ಹುಬ್ಬಳ್ಳಿ : ಹೆಚ್ಚಿನ ಮಕ್ಕಳು ಶಾಲೆಗೆ ರಜೆ ಇದ್ದರೆ ಸಾಕು ಮೊಬೈಲ್, ಟಿವಿ ಮುಂದೆ ಕೂರುತ್ತಾರೆ. ಆದರೆ ಈ ಮಕ್ಕಳು ಶಾಲೆ ರಜೆ ದಿನಗಳಲ್ಲಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಹೆತ್ತವರು ಕೊಟ್ಟ ಪಾಕೆಟ್ ಮನಿಯನ್ನು ಉಳಿಸಿ, ತಾವೇ ಸಿಮೆಂಟ್, ಮರಳು, ಜಲ್ಲಿಕಲ್ಲು ಖರೀದಿಸಿ ತಂದು ದುರಸ್ಥಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಶಾಲಾ ಮಕ್ಕಳು ಮಾಡುತ್ತಿದ್ದಾರೆ.
ಹುಬ್ಬಳ್ಳಿ ನಗರದ ಅರುಣ್ ಕಾಲೋನಿಯಲ್ಲಿ ಶಾಲಾ ಮಕ್ಕಳು ಹಾಳಾಗಿರುವ ಪೇವರ್ ಬ್ಲಾಕ್ಗಳನ್ನು ಎತ್ತಿಟ್ಟು, ಆ ಸ್ಥಳವನ್ನು ಸ್ವಚ್ಚಗೊಳಿಸಿ, ನಂತರ ಪೇವರ್ಗಳನ್ನು ಸರಿಯಾಗಿ ಜೋಡಿಸಿ, ಅದಕ್ಕೆ ಸಿಮೆಂಟ್ ಹಾಕಿದ್ದಾರೆ. ಆ ಮೂಲಕ ರಸ್ತೆಯಲ್ಲಿ ಹಾದು ಹೋಗುವ ಪಾದಚಾರಿಗಳಿಗೆ, ವಾಹನ ಸವಾರರು ಸರಿಯಾಗಿ ಓಡಾಡಲು ಅನಕೂಲ ಮಾಡುತ್ತಿದ್ದರು. ಈ ಮಕ್ಕಳನ್ನು ನೋಡುತ್ತಿದ್ದಂತೆ, ಇಲ್ಲಿ ಬಾಲಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದಾರೆ ಅಂತ ಅನೇಕರು ಅಂದುಕೊಳ್ಳುತ್ತಿದ್ದರು. ಆದರೆ ಇವರೆಲ್ಲಾ ಬಾಲಕಾರ್ಮಿಕರಲ್ಲ, ಬದಲಾಗಿ ಬಾಲ ಸಮಾಜ ಸೇವಕರು. ಶಾಲಾ ಮಕ್ಕಳು ಅಂತ ಗೊತ್ತಾಗಿದ್ದು, ಅವರ ಕೆಲಸ ಮುಗಿದ ಮೇಲೆಯೇ.
ಹೌದು.. ನಗರದ ವೆಂಕಟೇಶ್ವರ ನಗರದಲ್ಲಿರುವ ಆರ್ಎಸ್ಎಸ್ನ ಮಾಧವ ಶಾಖೆ ಸ್ವಯಂ ಸೇವಕರಾಗಿರುವ ಈ ಮಕ್ಕಳು, ನಗರದ ವಿವಿಧ ಬಡಾವಣೆಯ ನಿವಾಸಿಗಳಾಗಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಹೋಗುವ ಈ ಮಕ್ಕಳು, ಇದೀಗ ತಮ್ಮ ಸಮಾಜಮುಖಿ ಕಾರ್ಯಗಳಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ರಜೆ ಇದ್ದಾಗ, ಬರಿ ಮೊಬೈಲ್, ಟಿವಿ ಮುಂದೆ ಕಾಲ ಕಳೆಯುವದಕ್ಕಿಂತ ಮಕ್ಕಳು, ಇಂತಹ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವುದು, ಇತರೇ ಮಕ್ಕಳಿಗೆ ಮಾದರಿಯಾಗಿದೆ. ಇಂತಹ ಕೆಲಸಕ್ಕೆ ಹೆತ್ತವರು ಕೂಡಾ ಪ್ರೋತ್ಸಾಹಿಸುತ್ತಿರುವುದು ಅಭಿನಂದನಾರ್ಹವಾಗಿದೆ. ಇದರಿಂದ ಮಕ್ಕಳಿಗೆ ಸಮಾಜಮುಖಿ ಕೆಲಸ ಮಾಡಿದ ಅನುಭವ ಜೊತೆಗೆ, ವ್ಯವಸ್ಥೆಯನ್ನು ಹಳೆಯುವದಕ್ಕಿಂತ, ತಾವೇ ಸಮಸ್ಯೆಗೆ ಪರಿಹಾರ ಕಲ್ಪಿಸುವ ಆನಂದ ಕೂಡ ಉಂಟಾಗುತ್ತಿರುವುದು ವಿಶೇಷವಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್
