~ ಶ್ರೀಮತಿ ಅಕ್ಷತಾ ಮ. ಕುಂದರಗಿ
(ಶಿಕ್ಷಕಿಯರು – ಬರಹಗಾರರು) ಮುದ್ದೇಬಿಹಾಳ.
” ಕೊಡಲಿಯ ಕಾವು ” ಚಿರಂಜೀವಿ ರೋಡಕರ್ ಬರೆದಂತಹ ಕಥೆಗಳ ಸಂಕಲನವಾಗಿದೆ. ಇದು ಅತ್ಯುತ್ತಮವಾಗಿ ಮೂಡಿ ಬಂದಿದ್ದು ಉಜ್ವಲ ಪ್ರಕಾಶನದಲ್ಲಿ ಕಥೆಗಳು ಕೃತಿರೂಪವಾಗಿ ಹೊರಬಂದಿದೆ. ಈ ಕಥೆಗಳಲ್ಲಿ ಗ್ರಾಮೀಣ ಭಾಷೆಗೆ ಹೆಚ್ಚು ಒತ್ತನ್ನು ನೀಡಲಾಗಿದ್ದು ಕರ್ನಾಟಕದ ನಾಲ್ಕು ಪ್ರಾಂತ್ಯಗಳ ಭಾಷೆಯನ್ನು ಬಳಸಲಾಗಿದೆ ಹಳ್ಳಿಯ ಜನರ ಜೀವನ ಶೈಲಿಯನ್ನು ರಸವತ್ತಾಗಿ ವರ್ಣಿಸಿದ್ದಾರೆ, ಅವರ ಆಚಾರ ವಿಚಾರಗಳು ಸಂಸ್ಕೃತಿ ನಡೆ-ನುಡಿ ಅವರ ಮಾತಿನ ಧಾಟಿಯನ್ನು , ಸವಿವರವಾಗಿ ಪ್ರತಿಯೊಂದು ಕಥೆಗಳಲ್ಲಿ ವಿವರಿಸಿದ್ದಾರೆ. ಚಿರಂಜೀವಿ ರೋಡಕರ್ ಅವರು ಕನ್ನಡ ಸಾಹಿತ್ಯ ಲೋಕದ ಒಂಟಿ ಸಲಗ ಎನ್ನುವ ಬಿರುದನ್ನು ಪಡೆದ ” ಕೆ ಪಿ ಪೂರ್ಣಚಂದ್ರ ತೇಜಸ್ವಿ ” ಅವರಿಗೆ ಈ ಕೃತಿಯನ್ನು ಅರ್ಪಿಸಿದ್ದಾರೆ. ಈ ಪುಸ್ತಕದ ಮುಖಪುಟ ಬಹಳ ಆಕರ್ಷಕವಾಗಿ ಮನಸ್ಸನ್ನು ಸೆರೆಹಿಡಿಯುತ್ತದೆ.
ಈ ಪುಸ್ತಕದ ನಾಮಧೇಯ ಬಹಳ ವಿಶೇಷವಾಗಿದೆ . ಕೊಡಲಿಯ ಕಾವು ಮರದಿಂದಾಗಿದೆ, ಕೊಡಲಿ ಉಕ್ಕಿನಿಂದಾಗಿದೆ , ಇವೆರಡು ಸೇರಿ ಒಂದು ಆಯುಧವಾಗಿ ತಯಾರಾಗುತ್ತದೆ. ಕಾವು ಇರದೇ ಕೊಡಲಿ ಎಂದೂ ಪೂರ್ಣವಾಗುವುದಿಲ್ಲ. ಹಾಗೆಯೇ ಕಥೆಗಳು ತಮ್ಮ ಸ್ವಂತಿಕೆಯನ್ನು ತಮ್ಮದೇ ಆದ ನಿರೂಪಣಾ ಶೈಲಿಯನ್ನ ಹೊಂದಿದ್ದರೆ, ಮಾತ್ರ ಓದುಗರ ಮನಸ್ಸನ್ನು ಸೆರೆಹಿಡಿಯಲು ಯಶಸ್ವಿಯಾಗುತ್ತದೆ. ಲೇಖಕರ ನಿರೂಪಣಾ ಶೈಲಿ ಬಹಳ ಅದ್ಭುತವಾಗಿದೆ. ಓದುಗರ ಮನಸ್ಸನ್ನು ಸೆಳೆಯುವಲ್ಲಿ , ಚಿರಂಜೀವಿ ರೋಡಕರ್ ಅವರು ಯಶಸ್ವಿಯಾಗಿದ್ದಾರೆ .
ಚಿರಂಜೀವಿ ರೋಡಕರ್ ಅವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು , ಪ್ರವೃತ್ತಿಯಲ್ಲಿ ಬರಹಗಾರರು, ಸಂಘಟಕರು ಆಗಿರುತ್ತಾರೆ. ಇವರ ಮೊದಲ ಕೃತಿ 2022 ರಲ್ಲಿ ‘ಚಿರಕ್ರಾಂತಿ’ ಎಂಬ ನಾಮಧೇಯವನ್ನು ಹೊಂದಿದ ಕವನ ಸಂಕಲನವಾಗಿದೆ. ಇವರ ಲೇಖನಗಳು ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಅವರ ಧನಾತ್ಮಕ ಚಿಂತನೆಗಳು, ವೈಚಾರಿಕ ವಿಚಾರಗಳು ಅವರ ಲೇಖನಗಳಲ್ಲಿ ನಾವು ಕಾಣಬಹುದು ಇನ್ನು ಮುಂದುವರೆದ ಹಾಗೆ “ಕುಲುಮೆಯ ಮಾತು ” ಎನ್ನುವ ತಲೆ ಬರಹ ಅಡಿಯಲ್ಲಿ ಶ್ರೀಮತಿ ದೀಪಾ ರೋಡಕರ್ ಅವರು ಪ್ರಕಾಶಕರ ಮಾತುಗಳಲ್ಲಿ ಸಂಕ್ಷಿಪ್ತವಾಗಿ ಸುಂದರವಾಗಿ ಹೇಳಿದ್ದಾರೆ. ” ಒಳಗಿನ ಕಾವು” ಎನ್ನುವ ತಲೆಬರಹದಲ್ಲಿ ಚಿರಂಜೀವಿ ರೋಡಕರ್ ಅವರು ತಮ್ಮ ಅನುಭವವನ್ನು ತಮ್ಮಲ್ಲಿರುವ ಕ್ರಾಂತಿಯ ಕಿಚ್ಚನ್ನು ತಮ್ಮ ಅಭಿಪ್ರಾಯದ ಮೂಲಕ ವ್ಯಕ್ತಪಡಿಸಿದ್ದಾರೆ. ಮುಂದೆ ” ಸಾಣೆ ಹಿಡಿದವರಿಗೆ ಕೃತಜ್ಞತೆಗಳು” ಎನ್ನುವ ತಲೆಬರಹದಲ್ಲಿ ಕವಿ ತಮ್ಮ ಕೃತಿಗೆ ಸಹಾಯಕವಾದಂತ ಎಲ್ಲರಿಗೂ ತಮ್ಮ ಧನ್ಯವಾದಗಳನ್ನು ತಿಳಿಸುತ್ತಾರೆ. ತಾವು ಈ ಕೃತಿ ರಚನೆಗೆ ಸಹಾಯಕರಾದಂತಹ ಎಲ್ಲಾ ಮಹನೀಯರನ್ನು ಕೃತಜ್ಞತೆ ಹೇಳುವ ಮೂಲಕ ಸ್ಮರಿಸಿದ್ದಾರೆ.
“ಕೊಡಲಿಯ ಕಾವು” ಎನ್ನುವ ತಲೆಬರಹ ಹೊಂದಿದ ಈ ಕೃತಿಯಲ್ಲಿ ಒಟ್ಟು ಏಳು ಕಥೆಗಳಿವೆ. ಪ್ರತಿಯೊಂದು ಕಥೆಯು ಒಂದೊಂದು ವಿಶೇಷತೆಯನ್ನು ಹೊಂದಿದೆ.
” ಕುಸುಮ” ಎನ್ನುವ ತಲೆ ಬರಹವನ್ನು ಹೊಂದಿದ ಕತೆ. ಕುಸುಮ ಎನ್ನುವ ಮುಗ್ಧ ಮನಸ್ಸಿನ ಬಾಲಕಿಯ ಕಥೆ. ಈ ಕಥೆಯಲ್ಲಿ ಮುತ್ತು ಕಟ್ಟುವುದು, ಜೋಗಮ್ಮ ಆಗುವುದು, ಊರ ಮಂದಿ ಎಲ್ಲರೂ ಆ ಹೆಣ್ಣನ್ನು ದೈಹಿಕವಾಗಿ ಬಳಸಿಕೊಳ್ಳುವುದು. ಅವರ ಮನೆತನದಲ್ಲಿ ಬರುವ ಹೆಣ್ಣು ಮಕ್ಕಳನ್ನು ಕಾಮದೃಷ್ಟಿಯಿಂದ ಕಾಣುವ ಊರ ಜನರ ಮನಸ್ಥಿತಿಯನ್ನು ಲೇಖಕರು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ. ಕುಸುಮ ಹೆಸರಿಗೆ ತಕ್ಕ ಹಾಗೆ ಸೌಮ್ಯ ಸ್ವಭಾವದವಳು. ಓದಿ ಎತ್ತರಕ್ಕೆ ಬೆಳೆಯುವ ಆಸೆಯನ್ನು ಹೊಂದಿದವಳು. ಆದರೆ ಸಮಾಜದ ದುರಾಸೆಗೆ ಬಲಿಯಾಗುತ್ತಾಳೆ. ಇದು ನಮ್ಮ ಸಮಾಜದ ದೊಡ್ಡ ದುರಂತ.
” ರೋಜ್ ಕಹಾನಿ ” ಎನ್ನುವ ತಲೆಬರಹವನ್ನು ಹೊಂದಿದ ಕಥೆ ಬಹಳ ಸ್ವಾರಸ್ಯಕರವಾಗಿದೆ. ಏಕೆಂದರೆ ಪ್ರಾಯಕ್ಕೆ ಬಂದ ಹುಡುಗ ಹಾಗೂ ಹುಡುಗಿಯರು ಆಕರ್ಷಣೆಯನ್ನ ಪ್ರೀತಿಯೆಂದು ನಂಬಿ, ತಮ್ಮ ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಳ್ಳುವ ಮನಸ್ಥಿತಿಯನ್ನು ಈ ಕಥೆಯಲ್ಲಿ ನಾವು ಕಾಣಬಹುದು. ಆದರೆ ಇಲ್ಲಿ ಒಂದು ಸಣ್ಣ ಮಾರ್ಪಾಟಿದೆ. ಅದೇನೆಂದರೆ ಪ್ರೀತಿಯಲ್ಲಿ ಬಿದ್ದ ಹುಡುಗ ತನ್ನ ಜೀವನವನ್ನ ಹಾಳು ಮಾಡಿಕೊಳ್ಳದೆ ಶಿಕ್ಷಕನಾಗಿ, ತಂದೆ ತಾಯಿಗೆ ಒಳ್ಳೆಯ ಮಗನಾಗಿ , ಸಮಾಜಕ್ಕೆ ಒಳ್ಳೆ ನಾಗರೀಕನಾಗಿ ಬದಲಾಗುತ್ತಾನೆ. ಆಕರ್ಷಣೆಗೆ ಒಳಗಾಗಿ ಶೈಕ್ಷಣಿಕ ಜೀವನವನ್ನು ಹಾಳು ಮಾಡಿಕೊಂಡು, ಜೀವನಪರ್ಯಂತ ಕೂಲಿ ಆಳಾಗಿ ದುಡಿಯುತ್ತಿರುವ ಯುವಕರಿಗೆ ಈ ಕಥೆ. ಈ ಸಂದೇಶ ನಮ್ಮ ಇಂದಿನ ಯುವಕರಿಗೆ ಮುಟ್ಟ ಬೇಕಾಗಿರುವುದು ಅತ್ಯವಶ್ಯಕ.
” ಅಪ್ಪ ಬರ್ತಾನ್? ” ಎನ್ನುವ ತಲೆಬರಹವನ್ನ ಹೊಂದಿದ ಕತೆ ಕುಡಿದ ಮತ್ತಿನಲ್ಲಿ ಜಗಳವಾಡಿ ಪೊಲೀಸ್ ಕಚೇರಿಗೆ ತಲುಪಿದ ವ್ಯಕ್ತಿಯ ಕಥೆ. ಸಮಾಜಕ್ಕೆ ಸಾರಾಯಿ ಎಷ್ಟು ಮಾರಕ ಎನ್ನುವ ಮಹತ್ವದ ಸಂದೇಶವನ್ನು ಈ ಕಥೆ ಹೇಳುತ್ತದೆ . ಚಟಗಳು ನಮ್ಮನ್ನ ನಿಯಂತ್ರಿಸಬಾರದು , ನಾವು ಚಟಗಳನ್ನು ನಿಯಂತ್ರಿಸಬೇಕು. ಸಾರಾಯಿ ಚಟಕ್ಕೆ ಜೀವನವನ್ನೇ ಹಾಳು ಮಾಡಿಕೊಂಡು, ಹೆಂಡತಿ ಮಕ್ಕಳನ್ನು ಬಿಟ್ಟು, ಓಡಿ ಹೋಗುವ ರಾಮಣ್ಣನ ಕಥೆ ಇದಾಗಿದೆ. ರಾಮಣ್ಣನ ಮಕ್ಕಳು ತಂದೆಯ ಬರುವಿಕೆಗಾಗಿ ಕಾಯುತ್ತಾ , ದಾರಿಯನ್ನೇ ನೋಡುತ್ತಾ , ತಾಯಿಯನ್ನ ಪ್ರಶ್ನಿಸುತ್ತಾ, ಅಪ್ಪ ಬರ್ತಾನಾ? ಎಂದು ಕೇಳುತ್ತವೆ. ಇದು ಎಲ್ಲರ ಮನೆಯಲ್ಲಿ ನಡೆಯುವ ನಿತ್ಯ ಹಾಗೂ ಸತ್ಯ ಸಂಗತಿ.
” ಹುಲಿ ಹೈದ ” ಎಂಬ ಕಥೆಯನ್ನು ಓದಿದಾಗ, ಈ ಕಥೆಯಲ್ಲಿ ಬರುವ ಸಂದರ್ಭವು ನಮ್ಮ ಜಾತ್ರೆಗಳಲ್ಲಿ , ಹಬ್ಬದ ಸಂದರ್ಭದಲ್ಲಿ , ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ನಡೆಯುವುದನ್ನು ನೆನಪಿಸುತ್ತದೆ. ಅಕ್ಕನ ಮನೆಗೆ ಬಂದ ತಮ್ಮ ಮತ್ತು ಭಾವ ಸೇರಿಕೊಂಡು ಕುಡಿದ ಮತ್ತಿನಲ್ಲಿ ಪೊಲೀಸರಿಂದ ನೋಟಿಸ್ ಅನ್ನು ತೆಗೆದುಕೊಂಡು ಮನೆಗೆ ಬರುವ ಕಥೆ ಇದು. ಚಟಗಳು ನಮ್ಮನ್ನು ನಿಯಂತ್ರಿಸಿದಾಗ ಏನಾಗುತ್ತದೆ ಎನ್ನುವ ಕುತೂಹಲಕ್ಕೆ ಈ ಕಥೆಯೇ ಸಾಕ್ಷಿ. ಕುಡಿದಾಗ ನಾಲಿಗೆಯನ್ನು ನಿಯಂತ್ರಿಸದೆ, ಹರಿಬಿಟ್ಟಾಗ ಆದಂತ ಅನಾಹುತ ಪ್ರಸಂಗ ರೂಪವನ್ನು ಪಡೆದಿದೆ.
” ಕೊಡಲಿ ಕಾವು” ಕತೆ ಜಾತೀಯ ತಾರತಮ್ಯವನ್ನು ಎತ್ತಿ ತೋರಿಸುವಂತಹ ಕಥೆ ಇದು. ನಮ್ಮ ಸಮಾಜದಲ್ಲಿ ನಿತ್ಯ ನಡೆಯುವ ಜಾತಿ ಸಂಘರ್ಷದಲ್ಲಿ ದೀನರ ಹೋರಾಟವನ್ನು ನಾವು ಇಲ್ಲಿ ಕಾಣಬಹುದು. ಮೇಲ್ವರ್ಗ ಎನಿಸಿಕೊಂಡ ಜನರು ಕೆಳ ಜನರನ್ನು ದುಡಿಸಿಕೊಂಡು ಅವರನ್ನು ಅಮಾನವೀಯತೆಯಿಂದ ಕಾಣುವ ಹಾಗೂ ಕೆಳಜಾತಿಯ ಜನರನ್ನು ಪ್ರಾಣಿಗಳಂತೆ ನೋಡಿಕೊಳ್ಳುವ ಮನಸ್ಥಿತಿಯನ್ನು ಹೊಂದಿದ ಕುರಿತು ಹೇಳುವ ಕಥೆ ಇದಾಗಿದೆ .
” ಕೋಟೆ ಹೇಳಿದ ಕಥೆ: ಸೊಸೆಯಾದ ಅತ್ತೆ” ತಲೆಬರಹ ದೊಡ್ಡದಿದ್ದಷ್ಟು ಕಥೆ ಬಹಳ ಚೆನ್ನಾಗಿದೆ. ಇದು ಇತಿಹಾಸವನ್ನು ಪರಿಚಯಿಸುವ ಕಥೆಯಾಗಿದೆ . ಏಕೆಂದರೆ ಈ ಕಥೆಯಲ್ಲಿ ಬಹುಮನಿ ಸುಲ್ತಾನರು , ದೇವರಾಯ, ರಾಮರಾಯ ಎನ್ನುವ ಅರಸರ ಪಾತ್ರಗಳಿಗೆ. ಈ ಕಥೆಯಲ್ಲಿ ಪರ್ತಾಳ ಎನ್ನುವ ಸುಂದರಿಯ ಪಾತ್ರವಿದೆ. ಈ ಸುಂದರಿ ಗೋಸ್ಕರನೇ ದೊಡ್ಡ ಯುದ್ದವೇ ನಡೆದು ಹೋಗುತ್ತದೆ. ಈ ಕಥೆಯನ್ನು ಮುದಗಲ್ ಕೋಟೆ ಸಾರಿ ಹೇಳುತ್ತಿದೆ. ಮಲ್ಲಣ್ಣ ಹಾಗೂ ಪರ್ತಾಳ ಪ್ರೇಮಕಥೆ ಇದು. ಇಲ್ಲಿ ಪ್ರೀತಿಗೆ ಬೆಲೆ ಇಲ್ಲ ಅಧಿಕಾರ ಶಾಹಿಗೆ ಬೆಲೆ ಹೆಚ್ಚು. ಅಧಿಕಾರ ಶಾಹಿಯಿಂದ ಅಧಿಕಾರದ ದುರಾಸೆಯಿಂದ ಆದಂತ ಅನಾಹುತದ ಸಾಕ್ಷಿಯೇ ಮುದಗಲ್ ಕೋಟೆ . ಇದು ಇಂದಿಗೂ ಪರ್ತಾಳ ಮಲ್ಲಣ್ಣನ ಪ್ರೇಮ್ ಕಹಾನಿಯನ್ನು ಸಾರುತ್ತಿದೆ.
” ಸಂಜೆ ಸಿಂಧೂರ” ಇದು ನೀಳ್ಗತೆ. ಈ ಕಥೆಯನ್ನು ಎಲ್ಲರೂ ಓದಲೇಬೇಕು. ಏಕೆಂದರೆ ಇದು ವಿಧವಾ ವಿವಾಹದ ಕುರಿತು ಸೂಕ್ಷ್ಮತೆಯಾಗಿ ಮೂಡಿಬಂದಿದೆ. ಗೌಡ ಮನೆತನದ ಸೊಸೆ ವಿಧವೆಯಾದ ನಂತರ ತನ್ನ ಒಂಟಿ ಜೀವನದ ವ್ಯಥೆಯನ್ನ ಒಬ್ಬ ಸಾಮಾನ್ಯ ಶಾಣಪ್ಪನ ಜೊತೆ ಹಂಚಿಕೊಂಡು ಮತ್ತೆ ವಿಧವೆ ಜೀವನವನ್ನು ಬಿಟ್ಟು ಸಂಸಾರಿಕ ಜೀವನವನ್ನು ಆರಂಭಿಸಿದಾಗ ಸಮಾಜದ ಮುಖಂಡರು ಎನಿಸಿಕೊಂಡ ಗೋಮುಖ ವ್ಯಾಘ್ರಗಳು ಗೌಡಶಾಣಿ ಗಂಗಮ್ಮನನ್ನ ಹೀನಾಯವಾಗಿ ನಡೆಸಿಕೊಳ್ಳುವ ರೀತಿ ಮತ್ತು ಗಂಗಮ್ಮನ ಮಗ ಬೈರೇಗೌಡ ತನ್ನ ತಾಯಿಯ ಪರ ನಿಂತು ಸಮಾಜವನ್ನು ಎದುರಿಸಿದಾಗ ಆದಂತಹ ಬದಲಾವಣೆ ಈ ಕಥೆಯಲ್ಲಿ ಬಹಳ ರಸವತ್ತಾಗಿ ಮೂಡಿಬಂದಿದೆ. ಗಂಡ ಸತ್ತ ನಂತರ ಹೆಣ್ಣು ಮಗಳ ಜೀವನ ಕೆಲಸಕ್ಕೆ ಮೀಸಲು , ಅವಳ ಕಷ್ಟ ಸುಖವನ್ನ ಕೇಳುವುದೇ ಇಲ್ಲ , ಅವಳು ಬದುಕಿರುವುದು ಪರರಿಗೋಸ್ಕರ . ಅವಳ ವೈಯಕ್ತಿಕ ಕಾಳಜಿಯಾಗಲಿ, ವೈಯಕ್ತಿಕ ಜೀವನವಾಗಲಿ ಇರುವುದಿಲ್ಲ. ಹಾಗೆ ಗಂಡು ವಿಧುರನಾದಾಗ , ಎಲ್ಲರೂ ಕಾಳಜಿಯಿಂದ ಮಕ್ಕಳಿಗೋಸ್ಕರ ಎರಡನೇ ಮದುವೆ ಆಗುವಂತೆ ಒತ್ತಾಯಿಸುತ್ತಾರೆ. ಎರಡನೇ ಮದುವೆಯ ನಂತರ ಮೊದಲನೇ ಹೆಂಡತಿ ಮಕ್ಕಳ ಗತಿ ಅದೋಗತಿ . ಹೆಣ್ಣು ಮಾತ್ರ ಗಂಡ ಸತ್ತ ನಂತರ ತನ್ನ ಜೀವನವನ್ನ ಸತ್ತ ಗಂಡನ ಹೆಸರಿಗೆ ಮೀಸಲಾಗಿರಿಸುವುದು ಯಾವ ನ್ಯಾಯ? ಏಕೆ ಗಂಡಸು ಹೆಂಡತಿಯ ಹೆಸರಿನಲ್ಲಿ ವಿಧುರನಾಗಿ ಜೀವಿಸಲು ಸಾಧ್ಯವಿಲ್ಲವೇ? ಈ ಪ್ರಶ್ನೆಯನ್ನು ನಮ್ಮ ಸಮಾಜದಲ್ಲಿರುವ ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಲೇಬೇಕು . ಏಕೆಂದರೆ ಅನಾದಿಕಾಲದಿಂದಲೂ ವಿಧವಾ ಪದ್ಧತಿ ನಡೆಯುತ್ತಾ ಬಂದಿದೆ . ಗಂಡ ಸತ್ತ ನಂತರ ವಿಧವೆಯಾದ ಹೆಣ್ಣನ್ನು ಕೆಲಸದಾಳು ಎನ್ನುವಂತೆ ನೋಡಿಕೊಂಡು , ಅವಳ ವಿಚಾರಗಳನ್ನು ಅವಳ ಪ್ರಗತಿಯನ್ನು ತಡೆಯುವುದು ಯಾವ ನ್ಯಾಯ? ಇದು ಸರಿಯೇ? ಎಂದು ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಿ.
ಕೊಡಲಿಯ ಕಾವು ಕೃತಿಯ ನಾನು ಓದಿದಾಗ ಬಹಳ ಪರಿಣಾಮಕಾರಿಯಾಗಿ ಕೃತಿಯಲ್ಲಿರುವ ವಿಚಾರಗಳೆಲ್ಲಾ ನನ್ನ ತಲೆಯಲ್ಲಿ ಓಡಾಡಲಾರಂಭಿಸಿದರು. ಅವರು ಸಮಾಜದಲ್ಲಿರುವ ಮೌಢ್ಯ , ಜಾತಿಯ ತಾರತಮ್ಯತೆಯನ್ನು, ಬಡವ ಬಲ್ಲಿದ ಎನ್ನುವ ವಿಚಾರಗಳ ಪರಿಣಾಮವಾಗಿ ಬರಹ ರೂಪಕ್ಕೆ ಇಳಿಸಿದ್ದಾರೆ . ಸಮಾಜದಲ್ಲಿ ಆಗುತ್ತಿರುವ ಶೋಷಣೆಯನ್ನು ಲೇಖಕರು ತಮ್ಮ ಕಥೆಗಳ ಮೂಲಕ ಹೇಳಿದ್ದಾರೆ. ಕೊಡಲಿಯ ಕಾವು ಈ ಕೃತಿಯನ್ನು ಓದಿದಾಗ , ನಮಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ “ನಾವು ಇರುವ ಸಮಾಜದಲ್ಲಿ ಹೀಗೂ ಉಂಟೆ?” ಈ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಇಂಥ ಸಮಸ್ಯೆಗಳನ್ನು ನಾವು ಪ್ರತಿಯೊಂದು ಸಮಾಜದಲ್ಲಿಯೂ ಕೂಡ ಕಾಣಬಹುದು. ಜಾತಿಗೊಂದು ಶಾಲೆ, ಧರ್ಮಕ್ಕೊಂದು ಬಡಾವಣೆ ಹುಟ್ಟುತ್ತಿರುವ ಕಾಲದಲ್ಲಿ , ನಾವು ಎಲ್ಲರನ್ನೂ ಸಮಾನವಾಗಿ ಕಾಣುವುದು ದೊಡ್ಡ ತಪ್ಪು ಎನ್ನುವಂತೆ ಕೆಲವು ಜನ ವರ್ತಿಸುತ್ತಿರುತ್ತಾರೆ. ದೊಡ್ಡ ಜನರೇ ಆಡಳಿತ ಮಾಡಬೇಕು , ದೊಡ್ಡ ಜನರೇ ಮುಂದುವರಿಯಬೇಕು, ಹಿಂದುಳಿದ ಜನ ಅವರ ಗುಲಾಮರಾಗಿರಬೇಕು ಎನ್ನುವ ಮುತ್ತಜ್ಜನ ಕಾಲದ ವಿಚಾರವನ್ನು ತಲೆಯಲ್ಲಿ ತುಂಬಿಕೊಂಡಿದ್ದಾರೆ . ಈಗ ಕಾಲ ಬದಲಾಗಿದೆ ಎನ್ನುವ ವಿಚಾರವನ್ನು ಈ ಕೃತಿಯ ಮೂಲಕ ನಾವು ತಿಳಿದುಕೊಳ್ಳಬಹುದು . ದಯವಿಟ್ಟು ನಮ್ಮ ಸುತ್ತಮುತ್ತ ಇರತಕ್ಕಂತಹ ಸಮಾಜದಲ್ಲಿ ಇಂತಹ ಸಮಸ್ಯೆಗಳನ್ನು ನಾವು ಎದುರಿಸುತ್ತಿರುತ್ತೇವೆ . ಆ ಸಂದರ್ಭದಲ್ಲಿ ನಾವು ಎಚ್ಚರವಾಗಿದ್ದು , ಆ ಸಮಸ್ಯೆಗಳನ್ನು ನಾವು ಎದುರಿಸೋಣ. ಮುಂದೆ ಅಂತ ಸಮಸ್ಯೆಗಳು ಚಿಗುರದಂತೆ ನೋಡಿಕೊಳ್ಳೋಣ.
ಪ್ರತಿಗಳಿಗೆ ಸಂಪರ್ಕಿಸಿ :9845484624
ಬೆಲೆ :180 ರೂಪಾಯಿ
ಅಂಚೆ ವೆಚ್ಚ ಉಚಿತ.
- ಶ್ರೀಮತಿ ಅಕ್ಷತಾ ಮಹಾದೇವಪ್ಪ ಕುಂದರಗಿ
