ನಮಸ್ಕಾರ ಓದುಗ ಮಿತ್ರರಿಗೆ,
ನಾವು ಭಾರತೀಯರು. ನಮ್ಮಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ಅದು ಭೌಗೋಳಿಕ, ಆರ್ಥಿಕ, ಸಾಮಾಜಿಕ, ಸಾಂಪ್ರದಾಯಿಕ, ಧಾರ್ಮಿಕ, ಸಾಂಸ್ಕೃತಿಕವಾಗಿಯೂ ನಾವೆಲ್ಲಾ ವೈವಿಧ್ಯತೆಯ ಅಡಿಯಲ್ಲಿ ಸಾಮರಸ್ಯದ ಬದುಕು ನಡೆಸುತ್ತಿದ್ದೇವೆ. ಎಲ್ಲರೂ ಒಂದಾಗಿ ಬಾಳುತ್ತಿದ್ದೇವೆ. ಅದಕ್ಕೆಲ್ಲಾ ಕಾರಣ ನಮಗೆ ನಾವೇ ಅರ್ಪಿಸಿಕೊಂಡ ನಮಗೆ ನಾವೇ ವಿಧಿಸಿಕೊಂಡ ನಿಯಮಗಳು. ಅದೇ ಸಂವಿಧಾನ.
ಅದು ನಮ್ಮೆಲ್ಲರ ರಕ್ಷಕ, ನಿರ್ದೇಶಕ, ಮಾರ್ಗದರ್ಶಕ ಕೂಡಾ. ಅದು ದೇಶದ ಬ್ಲೂ ಪ್ರಿಂಟ್, ಸಮಾಜದ ಇಂಜಿನಿಯರ್, ರೋಗಿಗೆ ವೈದ್ಯನಿದ್ದಂತೆ.
ದೇಶ ಭೌತಿಕವಾದರೆ ಅದರ ಆತ್ಮವೇ ಸಂವಿಧಾನ, ಅದು ಪ್ರತಿ ಭಾರತೀಯನಿಗೂ ಮೂಲಭೂತ ಹಕ್ಕುಗಳನ್ನ ಕೊಟ್ಟಿದೆ. ಮತ್ತೊಬ್ಬರ ಆಚರಣೆಗಳಿಗೆ ಗೌರವಿಸುವಂತೆಯೂ ಹೇಳಿದೆ. ಈಗ ವಿಷಯಕ್ಕೆ ಬರೋಣ.
ಜನಿವಾರ, ಕಾಲುಂಗುರು, ಕುಂಕುಮ, ಹಿಜಾಬು, ನಕಾಬು, ಟೋಪಿ, ಪಗಡಿ, ಕ್ರಾಸ್ ಇವೆಲ್ಲವೂ ಧರ್ಮಗಳ ಅಸ್ತಿತ್ವಗಳೇ. ಒಂದನ್ನ ಉಳಿಸಿ ಇನ್ನೊಂದನ್ನ ಅಳಿಸುವುದು ಯಾವ ನ್ಯಾಯ ಹೇಳಿ? ಸಂವಿಧಾನವೇ ನಮಗೆಲ್ಲ ರಕ್ಷಕ ಮತ್ತು ನಿರ್ದೇಶಕ. ಅದರ ನೆರಳಿನಲ್ಲೇ ಪ್ರತಿ ಧರ್ಮದ ಅನುಯಾಯಿಗಳು, ನಾಸ್ತಿಕರು ಎಲ್ಲರೂ ಶಾಂತರೀತಿಯಲ್ಲಿ ಬಾಳುತ್ತಿದ್ದೇವೆ ಮತ್ತೊಬ್ಬರ ಧಾರ್ಮಿಕ ವಿಚಾರಗಳಿಗೆ ಕೈ ಹಾಕುವುದೆಂದರೆ ಸಂವಿಧಾನ ನೀಡಿದ ಸ್ವಾತಂತ್ರ್ಯ, ಹಕ್ಕುಗಳಿಗೆ ಕೈ ಹಾಕಿದಂತೆ.
ಸಂವಿಧಾನದ 15ನೇ ವಿಧಿಯು ಯಾರೊಂದಿಗೂ ಜಾತಿ ಧರ್ಮ ಲಿಂಗ ಹುಟ್ಟಿನ ಆಧಾರದ ಮೇಲೆ ತಾರತಮ್ಯ ಮಾಡಬಾರದೆಂದು ಹೇಳುತ್ತದೆ. 16ನೇ ವಿಧಿಯು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಬೇಕೆನ್ನುತ್ತದೆ. ಹೀಗಿರುವಾಗ ಯಾಕೀ ದ್ವೇಷದ ಕಿಡಿಗಳು ಇನ್ನೂ ಸಮಾಜದಲ್ಲಿವೆ?
ಆರ್ಟಿಕಲ್ 26 ವ್ಯಕ್ತಿ ತಾನು ಬಯಸುವ ಧರ್ಮವನ್ನು ಆಚರಿಸಲು ಅವಕಾಶವಿದೆ. ಯಾರು ಅದನ್ನು ಕಸಿದುಕೊಳ್ಳುವಂತಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್, ಹೈಕೋರ್ಟ್ ಗಳ ತೀರ್ಪುಗಳು ಅನೇಕ ಬಾರಿ ಬಂದಿವೆ. ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಯಾರು ಅಡ್ಡಿಪಡಿಸುವಂತಿಲ್ಲ, ಅದು ಸಾಮಾನ್ಯ ಜ್ಞಾನವೂ ಕೂಡ.
ಯಾವ ಕಾನೂನುಗಳಿದ್ದರೂ ಅನಿಷ್ಟ ಆಚರಣೆಗಳಿಗೆ ಮಾತ್ರ ಕಡಿವಾಣ ಹಾಕಲಾಗುತ್ತಿಲ್ಲ. ರಾಜಕಾರಣಿಗಳೇ ಬೀದಿ ರೌಡಿಗಳಂತೆ ನಡುರಸ್ತೆಯಲ್ಲಿ ನಿಂತು ಹಿಜಾಬ್ ಹಾಕುವಂತಿಲ್ಲ ನಿಮಗೆ ಶಿಕ್ಷಣ ಮುಖ್ಯವೋ ಹಿಜಾಬ್ ಮುಖ್ಯವೋ ಎಂದು ದೊಡ್ಡ ಸುಧಾರಕನಂತೆ ಕೇಳುತ್ತಿದ್ದಾರೆ. ಈಗ ಜನಿವಾರದ ವಿಷಯಕ್ಕೆ ಸರ್ಕಾರವೇ ಬಂದು ಜನಿವಾರ ತೆಗೆದು ಪರೀಕ್ಷೆ ಬರೆಯಿರಿ ಎಂದಾಗ ಹಿಜಾಬ್ ತೆಗೆಸಿದ ರಾಜಕಾರಣಿಗಳು ಜನಿವಾರದ ಹಕ್ಕಿಗಾಗಿ ಹಾತೊರೆಯುತ್ತಿದ್ದಾನೆ. ಅಂದು ಹಿಜಾಬ್ ತೆಗೆಸಿದ ಕೈಗಳು ಜನಿವಾರ ತೆಗೆಸಲು ನಡುಗುತ್ತಿವೆ. ಯಾಕೆ? ಜನಿವಾರ ಮಾತ್ರ ಬೇಕೇ? ಹಿಜಾಬ್ ಬೇಡವೇ? ಅಂದು ಕೇಳಿದ ಪ್ರಶ್ನೆ ಇವತ್ಯಾಕೆ ಕೇಳುತ್ತಿಲ್ಲ, ಜನಿವಾರ ಬೇಕೋ ಇಲ್ಲ ಪರೀಕ್ಷೆ ಬೇಕೋ? ಎಂದು ಎಲ್ಲರ ಧಾರ್ಮಿಕ ಆಚರಣೆಗಳು ಒಂದೇ ಅಲ್ಲವೇ? ಅವರಿಗಿಷ್ಟ ಇರುವ ಧಾರ್ಮಿಕ ಆಚರಣೆ ಮಾಡಲು ಅವಕಾಶವಿದೆ. ಅದು ಈ ರಾಜಕಾರಣಿಗಳಿಗೆ ಗೊತ್ತಿದ್ದೂ ಹೊಲಸು ರಾಜಕಾರಣಕ್ಕೆ ಸುಮ್ಮನೆ ಸಮಾಜದಲ್ಲಿ ಧಾರ್ಮಿಕ ಸಂಘರ್ಷಕ್ಕೆ ಕಾರಣಗಳನ್ನು ಹುಡುಕೋದು ಒಬ್ಬರನ್ನ ಇನ್ನೊಬ್ಬರ ಮೇಲೆ ಎತ್ತಿಕಟ್ಟಿ ಲಾಭ ಮಾಡಿಕೊಳ್ಳೋದು ಮುಟ್ಟಾದಳೆಂಬ ಕಾರಣಕ್ಕೆ ಹೊರಗೆ ಹಾಕಿ ಪರೀಕ್ಷೆ ಬರೆಸಿದ ಮನಸ್ಥಿತಿಗಳು, ಜನಿವಾರ ತೆಗೆಸಿದ ಆತ್ಮಗಳು, ಹಿಜಾಬ್ ಮುಖ್ಯವೋ ಶಿಕ್ಷಣ ಮುಖ್ಯವೋ ಎಂದ ಮತಾಂಧರು ಈ ಮೂರೂ ಒಂದೇ ಬೀಜದ ಹೆಮ್ಮರಗಳು. ಅರಿವಿನ ಕೊಡಲಿ ಪೆಟ್ಟಿನಿಂದ ಆ ಹೆಮ್ಮರಗಳನ್ನ ಕತ್ತರಿಸಲೇಬೇಕು. ಇಲ್ಲವಾದರೆ ಭವಿಷ್ಯ ಇನ್ನಷ್ಟು ಮೌಢ್ಯದ ನೆರಳಲ್ಲಿರಬೇಕಾದೀತು! ಬುದ್ಧ ಬಸವ ಅಂಬೇಡ್ಕರ್ ಎಂಬ ಕೊಡಲಿಗಳೇ ಹೆಮ್ಮರಕ್ಕೆ ಔಷಧಿ. ಜ್ಞಾನವೇ ಪರಿಹಾರ.
ನಿಸರ್ಗ ಎಲ್ಲಾ ವ್ಯತ್ಯಾಸಗಳಿಂದ ಪ್ರತಿ ಜೀವಿಗೂ ಜನ್ಮ ನೀಡಿದೆ. ಅದು ನಿಸರ್ಗದ ಸೌಂದರ್ಯ, ಅದೇ ದೌರ್ಬಲ್ಯವೆಂದು ತಾರತಮ್ಯ ಶೋಷಣೆ ಸೃಷ್ಟಿಸಿದ್ದು ಮತಿಗೆಟ್ಟ ಮಾನವ. ಅಂದು ಹಿಜಾಬು ತೆಗೆಸಿ ನಕ್ಕವರು ಇಂದು ಜನಿವಾರಕ್ಕಾಗಿ ಅಳುತಿದ್ದಾರೆ. ಅಂದು ಹಿಜಾಬು ತೆಗೆಸಿ ಗೆದ್ದೆವೆಂದು ಖುಷಿಪಟ್ಟಿರಿ. ಇಂದು ಅಳುತ್ತಿದ್ದೀರಿ ಜನಿವಾರ ಎಷ್ಟು ಮುಖ್ಯವೋ ಹಿಜಾಬು ಕೂಡಾ ಅಷ್ಟೇ ಮುಖ್ಯವೆಂದು ಭಾವಿಸದಿರುವುದು ಸಂಕುಚಿತ ಮನಸ್ಥಿತಿಯಲ್ಲವೇ? ನೋಡಿ ಕರ್ಮ ಯಾರನ್ನೂ ಬಿಡುವುದಿಲ್ಲ. ಆದರೂ ಜನಿವಾರದ ವಿಷಯದಲ್ಲಿ ನನಗೆ ಬೇಸರವಿದೆ. ಇದೇನು ಸೋಲು ಗೆಲುವಿನ ಆಟವಲ್ಲ. ಮುಸ್ಲಿಮರಿಗಾದದ್ದು ಹಿಂದುಗಳಿಗೂ ಆಗಲಿ ಎಂದು ಖುಷಿಪಡುವ ದ್ವೇಷ ನಾಗರಿಕ ಸಮಾಜಕ್ಕೆ ಒಳ್ಳೇದಲ್ಲ.
ತಾವು ನಂಬಿರುವ ಕರ್ಮ ಸಿದ್ಧಾಂತ ತಮ್ಮನ್ನು ಬಿಡುವುದಿಲ್ಲವೆನ್ನುವ ಸತ್ಯ ಇಷ್ಟು ಬೇಗ ಸತ್ಯವಾಯ್ತು ನೋಡಿ. ದ್ವೇಷ ಹಂಚಿದವರಿಗೆ ದ್ವೇಷವೇ ಸಿಗುವುದು. ನಾವು ಪ್ರೀತಿಯನ್ನೇ ಕೊಡೋಣ. ದ್ವೇಷ ನಮ್ಮ ಲಕ್ಷಣವಲ್ಲ. ಇನ್ನಾದರೂ ಬದಲಾಗಿ ಮಕ್ಕಳ ಶಿಕ್ಷಣಕ್ಕೆ ನಿಮ್ಮ ಹೊಲಸು ಧರ್ಮ ರಾಜಕಾರಣ, ಜಾತಿ ರಾಜಕಾರಣ ತಂದು ತೊಂದರೆ ಕೊಡದಿರಿ. ಶಿಕ್ಷಣ ಆಮ್ಲಜನಕದಂತೆ ಶುದ್ಧವಾಗಿದ್ದರೆ ದೇಹಕ್ಕೂ ದೇಶಕ್ಕೂ ಆರೋಗ್ಯಕರ.
ಹಿರಿಯರು ಮನೆಯೇ ಮೊದಲ ಪಾಠ ಶಾಲೆ ಎಂದು ಸುಮ್ಮನೆ ಹೇಳಿಲ್ಲ. ನೈತಿಕ ಪಾಠಗಳು ಮನೆಯಿಂದಲೇ ಶುರುವಾಗಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತಮ ಮನೆಯೇ ಪ್ರಾಥಮಿಕ ಇಟ್ಟಿಗೆ. ಸಂಘಟಿತ ಸಮಾಜದಲ್ಲಿ ಬದುಕುತ್ತಿರುವ ನಮಗೆ ಮನೆಯೇ ಮೊದಲ ನೈತಿಕ ಶಾಲೆಯಾಗಿದ್ದು, ಅದರ ಪಾತ್ರ ಅತ್ಯಂತ ಮಹತ್ವದ್ದು. ಪೋಷಕರು ಕಲಿಸುವ ಮೌಲ್ಯಗಳು ವ್ಯಕ್ತಿಯ ದೃಷ್ಟಿಕೋನದ ಮೇಲೆ ಪರಿಣಾಮ ಬೀರುತ್ತವೆ. ದೃಷ್ಟಿಕೋನವನ್ನು ರೂಪಿಸುತ್ತವೆ. ಮಕ್ಕಳಿಗೆ ಮೌಢ್ಯ ತುಂಬುವ ಬದಲು ವೈಚಾರಿಕತೆ, ಚಿಂತನಶೀಲತೆಯನ್ನು ಬೆಳೆಸಿದರೆ ಅದೇ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಮೊದಲ ಹೆಜ್ಜೆ. ಬಲವಂತವಾಗಿ ಯಾವುದನ್ನು ಬದಲಿಸಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅದು ತಾತ್ಕಾಲಿಕ ಮಾತ್ರ. ರಚನಾತ್ಮಕ ಬದಲಾವಣೆ ಮುಖ್ಯ. ಅದು ಕೇವಲ ಶಿಕ್ಷಣ – ಸಾಕ್ಷರತೆ, ವೈಚಾರಿಕತೆಯಿಂದ ಮಾತ್ರ ಸಾಧ್ಯ. ಅದನ್ನ ಮನೆಯಿಂದ ಹಿಡಿದು ಶಾಲಾ ಕಾಲೇಜುಗಳ ತನಕ ಎಲ್ಲರೂ ಮಾಡಬೇಕು. ಸಮಾಜವು ಆ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು. ಅಂದಾಗಲೇ ಶಾಶ್ವತ ಬದಲಾವಣೆ ಸಾಧ್ಯ.
ವಿಶ್ವಗುರು ಎಂದರೆ ಜ್ಞಾನದ ಆಧಾರದಲ್ಲಾಗಬೇಕು, ಮೌಢ್ಯದ ನೀಚ ಆಚರಣೆಗಳ ಆಧಾರದಲ್ಲಲ್ಲ. ಹೆಣ್ಣನ್ನು ನಿಕೃಷ್ಟ ಸ್ಥಾನಕ್ಕಿಳಿಸಿ, ಯಾವುದೇ ಸಮುದಾಯದ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಂಡು, ವ್ಯಕ್ತಿಯ ನಂಬಿಕೆಗಳಿಗೆ ಧಕ್ಕೆ ತಂದು ವಿಶ್ವಗುರು ಆಗಲಾರೆವು. ಧರ್ಮ ಸಂಪ್ರದಾಯಗಳ ಬುನಾದಿ ಮೇಲೆ ಕಟ್ಟಿದ ಯಾವ ದೇಶವು ಉಳಿದಿಲ್ಲ, ಆಫ್ಘಾನಿಸ್ಥಾನ, ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ ಹೀಗೆ ಜಗತ್ತಿನ ಅನೇಕ ದೇಶಗಳು ನಷ್ಟವನ್ನೇ ಅನುಭವಿಸಿವೆ. ಕಾರಣ ಧರ್ಮ. ಧರ್ಮ ಮನೆಯಲ್ಲಿ ಮನದಲ್ಲಿದ್ದರೆ ಅತೀ ಉತ್ತಮ. ರಾಜಕಾರಣಕ್ಕೆ ಧರ್ಮ ಬರಲೇಬಾರದು ಬೀದಿಗಿಳಿಯಬಾರದು. ಅದನ್ನು ಬಳಸಿಕೊಂಡು ಬೆಳೆದ ದೇಶ ಯಾವುದೂ ಇಲ್ಲ. ನನ್ನ ದೇಶ ಭಾರತ ಆ ಸಾಲಲ್ಲಿ ನಿಲ್ಲದಿರಲಿ ಎನ್ನುವುದಷ್ಟೇ ನನ್ನ ದೇಶ ಪ್ರೇಮ.
- ಮೆಹಬೂಬ್ ಆರ್. ಕೆ, ಗಾಂಧಿನಗರ
