ಡಿಸಿ ಗಮನ ಹರಿಸಿ, ಬಾಲಕನ ಮೃತ ದೇಹ ಪತ್ತೆಗೆ ಹೆಚ್ಚಿನ ನಿಗಾವಹಿಸುವಂತೆ ಆಗ್ರಹ
ಬಳ್ಳಾರಿ/ ಕಂಪ್ಲಿ : ಸ್ಥಳೀಯ ಕಂಪ್ಲಿ-ಕೋಟೆ ಪ್ರದೇಶದ ಚಿಕ್ಕಜಂತಕಲ್ ಭಾಗದ ನದಿಯಲ್ಲಿ ಇತ್ತೀಚೆಗೆ ಇಬ್ಬರು ಬಾಲಕರು ಮುಳುಗಿದ್ದು, ಓರ್ವ ಬಾಲಕನ ಮೃತ ದೇಹ ಪತ್ತೆಯಾಗಿದ್ದು, ಇನ್ನೊಬ್ಬ ಬಾಲಕನ ಮೃತ ದೇಹ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಮೇ. 19ರಂದು ಗಂಗಾವತಿ ನಗರದ ನಿವಾಸಿ ಪವನ್(14), ಹಾಗೂ ಬಹದ್ದೂರ್ ಬಂಡಿ ಗ್ರಾಮದ ಗೌತಮ್(15) ಎಂಬ ಬಾಲಕರು ತುಂಗಭದ್ರ ನದಿಯಲ್ಲಿ ಈಜಲು ಹೋಗಿ, ನೀರಿನಿಂದ ಹೊರಬಾರದೇ ಮೃತಪಟ್ಟಿದ್ದರು. ಅಂದಿನ ದಿನದಂದು ಪವನ್ನ ಮೃತ ದೇಹ ಪತ್ತೆಯಾಗಿತ್ತು. ಆದರೆ, ಇನ್ನೊಬ್ಬ ಗೌತಮ್ನ ಮೃತ ದೇಹ ನೀರಿನಲ್ಲೇ ಮುಳಿಗಿದ್ದು, ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಮೂರು ದಿನ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇದರಿಂದ ಪೋಷಕರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕೆಂಡ ಕಾರುವಂತೆ ಮಾಡಿದೆ.
ಕಳೆದ ಮೂರು ದಿನದಿಂದ ಗಂಗಾವತಿ ಅಗ್ನಿ ಶಾಮಕ ದಳದವರು ಬೋಟ್ ಮೂಲಕ ಮತ್ತು ಬುಧವಾರದಂದು ಬಂದ ಜಿಂದಲ್ ಕಂಪನಿಯ ಅಗ್ನಿ ಶಾಮಕದಳದವರು ನದಿಯಲ್ಲಿ ಕಾರ್ಯಚರಣೆ ನಡೆಸಿದರೂ ಪತ್ತೆಯಾಗಿಲ್ಲ. ಬಾಲಕನ ದೇಹ ಪತ್ತೆ ಹಚ್ಚುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವಹಿಸಿದ್ದಾರೆ. ಶ್ರೀಮಂತರ ಮೃತ ದೇಹಗಳಾದರೆ, ಎಲ್ಲಿಂದಲೋ ಈಜುಪಟುಗಾರರನ್ನು ಹಾಗೂ ನುರಿತರನ್ನು ಕರೆಸಿ, ಪತ್ತೆ ಹಚ್ಚುತ್ತಾರೆ. ಆದರೆ, ಬಡವರ ಮಕ್ಕಳು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಬೇಡವಾಗಿದೆ. ಪೋಷಕರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರೂ, ಜನಪ್ರತಿನಿಧಿಗಳು, ಅಧಿಕಾರಿಗಳು ಎಸಿಯಲ್ಲಿ ಕುಳಿತುಕೊಂಡಿದ್ದಾರೆ. ಇನ್ನೇಷ್ಟು ದಿನ ಬೇಕು ಶವ ತೆಗೆಯುವದಕ್ಕೆ ಎಂದು ಆಕ್ರೋಶ ಹೊರ ಹಾಕಿದರು.
ನದಿಗೆ ಹಾರಲು ತಂದೆ ಯತ್ನ: ಮಗನೇ ತಂದೆ ತಾಯಿಗೆ ಜೀವ. ಅಂತದ್ದರಲ್ಲಿ ಇರುವ ಒಬ್ಬ ಮಗನನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಮಗನ ಕನವರಿಕೆ ಮಾಡುವಂತಾಗಿದೆ. ಮನೆಗೆ ಬೆಳಕಾಗಬೇಕಾದ ಮಗ ನದಿ ನೀರಿನಲ್ಲಿ ಶವವಾಗಿದ್ದು, ಮಗನ ಮುಖ ನೋಡದಂತಹ ಪರಿಸ್ಥಿತಿಗೆ ಪೋಷಕರು ಸಿಲುಕಿದ್ದಾರೆ. ಮಗ ಇವತ್ತು ಇಲ್ಲ ನಾಳೆ ಸಿಗಬಹುದು ಎನ್ನುತ್ತಲೇ, ಮೂರು ದಿನ ಕಳೆದಿದ್ದು, ಮಗನ ನೆನಪಿನಲ್ಲಿ ಜೀವನ ನಡೆಸುತ್ತಿರುವ ತಂದೆಯು ನದಿಗೆ ಹಾರಲು ಯತ್ನಿಸಿದಾಗ ಅಲ್ಲಿದ್ದ ಸಂಬಂಧಿಕರು ತಡೆದಿದ್ದಾರೆ.
ಎರಡು ಬೋಟ್ ಮತ್ತು ಇಬ್ಬರು ಈಜುಪಟುಗಳ ಮೂಲಕ ಶೋಧ ಕಾರ್ಯ ನಡೆಸಿದರೂ ಶವ ಸಿಕ್ಕಿಲ್ಲ. ಇವರು ಬೇಕಾಬಿಟ್ಟಿಯಲ್ಲಿ ನೀರಿನಲ್ಲಿ ಇಳಿದು ಹೊರ ಬರುತ್ತಿದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಬಾಲಕನ ಮೃತ ದೇಹ ಪತ್ತೆಗೆ ಹೆಚ್ಚಿನ ಶೋಧ ಕಾರ್ಯ ನಡೆಸಬೇಕೆಂಬುದು ಜನರ ಹಕ್ಕೊತ್ತಾಯವಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ
