
ವಿಜಯನಗರ / ಹೊಸಪೇಟೆ : ಹಜ್ ಆಧ್ಯಾತ್ಮಿಕ ಪ್ರಯಾಣ ಮಾತ್ರವಲ್ಲ ಅದು ಶ್ರದ್ಧೆ, ಸಹನೆ, ಕಾಳಜಿ ಮತ್ತು ಸಹಜೀವನದ ಪಾಠ ಕಲಿಸುತ್ತದೆ ವಿವಿಧ ಧರ್ಮಗಳ ಆಚಾರ ವಿಚಾರಗಳು ಬೇರೆಯಾಗಿದ್ದರೂ ಎಲ್ಲಾ ಧರ್ಮಗಳ ಸಾರ ಒಂದೇ ಆಗಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದಿರಬೇಕು, ಹಜ್ ಯಾತ್ರೆಯು ಯಶಸ್ವಿಯಾಗಿ ಪೂರ್ಣಗೊಳ್ಳಲು ಸೂಕ್ತ ತರಬೇತಿ ಬಹು ಅಮೂಲ್ಯವಾಗಿದೆ ಎಂದು ಸಂಸದ ಈ.ತುಕಾರಾಂ ಹೇಳಿದರು.
ನಗರದ ಸಿದ್ದಿಪ್ರಿಯ ಕಲ್ಯಾಣ ಮಂಟಪದಲ್ಲಿ ಗುರುವಾರ 6 ಜಿಲ್ಲೆಗಳ ಹಜ್ ಯಾತ್ರಾರ್ಥಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು ಹಜ್ ಎಂದರೆ ಕಾಬಾಕ್ಕೆ ಪ್ರಯಾಣ ಮಾಡುವ ಪವಿತ್ರ ಯಾತ್ರೆಯಾಗಿರುತ್ತದೆ. ಮುಸ್ಲಿಮರು ತಮ್ಮ ಎಲ್ಲ ಲೌಕಿಕ ಪಾಪಗಳಿಂದ ತಮ್ಮ ಆತ್ಮವನ್ನು ಶುದ್ಧೀಕರಿಸಲು ಕೈಗೊಳ್ಳುವ ಸುದೀರ್ಘ ಪವಿತ್ರ ಯಾತ್ರೆ ಇದಾಗಿದೆ. ಜೀವಿತ ಅವಧಿಯಲ್ಲಿ ಕನಿಷ್ಠ ಒಂದು ಬಾರಿಯಾದರೂ ಹಜ್ ಯಾತ್ರೆ ಮಾಡುವ ಕೋರಿಕೆ ಇರುತ್ತದೆ. ಆಧ್ಯಾತ್ಮಿಕ ಶುದ್ಧೀಕರಣದ ಒಂದು ಮಹತ್ವದ ಹಂತವಾಗಿದ್ದು, ಶಾರೀರಿಕ ಮಾನಸಿಕ ಮತ್ತು ಆರ್ಥಿಕವಾಗಿ ಸಿದ್ಧತೆ ಅಗತ್ಯವಿದೆ ಮನುಷ್ಯ ಮತ್ತೊಬ್ಬರ ಏಳಿಗೆಗಾಗಿ ಮೆಟ್ಟಿಲಾಗುವ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು, ಮತ್ತೊಬರ ಮೆಚ್ಚುಗೆಗಾಗಿ ಮಾಡುವ ಕೆಲಸಕ್ಕಿಂತ ಆತ್ಮ ಅಭಿಮಾನದೊಂದಿಗೆ ಮತ್ತೊಬ್ಬರಿಗೆ ಸಂತೋಷ ತರುವ ಕೆಲಸಗಳು ಭಗವಂತನಿಗೆ ಪ್ರಿಯವೆನಿಸುತ್ತದೆ ಎಂದು ತಿಳಿಸಿದರು.
ಹಜ್ ಯಾತ್ರಾರ್ಥಿಗಳಿಗೆ ಕರ್ನಾಟಕ ಹಜ್ ಕಮಿಟಿಯ ಫೋರಂ ವತಿಯಿಂದ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಯಾತ್ರಾರ್ಥಿಗಳು ನಮ್ಮ ನಾಡಿನ ನಮ್ಮ ದೇಶದ ಸರ್ವ ಜನರಿಗೂ ಒಳ್ಳೆಯದಾಗಲಿ ದೇಶದಲ್ಲಿ ಶಾಂತಿ ಸಮೃದ್ಧಿ ನೆಲೆಸಲಿ ಎಂದು ಮೆಕ್ಕಾ ಯಾತ್ರೆಯಲ್ಲಿ ಕೇಳಿಕೊಳ್ಳಬೇಕೆಂದು ಎಲ್ಲರಿಗೂ ಶುಭವಾಗಲಿ ಎಂದು ಹುಡಾ ಅಧ್ಯಕ್ಷ ಹಾಗೂ ಖಿದ್ಮತೆ ಅಂಜುಮನ್ ಕಮಿಟಿ ಅಧ್ಯಕ್ಷ ಎಚ್. ಎನ್. ಮೊಹಮ್ಮದ್ ಇಮಾಮ್ ನಿಯಾಜಿ ತಿಳಿಸಿದರು. ರಾಜ್ಯ ಹಜ್ ಕಮಿಟಿಯ ಅಧ್ಯಕ್ಷ ಜುಲ್ಫಿಕರ್ ಅಹಮ್ಮದ ಖಾನ್ ( ಟಿಪ್ಪು) ಮಾತನಾಡಿ ಸರಕಾರವು ಯಾತ್ರಾರ್ಥಿಗಳಿಗೆ ಸಹಕಾರ ನೀಡುತ್ತಿದ್ದು ಮುಸ್ಲಿಂ ಬಾಂಧವರು ಸರಕಾರ ನೀಡುವ ಶೈಕ್ಷಣಿಕ ಆರ್ಥಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಬಳ್ಳಾರಿ, ವಿಜಯನಗರ, ಕೊಪ್ಪಳ, ಗದಗ, ಚಿತ್ರದುರ್ಗ ಹಾಗೂ ಬಾಗಲಕೋಟೆ 6 ಜಿಲ್ಲೆಗಳಿಂದ 639 ಹಜ್ ಯಾತ್ರಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಹಜ್ ತರಬೇತಿಯಲ್ಲಿ ನಿವೃತ್ತ ಕೆ. ಎ. ಎಸ್. ಅಧಿಕಾರಿ ಏಜಾಜ್ ಅಹ್ಮದ್ ಹಾಗೂ ಅವರ ತಂಡದವರು ಈ ಹಜ್ ಯಾತ್ರೆಯಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಮತ್ತು ಧಾರ್ಮಿಕ ಆಚರಣೆಗಳ ಕುರಿತು ತರಬೇತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಹಜ್ ಕಮಿಟಿ ಮಾಜಿ ಅಧ್ಯಕ್ಷ ದಾದಾ ಸಾಹೇಬ್, ಅಜುಮಾನ್ ಕಮಿಟಿಯ ಪದಾಧಿಕಾರಿಗಳಾದ ಬಿ. ಅನ್ಸರ್ ಭಾಷಾ, ಫಿರೋಜ್ ಖಾನ್, ಅಬೂಬಕರ್, ಕೆ ಮೋಸಿನ್, ಸದ್ದಾಮ ಹುಸೇನ್, ಡಾ. ಡಾರ್ವೇಶ, ಗುಲಾಮ ರಸುಲ್, ವಿಜಯನಗರ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ದಾದಾಪೀರ್, ನಗರಸಭೆ ಸದಸ್ಯರಾದ ಅಸ್ಲಾಂ ಮಳಿಗೆ, ಜಿಲ್ಲಾ ವಕ್ಫ್ ಮಾಜಿ ಅಧ್ಯಕ್ಷ ಟಿ ರಫೀಕ್, ಸಮಾಜದ ಮುಖಂಡರಾದ HNF ಅಲಿಬಾಬಾ, ಖಲಂದರ್, ಖಾಜ ಹುಸೇನ್ ನಿಯಾಜಿ ಸೇರಿದಂತೆ ವಿಧ ಮಸೀದಿಗಳ ಮುಖಂಡರುಗಳು ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
