ಬಳ್ಳಾರಿ / ಕಂಪ್ಲಿ : ಸಾರ್ವಜನಿಕರ ಉತ್ತಮ ಆರೋಗ್ಯ ಮತ್ತು ಪರಿಸರಕ್ಕಾಗಿ ಪ್ರತಿಯೊಬ್ಬರೂ ಗಿಡ ಮರಗಳನ್ನು ಸಂರಕ್ಷಿಸಬೇಕಾಗಿದೆ ಎಂದು ಕಂಪ್ಲಿ ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ( ಗ್ರಾ. ಉ) ಕೆ.ಎಸ್.ಮಲ್ಲನಗೌಡ ತಿಳಿಸಿದರು.
ಅವರು ತಾಲ್ಲೂಕಿನ ರಾಮಸಾಗರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗ್ರಾ. ಪಂ. ರಾಮಸಾಗರ, ಸರ್ಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ “ವಿಶ್ವ ಪರಿಸರ ದಿನಾಚರಣೆ” ಕಾರ್ಯಕ್ರಮವನ್ನು ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ ಮನುಷ್ಯನ ನಿರಂತರ ಸ್ವಾರ್ಥಕ್ಕೆ ಗಿಡ ಮರಗಳು ನಾಶವಾಗಿ ಪರಿಸರ ಸಮತೋಲನಕ್ಕೆ ಹಾನಿಯಾಗಿದ್ದು, ಸಮಯಕ್ಕೆ ಸರಿಯಾಗಿ ಮಳೆಯಾಗದೇ ಸಂಕಷ್ಟವನ್ನು ಎದುರಿಸಬೇಕಾಗಿದೆ, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಟು ಅವುಗಳನ್ನು ಪೋಷಿಸಿ ಬೆಳೆಸುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದರು.
ನಂತರ ಶಾಲೆಯ ಆವರಣದಲ್ಲಿ ನೆಡಲಾದ ಸಸಿಗಳಿಗೆ ಹಸಿರೇ ಉಸಿರು,ಉಸಿರೇ ಹಸಿರು ಎನ್ನುವ ಧ್ಯೇಯ ವಾಕ್ಯದೊಂದಿಗೆ ಭಾರತೀಯ ನದಿಗಳ ಹೆಸರುಗಳಾದ ಗಂಗಾ, ಸಿಂಧು, ಕೃಷ್ಣ, ತುಂಗಭದ್ರ, ಕಾವೇರಿ, ಮಲಪ್ರಭಾ, ಶರಾವರಿ, ಬ್ರಹ್ಮಪುತ್ರ ಹೆಸರುಗಳನ್ನು ನಾಮಕರಣ ಮಾಡಿ ಇವುಗಳನ್ನು ಶಾಲೆಯ ವಿದ್ಯಾರ್ಥಿಗಳಿಗೆ ಪೋಷಿಸಿ ಬೆಳೆಸಲು ದತ್ತು ನೀಡಲಾಯಿತು.
ಕಾರ್ಯಕ್ರಮದಲ್ಲಿ ಪಿಡಿಒ ಹನುಮಂತಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕರಿಬಸವಯ್ಯಸ್ವಾಮಿ, ಗ್ರಾ.ಪಂ. ಸದಸ್ಯರಾದ ಮೌಲಸಾಬ್, ಶಿಕ್ಷಕರಾದ ಸುಗ್ಗೇನಹಳ್ಳಿ ರಮೇಶ್, ಸಹ ಶಿಕ್ಷಕರು, ಎಸ್ ಡಿ ಎಂ ಸಿ ಪದಾಧಿಕಾರಿಗಳು, ತಾ.ಪಂ.ಮನರೇಗಾ ಸಂಯೋಜಕರಾದ ಎಚ್.ಹನುಮೇಶ್,ಅರಣ್ಯ ಇಲಾಖೆಯ ವನಪಾಲಕ ನಾಗರಾಜ್, ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
