ಯಾದಗಿರಿ/ ಗುರುಮಠಕಲ್: ಮೇ ೬ ರಂದು ಆಚರಿಸುವ ಬಕ್ರೀದ್ ಹಬ್ಬದ ಕುರಿತಾದ ಶಾಂತಿ ಸಭೆಯಲ್ಲಿ ಮಾತನಾಡಿದ ಪಿಐ ದೇವಿಂದ್ರಪ್ಪ ಧೂಳಖೇಡ ಸಮಾಜದಲ್ಲಿ ಶಾಂತಿ ಕದಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವದು ಎಂದು ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೇ ೩೦ ನಿನ್ನೆ ಶುಕ್ರವಾರ ಜರುಗಿದ ಬಕ್ರೀದ್ ಪೂರ್ವಭಾವಿ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಒಂದು ಸಮುದಾಯದ ಹಬ್ಬ ಇನ್ನೊಬ್ಬರಿಗೆ ಸಮಸ್ಯೆಯನ್ನು ಉಂಟುಮಾಡುವಂತೆ ಇರಬಾರದು. ನಮ್ಮ ಆಚರಣೆಯು ಇತರರೂ ಸಂಭ್ರಮಿಸುವಂತ ಪ್ರೀತಿ ಮತ್ತು ಸಹಬಾಳ್ವೆಗೆ ಪೂರಕವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಕಾನೂನು ಮೀರಿ ಸಮಾಜದಲ್ಲಿ ಶಾಂತಿ- ಸುವ್ಯವಸ್ಥೆಯನ್ನು ಕದಡುವ ಮತ್ತು ಸುಳ್ಳು ಸುದ್ದಿಗಳನ್ನು ಹರಡಿ ಮತೀಯ ಗಲಭೆಗಳಿಗೆ ಕಾರಣರಾಗುವವರನ್ನು ಸಹಿಸಲು ಸಾಧ್ಯವಿಲ್ಲ. ಕಾನೂನು ನಮ್ಮ ರಕ್ಷಣೆಗಾಗಿ ರೂಪಿಸಲಾಗಿದ್ದು, ಅದನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಕ್ರೀದ್ ಆಚರಣೆ ವೇಳೆ ಕಾನೂನು ಮೀರದಂತೆ ಆಚರಣೆಯಿರಲಿ, ಹೆಚ್ಚಿನ ಶಬ್ದ ಮಾಡುವ ಧ್ವನಿವರ್ಧಕಗಳನ್ನು ಬಳಸಬಾರದು, ಕಾನೂನಿನಲ್ಲಿ ಅವಕಾಶ ನೀಡಲಾದ ಪ್ರಾಣ ಗಳನ್ನು ಮಾತ್ರ ಬಲಿ ನೀಡಬೇಕು, ಇತರೆ ಸಮುದಾಯಗಳಿಗೆ ಕಿರಿಕಿರಿಯಾಗದಂತೆ ಆಚರಿಸಬೇಕು. ಆಚರಣೆಯ ಸಮಯ ಶಾಂತಿಯನ್ನು ಕೆಡಸುವ ಯಾವುದೇ ಸಮುದಾಯದವರನ್ನೂ ಸಹಿಸಲು ಸಾಧ್ಯವಿಲ್ಲ. ಅಂತವರ ಮೇಲೆ ಕಠೀಣವಾದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ನಿಟ್ಟಿನಲ್ಲಿ ಸಮಾಜದ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಸದಾ ಸನ್ನದ್ದವಾಗಿದೆ ಎಂದರು.
ಸಭೆಯಲ್ಲಿ ಗುರುಮಠಕಲ್ ಸರ್ವ ಪಕ್ಷದ ಮುಖಂಡರು ಸೈಯದ್ ಅಕ್ಟರ, ಸೈಯದ್ ಬಾಬಾ ದೇವಾದಾಸ್, ರವೀಂದ್ರ ರೆಡ್ಡಿ ಪೋತುಲ್, ಲಾಲಪ್ಪ ತಲಾರಿ, ಗೋಪಾಲ ಕೃಷ್ಣ, ಖಾನ್ ಸಾಬ್,ಅಹ್ಮದ್ ಅನ್ವರ್, ಶರಣಪ್ಪ ಲಿಕ್ಕಿ ಪೋಲಿಸ್ ಸಿಬ್ಬಂದಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ
