ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಬಳಿಯ ಯಲ್ಲಪ್ಪ ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ. ರ. ವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಜನ್ಮದಿನದ ಅಂಗವಾಗಿ ಕಂಪ್ಲಿ ಕ್ಷೇತ್ರ ಘಟಕದಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್, ಪೆನ್, ಪನ್ಸಿಲ್ ಮಂಗಳವಾರ ವಿತರಿಸಿದರು.
ಕರವೇ ಕಂಪ್ಲಿ ಕ್ಷೇತ್ರ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಮಾತನಾಡಿ, ಕ. ರ. ವೇ ಹುಟ್ಟು ಹಾಕಿ, ನಾಡು ನುಡಿಗಾಗಿ ಹಗಲಿರುಳು ಹೋರಾಟ ಮಾಡಿದ್ದಾರೆ. ಕನ್ನಡಾಭಿಮಾನಕ್ಕಾಗಿ ಸಾಕಷ್ಟು ಕಷ್ಟಗಳನ್ನು ಪಟ್ಟಿದ್ದಾರೆ. ಇದರಿಂದ ಕನ್ನಡ ನಾಡಿನಾದ್ಯಂತ ರಾರಾಜಿಸುವಂತಾಗಿದೆ. ಸರ್ಕಾರ ಕಡ್ಡಾಯವಾಗಿ ಕನ್ನಡ ಪರಿಪಾಲನೆಗೆ ಸೂಕ್ತ ಕ್ರಮವಹಿಸಬೇಕು. ನಾಡು-ನುಡಿ ರಕ್ಷಣೆಗಾಗಿ ಹೊರಾಟ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆ ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದೆ. ನಾಡು ನುಡಿ ವಿಚಾರದಲ್ಲಿ ಹೋರಾಟ ಮಾಡುತ್ತಿರುವ ನಮ್ಮಂತಹ ನೂರಾರು ಕನ್ನಡದ ಕಟ್ಟಾಳುಗಳನ್ನು ಬೆಳೆಸಿ ನಾಯಕರನ್ನಾಗಿ ಮಾಡಿದ ಕೀರ್ತಿ ನಾರಾಯಣಗೌಡರಿಗೆ ಸಲ್ಲುತ್ತದೆ. ಇವರ ಜನ್ಮದಿನದ ಪ್ರಯುಕ್ತ ಇಲ್ಲಿನ ಸರ್ಕಾರಿ ಶಾಲೆಯ 40 ಮಕ್ಕಳಿಗೆ ನೋಟ್ ಪುಸ್ತಕ, ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಶೇಖರ, ಮುಖ್ಯಗುರು ಜೆ. ವೆಂಕೋಬಪ್ಪ, ಕ್ಷೇತ್ರ ಗೌರವಾಧ್ಯಕ್ಷ ಬಿ.ವಿ.ಗೌಡ, ಉಪಾಧ್ಯಕ್ಷ ಡಿ.ಎಸ್. ಪ್ರಸಾದ್, ನಗರ ಘಟಕ ಅಧ್ಯಕ್ಷ ಜಿ. ನಾಗರಾಜ, ಉಪಾಧ್ಯಕ್ಷ ಹೂಗಾರ ಗಣೇಶ, ವಿದ್ಯಾರ್ಥಿ ಘಟಕ ಅಧ್ಯಕ್ಷ ಮುನ್ನಾ, ಪದಾಧಿಕಾರಿಗಳಾದ ಜಿ. ವೀರನಗೌಡ, ಪಿ.ರಾಘವೇಂದ್ರ, ರಾಮಚಂದ್ರ, ಗೌಳೇರು ಮಂಜುನಾಥ, ಪ್ರವೀಣ, ಬಸವರಾಜ, ಯಲ್ಲಪ್ಪ ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ
