ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಂಪಾದಕೀಯ-ನಾವಿರುವುದೇ ನಿಮಗಾಗಿ…ಇಂತಿ ನಿಮ್ಮಚಮಚಾ.ಚೊಂಬು..ಬಕೆಟ್ ಗಳು…

ತುಂಬಾ ಸಿಂಪಲ್ ಪರಿಚಯ:

ಜನಸೇವೆಗಾಗಿಯೇ ತಮ್ಮ ಜನ್ಮ,ಜೀವನ ಮುಡಿಪಿಟ್ಟಿದ್ದೇವೆ ನಿಮಗಾಗಿಯೇ ನಾವು ಈ ಜನ್ಮ ತಾಳಿರುವುದು ನಾವಿರುವುದೇ ನಿಮಗಾಗಿ ನಿಮ್ಮ ಉದ್ದಾರವೇ ನಮ್ಮ ಜೀವನದ ಮೊದಲ ಗುರಿ ಎಂದು ಪೂರ್ತಿ ಹೂಕೋಸನ್ನೇ ನಮ್ಮ ಕಿವಿಗೆ ಇಟ್ಟು ಮೈಕ್ ಇವರು ಗಂಟಲು ಹರಿಯೋ ಹಾಗೆ ಭಾಷಣ ಬಿಗಿಯಲು ಶುರು ಮಾಡಿದರೆ ಓಹ್ ಈ‌ ಪುಣ್ಯಾತ್ಮನೊಬ್ಬ ಹುಟ್ಟಿಲ್ಲದಿದ್ದರೆ ನಾವು ಅನ್ನ,ನೀರು ಕಾಣುತ್ತಿರಲಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಭ್ರಮೆ ಹುಟ್ಟಿಸುವ ತಮ್ಮ ಸ್ವಾರ್ಥಕ್ಕಾಗಿ ಇತರರ ಜೀವನದ ಜೊತೆಗೆ ಆಟ-ಚೆಲ್ಲಾಟವಾಡುವ ಒಂದು ದೊಡ್ಡ ಗೋಮುಖ ವ್ಯಾಘ್ರಗಳ ದಂಡೇ ನಮ್ಮ-ನಿಮ್ಮೆಲ್ಲರ ನಡುವೆಯೇ ಉಸಿರಾಡುತ್ತಿದೆ.ತಮ್ಮ ಕುರ್ಚಿಯನ್ನು ಖಚಿತಪಡಿಸಿಕೊಳ್ಳಲು ಯಾರ ಕುತ್ತಿಗೆಗೆ ಬೇಕಾದರೂ ಕೈ ಹಾಕಬಲ್ಲ ಖತರ್ನಾಕ್ ಗಳು ಇವರು.

ವ್ಯಕ್ತಿತ್ವ

ಅದರಲ್ಲಿ ಮುಖ್ಯವಾಗಿ ಹೇಳುವುದಾದರೆ…
ರಾಜಕಾರಣಿಗಳ ಜೊತೆ-ಹಿಂದೆ-ಮುಂದೆ ಓಡಾಡಿಕೊಂಡು ರಾಜಕಾರಣಿಗಳನ್ನು ಅಪ್ಪಾಜಿ,ಅಣ್ಣ,ಸಾಹುಕಾರ,ಧಣಿ,ಕಿಂಗ್-ಕಿಂಗ್ ಮೇಕರ್,ಇಂದ್ರ-ಚಂದ್ರ ಎಂದು ತಾವೇ ಅವರಿಗೆ ಬಿರುದು-ಬಾವಲಿಗಳನ್ನು ನೀಡಿ ಅದರ ನೆರಳಿನಲ್ಲಿ ಅವರು ತಿನ್ನೋ ಒಂದು ಪುಟ್ಟಿ ಸಗಣಿಯಲ್ಲಿ ಒಂದು ಚಮಚೆ ತಿಂದು ಅವರಿಗೆ ಮಾತ್ರ ನಾಯಿಗಿಂತ ಜಾಸ್ತಿ ನಿಯತ್ತಾಗಿದ್ದು(ಅದರಲ್ಲಿ ಕೆಲವರು ಇನ್ನೊಂದು ಪಕ್ಷದ ಜೊತೆಗೆ ಸೇರಿ ತಿನಿಸಿದವರಿಗೆ ಉಲ್ಟಾ ತಿನಿಸಿದ್ದನ್ನೂ ಇತ್ತೀಚಿಗೆ ನೋಡುತ್ತಿದ್ದೇವೆ)ಇವರನ್ನು ನಂಬಿ ಮತಹಾಕಿದ ಮತದಾರರನ್ನು ಮುಂದಿನ ಐದು ವರ್ಷಗಳ ಕಾಲ ಮರೆತು ತಮ್ಮ ವಂಶ ಹಾಗೂ ತಮಗೆ ಚಮಚೆಯಲ್ಲಿ ತುತ್ತು ನೀಡಿದ ಆ ‘ನಾಯಕ’ನ ಅಭಿವೃದ್ಧಿ ಕುರಿತು ಓಡಾಡುವುದರಲ್ಲೇ ಕಳೆದು ಹೋಗುವ ಇವರನ್ನು ಹುಡುಕುವುದು ತುಂಬಾ ಕಷ್ಟ.

ಕ್ಷೇತ್ರದಲ್ಲಿ ನಾಯಕನ ಹೆಸರನ್ನು ಜನರು ಮರೆಯಬಾರದು ಎನ್ನುವ ಉದ್ದೇಶದಿಂದ ಸ್ಥಳೀಯ ಐಪಿಎಲ್ (ಕೆ.ಪಿ.ಎಲ್,ಬಿ.ಪಿ.ಎಲ್,ಜಿ.ಪಿ.ಎಲ್ ಇದೇ ರೀತಿ ತಮ್ಮೂರ ಹೆಸರಿನ ಮೊದಲ ಇಂಗ್ಲಿಷ್ ಅಕ್ಷರದ ಮುಂದೆ ಪಿ.ಎಲ್ ಸೇರಿಸಿಕೊಂಡು ಆಡುವ ಆಟಗಳಿಂದ ಹಿಡಿದು ಸಂಘ-ಸಂಸ್ಥೆಗಳ ಉದ್ಘಾಟನೆ ಸಂದರ್ಭದಲ್ಲಿ,ಬಹುತೇಕ ಎಲ್ಲಾ ಸಭೆ-ಸಮಾರಂಭ-ಜಾತ್ರೆ-ಉತ್ಸವಗಳಲ್ಲಿ ಟೀ ಶರ್ಟ್-ಬ್ಯಾನರ್,ಪೋಸ್ಟರ್ ಗಳಲ್ಲಿ,ನೆನೆಪಿನ ಕಾಣಿಕೆಗಳಲ್ಲಿ ಆ ನಾ(ಲಾ)ಯಕ ಅಲ್ಲ ನಾವೇ ಆರಿಸಿದ ನಾಯಕನ ಫೋಟೋ ದೊಡ್ಡದಾಗಿ ನಮ್ಮನ್ನೇ ನೋಡಿ ಕೈ ಮುಗಿಯುತ್ತಾ ನಗುತ್ತಿರುವ ರೀತಿಯ ಫೋಟೋವನ್ನು ಪ್ರಿಂಟ್ ಹಾಕುತ್ತಲೇ ಇರುತ್ತಾರೆ.

ಇವರ ಆ ಸೋ ಕಾಲ್ಡ್ ಆ ಲೀಡರ್ ಏನಾದರೂ ಅದೃಷ್ಟವಶಾತ್ ಗೆದ್ದು ಬೆಂಗಳೂರು ಅಥವಾ ದೆಹಲಿ ಸೇರಿಬಿಟ್ಟರಂತೂ ಇವರ ಭುಜಕ್ಕೆ ಎರಡು ರೆಕ್ಕೆ ಬಂದಂತೆ ಹಾರಾಡುತ್ತಾ ಸ್ಥಳೀಯವಾಗಿ ಮುಂದಿನ ಅವಧಿಯವರೆಗೆ ಇವರದೇ ದರ್ಬಾರ್ ನಡೆಸುತ್ತಾರೆ.

ಯಾರಿವನು?

ಕೆಲವು ದಿನಗಳ ಹಿಂದೆ “ಜನನಾಯಕ”ನೊಬ್ಬನ ಗುಲಾಮನೊಬ್ಬ ಕರೆ ಮಾಡಿ “ಸರ್ ನಮ್ಮ ಕ್ಷೇತ್ರದಲ್ಲಿ ಯಾರು ಏನೇ ಮಾಡಿದರೂ ಕ್ಷಣಾರ್ಧದಲ್ಲಿ ನನಗೆ ಗೊತ್ತಾಗುತ್ತೆ ಇಲ್ಲಿನ ನಿಮ್ಮ ವರದಿಗಾರರ ನಂಬರ್ ಕೊಡಿ ನಮ್ಮ ಸಾಹೇಬರನ್ನು ಭೇಟಿ ಮಾಡಿಸುತ್ತೇನೆ ನೀವು ನಮ್ಮ ಪರವಾಗಿ ಇರಿ” ಎಂದ.

ತಕ್ಷಣವೇ ಅದೇಕೋ ನನಗೆ ಅನುಮಾನಗಳ ಹಾವಳಿ ಶುರುವಾಯಿತು ಎಲ್ಲಾ ತಿಳಿಯೋ ಈ ತ್ರಿಕಾಲ ಜ್ಞಾನಿಗೆ ನಾನೇಕೆ ವರದಿಗಾರನ ನಂಬರ್ ಕೊಡಬೇಕು?

ಎಲ್ಲಾ ತಿಳಿದ ಇವನಿಗೆ ಆ ಕ್ಷೇತ್ರದ ಸಮಸ್ಯೆಗಳೇಕೆ ಕಾಣುತ್ತಿಲ್ಲ?

ಪತ್ರಿಕೋದ್ಯಮ ಯಾರ ಪರವೂ ಅಲ್ಲ ವಿರೋಧಿಯೂ ಅಲ್ಲ ಹೀಗಿರುವಾಗ ನೇರವಾಗಿ ಕರೆ ಮಾಡಿ ಪರವಾಗಿರಿ ಎನ್ನಲು ಕಾರಣವೇನು?

ಅದೇನೋ ನನಗೂ ಅವನ ಜೊತೆ ಮಾತನಾಡಿದ “ಕ್ಷಣಾರ್ಧದಲ್ಲೇ” ತಿಳಿಯಿತು ಇವನ ಹಾಗೂ ಇವನ ಆ ಲೀಡರ್ ನ ಮಹಾನ್ ಸಮಾಜ ಸೇವೆ ಎಂತಹುದು ಎಂದು.

“ಕಾರ್ಯ”ಗಳು

ಪಕ್ಷದಲ್ಲಿ ಇದ್ದು ಸಮಾಜ ಸೇವೆ ಹೆಸರಿನಲ್ಲಿ ಇವರು ಮಾಡುವ ದಂಧೆಯ ಉದ್ದೇಶ ಮಾತ್ರ ಒಂದೋ ಪಕ್ಷದಲ್ಲಿ ಮುಂದೊಂದು ದಿನ ಉತ್ತಮ ಹುದ್ದೆ,ಒಂದಿಷ್ಟು ಹಣ-ಆಸ್ತಿ,ಅವಕಾಶ ಸಿಕ್ಕರೆ ಸಣ್ಣದು ಅಥವಾ ದೊಡ್ಡ ಒಂದು ಟಿಕೆಟ್ ಎನ್ನುವುದು ಸ್ಪಷ್ಟವಾಗಿ ಕಾಣುವ ಕಠೋರ ಸತ್ಯ…

ಗೆದ್ದು ಎದ್ದು ಹೋದ ಆ ಪುಣ್ಯಾತ್ಮನ ಅನೈತಿಕ,ಅಕ್ರಮ,ಭ್ರಷ್ಟಾಚಾರ,ನೇಮಕಾತಿ,ಮುಚ್ಚಿಟ್ಟ ಗಂಟು,ಮುಚ್ಚಿಡಬೇಕಾದ ಗುಟ್ಟು,ಅವ್ಯವಹಾರ,ಇವರ ಪರವಾಗಿದ್ದವರನ್ನು ನೋಡಿಕೊಳ್ಳುವುದು,ವಿರೋಧಿಗಳನ್ನು ತನ್ನದೇ ರೀತಿಯ ಹತ್ತಿಕ್ಕುವುದು,

ವರ್ಗಾವಣೆ,ಜೂಜಾಟ,ರಾಜಕೀಯ ಜೂಟಾಟ,ಒಟ್ಟಾರೆ ಅವನ ಎಲ್ಲಾ ದೊಂಬರಾಟಕ್ಕೂ ಇವನೇ ವಾರಸ್ದಾರ.

ಈ ಮೇಲಿನ ಎಲ್ಲಾ ಕೆಲಸಕ್ಕೂ ಇವನು ಹೇಳುವುದು ಇದೆಲ್ಲಾ ನಾನು ಮಾಡುತ್ತಿರುವುದು ಸಮಾಜ ಸೇವೆ,

ನಾನೊಬ್ಬ ಸಮಾಜ ಸೇವಕ ಎಂದು.ಇವನು ಯಾರೆಂದು ತಮಗೆಲ್ಲಾ ಈಗಾಗಲೇ ಗೊತ್ತಾಯಿತು ಅಂದುಕೊಂಡು ಮುಂದೆ ಸಾಗೋಣ…

ಇವರ ಕಾರ್ಯವ್ಯಾಪ್ತಿಗೆ ಮಿತಿಯಿದ್ದರೂ ಇವರುಗಳು ಆನ್ಲೈನ್ ಹಾಗೂ ಆಫ್ ಲೈನ್ ನಲ್ಲಿ ಆಡುವ ಆಟ-ಮಾಟ-ಕಾರ್ಯಗಳಿಗೆ ಮಾತ್ರ ಇತಿಮಿತಿ ಇಲ್ಲ. ತಮ್ಮ ಸ್ವಾರ್ಥ ಸಾಧನೆಗಾಗಿ ಯಾರ ತಲೆ ಬೇಕಾದರೂ ಹಿಡಿಯಬಲ್ಲ,ಹೊಡೆಯಬಲ್ಲ ಕರ್ತೃ,ಕರ್ಮ,ಕ್ರಿಯಾ ಕೆಲಸಗಾರರು ಇವರು.ಸಮಾಜದಲ್ಲಿ ಜಾತಿ,ಧರ್ಮಗಳಂತಹ ಸೂಕ್ಷ್ಮ ವಿಷಯಗಳನ್ನು ಬಳಸಿಕೊಂಡು ವಿಷದ ಬೀಜ ಬಿತ್ತುವ ಮೂಲಕ ತಮ್ಮ ಕಾರ್ಯ ಸಾಧನೆಗೆ ಮುಂದಾಗುತ್ತಾರೆ ಈ ನರರೂಪಿ ರಕ್ಕಸರು.

ಇಂತವರನ್ನು ಸಮಾಜ ಸೇವಕರು ಎಂದು ನಂಬಿರುವ ನಾವೆಷ್ಟು ಅಮಾಯಕರು.

ಏನು ಹೇಳಲಿ…

ತನ್ನ ಹಾಗೂ ತನಗೆ ಅನ್ನ ಹಾಕಿದ ವಂಶದ ಅನ್ನಕ್ಕಾಗಿ ಇತರರ ಬಾಯಿಗೆ ಮಣ್ಣು ಹಾಕುವ ಆ ಲೀಡರ್ ಯಾವತ್ತೂ ಇವನ ಪಾಲಿಗೆ ಸೂಪರ್ ಸ್ಟಾರ್ ಎಂದೇ ಬಾಯ್-ಬಾಯ್ ಬಡ್ಕೊಳ್ಳುವ ನಮ್ಮ ನಡುವೆ-ಎಡ-ಬಡದಲ್ಲೇ ಓಡಾಡುವ ನಿಮಗೆ ನನ್ನ ಒಂದು ಸಣ್ಣ ನಮಸ್ಕಾರ.

ವಿಶೇಷ ಸೂಚನೆ:
ಎಲ್ಲರೂ ಹಾಗೇ ಇಲ್ಲ “ಬಹುತೇಕ” ಅಂತ ಹೇಳಬಹುದು ಕೆಲವರು ನಿಷ್ಠಾವಂತ ಕಾರ್ಯಕರ್ತರು,ರಾಜಕೀಯ ನಾಯಕರನ್ನೂ ಆಗೊಮ್ಮೆ ಈಗೊಮ್ಮೆ ನೋಡಬಹುದು ಆದರೆ ಆನ್ಲೈನ್ ಹಾಗೂ ಆಫ್ಲೈನ್ ನಲ್ಲಿ ಇವರು ಜನ ಸಾಮಾನ್ಯರಲ್ಲಿ ತಾವೂ ಒಬ್ಬರಾಗಿ ಬೆರೆತು ಹೋಗಿರುವ ಕಾರಣ ಇವರಿಗೆ ಅಬ್ಬರದ ಪ್ರಚಾರವಾಗಲಿ,ಹಾರ ತುರಾಯಿಗಳ ಹಂಗಾಗಲಿ ಇರುವುದಿಲ್ಲ ತಾವಾಯಿತು ತಮ್ಮ ಕೆಲಸವಾಯಿತು ಎನ್ನುವಂತೆ ಇರುತ್ತಾರೆ.ಕೆಲಸವನ್ನು ನಂಬಿರುವ ಇವರು ಚುನಾವಣಾ ಸಮಯದಲ್ಲಿ ಕೂಡಾ ಪ್ರಚಾರಕ್ಕಾಗಿ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದಿಲ್ಲ.”ಕೆರೆಯ ನೀರನ್ನು ಕೆರೆಗೆ ಚೆಲ್ಲು” ಎನ್ನುವಂತೆ ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಜನತೆಯ ಸಂತೋಷದಲ್ಲಿ ತಮ್ಮ ಸಂತೋಷವನ್ನು ಕಾಣುವ “ಜನ ಸೇವೆಯೇ ಜನಾರ್ಧನ ಸೇವೆ” ಎನ್ನುವ ಪುಣ್ಯಾತ್ಮರು‌ ಇವರು.ಇವರು ಅಧಿಕಾರದಲ್ಲಿ ಇರಲಿ ಬಿಡಲಿ ಚಮಚಾ-ಚೊಂಬು-ಬಕೆಟ್ ಗಳ ಹಾವಳಿ ಇಲ್ಲದ ಈ ರಾಜಕಾರಣಿಗಳ ಮನೆಯ ಹತ್ತಿರ ನಿತ್ಯವೂ ಹತ್ತಾರು ಜನರು ತಮ್ಮ ಕೆಲಸಗಳಿಗಾಗಿ ಸುಳಿಯುವುದನ್ನು ಕಾಣಬಹುದು.

ವಿಪರ್ಯಾಸವೆಂದರೆ ಇಂತವರನ್ನೇ ನಮ್ಮ ಮತದಾರ ಹೆಚ್ಚಾಗಿ ಸೋಲಿಸಿ ಮನೆಯಲ್ಲಿ ಕೂರಿಸುತ್ತಾನೆ.

ಇಂತಹ ಜನಪರ ಕಾಳಜಿಯುಳ್ಳ ಪ್ರಜಾಪ್ರತಿನಿಧಿಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿ

ಪ್ರಜಾಪ್ರಭುತ್ವದ ಮೂಲ ಉದ್ದೇಶ ಸಾಕಾರಗೊಳ್ಳಲಿ ಎಂದು ಆಶಿಸುತ್ತೇನೆ…

ಹಗಲುವೇಷದಾರಿಗಳು ಈ ಚಮಚಾ-ಚೊಂಬು-ಬಕೆಟ್ ಗಳು

‘ಚಮಚಾ’ಗಳು

ಇವರನ್ನು ಹೀಗೆ ಕರೆ ಕರೆದರೆ ಸೂಕ್ತ ಎನಿಸುತ್ತದೆ ಏಕೆಂದರೆ ಇವರು ಮಾಡುವ ಕೆಲಸಗಳೂ ಕೂಡಾ ಹಾಗೆ ಇರುತ್ತವೆ.ತಮ್ಮ ಬಳಿ ಬರುವ ಸಾರ್ವಜನಿಕರ ಹತ್ತಿರ ನಾಚಿಕೆ ಇಲ್ಲದೆ ಕೈಚಾಚಿ ಮಾಮೂಲಿ ತೆಗೆದುಕೊಂಡು ಚಮಚೆಯಷ್ಟು ತಾನಿಟ್ಟುಕೊಂಡು ಉಳಿದದದ್ದನ್ನು ತನ್ನ ಮಾಲೀಕನಿಗೆ ಕೊಟ್ಟು ಹೇಗಾದರೂ ಅವನ ಮನವೊಲಿಸಿ ಕೆಲಸ ಮಾಡಿಸಿಕೊಡುವ ಇವರು

ಅವನ ಲೀಡರ್ ಗಾಗಿ ಇದೇ ರೀತಿಯ ಹಲವಾರು ಕಾರ್ಯಗಳನ್ನು ಪ್ರತಿದಿನ ಮಾಡುತ್ತಲೇ ‘ಚಮಚಾ’ಗಿರಿ ಯನ್ನೇ ತಮ್ಮ ಜೀವನದ ಗುರಿಯಾಗಿಸಿಕೊಂಡವರು ಇವರು.

ಚೊಂಬುಗಳು:

ತಮ್ಮನ್ನು ನಂಬಿದ ಜನಕ್ಕೆ ತಮ್ಮ ಪಕ್ಷ ಸೋತರೂ-ಗೆದ್ದರೂ ಮತೈದು ವರ್ಷಗಳ ಕಾಲ ತಿರುಗಿ ನೋಡದ ಇವರು ನಮಗೆ ಕೊಡುವುದು “ದೊಡ್ಡ ಚೊಂಬು”ಇತ್ತೀಚಿಗೆ ಜರುಗಿದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಚೊಂಬು,ಚಿಪ್ಪು ಅಂತ ಒಬ್ಬರಿಗೊಬ್ಬರು ತೋರಿಸುವುದನ್ನು ಈಗಾಗಲೇ ನಾವೆಲ್ಲರೂ ಕಣ್ ತುಂಬಿ‌ಕೊಂಡಿದ್ದೇವೆ.ಇವರ ಪಾಲಿಗೆ

ತಮ್ಮ ನಾಯಕನೇ ರಾಜ,ತಾವು ಅವನ ಮಂತ್ರಿಗಳು ಉಳಿದ ನಾವು-ನೀವೆಲ್ಲಾ ಪುರಾಣ ಕಾಲದ ಪ್ರಜೆಗಳು ಅಂದುಕೊಂಡಿರುತ್ತಾರೆ ಅದೇ ಭ್ರಮಾ ಲೋಕದಲ್ಲಿ ಇರುತ್ತಾರೆ ಕೂಡಾ.ದುರಾದೃಷ್ಟವೆಂದರೆ‌ ಕೆಲವೆಡೆ 5-ಜಿ ಬರೀ ಮೊಬೈಲ್ ಗೆ ಸೀಮಿತ,ನಾವೆಲ್ಲರೂ ಆ ‘ರಾಜ’ಕೀಯದ ಅಡಿಯಾಳುಗಳು ಎಂದುಕೊಂಡು ಸಲಾಮ್ ಹೊಡೆಯೋರಿಗೇನು ಕಡಿಮೆ ಇಲ್ಲ.ಎಲ್ಲಿ ಮುಗ್ಧ ಜನರು ಇರುತ್ತಾರೋ ಅಲ್ಲಿ ಈ “ಚೊಂಬು-ಚಿಪ್ಪುಗಳು” ತಮ್ಮ ಪ್ರಭಾವ ಬೀರುತ್ತವೆ.

ಬಕೆಟ್ ಗಳು:

ತನ್ನ ಮಾಲೀಕನನ್ನು ಓಲೈಸಿಕೊಳ್ಳಲು,ತನಗೆ,ತನ್ನವರಿಗೆ ಬೇಕಾದ ಯಾವುದೋ ಕೆಲಸ ಮಾಡಿಸಿಕೊಳ್ಳಲು ಕುಂತಲ್ಲಿ-ನಿಂತಲ್ಲಿ-ಮಲಗಿದಲ್ಲಿ ಎಲ್ಲಿ ಯಾವ ರೀತಿ ಬಕೆಟ್ ಹಿಡಿಯಬೇಕು ಎನ್ನುವುದರಲ್ಲಿ ಇವರನ್ನು ಮೀರಿಸುವವರಿಲ್ಲ.ತನಗೆ ಅನ್ನ ಹಾಕಿದವ ಎಲ್ಲೇ ಹೋದರೂ-ಬಂದರೂ ಜೋರಾದ ಜೈಕಾರ-ಹಾರಗಳ ಉಸ್ತುವಾರಿ ಜೊತೆಗೆ ದಿಕ್ಕಾರದ ಧ್ವನಿಯನ್ನು ಹತ್ತಿಕ್ಕುವ ಮಹಾನ್ ಕಾರ್ಯ ಈ ಬಕೆಟ್ ಗಳದ್ದು.

-ಬಸವರಾಜ ಬಳಿಗಾರ
ಸಂಪಾದಕರು,ಕರುನಾಡ ಕಂದ,9986366909

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ