ಬಳ್ಳಾರಿ / ಕಂಪ್ಲಿ : ರಾಜ್ಯ ಸರ್ಕಾರ ತನ್ನ ದೌರ್ಬಲ್ಯ ಮತ್ತು ಅಸಹಾಯಕತೆ ಮುಚ್ಚಿಕೊಳ್ಳಲು ವಾಲ್ಮೀಕಿ ಸಮಾಜದ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಅಮಾನತು ಮಾಡಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಸಂಸ್ಥಾನ ಮಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿ ಹೇಳಿದರು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದ ಕಂಪಲಿರಾಯ ವೇದಿಕೆಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಂಪ್ಲಿ ತಾಲೂಕು ಮಟ್ಟದ 10ನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ತಾಲೂಕು ವಾಲ್ಮೀಕಿ ಸಮಾಜದ ನೌಕರರಿಗೆ ಗೌರವ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ತಂಡದ ವಿಜಯೋತ್ಸವದ ಕಾಲ್ತುಳಿತದಲ್ಲಿ ಸರ್ಕಾರದ ವೈಫಲ್ಯದಿಂದಾಗಿ ಹನ್ನೊಂದು ಜನ ಸಾವನ್ನಪ್ಪಿದ್ದಾರೆ. ಆದರೆ, ಸರ್ಕಾರ ದಕ್ಷ ಅಧಿಕಾರಿಯನ್ನು ಅಮಾನತು ಮಾಡಿದೆ. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ ಕೊಡುವುದಕ್ಕಾಗಿ ಸಂವಿಧಾನ ಕೊಟ್ಟಿದ್ದಾರೆ. ಇತಿಹಾಸದ ಪುಟಗಳನ್ನು ಅವಲೋಕನೆ ಮಾಡಿದಾಗ ಬಹುತೇಕವಾಗಿ ಸಾಂಸ್ಕೃತಿಕ ನಾಯಕರಿಗೆ ಪುರಸ್ಕಾರದ ಬದಲು ತಿರಸ್ಕಾರವಾಗಿದೆ. ಈ ಜಗತ್ತಿಗೆ ರಾಮಾಯಣವನ್ನು ಆದಿಕವಿ ಮಹರ್ಷಿ ವಾಲ್ಮೀಕಿ ಬರೆದಿದ್ದಾರೆ. ದೇಶದಲ್ಲಿ ರಾಮನ ಮಂದಿರ ನಿರ್ಮಾಣವಾಗಿದೆ. ಆದರೆ, ರಾಮನ ಚರಿತ್ರೆ ಬರೆದ ಮಹರ್ಷಿ ವಾಲ್ಮೀಕಿಯನ್ನು ತಿರಸ್ಕರಿಸಲಾಗಿದೆ. ಇಂದಿನ ಪ್ರತಿಭಾ ಪುರಸ್ಕಾರ ಮತ್ತು ಸರ್ಕಾರಿ ನೌಕರರ ಸನ್ಮಾನ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ. ಆದ್ದರಿಂದ ವಾಲ್ಮೀಕಿ ಸಮುದಾಯದಲ್ಲಿ ಜಾಗೃತಿ, ಒಗ್ಗಟ್ಟು ಹೊಂದಿದಾಗ ಸರ್ಕಾರಗಳಿಗೆ ತಕ್ಕ ಉತ್ತರ ನೀಡಬಹುದು. ಇಂತಹ ಕಾರ್ಯಕ್ರಮಗಳ ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ಕಂಕಣ ಬದ್ದರಾಗಿರಬೇಕು ಎಂದರು.
ಶಾಸಕ ಜೆ.ಎನ್.ಗಣೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಪುರಸ್ಕಾರ ಭವಿಷ್ಯದ ಮಕ್ಕಳ ಶಿಕ್ಷಣಕ್ಕೆ ಉತ್ಸಾಹ, ಹುಮ್ಮಸ್ಸು ನೀಡುತ್ತದೆ. ಈಗಾಗಲೇ ಕಂಪ್ಲಿಯಲ್ಲಿ ಸಭೆ, ಸಮಾರಂಭ ಮಾಡಲು ವಾಲ್ಮೀಕಿ ಭವನ ನಿರ್ಮಿಸಲಾಗಿದೆ. ಮದಕರಿ ನಾಯಕ ವೃತ್ತಕ್ಕಾಗಿ ಸುಮಾರು 50 ಲಕ್ಷ ಅನುದಾನ ನೀಡಲಾಗಿದೆ. ಎಸ್.ಟಿ ವಿದ್ಯಾರ್ಥಿ ವಸತಿ ನಿಲಯಕ್ಕಾಗಿ ಈಗಾಗಲೇ 6 ಕೋಟಿ ಅನುದಾನ ಮೀಸಲಿಟ್ಟಿದೆ. 23 ಎಸ್ ಟಿ ಹಾಸ್ಟೆಲ್ ಘೋಷಣೆಯಾಗಿದ್ದು, ಮೊದಲು ಕಂಪ್ಲಿಯಲ್ಲಿ ಆಗಲಿದೆ. ಹಂಪಾದೇವನಹಳ್ಳಿಯಲ್ಲಿ ಅಟಾಲ್ ಬಿಹಾರಿ ವಾಜಪೇಯಿ ಶಾಲೆ ಆರಂಭಿಸಲಾಗುವುದು. ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರ ನೀಡಬೇಕು ಎಂದರು.
ತಾಲೂಕು ಅಧ್ಯಕ್ಷ ನೀರಗಂಟಿ ವೀರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಸೇರಿದಂತೆ ಸರ್ಕಾರಿ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸದಸ್ಯ ರಾಮಾಂಜಿನೇಯ, ಮುಖಂಡರಾದ ಬಿ.ನಾರಾಯಣಪ್ಪ, ರಾಮಾಂಜಿನಿ, ಎ.ಹುಲುಗಪ್ಪ, ಪೈಲ್ವಾನ್ ವಿರೇಶ, ಹಾಲುಮಾರೋ ಈರಣ್ಣ, ಕೆಂಚಪ್ಪ, ಬೂದಗುಂಪಿ ಅಂಬಣ್ಣ, ಪಿ.ವಿರೇಶ, ದ್ಯಾವಣ್ಣ, ಶೇಖರ ಸೇರಿದಂತೆ ವಾಲ್ಮೀಕಿ ಸಮಾಜದವರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
