ಬಳ್ಳಾರಿ / ಕಂಪ್ಲಿ : ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆರಂಭಿಸುವಂತೆ ಒತ್ತಾಯಿಸಿ ಇಲ್ಲಿಯ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ಶಾಸಕ ಜೆ.ಎನ್. ಗಣೇಶ ಅವರಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.
ಬಳಿಕ ಸಂಘದ ತಾಲೂಕು ಘಟಕದ ಅಧ್ಯಕ್ಷ ಹೆಚ್. ದೊಡ್ಡಬಸಪ್ಪ ಮಾತನಾಡಿ ಕಂಪ್ಲಿಯಲ್ಲಿ ಬಿಇಓ ಕಚೇರಿ ಆರಂಭಕ್ಕೆ ಸಂಬಂಧಪಟ್ಟಂತೆ ಕಲಬುರ್ಗಿಯ ಶಾಲಾ ಶಿಕ್ಷಣ ಇಲಾಖೆ ವಿಭಾಗದ ಹೆಚ್ಚುವರಿ ಆಯುಕ್ತರು 2025ರ ಏಪ್ರಿಲ್ 23ರಂದು ಸುತ್ತೋಲೆ ಹೊರಡಿಸಿ ಬಿಇಒ ಕಚೇರಿ ಆರಂಭಿಸುವಂತೆ ಸೂಚಿಸಿದ್ದರು, ಆದರೆ ಕುರುಗೋಡು ಪಟ್ಟಣದಲ್ಲಿರುವ ಪಶ್ಚಿಮ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕಂಪ್ಲಿ ಸೇರ್ಪಡೆಗೊಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಂಪ್ಲಿ ಬಿಇಒ ಕಛೇರಿಯಿಂದ ವಂಚಿತವಾಗಿದ್ದು 30 ಕಿಲೋಮೀಟರ್ ದೂರದ ಕುರುಗೋಡಿಗೆ ಅಲೆಯಬೇಕಾದ ಅನಿರ್ವಾರ್ಯತೆ ಎದುರಾಗಿದೆ ಎಂದರು.
ಬಿಇಓ ಕಚೇರಿ ಆರಂಭದಿಂದ ಜನರಿಗೆ ಮತ್ತು ಎಸ್ಎಸ್ಎಲ್ ಸಿ ಫಲಿತಾಂಶ ಸುಧಾರಣೆಗೆ ಅನುಕೂಲವಾಗಲಿದೆ ಸರ್ಕಾರ ಪಟ್ಟಣದಲ್ಲಿ ಆರಂಭಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸರ್ವೇಶ್, ಲಕ್ಷ್ಮಣ ನಾಯಕ್, ಟಿ. ಎಂ. ಬಸವರಾಜ, ಪ್ರಥಮಿಕ ಶಿಕ್ಷಕ ಸಂಘದ ತಾಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ, ಪದಾಧಿಕಾರಿ ಸುನಿತಾ ಪೂಜಾರಿ, ಜಿಪಿಟಿ ಅಧ್ಯಕ್ಷ ಮಂಜುನಾಥ, ಇಸಿಓ ರೇವಣ್ಣ, ಅನುದಾನಿತ ರಾಜ್ಯ ಸಂಘಟನಾ ಕಾರ್ಯದರ್ಶಿ ಅಂಬಿಗರ ಮಂಜುನಾಥ, ಶಿಕ್ಷಕರಾದ ಚಂದ್ರಶೇಖರ, ವಿ. ವಸಂತ ಕುಮಾರ, ಮರಿಸ್ವಾಮಿ, ಮಲ್ಲಿಕಾರ್ಜುನ, ರಮೇಶ್ ಸುಗ್ಗೇನಹಳ್ಳಿ, ರವಿ, ವೀರೇಶ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
