ಗುರುಮಠಕಲ್/ ಕೊಟಗೇರಾ : ಇಂದು ಕೊಟಗೇರಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ರೋಗಿಗಳು ಆಸ್ಪತ್ರೆ ಬೀಗ ಕಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ, ಚಿಕಿತ್ಸೆಗೆ ಬರುವ ರೋಗಿಗಳಿಗೆ ಆಸ್ಪತ್ರೆ ನಾಮಫಲಕದಲ್ಲಿ ಮಾತ್ರ 24×7 ಕಾಣುತ್ತದೆ ಆದರೆ ಇಲ್ಲಿಯ ಸಿಬ್ಬಂದಿಗಳಿಗೆ ಅದು ಅನ್ವಯ ಆಗುವಂತೆ ಕಾಣುತ್ತಿಲ್ಲ, ಸರಿಯಾದ ಚಿಕಿತ್ಸೆ ಸಿಗದೇ ಅನಿವಾರ್ಯವಾಗಿ ಬೇರೆ ಊರುಗಳಿಗೆ/ಖಾಸಗಿ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣದ ಉದ್ದೇಶ ಮೂಲಭೂತವಾಗಿ ಏಕ-ವೈದ್ಯ ಚಿಕಿತ್ಸಾಲಯಗಳಾಗಿರುವ ಆರೋಗ್ಯ ಕೇಂದ್ರಗಳು, ಸಾಮಾನ್ಯವಾಗಿ ಸಣ್ಣ ಶಸ್ತ್ರಚಿಕಿತ್ಸೆಗಳಿಗೆ ಸೌಲಭ್ಯಗಳನ್ನು ಹೊಂದಿರುತ್ತವೆ, ವೈದ್ಯಕೀಯ ಆರೈಕೆಯನ್ನು ಒದಗಿಸುವುದು,
ಕುಟುಂಬ ಯೋಜನೆ ಸೇರಿದಂತೆ ತಾಯಿ-ಮಗುವಿನ ಆರೋಗ್ಯ, ಸುರಕ್ಷಿತ ನೀರು ಸರಬರಾಜು ಮತ್ತು ಮೂಲಭೂತ ನೈರ್ಮಲ್ಯ, ಸ್ಥಳೀಯವಾಗಿ ಸ್ಥಳೀಯ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ,ಪ್ರಮುಖ ಅಂಕಿಅಂಶಗಳ ಸಂಗ್ರಹಣೆ ಮತ್ತು ವರದಿ ಮಾಡುವಿಕೆ
ಆರೋಗ್ಯದ ಬಗ್ಗೆ ಶಿಕ್ಷಣ ನೀಡುವದು ಪ್ರಮುಖ ಉದ್ದೇಶವಾಗಿದೆ.
ತಾಲ್ಲೂಕಿನ ಕೊಟಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ವೈದ್ಯರು, ಸಿಬ್ಬಂದಿ ಹಾಜರಾಗದೆ ಕರ್ತವ್ಯಲೋಪ ಎಸಗುತ್ತಿರುವುದರಿಂದ ಸಂಕಷ್ಟ ಎದುರಿಸುವಂತಾಗಿದೆ ಇಂದು ಕರ್ತವ್ಯ ನಿರತ ವೈದ್ಯರು ರಜೆಯಲ್ಲಿದ್ದು ಕೇವಲ ಒಬ್ಬ ಆರೈಕೆ ಸಿಬ್ಬಂದಿ ಮಾತ್ರ ಬಂದಿರುವದಾಗಿ ಸ್ಥಳೀಯರು ದೂರಿದ್ದಾರೆ.
24 ಗಂಟೆ ತೆರೆಯಬೇಕಾದ ಆಸ್ಪತ್ರೆಯನ್ನು ಬೆಳಿಗ್ಗೆ 10 ಅಥವಾ 11ಕ್ಕೆ ತೆರೆಯಲಾಗುತ್ತದೆ, ಸಂಜೆ ಯಾಗುತ್ತಿದ್ದಂತೆ ಮುಚ್ಚುತ್ತಾರೆ, ವೈದ್ಯರು ಸರ್ಕಾರದ ನಿಯಮ ಗಾಳಿಗೆ ತೂರಿ ತಮಗಿಷ್ಟ ಬಂದಂತೆ ವರ್ತಿಸುತ್ತಿದ್ದಾರೆ. ಸಾಮಾನ್ಯವಾಗಿ ದಿನ ನಿತ್ಯ ಒಬ್ಬ ಮುಖ್ಯ ವೈದ್ಯಾಧಿಕಾರಿ, ಇಬ್ಬರು ನರ್ಸ್ಗಳು, ಲ್ಯಾಬ್ ಟೆಕ್ನಿಷಿಯನ್ ಇರಬೇಕು. ಆದರೆ ಒಬ್ಬ ನರ್ಸ್ ಮಾತ್ರ ಇರುತ್ತಾರೆ. ಔಷಧಿ, ಮಾತ್ರೆ, ತುರ್ತು ಚಿಕಿತ್ಸಾ ಸೌಲಭ್ಯ ಇಲ್ಲ. ಹೆಚ್ಚಿನ ಚಿಕಿತ್ಸೆಗೆ ಗುರುಮಠಕಲ್ ತೆರಳಬೇಕು ಎಂದು ನಿವಾಸಿಗಳು ತಮ್ಮ ಅಳಲು ಹೇಳಿಕೊಂಡಿದ್ದಾರೆ.
ಗಡಿ ಭಾಗದ ಬಹುತೇಕ ಯಾದಗಿರಿ ಜಿಲ್ಲೆ ಹಾಗೂ ಕಲಬುರಗಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯ ಲೋಪವೆಸಗಿ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಕಾರಣ ಆರೋಗ್ಯ ಸೇವೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ.
ಬಕ್ರೀದ್ ಹಬ್ಬದ ಪ್ರಯುಕ್ತ ಆಸ್ಪತ್ರೆ ವೈದ್ಯರಾದ ಡಾ. ಮನಿಶಾ ಮೇಲಾಧಿಕರಿಗಳ ಅನುಮತಿ ಪಡೆದು ರಜೆಯಲ್ಲಿರುವದು ತಿಳಿದು ಬಂದಿದೆ, ಉಳಿದ ಸಿಬ್ಬಂದಿಯನ್ನು ಕಾರಣ ಕೇಳಿ ಕೂಡಲೇ ಅವರ ಮೇಲೆ ಕ್ರಮ ತೆಗೆದು ಕೊಳ್ಳಬೇಕು, ಇಲ್ಲದಿದ್ದರೆ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಶ್ರೀಕಾಂತ ತಲಾರಿ ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷರು ಗುರುಮಠಕಲ್ ಎಚ್ಚರಿಕೆ ನೀಡಿದ್ದಾರೆ.
ಇದೇ ತಿಂಗಳ 14 ರಂದು ಯಾದಗಿರಿ ನಗರದಲ್ಲಿ ಮುಖ್ಯಮಂತ್ರಿಗಳು 400 ಕೋಟಿ ವೆಚ್ಚದಲ್ಲಿ ಆರೋಗ್ಯ ಆವಿಷ್ಕಾರ ಯೋಜನೆಗೆ ಚಾಲನೆ ನೀಡುತ್ತಿರುವದು ವಿಶೇಷ, ಸುಮರು 3 ಸಾವಿರ ಜನಸಂಖ್ಯೆ ಉಳ್ಳ ಕೊಟಗೇರಾ ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಾಣವಾದ ಆರೋಗ್ಯ ಕೇಂದ್ರ ಜನರ ಪರ ಕಾರ್ಯ ನಿರ್ವಹಿಸಿದರೆ ಸಾಕು.
ವರದಿ: ಜಗದೀಶ್ ಕುಮಾರ್ ಭೂಮಾ
