಬಾಳ್ವೆಯ. ನಮ್ಮ ಬದುಕಿನ ಘನತೆಗೆ ಬುದ್ದನ ಪಂಚಶೀಲ ತತ್ವ ಮುಖ್ಯವಾಗಿದೆ. ಈ ದೇಶವನ್ನು ಕಟ್ಟುವಲ್ಲಿ ಅದನ್ನು ಉಳಿಸಿಕೊಳ್ಳುವಲ್ಲಿ ಬುದ್ದನ ಅಷ್ಟಾಂಗ ಮಾರ್ಗಗಳು ಬೇಕು. ಇವುಗಳನ್ನು ೨೮ ಕ್ಕೂ ಹೆಚ್ಚು ರಾಷ್ಟ್ರ ಅಳವಡಿಸಿಕೊಂಡು ಶ್ರೀಮಂತರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಸ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ರಾಮಣ್ಣ, ಭದ್ರಾವತಿಯ ಸಂವಕ್ ಬುದ್ಧ ಧರ್ಮಾಂಕುರ ಟ್ರಸ್ಟ್ ಉಪಾಧ್ಯಕ್ಷ ಸಾವಕ್ಕನವರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಹೆಚ್.ಉಮೇಶ್ ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
