
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಡಾ. ರಾಜಕುಮಾರ್ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿಗೆ ಚಾಲನೆ ಮಾಡಲಾಗಿದೆ.
ಈ ಕಾಮಗಾರಿಯ ಸಂದರ್ಭದಲ್ಲಿ ಬೆಸ್ಕಾಂ, ಬೆಂಗಳೂರು ಜಲ ಮಂಡಳಿ, ಬಿಬಿಎಂಪಿ ಬೃಹತ್ ರಸ್ತೆಗಳ ವಿಭಾಗ, ಬಿಬಿಎಂಪಿ ಮಳೆ ನೀರು ಕಾಲುವೆ ವಿಭಾಗ, ಬಿಎಸ್ಎನ್ಎಲ್, ಸಂಚಾರಿ ಪೊಲೀಸ್ ಇಲಾಖೆಗಳ ಸಮನ್ವಯತೆ ಅಗತ್ಯ ಕಂಡು 4 ದಿನಗಳ ಹಿಂದೆ ಈ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕ್ಷೇತ್ರ ಶಾಸಕ ಶ್ರೀ ಸುರೇಶ್ ಕುಮಾರ್ ಅವರು ಕರೆದಿದ್ದರು.
ಸಭೆಯ ಸಂದರ್ಭದಲ್ಲಿ ಕೇಳಿ ಬಂದ ವಿವಿಧ ಇಲಾಖೆಗಳ ನಡುವಿನ ಕೆಲ ಸಂಗತಿಗಳನ್ನು ಪರಿಹರಿಸಲು ಇಂದು ಈ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಡಾ. ರಾಜಕುಮಾರ್ ರಸ್ತೆಯ ಕಾಮಗಾರಿ ಯಲ್ಲಿ ಉಂಟಾಗಿರುವ ಸಮಸ್ಯೆಗಳ ಜಾಗಕ್ಕೆ ಭೇಟಿ ನೀಡಿದರು.
ಸ್ಥಳದಲ್ಲಿಯೇ ಈ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಸ್ಪರ ಚರ್ಚಿಸಿ ಪರಿಹಾರ ಮಾರ್ಗವನ್ನು ಕಂಡುಹಿಡಿಯುವಂತೆ ಯಶಸ್ವಿ ಪ್ರಯತ್ನ ಮಾಡಲಾಯಿತು.
ಈ ಕುರಿತು ಜಲ ಮಂಡಳಿಯ ಅಧ್ಯಕ್ಷರು ಹಾಗೂ ಬೆಸ್ಕಾಂ ನ ವ್ಯವಸ್ಥಾಪಕ ನಿರ್ದೇಶಕರ ಜೊತೆಯೂ ಆ ಸ್ಥಳದಿಂದಲೇ ಮಾತನಾಡಿ ಸಮನ್ವಯತೆಯ ಅಗತ್ಯತೆ ಹಿನ್ನೆಲೆಯಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದೇನೆ ಎಂದು ಅವರು ಪ್ರಕಟಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಬೆಂಗಳೂರು
