
ಯಾದಗಿರಿ/ ಗುರುಮಠಕಲ್: ಕಾರ ಹುಣ್ಣಿಮೆ ಹಬ್ಬದ ಪ್ರಯುಕ್ತ ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಸೋಮವಾರ ಗ್ರಾಮೀಣ ಭಾಗದಿಂದ ಬಂದ ರೈತರು ಎತ್ತುಗಳು ಸೇರಿದಂತೆ ವಿವಿಧ ಜಾನುವಾರುಗಳಿಗೆ ಶೃಂಗರಿಸಲು ಅಲಂಕಾರಿಕ ಸಾಮಗ್ರಿಗಳನ್ನು ಭರ್ಜರಿಯಾಗಿ ಖರೀದಿಸಿದರು.
ದೇಶಕ್ಕೆ ರೈತ ಬೆನ್ನೆಲುಬಾದರೆ, ರೈತರಿಗೆ ಎತ್ತುಗಳೇ ಬೆನ್ನೆಲುಬು. ಅಧುನಿಕ ಕೃಷಿ ಯಂತ್ರಗಳು ಎಲ್ಲಾ ವಿಷಯಗಳಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ, ಒಂದು ಮಾತ್ರ ನಿಜ ರೈತರ ಜಮೀನಿನಲ್ಲಿ ಅತಿ ಹೆಚ್ಚು ದುಡಿಯುವುದು ಎತ್ತುಗಳು ಮಾತ್ರ, ಗ್ರಾಮೀಣ ಭಾಗಗಳಲ್ಲಿ ಮೊದಲಿಂದಲೂ ಕೃಷಿಗೆ ಎತ್ತುಗಳೇ ಆಧಾರ, ಹೀಗಾಗಿ ರೈತರು ಎತ್ತುಗಳನ್ನು ಮನೆಯ ಸದಸ್ಯನಂತೆ ಕಾಣುತ್ತಾರೆ ರೈತರು ಕಾರ ಹುಣ್ಣಿಮೆಯ ದಿನದಂದು ಎತ್ತುಗಳಿಗೆ ಕೃತಜ್ಞತೆ ಸಮರ್ಪಿಸುತ್ತಾರೆ.
ಎತ್ತುಗಳ ಅಲಂಕಾರಕ್ಕಾಗಿ ಕೊರಳಿಗೆ ಗಂಟೆ, ಮತಾಟಿ, ಮಗಡಾ, ಮೂಗುದಾರ, ಬಾರಕೋಲು, ಹಳದಿ, ಕೆಂಪು, ಹಸಿರು ಬಣ್ಣದ ವಾರ್ನಿಷ್, ಸರಜಂಗ ಸೇರಿದಂತೆ ವಿವಿಧ ರೀತಿಯ ಅಲಂಕಾರಿಕ ಸಾಮಗ್ರಿಗಳನ್ನು ಸಾವಿರಾರು ರೈತರು ಖರೀದಿ ಮಾಡಿದರು.
ಚಂಡರೀಕಿ, ಪುಟಪಾಕ, ನಜರಾಪುರ, ಮಿನಸಾಪೂರ್, ಅಮ್ಮ ಪಲ್ಲಿ, ಗಾಜರಕೊಟ್, ಶಿವಪುರ, ಕಾಕಲವಾರ್, ಚೆಪೆಟ್ಲ, ಯಾನಾಗುಂದಿ ಸೇರಿದಂತೆ ನೆರೆಯ ತೆಲಂಗಾಣ ರಾಜ್ಯದ ಕಾನುಕುರ್ತಿ, ವಿಠಲಪುರ, ದಾಮರಗಿದ್ದ ಸೇರಿದಂತೆ ಅನೇಕ ತಾಂಡಾಗಳಿಂದ ಆಗಮಿಸಿದ್ದ ಅಪಾರ ರೈತರು ಬೇಕಾದ ಸಾಮಾನುಗಳನ್ನು ಖರೀದಿಸಿದರು.
ಮುಂಗಾರು ಬಿತ್ತನೆ ಸಿದ್ಧತೆಯಲ್ಲಿರುವ ರೈತರು ಇನ್ನೇನು ಎರಡು ದಿನದ ಅವಧಿಯಲ್ಲಿ ಬರುವ ಕಾರಹುಣ್ಣಿಮೆಯನ್ನು ಆಚರಿಸಿ ಬಿತ್ತನೆಯಲ್ಲಿ ನಿರತರಾಗುತ್ತಾರೆ. ಇದಕ್ಕೂ ಮುನ್ನ ಎತ್ತುಗಳಿಗೆ ಸಿಂಗರಿಸಿ ಪ್ರಮುಖ ಬೀದಿಗಳಲ್ಲಿಯೂ ಮೆರವಣಿಗೆ ನಡೆಸಿ ಸಂಭ್ರಮಿಸುತ್ತಾರೆ.
ವರದಿ: ಜಗದೀಶ್ ಕುಮಾರ್ ಭೂಮಾ
