ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ಬೈಲುವದ್ದಿಗೇರಿ ಗ್ರಾ.ಪಂ ಯ ಕಛೇರಿಯಲ್ಲಿ ಗ್ರಾಪಂ ಹಾಗೂ ಜೆಎಸ್ಡಬ್ಲ್ಯೂ ಆಸ್ಪೈರ್ ನೇತೃತ್ವದಲ್ಲಿ ಜೀವನ ಕೌಶಲ್ಯ ಶಿಕ್ಷಣ ಜಾಗೃತಿ ಸಭೆ ಸೋಮವಾರ ನಡೆಯಿತು.
ನಂತರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ(ಪಿ.ಡಿ.ಒ) ಹನುಮಂತಪ್ಪ ಮಾತನಾಡಿ, ಇಂದಿನ ಮಕ್ಕಳೇ ಇಂದಿನ ನಾಯಕರು ಎಂಬಂತೆ ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ದಿಪಡಿಸುವ ಅಗತ್ಯತೆ ಎದ್ದು ಕಾಣುತ್ತಿದೆ. ಮಕ್ಕಳಲ್ಲಿ ಇಂತಹ ಗುಣಗಳನ್ನು ಬೆಳೆಸುವಲ್ಲಿ ಮಕ್ಕಳ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳೂ ಸಹ ದೇಶದ ಪ್ರಜೆಗಳಾಗಿರುವುದರಿಂದ ಶಾಲಾ ಕಲಿಕೆಯ ಜೊತೆ-ಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಈ ಹಿನ್ನಲೆಯಲ್ಲಿ ಮಕ್ಕಳ ಸಂಸತ್ತು ಹೆಚ್ಚು ಮಹತ್ವ ಪಡೆದಿದೆ. ಮಕ್ಕಳ ಜೀವನದಲ್ಲಿ ಕೌಶಲ್ಯ ಶಿಕ್ಷಣದ ಜತೆಗೆ ಜಾಗೃತಿ, ಅಧಿವೇಶನ, ಕಾರ್ಯಕ್ರಮಗಳ ಅರಿವು ಅಗತ್ಯವಾಗಿದೆ. ಬೈಲುವದ್ದಿಗೇರಿ ಗ್ರಾಮದ ಸ.ಹಿ.ಪ್ರಾ. ಶಾಲೆಯಲ್ಲಿ ಗ್ರಾ.ಪಂ ಕಡೆಯಿಂದ ಈಗಾಗಲೇ ಕಾಂಪೌಂಡ್ ಗೋಡೆ, ಧ್ವನಿ ವರ್ಧಕ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈಗ ಇಲ್ಲಿನ ಶಾಲೆಯಲ್ಲಿ ಹೆಚ್ಚವರಿ ಶೌಚಗೃಹ ನಿರ್ಮಿಸುವಂತೆ ಮಕ್ಕಳು ಕೇಳಿಕೊಂಡಿದ್ದು ಆದರೆ, ಇಲ್ಲಿ ಸ್ಥಳದ ಕೊರತೆಯಿಂದ ಶೌಚಾಲಯ ನಿರ್ಮಾಣಕ್ಕೆ ತೊಂದರೆಯಾಗುತ್ತಿದೆ. ಧರ್ಮಸಾಗರ ಶಾಲೆಯಲ್ಲಿ ಮೈದಾನ ಸಮತಟ್ಟು ಮಾಡಲಾಗಿದೆ. ಸಿಸಿ ಕ್ಯಾಮರಾ, ಶುದ್ಧ ನೀರಿನ ವ್ಯವಸ್ಥೆ ಮಾಡಲಾಗಿದೆ ಮತ್ತು ಕಾಕುಬಾಳು ಶಾಲೆಯಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿಕೊಡುವಂತೆ ಮಕ್ಕಳ ಹಕ್ಕೊತ್ತಾಯ ಮಾಡಿದ್ದು, ಮುಂದಿನ ದಿನದಲ್ಲಿ ಗ್ರಾ.ಪಂ. ಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಶಾಲೆಗಳಿಗೆ ಪ್ರತಿಯೊಂದು ಸೌಲಭ್ಯ ಕಲ್ಪಿಸಲು ಸದಾ ಸಿದ್ದರಿದ್ದೇವೆ ಎಂದರು.
ಜೆಎಸ್ಡಬ್ಲ್ಯೂ ಆಸ್ಪೈರ್ ಸಂಸ್ಥೆಯ ಜೀವನ ಕೌಶಲ್ಯ ತರಬೇತಿದಾರರಾದ ಉದಯಶ್ರೀ ಮಾತನಾಡಿ, 2021ರಿಂದ ಜೆಎಸ್ಡಬ್ಲ್ಯೂ ಆಸ್ಪೈರ್ ಸಂಸ್ಥೆ ಜಾರಿಗೆ ಬಂದಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಂಸ್ಥೆಯು ಮುಂದಾಗಿದೆ. ಮಕ್ಕಳಲ್ಲಿ ಕೌಶಲ್ಯಗಳನ್ನು ಬೆಳಸುವುದರಿಂದ ಭವಿಷ್ಯ ಉಜ್ವಲವಾಗಿರುತ್ತದೆ. ಶಿಕ್ಷಣದ ಜತೆಗೆ ಜೀವನದ ಕೌಶಲ್ಯಗಳು ಅಗತ್ಯ. ಈ ಹಿನ್ನಲೆಯಲ್ಲಿ ಬೈಲುವದ್ದಿಗೇರಿ ಗ್ರಾ.ಪಂ ಯಲ್ಲಿ ಮಕ್ಕಳ ಜೀವನ ಕೌಶಲ್ಯ ಶಿಕ್ಷಣದ ತರಬೇತಿಯಲ್ಲಿ ಮಕ್ಕಳಿಗೆ ಗ್ರಾಪಂ ಆಡಳಿತದ ವೈಕರಿ ಸೇರಿದಂತೆ ನಾಯಕತ್ವದ ಗುಣಗಳ ಬಗ್ಗೆ ಪರಿಚಯಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಜೆಎಸ್ಡಬ್ಲ್ಯೂ ಆಸ್ಪೈರ್ ಸಂಸ್ಥೆಯ ಜೀವನ ಕೌಶಲ್ಯ ತರಬೇತುದಾರ ಡಿ.ಮಂಜುನಾಥ ಸೇರಿದಂತೆ ಸರ್ಕಾರಿ ಶಾಲಾ ಮಕ್ಕಳು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ್