ಬಳ್ಳಾರಿ/ ಕಂಪ್ಲಿ : ಹೌದು, ರೈತರು ದಾರಿ ಯಾವುದಯ್ಯಾ ಹೊಲಕ್ಕೆ ಎನ್ನುವಂತಾಗಿದೆ.
ಕಂಪ್ಲಿ ತಾಲುಕಿನ ಕೋಟೆಯ ಪಂಪಾಪತಿ ದೇವಸ್ಥಾನ ದಿಂದ ರಾಮಸಾಗರ ಎಡೆಸುಸುಲ್ ಹೊಲ–ಗದ್ದೆಗಳ ರಸ್ತೆಗಳನ್ನು ಸುಧಾರಿಸುವ ಕಾರ್ಯ ನಿರೀಕ್ಷಿತವಾಗಿ ನಡೆದಿಲ್ಲ.
ಸಮರ್ಪಕ ರಸ್ತೆಗಳಿಲ್ಲ. ಪರಿಣಾಮ, ಅವರು ಸಂಚರಿಸಲು ಮತ್ತು ಕೃಷಿ ಉತ್ಪನ್ನಗಳನ್ನು ಮುಖ್ಯ ರಸ್ತೆಗೆ ಸಾಗಿಸುವುದಕ್ಕೆ ತೀವ್ರ ತೊಂದರೆ ಅನುಭವಿಸಬೇಕಾದ ಸ್ಥಿತಿ ಇದೆ.
ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ನಮ್ಮ ಹೊಲ–ನಮ್ಮ ದಾರಿ’ ಎನ್ನುವ ಯೋಜನೆ ರೂಪಿಸಿತ್ತು. ಆದರೆ, ಅದು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಸಂಪೂರ್ಣವಾಗಿ ಕಾರ್ಯಗತವಾಗಿಲ್ಲ. ಅಲ್ಲಲ್ಲಿ ನಡೆದಿರುವ ಕಳಪೆ ಕಾಮಗಾರಿಗಳಿಂದಾಗಿ ರಸ್ತೆಗಳು ಮತ್ತೆ ದುಃಸ್ಥಿತಿಗೆ ತಲುಪಿದ ಉದಾಹರಣೆಗಳಿವೆ.
ಅಗತ್ಯ ಅನುದಾನ ಹಾಗೂ ನಿರ್ವಹಣೆಯ ಕೊರತೆ ಕಾಡುತ್ತಿದೆ. ಸಂಚರಿಸಲು ಸಾಧ್ಯವಿಲ್ಲದಷ್ಟು ಕೆಲವೆಡೆ ಹೊಲದ ದಾರಿಗಳು ಹಾಳಾಗಿವೆ. ಮಳೆಯ ಅಬ್ಬರ, ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರದಿಂದಾಗಿ ಕೆಲ ರಸ್ತೆಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡಿವೆ. ಮುಂಗಾರು ಹಂಗಾಮು ಚುರುಕುಗೊಂಡಿರುವ ಸಂದರ್ಭದಲ್ಲಿ ರಸ್ತೆಗಳೇ ಸಮಸ್ಯೆಯಾಗಿ ಕಾಡುತ್ತಿದೆ
ಇತ್ತೀಚಿನ ದಿನಗಳಲ್ಲಿ ರಸ್ತೆಗಳು ಹಾಳಾಗುತ್ತಿವೆ. ಹೀಗಾಗಿ, ಆಗಾಗ ರಸ್ತೆಗಳನ್ನು ಸುಧಾರಿಸಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ.
ರೈತರಲ್ಲಿ ಬಹಳಷ್ಟು ಮಂದಿ ಭತ್ತ, ಬಾಳೆ ಹಾಗೂ ಕಬ್ಬು ಬೆಳೆಯುತ್ತಾರೆ. ಗದ್ದೆಗಳಿಂದ ಮಾರುಕಟ್ಟೆಗೆ ಹಾಗೂ ಕಾರ್ಖಾನೆಗಳಿಗೆ ಸಾಗಿಸಲು ಉತ್ತಮ ರಸ್ತೆ ಬೇಕು. ಆದರೆ, ರಸ್ತೆಗಳು ತೀವ್ರ ಹಾಳಾಗಿವೆ. ಮಳೆ ಬಂದಾಗ ಕೆಸರು ಗದ್ದೆಯಂತಾಗುತ್ತವೆ.
ಇನ್ನು ಮಳೆ ಅವಾಂತರದಿಂದ ಹೊಲಗಳಿಗೆ ಹೋಗುವ ರಸ್ತೆಗಳಲ್ಲಿ ದೊಡ್ಡ ತಗ್ಗು, ಗುಂಡಿಗಳು ಬಿದ್ದಿವೆ. ಅಲ್ಲದೆ ದುರಸ್ತಿ ಮಾಡದ ಕಾರಣ ಮುಳ್ಳಿನ ಗಿಡ-ಕಂಟಿಗಳು ಬೆಳೆದಿದ್ದು, ಕೆಲವಡೆ ಸಂಚರಿಸಲಾಗದ ಸ್ಥಿತಿಯಲ್ಲಿವೆ. ಇಂಥ ರಸ್ತೆಗಳಲ್ಲಿ ಸಂಚರಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತ ಸಮುದಾಯದ ಕಷ್ಟ ಹೇಳತೀರದು,
ಆರಂಭದಲ್ಲಿ ತೋರಿದ ಆಸಕ್ತಿಯನ್ನು ಇತ್ತೀಚಿನ ದಿನಗಳಲ್ಲಿ ಶಾಸಕರು ತೋರುತ್ತಿಲ್ಲ’ ಎಂಬ ಅಸಮಾಧಾನ ರೈತರದು.
ವರದಿ : ಜಿಲಾನಸಾಬ್ ಬಡಿಗೇರ್



















