ಶಿವಮೊಗ್ಗ : ಪರಿಶ್ರಮ ಮತ್ತು ಸತತ ಅಧ್ಯಯನದಿಂದ ವಿದ್ಯಾರ್ಥಿಯೊಬ್ಬ ಅತ್ಯುನ್ನತ ಸಾಧನೆ ಮಾಡಬಹುದು. ವಿದ್ಯೆ ಎಂಬುದು ಯಾರೂ ಕದಿಯಲಾಗದ ಅಮೂಲ್ಯ ವಸ್ತು ಅದನ್ನು ಗಳಿಸಿಟ್ಟುಕೊಳ್ಳಿ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಕ್ಕಳಿಗೆ ಕರೆ ನೀಡಿದರು.
ನಗರದ ಅನನ್ಯ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕಗಳಿಸಿ ಸಾಧನೆಗೈದ ಮಕ್ಕಳಿಗೆ ಭಾನುವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಿ ಮಾತನಾಡಿ ನಮ್ಮ ಕಾಲದಲ್ಲಿ ವಿದ್ಯಾರ್ಜನೆ ಬಹಳ ಕಷ್ಟಕರವಾದ ಪರಿಸ್ಥಿತಿಯಲ್ಲಿ ಇತ್ತು. ಆದರೆ, ಈಗ ಎಲ್ಲಾ ಅವಕಾಶಗಳು ವಿದ್ಯಾರ್ಥಿಗಳ ಮುಂದೆ ಇದೆ. ಅದಕ್ಕೆ ಪೋಷಕರ ಸಹಾಕರವೂ ಇರುತ್ತದೆ. ಅದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದಾಗ ಅವರನ್ನು ಓದಿಸಿದ ಗುರುಗಳಿಗೆ ಹಾಗೂ ಶಾಲೆಗೆ ಗೌರವ ಇಮ್ಮಡಿಯಾಗುತ್ತದೆ ಎಂದು ಹೇಳಿದರು.
ಪೋಷಕರು ತಮ್ಮ ಮಕ್ಕಳನ್ನು ಓದಿಸಲು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ತಮ್ಮ ಕಷ್ಟಗಳು ಮಕ್ಕಳಿಗೆ ಬಾರದೇ ಇರಲಿ ಎಂಬ ಕಾರಣಕ್ಕೆ ಎಲ್ಲವನ್ನೂ ಮುಚ್ಚಿಟ್ಟು ಅವರಿಗೆ ಓದಿನ ಸುಖ ಹಾಗೂ ಅನುಭವ ದಕ್ಕುವಂತೆ ಮಾಡಲು ಪ್ರಯತ್ನ ಮಾಡುತ್ತಾರೆ. ಅದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು, ಸಾಧನೆಗೆ ಪರಿಶ್ರಮ ಮುಖ್ಯವಾಗುತ್ತದೆ ಸತತ ಅಧ್ಯಯನದಿಂದ ಮಾತ್ರ ಸಾಧನೆ ಮಾಡಬಹುದು ಎಂಬುದನ್ನು ಅನನ್ಯ ವಿದ್ಯಾಪೀಠದ ಶಾಲೆಯ ವಿದ್ಯಾರ್ಥಿಗಳು ತೋರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಣ್ಣ ಶಾಲೆಯಿಂದ ಆರಂಭವಾದ ಅನನ್ಯ ವಿದ್ಯಾಪೀಠ ಇಂದು ಅತಿ ದೊಡ್ಡ ಎತ್ತರಕ್ಕೆ ಮುಟ್ಟಿದೆ. ಅದಕ್ಕೆ ಶಾಲೆಯ ಮುಖ್ಯಸ್ಥರಾದ ಗೀರೀಶ ಅವರ ಶ್ರಮ ದೊಡ್ಡದಿದೆ. ಯಾವ ಮಗುವೂ ಕಲಿಯಲಾರದು ಎಂದು ಹೇಳದೆ, ಪ್ರತಿ ಮಗುವಿನ ಸಾಮರ್ಥ್ಯವನ್ನು ಹೊರಗೆಳೆಯುವ ಅವರ ಸೇವಾ ಮನೋಭಾವ ಅವರನ್ನು ಅತಿ ಎತ್ತರಕ್ಕೆ ಬೆಳೆಸಿದೆ. ಮುಂದಿನ ದಿನಗಳಲ್ಲಿ ಅನನ್ಯ ವಿದ್ಯಾಪೀಠ ರಾಜ್ಯದಲ್ಲಿ ಉತ್ತಮ ಶಾಲೆ ಎಂಬ ಹೆಸರುಗಳಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಿಡಿಪಿಇ ಮಂಜುನಾಥ ಅವರು, ತಮ್ಮ ಓದಿನ ದಿನಗಳನ್ನು ಮೆಲಕು ಹಾಕಿದರು. ಅನನ್ಯ ವಿದ್ಯಾಪೀಠ ಶಾಲೆಯ ಶಿಕ್ಷಕರು ವಿಭಿನ್ನ ಪ್ರಯತ್ನದ ಮೂಲಕವೇ ಮಕ್ಕಳನ್ನು ತಲುಪಿದ್ದಾರೆ. ಉತ್ತಮವಾಗಿ ಓದುತ್ತಿರುವ ಮಕ್ಕಳನ್ನು ರ್ಯಾಂಕ್ ಬರುವಂತೆ ಮಾಡುವುದು ಶಿಕ್ಷಕರ ಕಾರ್ಯವಲ್ಲ. ಬದಲಿಗೆ ಓದಿನಲ್ಲಿ ಹಿಂದುಳಿದ ಮಕ್ಕಳೂ ರ್ಯಾಂಕ್ ಬರಬಲ್ಲರು ಎಂಬ ಮನಸ್ಥಿತಿಯನ್ನು ಬೆಳೆಸಿ ಅವರನ್ನು ಸಾಧನೆಯ ಹಾದಿಗೆ ತರುವುದು ದೊಡ್ಡದು. ಆ ದೃಷ್ಟಿಯಲ್ಲಿ ಅನನ್ಯ ವಿದ್ಯಾಪೀಠದ ಗಿರೀಶ ಹಾಗೂ ಶಿಕ್ಷಕರು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ ಎಂದು ಅಭಿನಂದಿಸಿದರು.
ಪೋಷಕರು ಮಕ್ಕಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಬೇಕು. ಹಬ್ಬ ಹರಿದಿನ ಮುಖಾಂತರ ಖರ್ಚುಗಳನ್ನು ಕಡಿಮೆ ಮಾಡಿ ಮಕ್ಕಳ ಓದಿನ ಕಡೆಗೆ ವೆಚ್ಚ ಮಾಡಿ. ಅವರು ಬೆಳೆದು ಉತ್ತಮ ನಾಗರಿಕರಾಗಿ ಬೆಳೆದರೆ ಅದು ಈ ಸಮಾಜಕ್ಕೆ ನೀವು ನೀಡುವ ಅತಿ ದೊಡ್ಡ ಕೊಡುಗೆಯಾಗಿದೆ. ಶಿವಮೊಗ್ಗ ನಗರದಲ್ಲಿ ಅನೇಕ ಪತಿಷ್ಠಿತ ಶಾಲೆಗಳು ಇವೆ. ಆದರೆ, ಆ ಎಲ್ಲಾ ಶಾಲೆಗಳಿಗಿಂತ ಅನನ್ಯ ವಿದ್ಯಾಪೀಠ ಭಿನ್ನವಾಗಿ ನಿಲ್ಲುವುದು ಎಲ್ಲಾ ವಿದ್ಯಾರ್ಥಿಗಳಿಂದಲೂ ಸಾಧನೆ ಸಾಧ್ಯ ಎಂಬುದನ್ನು ಮಾಡಿ ತೊರಿಸುವುದರಲ್ಲಿ ಇದೆ ಎಂಬುದಾಗಿ ಎಂದರು.
ಉಪನ್ಯಾಸಕ ನಟೇಶ ಅವರು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ, ಅಹಂಕಾರ, ಅನುಮಾನ ಹಾಗೂ ಇತತರನ್ನು ನೋಯಿಸದಿದ್ದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.
ಶಾಲೆಯ ವಿದ್ಯಾರ್ಥಿನಿಯರಾದ ಕು.ಕನ್ಮಮ್, ಕು.ವರ್ಷಾ ಹಾಗೂ ಇತರರು ಶಾಲೆಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು, ಉತ್ತಮ ಸಾಧನೆ ಮಾಡಿದ ಸುಮಾರು ೩೦ ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು. ಶಾಲೆಯ ಮುಖ್ಯಸ್ಥರಾದ ಗಿರೀಶ ಅವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಶಾಲೆ ಬೆಳೆದು ಬಂದ ರೀತಿಯನ್ನು ವಿವರಿಸಿದರು. ಪೋಷಕರೇ ನಿಜವಾದ ತಮ್ಮ ಬೆಂಬಲಿಗರು, ಅವರ ಪ್ರೋತ್ಸಾಹದಿಂದಲೇ ನಾವು ಬೆಳೆದಿದ್ದೇವೆ. ಸಾಧನೆ ಮಾಡಿದ್ದೇವೆ ಎಂದರು.
ಶಾಲೆಯ ಶಿಕ್ಷಕರಾದ ನಾಗಲಕ್ಷ್ಮೀ ಸೇರಿದಂತೆ ಇತರ ಶಿಕ್ಷಕರು ಹಾಗೂ ನೂರಕ್ಕೂ ಹೆಚ್ಚು ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಬೆಂಗಳೂರು
