ಬಳ್ಳಾರಿ / ಕಂಪ್ಲಿ : ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಭಾರತೀಯ ಸೈನ್ಯದ ಪರಾಕ್ರಮ ಬೆಂಬಲಿಸಿ, ಸೈನಿಕರಿಗೆ ಕೃತಜ್ಞತೆ ತಿಳಿಸುವ ವಿಜಯ ತಿರಂಗಾ ಯಾತ್ರೆಯನ್ನು ಮಳೆಯಲ್ಲೂ ಯಶಸ್ವಿಯಾಗಿ ನಡೆಸಲಾಯಿತು. ಕಂಪ್ಲಿಯ ನಾಗರಿಕರ ವೇದಿಕೆ ಈ ಯಾತ್ರೆ ಆಯೋಜಿಸಿತ್ತು.
ಉದ್ಭವ ಗಣೇಶ ದೇವಸ್ಥಾನದಿಂದ ನಡವಲ ಮಸೀದಿಯ ಮೂಲಕ ಮುಖ್ಯರಸ್ತೆ ಮುಖಾಂತರ ಅಂಬೇಡ್ಕರ್ ವೃತ್ತದವರೆಗೂ ವಿಜಯ ತಿರಂಗಾ ಯಾತ್ರೆ ನಡೆಸಲಾಯಿತು.
ಮಳೆಯಲ್ಲೂ ತಿರಂಗಾ ಯಾತ್ರೆ ಯಶಸ್ವಿ : ಉದ್ಭವ ಗಣೇಶ ದೇವಸ್ಥಾನದಿಂದ ಪ್ರಾರಂಭವಾದ ತಿರಂಗಾ ಯಾತ್ರೆಯಲ್ಲಿ ಸುಮಾರು 700 ಮೀಟರ್ ಉದ್ದದ ಭಾರತದ ರಾಷ್ಟ್ರಧ್ವಜವನ್ನಿಟ್ಟುಕೊಂಡು ಸಾಗಲಾಯಿತು. ಯಾತ್ರೆ ಪ್ರಾರಂಭವಾಗುತ್ತಿದ್ದಂತಯೇ ವರುಣನ ಆಗಮನವಾಯಿತು. ಮಳೆ ಬಂದರೂ ಸಹ ಯಾತ್ರೆಯನ್ನು ನಿಲ್ಲಿಸದೇ ರಾಷ್ಟ್ರಧ್ವಜ ಹಿಡಿದುಕೊಂಡು ವಿದ್ಯಾರ್ಥಿಗಳು, ಕಂಪ್ಲಿ ನಾಗರಿಕರು ಸಾಗಿದ್ದು ವಿಶೇಷವಾಗಿತ್ತು. ಮಳೆಯಲ್ಲೂ ಸಹ ಸುಮಾರು ನೂರಾರು ಜನರು ರಾಷ್ಟ್ರಧ್ವಜ ಹಿಡಿದರು. ಯಾತ್ರೆಯ ಮೂಲಕ ಪ್ರತಿಯೊಬ್ಬ ಜನರಲ್ಲೂ ದೇಶ ಭಕ್ತಿ ಜಾಗೃತಗೊಳಿಸುವ ಕೆಲಸ ಮಾಡಲಾಯಿತು. ಯಾತ್ರೆಯಲ್ಲಿ ರಾಷ್ಟ್ರಭಕ್ತರು, ದೇಶಪ್ರೇಮಿಗಳು ಸೇರಿದಂತೆ ಹಲವಾರು ಭಾಗಿಯಾಗಿದ್ದರು.
ನಂತರ ಅಂಬೇಡ್ಕರ್ ವೃತ್ತದಲ್ಲಿ ಮಾತನಾಡಿದ ಬಳ್ಳಾರಿ ಜಿಲ್ಲಾ ಭಾಜಪ ಅಧ್ಯಕ್ಷ ಅನಿಲ್ ನಾಯ್ಡು ಮಳೆಯಲ್ಲೂ ನಮ್ಮ ತಿರಂಗಾಯಾತ್ರೆ ನಡೆಸಿದ್ದು ವಿಶೇಷವಾಗಿತ್ತು. ಭಾರತ ಮಾತೆಯ ಸಿಂಧೂರವನ್ನು ಮುಟ್ಟಲು ಬಂದ್ರೆ ಪಾಕ್ ಉಳಿಯುವುದಿಲ್ಲ ಎಂದು ಭಾರತದ ಸೈನಿಕರು ತೋರಿಸಿಕೊಟ್ಟಿದ್ದಾರೆ, ಪೆಹಲ್ಗಾಮ್ನಲ್ಲಿ ಕುಂಕುಮ ಕಳೆದು ಕೊಂಡಿರುವ ಸಹೋದರಿಯರಿಗೆ ಧೈರ್ಯ ತುಂಬುವ ಕೆಲಸ ಮಾಡಲು ತಿರಂಗಾ ಯಾತ್ರೆ ನಡೆಸಲಾಗುತ್ತಿದೆ. ಭಾರತದ ರಾಷ್ಟ್ರಧ್ವಜ ಕೆಳಗೆ ಇಳಿಯದಂತೆ ನೋಡಿಕೊಳ್ಳಬೇಕಿದೆ. ನಮ್ಮ ದೇಶದ ಸಿಂಧು ನದಿಯ ನೀರು ಕುಡಿದು ನಮಗೆ ದ್ರೋಹ ಮಾಡುವ ಕೆಲಸ ಪಾಕ್ ಮಾಡಿದೆ. ನಮ್ಮ ದೇಶದ ಅನ್ನ ತಿಂದು ನಮಗೆ ದ್ರೋಹ ಮಾಡುತ್ತಿದ್ದಾರೆ. ನಮ್ಮ ಹೊರಗಿನ ಮತ್ತು ಒಳಗಿನ ಶತ್ರುಗಳ ಜೊತೆ ಹೋರಾಟ ಮಾಡಬೇಕಿದೆ ಎಂದರು.
ನಂತರ ಕಂಪ್ಲಿ ಮಂಡಲ ಅಧ್ಯಕ್ಷ ಸಿಡಿ ಮಹಾದೇವ ಮಾತನಾಡಿ ನಮ್ಮ ದೇಶದ ಸೈನಿಕರ ಶಕ್ತಿಯನ್ನು ನೆರೆದಿದ್ದವರಿಗೆ ಪುನರ್ ಮನನ ಮಾಡಿಕೊಟ್ಟರು. ಪಾಕ್ ಅಣು ಬಾಂಬ್ ಅನ್ನು ಯಾವಾಗ ಬೇಕಾದರೂ ಹಾಕಬಹುದೆಂದು ಗೊತ್ತಿದ್ದರೂ ಭಾರತೀಯ ಸೇನೆ ದಾಳಿ ಬಂದಿದೆ. ಪುಲ್ವಾಮಾ ದಾಳಿಯಲ್ಲೂ ಸಹ ಏರ್ ಸ್ಟ್ರೈಕ್ ಮಾಡಿ ನಮ್ಮ ಸೈನಿಕರು ವಾಪಸ್ ಆಗಿದ್ದರು. ಭಾರತವನ್ನು ವಕ್ರದೃಷ್ಟಿಯಿಂದ ನೋಡುವವರಿಗೆ ನಮ್ಮ ಸೇನೆ ಹೊಡೆದು ಹಾಕುವ ಕೆಲಸ ಮಾಡುತ್ತಿದೆ. ದೇಶದ ರಕ್ಷಣೆ ಮಾಡಲು ಶಸ್ತ್ರ ತಯಾರು ಮಾಡಿದ ವಿಜ್ಞಾನಿಗಳಿಗೆ ಅಭಿನಂದನೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಡಾ. ವಿ.ಎಲ್ . ಬಾಬು, ಎಸ್. ಎಂ. ನಾಗರಾಜ, ಟಿ
ವಿ. ಸುದರ್ಶನ್ ರೆಡ್ಡಿ, ಟಿ ರಾಮಾಂಜನೇಯಲು, ಹೂಗಾರ್ ರಮೇಶ, ಮಾಜಿ ಪುರಸಭೆ ಅಧ್ಯಕ್ಷ ಪಿ. ಬ್ರಹ್ಮಯ್ಯ, ಪ್ರಮುಖರಾದ ಎಂ. ಶ್ರೀನಿವಾಸ್, ಎಲಿಗಾರ್ ವೆಂಕಟ್ ರೆಡ್ಡಿ, ಹೊನ್ನೂರ್ ಸಾಬ್, ಹರ್ಷವರ್ಧನ್, ಸಿ. ಚೆನ್ನಪ್ಪ, ಟೈಲರ್ ಜಡೇಶ ಸ್ವಾಮಿ, ಹೂಗಾರ್ ಗಣೇಶ, ಬಾಬೂಲಾಲ್ ಜೈನ್, ನವೀನ ಬಾಗ್ರೆಜ್, ಬುಜ್ಜಿ ಬಾಬು, ಜಂಗ್ ನಾಗರಾಜ, ಸೇರಿದಂತೆ ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಪ್ರಗತಿಪರ ಸಂಘಟನೆಗಳು ಭಾಗವಹಿಸಿದ್ದವು.
ವರದಿ : ಜಿಲಾನಸಾಬ್ ಬಡಿಗೇರ್
