
ಬಳ್ಳಾರಿ / ಕಂಪ್ಲಿ : ತುಂಗಭದ್ರಾ ನದಿ ಮಧ್ಯದಲ್ಲಿ ಹಾದು ಹೋದ 33 ಕೆವಿ ಟವರ್ ಲೈನ್ ಕಂಬದ ತಳಪಾಯ ಮೇಲ್ಭಾಗದ ಕಟ್ಟಡ ಶಿಥಿಲಗೊಂಡಿದ್ದು ದುರಸ್ತಿಗೊಳಿಸಿ, ಬಲಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ( ಜೆ. ಕಾರ್ತಿಕ್ ಬಣ ) ಯ ಪದಾಧಿಕಾರಿಗಳು ಜೆಸ್ಕಾಂ ಎಇಇ ಜೆ ಮಲ್ಲಿಕಾರ್ಜುನ ಗೌಡರಿಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಸಿ.ಎ. ಚೆನ್ನಪ್ಪ ಮಾತನಾಡಿ 33 ಕೆ ವಿ ಟವರ್ ಲೈನ್ ನದಿ ಮಧ್ಯದಲ್ಲಿ ಹಾದು ಹೋಗಿದ್ದು ಟವರ್ ತಳಪಾಯ ಕಟ್ಟಡ ಮೇಲ್ಭಾಗ ಶಿಥಿಲಗೊಂಡು ಬಿದ್ದು ಹೋಗಿದೆ. ಅಕಸ್ಮಾತ್ ಅವಘಡ ಸಂಭವಿಸಿದ್ದಲ್ಲಿ ನದಿಯಲ್ಲಿನ ಜಲಚರ, ಪ್ರಾಣಿ, ಪಕ್ಷಿಗಳಿಗೆ ಜೀವ ಗಂಡಾಂತರವಾಗುವ ಸಾಧ್ಯತೆಗಳಿವೆ, ಮುಂಜಾಗ್ರತಾ ಕ್ರಮವಾಗಿ ಟವರ್ ಲೈನಿನ ತಳಪಾಯ ಕಟ್ಟಡವನ್ನು ಬಲಪಡಿಸಬೇಕು. ಈ ಕುರಿತು ನಿರ್ಲಕ್ಷ್ಯ ತಲ್ಲದು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ನಾಗರಾಜ ಯಾದವ್, ಎನ್. ಜಡೆಪ್ಪ, ಲಿಂಗರಾಜ ಯಾದವ್, ರವಿಚಂದ್ರ ಮಡಿವಾಳ, ಮಂಜುನಾಥ ತಳವಾರ್, ಉಮೇಶ್ ಗೌಡ, ಜೀರು ನಾಗರಾಜ, ಎಚ್. ಮಂಜುನಾಥ ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
