ಬಾಗಲಕೋಟೆ- ಎಲ್ಲಾ ಸಾಹಿತ್ಯಕ್ಕೂ ಮೂಲ ಆಸರೆಯಾಗಿ ಜಾತಿ, ಮಥ, ಪಂಥಗಳನ್ನು ಮೀರಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಸಾಹಿತ್ಯ ಯಾವುದಾರೂ ಇದ್ದರೆ ಅದುವೇ ಜಾನಪದ ಸಾಹಿತ್ಯ. ಅದು ತನ್ನದೇಯಾದ ಬಹು ದೊಡ್ಡದಾದ ಕೊಡುಗೆಯನ್ನು ನಾಡಿಗೆ ನೀಡುತ್ತಿದೆ ಎಂದು ಮಾಜಿ ಸಚಿವರಾದ ಎಸ್.ಆರ್.ಪಾಟೀಲ ಹೇಳಿದರು.
ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದ ಬಸವೇಶ್ವರ ಬಯಲು ರಂಗ ಮಂದಿರದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ಬೀಳಗಿ ಹಾಗೂ ಅನಗವಾಡಿ ಗ್ರಾಮ ವ್ಯಾಪ್ತಿಯ ಬರುವ ಎಲ್ಲ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬಾಗಲಕೋಟೆ ಜಿಲ್ಲಾ ದ್ವಿತೀಯ ಕನ್ನಡ ಜಾನಪದ ಸಮ್ಮೇಳನ-೨೦೨೫ ಕಾರ್ಯಕ್ರಮವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ ಈ ನೆಲದ ಮೂಲ ಸಂಸ್ಕೃತಿ, ಮಾನವ ಜನಾಂಗದ ಹುಟ್ಟಿನೊಂದಿಗೆ ಹುಟ್ಟಿ ಬಂದ ಅಪರಿಮಿತ ಜ್ಞಾನವೇ ಜಾನಪದ. ತಲೆತಲಾಂತರದಿಂದಲೂ ಮೌಖಿಕ ಪರಂಪರೆಯಾಗಿ ಉಳಿದು ಬಂದಿರುವ ಶ್ರೇಷ್ಠ ಜ್ಞಾನವೇ ಜಾನಪದವಾಗಿದೆ. ಜಾನಪದ ಉಳಿಸಿ ಬೆಳೆಸುವಲ್ಲಿ ಯುವಕರು ಮುಂದಾಗಬೇಕಿದೆ, ಯುವಕರನ್ನು ಜಾನಪದದತ್ತ ಕರೆತರುವ ಕೆಲಸವೂ ನಡೆಯಬೇಕಿದೆ ಎಂದರು.
ಸಾಹಿತ್ಯ ಕ್ಷೇತ್ರದಲ್ಲಿನ ಕವಿಗಳು, ಬರಹಗಾರರು ಮನಸ್ಸು ಮಾಡಿದರೆ ಹಲವಾರು ಸಮಸ್ಯೆಗಳಿಗೆ ಉತ್ತರ ಸಿಗಲಿದೆ, ಉತ್ತರ ಕರ್ನಾಟಕ ಅಭಿವೃದ್ದಿಗೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ರಾಜ್ಯದ ಆದಾಯ ಹೆಚ್ಚಿಸುವಲ್ಲಿ ಸಂತ್ರಸ್ಥರ ತ್ಯಾಗ ಮತ್ತು ಕೊಡುಗೆ ಅಪಾರವಾಗಿದೆ. ಉತ್ತರ ಕರ್ನಾಟಕ ಭಾಗದ ಜನರಿಗೆ ಎಲ್ಲಾ ಸರ್ಕಾರಗಳು ಮಲತಾಯಿ ಧೋರಣೆ ಮಾಡುತ್ತಿದ್ದು ಸರ್ಕಾರಕ್ಕೆ ಎಚ್ಚರಿಕೆ ಗಂಟೆ ನೀಡುವ ನಿಟ್ಟಿನಲ್ಲಿ ಜಾನಪದ ಪರಿಷತ್ ಹಾಗೂ ಸಾಹಿತ್ಯ ಪರಿಷತ್ ಇನ್ನೂ ಅನೇಕ ಸಂಘಟನೆಗಳು ಸಂತ್ರಸ್ಥ ರೈತಾಪಿ ಜನರ ಬದುಕಿಗೆ ನೀರಾವರಿ ಸೌಲಭ್ಯಕ್ಕಾಗಿ ಹೋರಾಟ ಮಾಡುವುದಲ್ಲದೆ ಹರಿತವಾದ ಸಾಹಿತ್ಯಲೇಖನದಿಂದ ಸರ್ಕಾರ ಎಚ್ಚರಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಜಾನಪದ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯ ಉಳಿವಿಗೆ ಸರ್ಕಾರವು ಮುಂದಾಗುತ್ತಿಲ್ಲ. ಕಲಾವಿದರಿಗೆ ಸರಿಯಾದ ರೀತಿಯಲ್ಲಿ ಗೌರವ ಸಿಗುತ್ತಿಲ್ಲ. ವಯೋಮಿತಿ ೫೦ ವರ್ಷ ಮಾಡಿದರೆ ಮಾತ್ರ ಹಿರಿಯ ಕಲಾವಿದರಿಗೆ ಅನುಕೂಲವಾಗಲಿದೆ. ಬೇರೆ ರಾಜ್ಯದಲ್ಲಿ ಕಲಾವಿದರಿಗೆ ೧೦ ಸಾವಿರ ಪಿಂಚಣಿ ದೊರೆಯುತ್ತಿದೆ. ಇಲ್ಲಿ ಕೇವಲ ೨ ಸಾವಿರ ಕೊಡುತ್ತಾರೆ. ಅದರ ಬದಲಾಗಿ ಕನಿಷ್ಟವಾಗಿ ೫ ಸಾವಿರ ಪಿಂಚಣೆ ಮಾಡಬೇಕು. ಕಲಾವಿದರು ಮರಣ ಹೊಂದಿದ್ದಲ್ಲಿ ಅವರಿಗೆ ಗ್ರಾಮ ಪಂಚಾಯತ ಮಟ್ಟದಲ್ಲಿ ಧನ ಸಹಾಯ ಮಾಡುವ ಕೆಲಸವಾಗಬೇಕು. ಇದು ಯಾವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೂಡಾ ನಡೆಯುತ್ತಿಲ್ಲ. ಸರ್ಕಾರವು ಕಲಾವಿದರ ಸಮಸ್ಯೆಗಳಿಗೆ ಸ್ವಂದಿಸುವ ಕೆಲಸ ಮಾಡಬೇಕಾಗಿದೆ. ಜಿಲ್ಲಾ ಮಟ್ಟದ ದ್ವಿತೀಯ ಸಮ್ಮೇಳನವು ಯಶಸ್ವಿಯಾಗಿ ನೆರವೇರಿದ್ದು ಇಲ್ಲಿಯ ಜನರ ಪ್ರೀತಿ ವಿಶ್ವಾಸ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಸಮ್ಮೇಳನ ಸರ್ವಾಧ್ಯಕ್ಷರು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಜಾನಪದ ಆಶುಕವಿ ಸಿದ್ದಪ್ಪ ಸಾಬಣ್ಣ ಬಿದರಿ ಮಾತನಾಡಿ, ಜಾನಪದ ಉಳಿವಿಗೆ ಪ್ರತಿಯೊಂದು ಮನೆ ಹಾಗೂ ಮನದಲ್ಲಿ ಸಾಹಿತ್ಯದ ಅರಿವು ಮೂಡಬೇಕಾಗಿದೆ. ಹಿಂದೆ ಜಾನಪದಗಳಿಗೆ ಹೆಚ್ಚಿನ ಮಹತ್ವ ಇತ್ತು. ಆದರೆ ಇವತ್ತಿನ ದಿನಮಾನದಲ್ಲಿ ಬೇರೆ ಬೇರೆ ಆಚಾರ-ವಿಚಾರಗಳಿಗೆ ಯುವ ಜನತೆ ಮಾರುಹೋಗಿ ನಶಿಸಿ ಹೋಗುವ ಸ್ಥಿತಿಯಲ್ಲಿ ಜಾನಪದವಿದ್ದು ಅವುಗಳನ್ನು ಉಳಿಸಿ ಮತ್ತು ಬೆಳಸುವಲ್ಲಿ ಜಾನಪದ ಪರಿಷತ್ ತಾಯಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ರೈತರ ಮಕ್ಕಳಿಗೆ ಹೆಣ್ಣು ಕೊಡುವ ಕೆಲಸ ಹೆಣ್ಣು ಹೆತ್ತ ತಂದೆ-ತಾಯಿಗಳು ಮಾಡಬೇಕು. ನೌಕರಿಗೆ ಇದ್ದವರಿಗೆ ಹೆಣ್ಣು ಕೊಡುವುದಾಗಿ ಹೇಳುವುದು ಸರಿಯಲ್ಲ. ಎಲ್ಲರಿಗೂ ನೌಕರಿ ಸಿಗುವುದು ಕಷ್ಟದ ಕೆಲಸ ನಮ್ಮೆಲ್ಲರಿಗೆ ಅನ್ನ ಹಾಕುವ ರೈತರ ಮಕ್ಕಳು ದೇಶದ ಸೈನಿಕರಂತೆ ಎಂದು ತಿಳಿಸಿ ಕೆಲ ಜಾನಪದ ಗಿಗಿಪದ,ಡೊಳ್ಳಿನ ಪದ,ಜಾನಪದ ಗೀತೆ ಹಾಡಿ ರಂಜಿಸಿದರು.
ಉದ್ಯಮಿ ಲಕ್ಷ್ಮಣ ಆರ್.ನಿರಾಣಿ ಮಾತನಾಡಿದರು, ಕನ್ನಡ ಜಾನಪದ ಪರಿಷತ್ತ ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಮ್ಮೇಳನಾಧ್ಯಕ್ಷರಾದ ಜಾನಪದ ಆಶುಕವಿ ಸಿದ್ದಪ್ಪ ಬಿದರಿಯವರ ಭವ್ಯ ಮೆರವಣೆಗೆಯು ಗ್ರಾಮದ ಪ್ರಮುಖ ಬೀದಿಯಲ್ಲಿ ಆರತಿ, ಕುಂಭಮೇಳ ಹಾಗೂ ವಿವಿಧ ಕಲಾ ತಂಡಗಳಿಂದ ಕಲಾವಿದರಿಂದ ನಡೆಯಿತು.
ಈ ಸಂದರ್ಭದಲ್ಲಿ ಅನಗವಾಡಿಯ ಪೂರ್ಣಾನಂದಾಶ್ರಮದ ಮಾತ್ರೋಶ್ರೀ ಅನಸೂಯಾ ತಾಯಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಕೆ.ಎಸ್.ಕೌಜಲಗಿ, ಸುರೇಶ ವಸ್ತ್ರದ, ಜಿಲ್ಲಾ ಘಟಕ ಕಾರ್ಯದರ್ಶಿ ಆರ್.ಬಿ.ನಬಿವಾಲೆ, ಅನಗವಾಡಿ ಪಿಕೆಪಿಎಸ್ ಅಧ್ಯಕ್ಷ ಮಲ್ಲಯ್ಯ ಕಂಬಿ, ಡಾ, ರಮೇಶ ಅಕ್ಕಿಮರಡಿ, ನ್ಯಾಯವಾದಿ ಅಶೋಕ ಬಿ ನಾಯಕ, ಗ್ರಾ. ಪಂ. ಅಧ್ಯಕ್ಷೆ ಹುಚ್ಚವ್ವ ಸಿ.ಮಾದರ, ಮಲ್ಲಪ್ಪ ಮೇಟಿ, ತಾಂಬೋಳಿ, ಶೇಖರ ಗೊಳಸಂಗಿ, ಶಿವಾನಂದ ಹಿರೇಮಠ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ
