ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಹಲವೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಮಳೆರಾಯನ ಆಗಮನಕ್ಕಾಗಿ ಮುಗಿಲಿನತ್ತ ಮುಖ ಮಾಡಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಹೌದು ಇನ್ನೇನು ಮಳೆಗಾಲ ಬಂತು ಬಿತ್ತನೆ ಕಾರ್ಯ ಮಾಡಿ ಭೂಮಿತಾಯಿಯ ಮಡಿಲಿನಿಂದ ಒಂದಿಷ್ಟು ಬೆಳೆ ಪಡೆಯೋಣ ಎನ್ನುವಷ್ಟರಲ್ಲಿ ಮಳೆರಾಯ ಕೈಕೊಟ್ಟು ಆಗಾಗ ನಾಲ್ಕು ಹನಿ ಉದುರಿಸಿ ಭೂಮಿ ತಂಪಾಗಿಸಿದ್ದ. ಆದರೂ ಬೆಳೆ ಬೆಳೆಯುವುದಕ್ಕೆ ಸಾಕಾಗದಷ್ಟು ಮಳೆಯಾಗದಿದ್ದರಿಂದ ಕೆಲವೊಬ್ಬ ರೈತ ಬಿತ್ತನೆ ಮಾಡಿದ್ದರೆ ಇನ್ನೂ ಕೆಲವೊಬ್ಬರು ಬಿತ್ತನೆ ಮಾಡದೇ ಹಾಗೇ ಇದ್ದರು ಇದೇನಪ್ಪ ಇದು ಮಳೆ ಬರುತ್ತೋ ಇಲ್ವೋ ಅಥವಾ ಬರಗಾಲ ಆಗುತ್ತೋ ಅಂತ ಹಣೆಗೆ ಕೈ ಹಚ್ಚಿಕೊಂಡು ಕುಳಿತಿದ್ದ ರೈತನಿಗೀಗ ಸಂತಸ ತಂದಿದೆ. ಕಲಬುರಗಿ,ಅಫಜಲಪುರ,ಚಿತ್ತಾಪುರ, ಕಾಳಗಿ,ಆಳಂದ ಸೇರಿಂದಂತೆ ಇನ್ನಿತರ ತಾಲೂಕುಗಳಲ್ಲಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಮಳೆಯಿಂದಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ, ಕೆಲಸಕ್ಕಾಗಿ ಆಫೀಸಿಗೆ ಹೋಗುವವರು,ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ ಒಟ್ಟಿನಲ್ಲಿ ಕಣ್ಮರೆಯಾಗಿದ್ದ ಮಳೆರಾಯ ಎಲ್ಲರ ಮೊಗದಲ್ಲೂ ಮಂದಹಾಸ ಮೂಡಿಸಿದ್ದಾನೆ ಅಂತಲೇ ಹೇಳಬಹುದು.
ವರದಿ: ಅಪ್ಪಾರಾಯ ಬಡಿಗೇರ



















