ವಿಜಯನಗರ / ಹೊಸಪೇಟೆ : ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಜಿಲ್ಲೆಗಳನ್ನು ಒಳಗೊಂಡ ಹಾಲು ಒಕ್ಕೂಟದಲ್ಲಿ ಅತ್ಯಧಿಕ ಹಾಲು ಉತ್ಪಾದಿಸುವ ಜಿಲ್ಲೆ ವಿಜಯನಗರ. ಇಲ್ಲಿಗೆ ಹೆಚ್ಚು ನಿರ್ದೇಶಕರ ಸ್ಥಾನ, ಮೇಗಾ ಡೇರಿ ನೀಡದಿದ್ದರೆ ಹನಿ ಹಾಲನ್ನೂ ಬಳ್ಳಾರಿಗೆ ಕಳುಹಿಸಲಾಗದು ಎಂಬ ಒಕ್ಕೊರಲ ನಿರ್ಧಾರಕ್ಕೆ ಹಾಲು ಉತ್ಪಾದಕರು ಬಂದಿದ್ದಾರೆ.
ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕು, ಹೊಸಪೇಟೆಯಲ್ಲಿ ಮೆಗಾ ಡೇರಿ ನಿರ್ಮಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗುರುವಾರ ಇಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಧರಣಿಯಲ್ಲಿ ಹಾಲು ಉತ್ಪಾದಕರು ಈ ನಿರ್ಧಾರ ಕೈಗೊಂಡರು ಹಾಗೂ ಬಳ್ಳಾರಿಗೆ ಬೃಹತ್ ಪಾದಯಾತ್ರೆ ನಡೆಸಿ ಬೆದರಿಕೆ ತಂತ್ರಕ್ಕೆ ಸೆಡ್ಡು ಹೊಡೆಯಲು ತೀರ್ಮಾನಿಸಿದರು.
ಅಖಿಲ ಕರ್ನಾಟಕ ರಾಜ್ಯ ಕಿಸಾಸ್ ಜಾಗೃತಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ್ ಕುಕ್ಕಪ್ಪಿ ಮಾತನಾಡಿ, ಬಳ್ಳಾರಿಯಲ್ಲಿ ಹಾಲು ಒಕ್ಕೂಟಗಳನ್ನು ಹೆಚ್ಚಿಸಿಲ್ಲ ಮತ್ತು ಹಾಲು ಉತ್ಪಾದನೆ ಹೆಚ್ಚಿಸಲು ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ ಅಧಿಕಾರ ಮಾತ್ರ ತಮಗೇ ಬೇಕು ಎಂಬ ಧೋರಣೆ ಇದೆ. ಇದನ್ನು ಒಪ್ಪಲಾಗದು, ಒಂದು ಹನಿ ಹಾಲು ಸಹ ಜಿಲ್ಲೆಯಿಂದ ಬಳ್ಳಾರಿಗೆ ಹೋಗದಂತೆ ಹಾಲು ಉತ್ಪಾದಕರು ತೀರ್ಮನಿಸಿದರೆ ಬಳ್ಳಾರಿಯಲ್ಲಿ ಯಾವ ಆಟವೂ ನಡೆಯದು. ಹೀಗಾಗಿ ಇದೇ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ಗಟ್ಟಿ ಮಾಡಲಾಗುವುದು ಎಂದರು.
ರೈತ ಸಂಘದ ಮುಖಂಡ ವೀರಸಂಗಯ್ಯ ಮಾತನಾಡಿ, ಕೆಎಂಎಫ್ ಅಧ್ಯಕ್ಷರಾಗಿ ಭೀಮಾ ನಾಯ್ಕ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಆದರೆ ಬಳ್ಳಾರಿಯಲ್ಲಿ ಅವರನ್ನೇ ಅವಮಾನಿಸುವ ರೀತಿಯಲ್ಲಿ ಬೆಳವಣಿಗೆ ನಡೆದಿದೆ. ಬಳ್ಳಾರಿ ಕಾಲಿಟ್ಟರೆ ಹುಶಾರ್ ಎಂಬ ಅಪ್ರಬುದ್ಧ ಬೆದರಿಕೆಯನ್ನೂ ನೀಡಲಾಗಿದೆ. ಇದಕ್ಕಾಗಿಯೇ ಬಳ್ಳಾರಿಗೆ ಬೃಹತ್ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಹಾಲು ಒಕ್ಕೂಟದ ನಿರ್ದೇಶಕ ಮರುಳಸಿದ್ದಪ್ಪ ಮಾತನಾಡಿ, ಹೊಸಪೇಟೆಯಲ್ಲಿ ₹40 ಕೋಟಿ ವೆಚ್ಚದಲ್ಲಿ ಪಶು ಆಹಾರ ಉತ್ಪಾದನಾ ಘಟಕ ನಿರ್ಮಾಣವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಅದು ಉದ್ಘಾಟನೆಗೊಳ್ಳಲಿದೆ. ಭೀಮಾ ನಾಯ್ಕ್ ಅವರು ಮಾಡುತ್ತಿರುವ ಉತ್ತಮ ಕೆಲಸವನ್ನು ಸಹಿಸಿಕೊಳ್ಳಲಾರದೆ ಅನಗತ್ಯ ಟೀಕೆ ಮಾಡಲಾಗುತ್ತಿದೆ. ವರ್ಷಕ್ಕೆ ಎರಡು ಬಾರಿ ರೈತರಿಗೆ ನೀಡುವ ಹಾಲಿನ ದರವನ್ನು ಹೆಚ್ಚಿಸಿದ್ದು ಯಾರಾದರು ಇದ್ದರೆ ಅದು ಭೀಮಾ ನಾಯ್ಕ್ ಮಾತ್ರ ಎಂದರು.
ಕಂಪ್ಲಿಯ ಗಂಗಾಧರ್ ಬೆಂಬಲ:
ಬಳ್ಳಾರಿ ಜಿಲ್ಲೆಯವರೇ ಆದ ಕಂಪ್ಲಿಯ ಹಾಲು ಉತ್ಪಾದಕ ಗಂಗಾಧರ ಅವರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ‘ನಮಗೆ ಬಳ್ಳಾರಿ ಹಾಲು ಒಕ್ಕೂಟದ ಸಹವಾಸವೇ ಬೇಡ, 60 ಕಿ.ಮೀ.ದೂರದ ಬಳ್ಳಾರಿ ಬದಲಿಗೆ 25 ಕಿ.ಮೀ.ದೂರದ ಹೊಸಪೇಟೆಗೆ ಹಾಲು ನೀಡುತ್ತೇವೆ, ಹೊಸಪೇಟೆಯಲ್ಲೇ ಮೆಗಾ ಡೇರಿ ನಿರ್ಮಾಣವಾಗಲಿ’ ಎಂದರು.
ಆರಂಭದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿದ ರೈತ ಮುಖಂಡರು, ಬಳಿಕ ಸಿದ್ದಿಪ್ರಿಯ ಕಲ್ಯಾಣಮಂಟಪ ಬಳಿಯ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಮೆರವಣಿಗೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದವರು ಪ್ರತ್ಯೇಕ ಹಾಲು ಒಕ್ಕೂಟ, ಮೆಗಾಡೇರಿಗಾಗಿ ಘೋಷಣೆ ಕೂಗಿದರು. ಕೊನೆಯಲ್ಲಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಿಕೊಡಲಾಯಿತು.
ವರದಿ : ಜಿಲಾನಸಾಬ್ ಬಡಿಗೇರ್.
