“ವಚನಸಾಹಿತ್ಯವೆಂಬ ದೋಣಿಗೆ ಬಸವಣ್ಣನೆ ಅಂಬಿಗ, ನಾವೆಲ್ಲಾ ಪ್ರಯಾಣಿಕರಾಗೋಣ, ಸನ್ಮಾರ್ಗದ ದಾರಿಯಲ್ಲಿ ವಿಶ್ವಮಾನವ ದಡ ಸೇರೋಣ”.
ಶ್ರೀ ಬಸವೇಶ್ವರ (ಬಸವಣ್ಣ) ಅವರ ವಚನಗಳ ಇತಿಹಾಸವು 12ನೇ ಶತಮಾನದ ಕರ್ನಾಟಕದ ಶರಣ ಚಳುವಳಿಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಈ ವಚನಗಳು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಪಡೆದಿವೆ ಮತ್ತು ಆಧ್ಯಾತ್ಮಿಕ, ಸಾಮಾಜಿಕ, ಮತ್ತು ದಾರ್ಶನಿಕ ಚಿಂತನೆಯನ್ನು ಪ್ರತಿಬಿಂಬಿಸುತ್ತವೆ. ಇವುಗಳ ಇತಿಹಾಸವನ್ನು ಸಂಕ್ಷಿಪ್ತವಾಗಿ ಕೆಳಗೆ ವಿವರಿಸಲಾಗಿದೆ:
ಹಿನ್ನೆಲೆ ಮತ್ತು ಸಂದರ್ಭ :
ಬಸವಣ್ಣನವರು ಏಪ್ರಿಲ್ – 30 – 1137 ರಲ್ಲಿ ಈಗಿನ ಕರ್ನಾಟಕದ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಜನಿಸಿದರು.
- ಬಸವಣ್ಣನವರು ಕಲಚೂರಿ ರಾಜವಂಶದ ಅರಸ ಬಿಜ್ಜಳನ ಆಸ್ಥಾನದಲ್ಲಿ ಕೋಶಾಧಿಕಾರಿಯಾಗಿ (ಕರ್ಣಿಕ) ಕಾರ್ಯ ನಿರ್ವಹಿಸುತ್ತಿದ್ದರು. ಲಿಂಗ ಅಸಮಾನತೆ, ಜಾತಿ ವ್ಯವಸ್ಥೆ, ಶೋಷಣೆ, ಮತ್ತು ಧಾರ್ಮಿಕ ಆಚರಣೆಗಳಲ್ಲಿನ ಜಿಡ್ಡುಗಟ್ಟಿದ ಸಂಪ್ರದಾಯಗಳ ವಿರುದ್ಧ ಧ್ವನಿಯೆತ್ತಿದರು.
ಬೌದ್ಧ ಧರ್ಮದವನ್ನು ಹೊರತು ಪಡಿಸಿದರೆ ಜಾತಿ ವ್ಯವಸ್ಥೆಯ ವರ್ಣಾಶ್ರಮವೇ ಹೆಮ್ಮರವಾಗಿರುವ ಭಾರತದಂತ ದೇಶದಲ್ಲಿ ಶರಣ ಚಳವಳಿ ಆರಂಭಿಸಿದ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದರು. ಸಾಮಾಜಿಕ ಸುಧಾರಣೆಗಾಗಿ “ಅನುಭವ ಮಂಟಪ” ಎಂಬ ವೇದಿಕೆಯನ್ನು ಸ್ಥಾಪಿಸಿದರು. ಇದನ್ನು ಜಗತ್ತಿನ ಮೊದಲ ಸಂಸತ್ತು ಅಥವಾ ಪಾರ್ಲಿಮೆಂಟ್ ಎಂದು ಕರೆಯಲಾಗುತ್ತದೆ. ಇದು ಎಲ್ಲ ಜಾತಿಗಳು, ಲಿಂಗಗಳು, ಮತ್ತು ವರ್ಗದವರಿಗೂ ಬಾಗಿಲು ತೆರೆದಿತ್ತು. ಅಲ್ಲಿ ವಚನ ರಚನೆ ನಡೆಯುತ್ತಿತ್ತು. ಸಮಾಜದ ಅಂಕುಡೊಂಕುಗಳ ಬಗ್ಗೆ ಚರ್ಚಿಸಿ ಸಾಮಾನ್ಯ ಜನರಿಗೂ ಅರ್ಥವಾಗುವ ವಚನಗಳಲ್ಲಿ ವೈಚಾರಿಕತೆಯನ್ನು ಹೇಳಿದರು. ಅಂದು ರಚಿತಗೊಂಡ ಸಾವಿರಾರು ವಚನಗಳು ಇಂದಿಗೂ ಸಮಯ ಸಂದರ್ಭ ಸನ್ನಿವೇಶಗಳಿಗೆ ಅನ್ವಯವಾಗುತ್ತವೆ.
ವಚನ ಸಾಹಿತ್ಯ – ವಿಶ್ವದ ಶ್ರೇಷ್ಠ ಸಾಹಿತ್ಯದ ಸಾಲಿನಲ್ಲಿ ನಿಲ್ಲಬಲ್ಲ ಎಲ್ಲಾ ಅರ್ಹತೆ, ಆ ಮಟ್ಟದ ತೂಕ, ಜ್ಞಾನದ ಆಳವನ್ನು ಹೊಂದಿರುವ ಸಾಹಿತ್ಯವಾಗಿದೆ. ವಚನಗಳು ಕನ್ನಡದಲ್ಲಿ ರಚಿತವಾದ ಸರಳ, ಗದ್ಯ ಶೈಲಿಯ ಕಾವ್ಯಗಳಾಗಿವೆ, ಇವು ಜನಸಾಮಾನ್ಯರಿಗೆ ಅರ್ಥವಾಗುವಂತೆ ರಚಿತವಾದವು. ಇವು ಸಂಸ್ಕೃತದ ಶ್ಲೋಕಗಳಂತಹ ಸಂಕೀರ್ಣತೆಯಿಂದ ಮುಕ್ತವಾಗಿದ್ದವು. ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು. ೧೧ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ ೧೨ನೇ ಶತಮಾನದ ಕಡೆಯವರೆಗೂ ಬಸವಣ್ಣನವರ-ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶೇಷ ಕಾವ್ಯ ಪ್ರಕಾರ. ವಚನ ಸಾಹಿತ್ಯವು ತನ್ನ ಕಾಲದಲ್ಲಿನ ಜನರ ಮನೋಭಿವ್ಯಕ್ತಿಗೆ ಸಂಗಾತಿಯಾಯಿತು. ವಚನ ಎಂದರೆ ‘ಪ್ರಮಾಣ’, ‘ಕೊಟ್ಟ ಮಾತು’ ಎಂದರ್ಥ.
ಬಸವಣ್ಣನವರ ವಚನಗಳು ಆಧ್ಯಾತ್ಮಿಕತೆ, ಸಮಾನತೆ, ಕಾಯಕದ ಘನತೆ, ದಯೆ, ಧರ್ಮ ಮತ್ತು ಲಿಂಗ-ಜಾತಿ-ವರ್ಗ ತಾರತಮ್ಯದ ವಿರುದ್ಧದ ಚಿಂತನೆಯನ್ನು ಒಳಗೊಂಡಿವೆ. ಒಂದು ಮಾತಿನಲ್ಲಿ ಹೇಳಬೇಕೆಂದರೆ ವಚನಗಳು ಅತ್ಯಂತ ಮಹೋನ್ನತ ಚಿಂತನೆಗಳಾಗಿದ್ದವು. ಅವು ಇಂದಿಗೂ ಈ ಕಾಲಕ್ಕೂ ಮಹೋನ್ನತವೇ! ವಚನಗಳ ಮುಖ್ಯ ಉದ್ದೇಶವೇ ಜನರನ್ನು ಜಾಗೃತಗೊಳಿಸುವುದು, ಧಾರ್ಮಿಕ ಕೃತಕತೆಯನ್ನು ತಿರಸ್ಕರಿಸುವುದು, ಮತ್ತು ಆತ್ಮಸಾಕ್ಷಿಯ ಮಾರ್ಗವನ್ನು ತೋರಿಸುವುದು. ದೇವರಿಗಾಗಿ ಎಲ್ಲೆಲ್ಲೋ ಹುಡುಕುವುದಲ್ಲ ದೇವ ನಮ್ಮಲ್ಲೇ ಇದ್ದಾನೆಂದು ಸ್ಥಾವರ ಲಿಂಗವನ್ನು ಅಂಗೈಯಲ್ಲಿ ಲಿಂಗ ರೂಪಕ್ಕೆ ತಂದು ಪ್ರತಿಯೊಬ್ಬ ಮನುಷ್ಯನು ಸಮಾನ ತಾನು ಬಯಸಿದಂತೆ ದೇವರನ್ನು ಪೂಜಿಸುವಂತೆ ಸರಳಗೊಳಿಸಿದನು. ಇದು ಅಂದಿನ ಕಾಲಕ್ಕೆ ಕಂಡುಕೇಳರಿಯದ ಆಶ್ಚರ್ಯಕರ ಬದಲಾವಣೆಯಾಗಿತ್ತು. ವಚನ ರಚನಾಕಾರರು ಬಸವಣ್ಣನವರ ಜೊತೆಗೆ ಅಕ್ಕಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣ, ಸಿದ್ಧರಾಮ, ಮಾದಾರ ಚನ್ನಾಯ್ಯ, ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ವ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಮತ್ತು ಇತರ ಹಲವಾರು ಶರಣರು ಸಾವಿರಾರು ವಚನಗಳನ್ನು ರಚಿಸಿದರು.ಅವೇ ಇಂದಿನ ಲಿಂಗಾಯತ ಧರ್ಮಕ್ಕೆ ಧಾರ್ಮಿಕ ಸಾಹಿತ್ಯವಾಯ್ತು. ಅವೇ ಮಾರ್ಗದರ್ಶಕ ಕೂಡಾ.
ವಚನಗಳ ಭಾಷೆ ಸರಳ ಕನ್ನಡ, ಜನಪದ ಶೈಲಿಯ ಭಾಷೆಯನ್ನು ಬಳಸಲಾಗಿತ್ತು, ಇದು ಶಿಕ್ಷಣ ರಹಿತರಿಗೂ ತಲುಪಿತು. ಸಾಮಾನ್ಯನಿಗೂ ಅರ್ಥವಾಗಿ ಮನ ಮುಟ್ಟುತ್ತಿದ್ದವು. ಹಾಗಾಗಿಯೇ ಅನೇಕರು ಲಿಂಗವನ್ನು ಧರಿಸಿ ಲಿಂಗವಂತರು, ಲಿಂಗಾಯತರು ಆಗಿ ಬದಲಾದರು.
ವಚನಕಾರರೇ ಕವಿಗಳು, ಸಮಾಜದ ಸುಧಾರಕರು, ವೈಚಾರಿಕತೆಯ ವೀರರು ಆಗಿದ್ದು ಪ್ರತಿಯೊಬ್ಬ ವಚನಕಾರ ತನ್ನದೇ ಆದ ಅಂಕಿತನಾಮ ಅಥವಾ ಕಾವ್ಯನಾಮವನ್ನು ಹೊಂದಿದ್ದರು. ವಚನದ ಕೊನೆಯ ಸಾಲಿನಲ್ಲಿ ಅಂಕಿತನಾಮವನ್ನು ಬಳಸುತ್ತಿದ್ದರು ಬಸವಣ್ಣನವರ ಅಂಕಿತ “ಕೂಡಲಸಂಗಮದೇವ” (ಕೂಡಲಸಂಗಮದ ಶಿವನ ಹೆಸರು). ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನ ಎನ್ನುವ ಅಂಕಿತನಾಮ ಬಳಸುತ್ತಿದ್ದರು. ವಚನಕರಾರ ವೈಚಾರಿಕತೆ ಇಂದಿನ ಆಧುನಿಕ ಜಗತ್ತಿನ ಮನುಷ್ಯರಾದ ನಮ್ಮಲ್ಲೂ ಇಲ್ಲ ಎಂದರೇ ಅತಿಶಯೋಕ್ತಿ ಆಗಲಾರದು.
ಈ ವಚನ ಸಂಗ್ರಹದಲ್ಲಿ 259 ವಚನಕಾರರ, 20,930ಕ್ಕೂ ಹೆಚ್ಚು ವಚನಗಳಿವೆ. ಬಸವಣ್ಣನವರ ಜೊತೆ 770 ಅಮರಗಣಂಗಳು, 1,96,000 ಶರಣರಿದ್ದರೆಂದು ಹೇಳಲಾಗುತ್ತದೆ. ಒಂದು ಅಂದಾಜಿನ ಪ್ರಕಾರ ಸುಮಾರು 25,000ಕ್ಕೂ ಅಧಿಕ ವಚನಗಳು ರಚನೆಯಾಗಿವೆ ಎಂಬ ಮಾಹಿತಿ ಇದೆ. ಬಸವಣ್ಣನವರು ಸುಮಾರು 800 ರಿಂದ 1000 ವಚನಗಳನ್ನು, ಅಕ್ಕಮಹಾದೇವಿ 1500 ವಚನಗಳನ್ನು ರಚಿಸಿದ್ದಾರೆಂದು ಇತಿಹಾಸಕಾರರು, ತಜ್ಞರು ಹೇಳಿದ್ದಾರೆ.
ವಚನಗಳ ಸಂಗ್ರಹಣೆ ಮತ್ತು ಪ್ರಕಾಶನ – ವಚನಗಳನ್ನು ಆರಂಭದಲ್ಲಿ ಮೌಖಿಕವಾಗಿ ಹಾಡಲಾಗುತ್ತಿತ್ತು. ನಂತರ ತಾಳೆಗರಿಗಳಲ್ಲಿ ಲಿಖಿತವಾಗಿ ಸಂರಕ್ಷಿಸಲಾಯಿತು.15ನೇ ಶತಮಾನದಲ್ಲಿ ಹರಿಹರ, ರಾಘವಾಂಕ, ಚಾಮರಸ ಮುಂತಾದವರಿಂದ ಕೆಲವು ವಚನಗಳು ಸಂಗ್ರಹವಾದವು. ಆದರೆ ಕಾಲಾಂತರದಲ್ಲಿ ಕೆಲವು ಕಳೆದುಹೋಗಿರಬಹುದು. ನಂತರ 19 – 20ನೇ ಶತಮಾನದಲ್ಲಿ ವಿದ್ವಾಂಸರು ಮತ್ತು ಚಿಂತಕರಾದ ಎಫ್. ಕಿಟ್ಟೆಲ್, ಶಿವಶರಣ ಸಂಗಣ್ಣ, ಮತ್ತು ಇತರರು ವಚನಗಳನ್ನು ಸಂಗ್ರಹಿಸಿ, ಮುದ್ರಿಸಿದರು. ಅಲ್ಲದೆ ಎಸ್.ಎಸ್. ಭೂಸನೂರಮಠ, ಫ. ಗು. ಹಳಕಟ್ಟಿ (ವಚನಗಳ ಪಿತಾಮಹ ), ಎಂ.ಎಂ. ಕಲಬುರ್ಗಿ ಮುಂತಾದ ವಿದ್ವಾಂಸರು ಸಾವಿರಾರು ವಚನಗಳನ್ನು ಸಂಗ್ರಹಿಸಿದ್ದರು. ಕರ್ನಾಟಕ ಸರ್ಕಾರ, ವಿಶ್ವವಿದ್ಯಾಲಯಗಳು, ಮತ್ತು ಲಿಂಗಾಯತ ಸಂಸ್ಥೆಗಳು ವಚನ ಸಂಗ್ರಹಗಳನ್ನು ಪ್ರಕಾಶಿಸಿವೆ. “ವಚನ ಸಂಪುಟ” (ಕನ್ನಡ ಸಾಹಿತ್ಯ ಪರಿಷತ್) ಮತ್ತು “ಸಮಗ್ರ ವಚನ ಸಂಗ್ರಹ”ದಂತಹ ಸಂಕಲನಗಳು ಲಭ್ಯವಿವೆ. ಬಸವ ಸಮಿತಿಯಂತಹ ಸಂಸ್ಥೆಗಳು ಕೂಡ ವಚನ ಸಂಗ್ರಹಕ್ಕೆ ಅಪಾರ ಕೊಡುಗೆ ನೀಡಿವೆ. ವಚನಗಳ ಪಿತಾಮಹ ಹಳಕಟ್ಟಿಯವರು ಕನ್ನಡದಲ್ಲಿರುವ ವಚನಗಳನ್ನು ಇಂಗ್ಲಿಷ್ ಗೆ ಅನುವಾದಿಸಿ ‘ಇಂಡಿಯನ್ ಆಂಟಿಕ್ವರಿ’ಯಲ್ಲಿ ಪ್ರಕಟಿಸಿ ಜಗತ್ತಿಗೆ ಪರಿಚಯಿಸಿದರು.
ವಚನಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವ – ವಚನಗಳು ಜಾತಿ ವ್ಯವಸ್ಥೆ, ಮಹಿಳೆಯರ ಶೋಷಣೆ, ಮತ್ತು ಧಾರ್ಮಿಕ ಅಂಧಶ್ರದ್ಧೆಗಳ ವಿರುದ್ಧ ಧ್ವನಿಯಾಗಿದ್ದವು. ಇವು ಲಿಂಗಾಯತ ಧರ್ಮದ ತತ್ವಗಳಾದ ಸಮಾನತೆ ಮತ್ತು ಕಾಯಕದ ಘನತೆಯನ್ನು ಬಲಪಡಿಸಿದವು. ವಚನ ಸಾಹಿತ್ಯವು ಕನ್ನಡದ ಮೊದಲ ‘ಸಾಮಾಜಿಕ-ಆಧ್ಯಾತ್ಮಿಕ ಕಾವ್ಯ ಚಳವಳಿ’ಯಾಗಿ ಗುರುತಿಸಲ್ಪಟ್ಟಿತು. ಇದು ಆಧುನಿಕ ಕನ್ನಡ ಕಾವ್ಯಕ್ಕೂ ಪ್ರೇರಣೆಯಾಯಿತು. ವಚನಗಳು ವಿಶ್ವಮಾನ್ಯತೆ ಪಡೆದಿವೆ. ಇಂಗ್ಲಿಷ್, ಹಿಂದಿ, ಮತ್ತು ಇತರ ಭಾಷೆಗಳಿಗೆ ಅನುವಾದವಾದ ಬಳಿಕ ವಚನಗಳು ಜಾಗತಿಕವಾಗಿ ತತ್ವಶಾಸ್ತ್ರಜ್ಞರು ಮತ್ತು ಸಾಹಿತಿಗಳ ಗಮನ ಸೆಳೆದಿವೆ. ಕೇವಲ ಒಬ್ಬ ವ್ಯಕ್ತಿಯನ್ನಲ್ಲದೆ ಒಂದಿಡೀ ಸಮಾಜ, ರಾಜ್ಯ, ದೇಶವನ್ನೇ ಬದಲಿಸುವ ಪ್ರಭಾವ ಮತ್ತು ಶಕ್ತಿ ವಚನ ಸಾಹಿತ್ಯಕ್ಕಿದೆ. ವಚನಗಳು ಕನ್ನಡ ಸಾಹಿತ್ಯದ ಪಠ್ಯಕ್ರಮದ ಭಾಗವಾಗಿವೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ವಿಷಯವೂ ಆಗಿದೆ. ಬರಿ ಲಿಂಗಾಯತರಿಗೆ ವಚನಗಳು ಸೀಮಿತವಾಗದೆ ಪ್ರತಿ ಮನುಷ್ಯನಿಗೂ ಸೇರಬೇಕು. ಮುಖ್ಯವಾಗಿ ಇಂದು ಕೆಟ್ಟ ಕೋಮು ಮತಾಂಧ ಶಕ್ತಿಗಳ ಕೈಯಲ್ಲಿ ನಲುಗುತ್ತಿರುವ ಭಾರತಕ್ಕೆ ಅತ್ಯವಸರ. ಧರ್ಮ ದ್ವೇಷ ಜಾತೀಯತೆಗೆ ಜ್ಞಾನೌಷಧಿಯೇ ವಚನ ಸಾಹಿತ್ಯ. ಪ್ರತಿಯೊರ್ವನು ವಚನಗಳ ಮೊರೆ ಹೋದರೆ ಅಂಧಕಾರ ಸರಿದು ಜ್ಞಾನದ ಬೆಳಕು ಸಿಗಬಲ್ಲದು. ಆಗ ಮಾತ್ರ ಸಮಾಸಮಾಜ ಆರೋಗ್ಯಕರ ಸಮಾಜ ನಿರ್ಮಾಣವಾಗಬಲ್ಲದು. ಇದೆ ರಾಷ್ಟ್ರನಿರ್ಮಾಣ. ಇದಕ್ಕಿಂತ ದೇಶಪ್ರೇಮ ಇರಲಾರದು ಎಂದು ನಾನು ಭಾವಿಸುತ್ತೇನೆ.
ಅಂತಿಮವಾಗಿ ಶರಣರ ವಚನಗಳು 12ನೇ ಶತಮಾನದ ಶರಣ ಚಳವಳಿಯಿಂದ ಉಗಮವಾಗಿ, ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಅಮರ ಸ್ಥಾನವನ್ನು ಪಡೆದಿವೆ. ಇವು ಸರಳ ಭಾಷೆಯಲ್ಲಿ ಆಳವಾದ ತಾತ್ವಿಕ ಮತ್ತು ಸಾಮಾಜಿಕ ಸಂದೇಶಗಳನ್ನು ಒಡ್ಡುತ್ತವೆ. ಇಂದಿಗೂ ಇವು ಜನರಿಗೆ ಸಮಾನತೆ, ದಯೆ, ಮತ್ತು ಆಧ್ಯಾತ್ಮಿಕತೆಯ ಮಾರ್ಗವನ್ನು ತೋರಿಸುತ್ತಿವೆ. ಇವನಾರವ ಇವನಾರವ ಎಂದೆನಿಸದೇ ಎಲ್ಲರು ನಮ್ಮವರೇ ಎಂದೆನಿಸಯ್ಯ ಎಂಬುದೇ ವಚನಗಳ ಉದಾತ್ತ ಸಂದೇಶ.
- ಮೆಹಬೂಬ್ ಆರ್. ಕೆ. ಗಾಂಧಿನಗರ
