ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಾಗೃತರಾಗಿ,ಚಿಂತಿಸಿ,ಒಂದಾಗಿ ಅಧಿಕಾರ ಕೈಗೆತ್ತಿಕೊಳ್ಳಿ

ಸರ್ವ ಜನಾಂಗದ ಹಿತ ದೃಷ್ಟಿಯಿಂದ ರಚಿತವಾದ ಭಾರತ ಸಂವಿಧಾನವನ್ನು ಅಸಮಾನತೆ ಪರಿಪಾಲಕರಾದ ಮನುವಾದಿಗಳಿಗೆ ಸಹಿಸಲು ಆಗುತ್ತಿಲ್ಲ.ಹೀಗಾಗಿಯೇ ಸಂವಿಧಾನ ವಿರೋಧಿ ಕೃತ್ಯಗಳು ಸಂವಿಧಾನ ಜಾರಿಯಾದಗಿನಿಂದ ಇಲ್ಲಿಯವರೆಗೆ ನಿರಂತರವಾಗಿ ನಡೆಯುತ್ತಲೇ ಬಂದಿವೆ.
ಸ್ವಾತಂತ್ರ್ಯ ಪೂರ್ವದಲ್ಲಿ ವೈದಿಕ ಮತದ ಕಾಯ್ದೆಯಾದ ಮನುಸ್ಮೃತಿಯಿಂದಾಗಿ ಈ ನೆಲದ ಬಹು ಸಂಖ್ಯಾತರಾದ ಶೂದ್ರ ಅಸ್ಪೃಶ್ಯರು ವಿದ್ಯೆ,ಆಸ್ತಿ, ಅಧಿಕಾರಗಳಿಂದ ವಂಚಿತರಾಗುತ್ತಾ ಬಂದರು.ಈ ಕಾರಣದಿಂದಲೇ ವೈದಿಕ ಆರ್ಯನ್ನರ ಮತ್ತು ಶೂದ್ರ ಅಸ್ಪೃಶ್ಯರ ನಡುವೆ ಅಸಮಾನತೆ ಸೃಷ್ಟಿಯಾಗಿ ಕೆಲವರ ಕೈಯಲ್ಲಿ ಆಸ್ತಿ ಶೇಖರಣೆಯಾಗಿದು ಸುಳ್ಳಲ್ಲ.
ಈ ಅಸಮಾನತೆಯನ್ನು ಹೋಗಲಾಡಿಸಲು ಅದು ಬಾಬಾಸಾಹೇಬರು ತಮ್ಮ ಜೀವನದೂದ್ದಕ್ಕೂ ನಿರಂತರವಾಗಿ ಹೋರಾಟಗಳನ್ನು ಮಾಡಿದಲ್ಲದೆ, ಹಲವು ರಾಷ್ಟ್ರಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ಭಾರತದ ಘನ ಸಂವಿಧಾನವನ್ನು ರೂಪಿಸಿಕೊಟ್ಟರು.ಇದರ ಫಲವಾಗಿಯೇ ರೈಲ್ವೆ ಸ್ಟೇಷನ್ ನಲ್ಲಿ ಚಾ ಮಾರುವವರು ಪ್ರಧಾನ ಮಂತ್ರಿ ಆಗಲು ಸಾಧ್ಯವಾಯಿತು.
ಇಂತಹ ಉನ್ನತವಾದ ಸಂವಿಧಾನವನ್ನು ಅರಿಯದೆ ಬಂಡವಾಳ ಶಾಹಿಯ ಹಿತಾಬಯಸುವ ಚಮಚ ರಾಜಕಾರಣಿಗಳು ಸಂವಿಧಾನದ ನೆರಳಿನಿಂದ ಅಧಿಕಾರಕ್ಕೆ ಬಂದು ಸಂವಿಧಾನಕ್ಕೆ ಕೊಡಲಿ ಬೀಸುತ್ತಿರುವುದು ದುರಂತವೇ ಸರಿ.
ಇತ್ತೀಚಿಗೆ ಮಾನ್ಯ ಸಂಸದರಾದ ಅನಂತಕುಮಾರ ಹೆಗ್ಡೆ ಅವರು ಸಂವಿಧಾನದ ತಿದ್ದುಪಡಿ ಬಗ್ಗೆ ಮಾತನಾಡುತ್ತಾ “ಸಂವಿಧಾನದಲ್ಲಿ ಬೇಡದೇ ಇರತಕ್ಕಂತಹ ಅಂಶಗಳಿವೆ. ಇಡೀ ಹಿಂದು ಸಮಾಜವನ್ನು ದಮನಿಸುವ ರೀತಿ ಕಾನೂನು ಮಾಡಲಾಗಿದೆ.ಅದನ್ನು ತಿದ್ದುಪಡಿ ಮಾಡಬೇಕು”ಎಂದು ಮಾತನಾಡಿದ್ದಾರೆ.ಆದರೆ, ಅ ಬೇಡದೆ ಇರ್ತಕ್ಕಂತ ವಿಚಾರಗಳಾವವು ಎಂಬುದನ್ನು ಜನರ ಮುಂದೆ ತೆರೆದಿಟ್ಟಿಲ್ಲ. ಯಾಕೆ ತಿದ್ದುಪಡಿ.? ಇದರಿಂದ ಆಗುವ ಉಪಯೋಗವೇನು.? ಹಿಂದೂ ಸಮಾಜವನ್ನು ಧಮನಿಸುವ ರೀತಿಯ ಕಾನೂನುಗಳು ಯಾವುವು.?ಎಂಬುದನ್ನು ಸ್ಪಷ್ಟಪಡಿಸಿಲ್ಲ. ಕೇವಲ ಹುಸಿ ಇಲ್ಲದ ಮಾತುಗಳೊಂದಿಗೆ ತಮ್ಮ ಅಂತರಾಳದಲ್ಲಿ ಅಡಗಿದ ಮನುವಾದವನ್ನು ಹೊರಹಾಕಿದ್ದಾರೆ ಅಷ್ಟೇ.

ಸಂವಿಧಾನ ತಿದ್ದುಪಡಿಯ ಮಾತನಾಡಿದ ಮಾನ್ಯ ಸಂಸದ ಅನಂತಕುಮಾರ ಹೆಗ್ಡೆ ಅವರ ಅಂತರಾಳದಲ್ಲಿ ಏನಿದೆ ಎಂದು ತಿಳಿದುಕೊಳ್ಳುವುದು ಅಷ್ಟೊಂದು ಕಷ್ಟಕರವೆನಲ್ಲ. ಇವರ ತಿದ್ದುಪಡಿಯ ಉದ್ದೇಶ ಬಹುಜನರಿಗೆ ಹಿತಕರವಾಗಿಯಂತು ಇರಲಾರದು. ಏಕೆಂದರೆ ಇದೆ ಅನಂತಕುಮಾರ ಹೆಗ್ಡೆ ಹಿಂದೊಮ್ಮೆ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡಿದ್ದು ಈ ದೇಶದ ಜನತೆ ಇನ್ನೂ ಮರೆತಿಲ್ಲ. ಮೇಲ್ನೋಟಕ್ಕೆ ಈ ಹೇಳಿಕೆ ಅನಂತಕುಮಾರ ಹೆಗ್ಡೆ ಅವರಿಂದ ಬಂದಿದ್ದರು ಇದರ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರದ ಬೆಂಬಲವಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.

ಯಾಕೆಂದರೆ,ಇದಕ್ಕಿಂತ ಮೊದಲು ಜಾತ್ಯತೀತರನ್ನು ಕಂಡರೆ ನನಗೆ ಆಗಿ ಬರುವುದಿಲ್ಲ ಎಂದು ನೇರವಾಗಿ ಹೇಳಿ “ನಾವು ಅಧಿಕಾರಕ್ಕೆ ‌ಬಂದಿದ್ದೇ ಸಂವಿಧಾನ ಬದಲಾಯಿಸಲು” ಎಂದು ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಈ ಅನಂತಕುಮಾರ ಹೆಗ್ಡೆಯ ವಿರುದ್ಧ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.ಫುಲ್ ಸೈಲೆಂಟ್ ಆಗಿತ್ತು!.ಇದಾದ ಕೆಲವು ದಿನಗಳ ನಂತರ ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಹಾಡಹಗಲೇ ಕೆಲವೊಂದಿಷ್ಟು ಕಿಡಿಕೇಡಿಗಳು ಭಾರತೀಯ ಸಂವಿಧಾನಕ್ಕೆ ಹಾಗೂ ಬಾಬಾಸಾಹೇಬರರಿಗೆ ಧಿಕ್ಕಾರಗಳನ್ನು ಹೋಗುತ್ತಾ ಸಂವಿಧಾನದ ಪ್ರತಿಯನ್ನು ಸುಟ್ಟು ಮನುಸ್ಮತಿಗೆ ಜೈಕಾರ ಹಾಕಿದರು. ಆಗಲು ಬಿಜೆಪಿ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಫುಲ್ ಸೈಲೆಂಟ್!. ಇದರ ವಿರುದ್ಧ ದೇಶದಾತ್ಯಂತ ಪ್ರತಿಭಟನೆಗಳು ನಡೆದ ನಂತರ ಕಿಡಿಕೇಡಿಗಳನ್ನು ಬಂಧಿಸಲಾಗಿತ್ತು. ಆದರೆ, ದೇಶಾದ್ರೋಹಿಗಳಿಗೆ ನೀಡಬೇಕಾದಂತ ಶಿಕ್ಷೆ ನೀಡದೆ ಕೆಲವೇ ದಿನಗಳಲ್ಲಿ ಕಿಡಿಗೇಡಿಗಳನ್ನು ಬಿಡುಗಡೆಗೊಳಿಸಿದರು. ಈಗ ಸಂವಿಧಾನ ಸುಟ್ಟ ದೇಶದ್ರೋಹಿಗಳು ರಾಜ ರೋಷವಾಗಿ ಓಡಾಡಿಕೊಂಡಿದ್ದಾರೆ. ಇದು ಬಿಜೆಪಿಯರ ಸಂವಿಧಾನ ವಿರೋಧಿ ನಡೆ ಎದ್ದು ತೋರಿಸುತ್ತದೆ.

ಸಂಘ ಪರಿವಾರದ ಸಿದ್ಧಾಂತವೇ ತಮ್ಮ ಪಕ್ಷದ ನಡವಳಿಕೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಈ ಬಿಜೆಪಿಯವರಿಗೆ ಸಮಾನತೆ ಕಂಡರೆ ಆಗಿ ಬರುವುದಿಲ್ಲ. ಯಾಕೆಂದರೆ ‘ಯಥಾ ಗುರು ತಥಾ ಶಿಷ್ಯ’ ಎಂಬ ಗಾದೆ ಮಾತಿದೆ. ಇವರು ಆದರ್ಶವಾಗಿ ಸ್ವೀಕರಿಸಿದ ಸಂಘ ಪರಿವಾರದ ಸಿದ್ದಾಂತವನೊಮ್ಮೆ ಗಮನಿಸಿ ಅವಲೋಕಿಸಿದಾಗ ಇವರ ಮುಖವಾಡಗಳು ಕಳಚುತ್ತವೆ.

ನಮ್ಮ ಭಾರತದ ಸಂವಿಧಾನ ಜಾರಿಯಾಗುವಕಿಂತ ಒಂದು ವರ್ಷ ಮೊದಲು ಅಂದರೆ, ಕ್ರಿ.ಶ 1949ರ ವೇಳೆಗೆ ಬಾಬಾಸಾಹೇಬರ ನೇತೃತ್ವದಲ್ಲಿ ಸಂವಿಧಾನ ರಚನೆಗೊಂಡು ಅಂಗೀಕಾರವಾದ ಸಂದರ್ಭದಲ್ಲಿ ಸಂಘಪರಿವಾರದ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ತನ್ನ ಮುಖವಾಣಿಯ ಆರ್ಗನೈಸರ್‌ ಪತ್ರಿಕೆಯಲ್ಲಿ “ಅಂಬೇಡ್ಕರ ಕರಡು ಸಮಿತಿಯ ಅಧ್ಯಕ್ಷರಾಗಿ ರಚಿಸಿರುವ ಸಂವಿಧಾನದಲ್ಲಿ ಭಾರತೀಯತೆ ಇಲ್ಲವಾಗಿದೆ. ಈ ದೇಶದ ನೆಲದ ಕಾನೂನಾದ ಮನುಸ್ಮೃತಿಯಿಂದ ಎನು ಪಡೆದಿಲ್ಲ. ಹೀಗಾಗಿ ಈ ಸಂವಿಧಾನ ನಮಗೆ ಒಪ್ಪಿತವಲ್ಲ”ಎಂದು ಬರೆದಿತ್ತು.

ಸಂಘ ಪರಿವಾರದವರು ಗುರೂಜಿ ಎಂದೇ ಸಂಬೋಧಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(RSS) ಸರಸಂಘಚಾಲಕನಾಗಿದ್ದ ಮಾ.ಸ.ಗೋಲ್ವಲ್ಕರ್ ಎಂಬುವವನು “ಹಿಂದುಗಳಿಗೆ ಪ್ರಜಾಪ್ರಭುತ್ವ ತತ್ವಗಳು ಹೊರಗಿನವು.ಇಡೀ ಮನುಕುಲದ ಅತಿ ಶ್ರೇಷ್ಠ ಮತ್ತು ಮಹಾನ್ ಕಾನೂನು ರಚನೆಕಾರ ಮನು”ಎಂದು ಹೇಳಿದ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ಆಶಯದ ಬುನಾದಿಯಾದ ‘ಹಿಂದುತ್ವ’ ಎಂಬ ಮೂಲಭೂತವಾದಿ ರಾಜಕೀಯ ಸಿದ್ಧಾಂತದ ಸ್ಥಾಪಕ. ವಿನಾಯಕ್ ದಾಮೋದರ್ ಸಾವರ್ಕರ್ ಎಂಬುವವನು “ವೇದಗಳ ನಂತರ ಅತ್ಯಂತ ಪೂಜನೀಯ ಗ್ರಂಥ ಮನುಸ್ಮ್ರತಿ ಹಾಗೂ ದೇಶವನ್ನು ಅದರ ಆಧಾರದಲ್ಲಿ ನಡೆಸಬೇಕು.” ಎಂದು ಹೇಳಿದನು. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ತಪ್ಪೊಪ್ಪಿಗೆ ಬರೆದ ಈ ಮಹಾನುಭಾವ.

ಕ್ರಿ.ಶ 1950 ಜನವರಿ 25 ರಂದು ಶಂಕರ ಸುಬ್ಬಾ ಐಯರ್ ಎಂಬ ನಿವೃತ್ತ ನ್ಯಾಯಾಧೀಶ ಆರೆಸ್ಸೆಸ್ ಪತ್ರಿಕೆಯಾದ ಆರ್ಗನೈಸರ್‌ ನಲ್ಲಿ “ಮನು ನಮ್ಮ ಹೃದಯವನ್ನಾಳುತ್ತಾನೆ” ಎಂಬ ಶೀರ್ಷಿಕೆಯಲ್ಲಿ ಆರೆಸ್ಸೆಸ್ ಪರವಾಗಿ ಅಂಕಣ ಬರೆದು ಅದರಲ್ಲಿ ಮನುಸ್ಮ್ರತಿಯೆ ಈ ದೇಶದ ಸವಿಧಾನವನ್ನಾಗಿ ಜಾರಿ ಮಾಡಬೇಕೆಂದು ಹೇಳಿದ.

ಕ್ರಿ.ಶ 2017 ನವೆಂಬರ್ ತಿಂಗಳಲ್ಲಿ ಆರೆಸ್ಸೆಸ್ ಚಡ್ಡಿ ತೊಟ್ಟ, ಬಿಜೆಪಿ ವಕ್ತಾರ ಗೋ ಮಧುಸೂದನ್ ಎಂಬ ವ್ಯಕ್ತಿ “ದಲಿತ ಬರೆದ ಸಂವಿಧಾನ ನಮ್ಮ ದೇಶದ ಸಂವಿಧಾನವೇ ಅಲ್ಲ, ನಾನು ಈ ಸಂವಿಧಾನವನ್ನು ವಿರೋಧಿಸುತ್ತೇನೆ” ಎಂದು ಸಾರ್ವಜನಿಕವಾಗಿಯೇ ಹೇಳಿದ್ದ.

ಮನುವಾದವೇ ತನ್ನ ಅಂತರಾತ್ಮದಲ್ಲಿ ತುಂಬಿಕೊಂಡ ಈ ಬಿಜೆಪಿ ಆರೆಸ್ಸೆಸ್ಸಿಗರಿಗೆ ಸಮತೆ, ಸ್ವಾತಂತ್ರ್ಯ, ಸೋದರತ್ವದ ತಳಹದಿಯ ಮೇಲೆ ಬಾಬಾಸಾಹೇಬರು ರಚಿಸಿರುವ ಸಂವಿಧಾನ ಎಂದಿಗೂ ಒಪ್ಪಿತವಾಗಿಲ್ಲ. ಇವರು ತಮ್ಮ ಅಧಿಕಾರದ ಅವಧಿಯಲ್ಲಿ ಸಂವಿಧಾನದಲ್ಲಿದ ಎಸ್‌.ಸಿ ಎಸ್‌.ಟಿ ಮೀಸಲಾತಿ, ಸಮಾನತೆಯ ಹಕ್ಕು ಮತ್ತು ಜಾತ್ಯಾತೀತತೆಯ ವಿಧೇಯಕಗಳನ್ನು ಸದ್ದಿಲ್ಲದೆ ತಿದ್ದುಪಡಿ ಮಾಡಿದ್ದಾರೆ.

ಮುಗ್ಧ ಮನಸ್ಸುಗಳ ಒಳಗೆ ಧರ್ಮದ ನಶೆ ತುಂಬಿ ಮಂದಿರ ಮಸೀದಿಗಳ ಹೆಸರಿನಲ್ಲಿ ಧಾರ್ಮಿಕ ಕಲಹಗಳನ್ನು ಹಚ್ಚಿ ಕೋಮು ಸಾಮರಸ್ಯ ಕದಡುತ್ತಿರುವ ಈ ಬಿಜೆಪಿಗರ ವಿಕೃತ ಮನಸ್ಸುಗಳನ್ನು ಈ ದೇಶದ ಬಹುಜನರು ಅರ್ಥ ಅರ್ಥಮಾಡಿಕೊಂಡು ಜಾಗೃತರಾಗಬೇಕು, ಬಾಬಾಸಾಹೇಬರು ಹೇಳುವಂತೆ ಬಂಡವಾಳದ ಹಿತ ಬಯಸುವ ಪಕ್ಷಗಳಲ್ಲಿ ಚಮಚಗಳಾಗಿರುವುದಕ್ಕಿಂತ ಒಗ್ಗಟ್ಟಾಗಿ ಸ್ವಾತಂತ್ರ್ಯ ಪಕ್ಷದಡಿಯಲ್ಲಿ ಅಧಿಕಾರ ಹಿಡಿದು ತಾವೇ ಆಳುವ ವರ್ಗವಾಗಬೇಕು.

ಜಾಗೃತರಾಗಿ,ಚಿಂತಿಸಿ,ಒಂದಾಗಿ
ಅಧಿಕಾರ ಕೈಗೆತ್ತಿಕೊಳ್ಳಿ.

✍️ಅಶ್ವಜೀತ ದಂಡಿನ
ಯುವ ಬರಹಗಾರರು,ಬೀದರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ