ವಿಶೇಷ ಲೇಖನ : ಆಮಿರ್ ಅಶ್ಅರೀ, ಬನ್ನೂರು
“ಅಲ್ರೀ ಜೀವ್ಮಾನಂದಲ್ಲಿ ಒಂದು ಸಲಿ ಮದುವೆಯಾಗಕತ್ತಿವಿ ಅಲ್ವಾ ಚಲೋ ನಾನ್ ವೆಜ್ ಅಡುಗೆ ಮಾಡಿಸಬಹುದಲ್ವೇನ್ರೀ? ಮತ್ತೇಕೆ ಎಲ್ರೂ ವೆಜ್ ಅಡುಗೆ ಮಾಡಿಸ್ತಾರೆ?” ಯಾವುದೇ ಮದುವೆ ಮುಂಜ್ವಿ ಬರಲಿ ಎಲ್ಲರೂ ವೆಜ್ ಊಟ ಮಾಡಿಸುವುದ್ನಾ ನೋಡಿ ಗ್ರಾಮದ ಹಿರಿಯರೊಬ್ಬರಲ್ಲಿ ಕೇಳಿದೆ.
ಸಾಹೇಬ್ರೇ ನೋಡ್ರೀ ನಮ್ಮ ಗ್ರಾಮ ಬಹಳಾ ದೊಡ್ಡದೈತೆ.
ನಮ್ದೇನಪ್ಪಾ ಒಷ್ಟೂ ಬರ್ಬೇಕಾ.? ನಾವು ಒಸ್ಟ್ರನಾ ಕರೀತೀವಿ, ಅವ್ರೂ ಬರ್ತಾರೆ, ಅವ್ರೂ ಕಾರ್ಯಕ್ರಮಕ್ಕ ನಮ್ನಾ ಕರೀತಾರೆ
ನಾವು ಹೋಗ್ತೀವಿ. ಇನ್ನೊಂದೆನಪ್ಪಾಂದ್ರೆ ಎಲ್ರೂ ಸಿಸ್ತಾಗಿ ಉಣ್ಬೇಕ್ನೋಡು. ನೀವೂ ಹೇಳಿದ್ದ ನಾನ್ ವೆಜ್ ಊಟ ಎಲ್ರೂ ಉಣ್ಬೇಕಲ್ವಾ? ಬಂದೋರಿಗೆ ತೊಂದ್ರೆ ಆಗ್ಬಾರ್ದ ನೋಡ. ಅದಕ್ಕ ವೆಜ್ ಅಡುಗೆ ಮಾಡ್ತೀವಿ. ಮದುವೆಗ ಬರ್ತಾರ ಮದುಮಕ್ಳಿಗ ಹಾರೈಸ್ತಾರ ಸಿಸ್ತ್ ಉಣ್ತಾರ ಹೋಗ್ತಾರ. ನಮ್ಗ ಇದ್ಸಾಕಪ್ಪ. ಒಂದು ಗ್ಲಾಸ್ ನೀರು ಕುಡಿದಂತೆ ಗ್ರಾಮಸ್ಥರ ಸೌಹಾರ್ದತೆಯ ಬಾಂಧವ್ಯವನ್ನು ಮತ್ತು ಸಹಕಾರದ ಅನರ್ಘ್ಯ ಮನೋಭಾವವನ್ನು ಒಂದೇ ಮಾತಲ್ಲಿ ಒಂದು ಜನ್ಮಕ್ಕಾಗುವಷ್ಟು ಆ ಹಿರಿ ಜೀವಿ ವಿವರಿಸಿತು.
ರೊಟ್ಟಿ,ಚಪಾತಿ, ವಿವಿಧ ಕಾಲು ಪಲ್ಯೆ, ಬೂಂದಿ,ಲಡ್ಡು, ಜೆಲೇಬಿ ಮತ್ತೆ ಅನ್ನ ಸಾಂಬಾರೂ ಹೀಗೆ ಹಲವು ರುಚಿಕರ ಆಹಾರ, ನಾನು ಹೋದ ಉತ್ತರ ಕರ್ನಾಟಕದ ಬಹುತೇಕ ಮದುವೆಗಳಲ್ಲಿ ಕಾಣಿಸಿಕೊಂಡಿದ್ದು. ಇದನ್ನು ಭಾವೈಕ್ಯತೆಯ ಆಹಾರ ಪದ್ಧತಿ ಎಂದರೂ ತಪ್ಪಿಲ್ಲ. ಒಂದೊಂದು ಅಡುಗೆಗಳಿಗೆ ನಾನ್ ವೆಜ್ ಆಹಾರವನ್ನು ಮೀರಿಸುವ ರುಚಿಯಿದೆ ಎಂದರೂ ಕಮ್ಮಿ.ಮತ್ತೆ ಮತ್ತೆ ಹಾಕಿಸಿಕೊಂಡದ್ದೆ ಬಹಳ. ಮಧ್ಯಾಹ್ನ ಸಿಸ್ತು ಊಟ. ರಾತ್ರಿಗೆ ಹಸಿವಿಲ್ಲ. ರಾತ್ರಿ ಖಾಲಿ ಹೊಟ್ಟೆಗೆ ಮಲಗಬಾರದೆಂಬ ಪ್ರವಾದಿಯವರ ವಚನ. ಬಾಳೆಹಣ್ಣು ತಿಂದು ಮಲಗಿದ ನೆನಪು.
ಬಹು ಸಂಖ್ಯೆಯ ಭೋಜನಕ್ಕೆ ಬೂಂದಿ (ಲಾಡು ಪುಡಿ) ಇರುತ್ತದೆ, ಇರಲೇಬೇಕು.ಮದುವೆಯ ಮೊದಲ ತಯಾರಿ. ಪಕ್ಕಾ ನೈಸರ್ಗಿಕ ತಯಾರಿಕೆ. ಒಂದು ಕ್ವಿಂಟಾಲ್ ಸಕ್ಕರೆ, ನಲವತ್ತು ಕೇಜಿ ಕಡಲೆ ಹಿಟ್ಟು, ಗೋಡಂಬಿ, ದ್ರಾಕ್ಷಿ ಹೀಗೆ ಒಂದಿಷ್ಟು ಸಾಮಾನುಗಳಿದ್ದರೆ ಕುಚಿಕರ ಬೂಂದಿ ತಯಾರಿಸಬಲ್ಲರು. ಹಳ್ಳಿಗಳಲ್ಲಿ ಯಾವುದೇ ಕಾರ್ಯಕ್ರಮವಿರಲಿ ಅದೂ ಮದುವೆ, ಜಾತ್ರೆ, ಉರೂಸ್, ಪುರಾಣ ಹೀಗೆ ಏನೇ ಇದ್ದರೂ ಸ್ವತಃ ಊರವರೇ ನಿಂತು ಮಡುವ ಪರಿಗೆ ನಾನಂತೂ ಬೆರಗಾದೆ. ಅಡುಗೆಗೆ ಹೊರಗಿಂದ ಕಾಸು ಕೊಟ್ಟು ಭಟ್ಟರನ್ನು ತರುವ ಪದ್ಧತಿ ಹಳ್ಳಿಯದ್ದಲ್ಲ. ಅಡುಗೆಯ ಮುಂದಾಳತ್ವ ವಹಿಸಿಕೊಂವರಿಗೆ ಒಂದು ಮಾತು ತಿಳಿಸಿದರೆ, ತಾವೇ ಬಂದು ಬೇಕಾದ ಸಾಮಗ್ರಿಗಳ ಪಟ್ಟಿಯನ್ನು ಬರೆದುಕೊಟ್ಟು, ಅಡುಗೆ ಮಾಡಿ, ಮದುವೆ ಅಥವಾ ಕಾರ್ಯಕ್ರಮ ಮುಗಿದು ಪಾತ್ರೆಗಳನ್ನು ತೊಳೆದು ಹೋಗುವ ತನಕ ಜೊತೆಗಿರುತ್ತಾರೆ. ಅಡುಗೆಯ ಮಾಹಿತಿ ಸಿಕ್ಕರೆ ಊರವರೇ ದೌಡಾಯಿಸುವರು. ಯಾರನ್ನೂ ಕರೆಯುವ ಅಗತ್ಯ ಇರುವುದಿಲ್ಲ. ಮನೆಗೊಬ್ಬಂತೆ ಇದ್ದೇ ಇರುತ್ತಾನೆ. ಹಿರಿಯರು ಮತ್ತು ಯುವಕರ ಜೊತೆಗೆ ಸಣ್ಣ ಸಣ್ಣ ಕೆಲಸಗಳಿಗೆ ಕೈಜೋಡಿಸಿ ತಮ್ಮ ಇರುವಿಕೆಯನ್ನು ಖಾತರಿಪಡಿಸುವ ಮಕ್ಕಳ ಶುಭ್ರ ಕ್ಷಣ ನೋಡಲೇಬೇಕು. ಈ ನಡೆಗೆ ಶತಮಾನಗಳ ಚಾರಿತ್ರಿಕ ಪರಂಪರೆಯಿದೆ. ಇದರ ಮುಂದುವರಿಕೆಗಾಗಿ ಗ್ರಾಮಸ್ಥರ ಪ್ರಾಮಾಣಿಕ ಪ್ರಾರ್ಥನೆ. ಭವಿಷ್ಯದ ಗ್ರಾಮವನ್ನು ನಡೆಸುವ ವರ್ತಮಾನದ ಯುವ ಸಮೂಹ ಈ ಸಾಂಘಿಕ ಸೇವಾ ಮನೋಭಾವನೆ ನಿರ್ನಾಮಗೊಳಿಸುವರು ಎಂಬ ಆತಂಕ ಹಿರಿಯರು ಈರುಳ್ಳಿ ಕತ್ತರಿಸುತ್ತಲೇ ತೋಡಿಕೊಳ್ಳುತ್ತಾರೆ. ಹಳ್ಳಿಗಳ ಮದುವೆ, ಜಾತ್ರೆ, ಉರೂಸು, ಪುರಾಣ ಕಾರ್ಯಕ್ರಮಕ್ಕೆ ಸೇರುವ ಜನಸ್ತೋಮ ಮತ್ತು ಅನ್ನಸಂತರ್ಪಣೆಗೆ ಗತಕಾಲದ ಸೌಹಾರ್ದತೆಯ ಸ್ಪರ್ಶತೆಯಿದೆ. ಈ ಪಾರಂಪರಿಕ ಸನ್ನಡತೆ ಹಳ್ಳಿಗಳ ಅಸ್ಮಿತೆಗೆ ಉಳಿದಿರುವ ಕೊನೇಯ ಕುರುಹು.
ಕೊನೆಯ ಮಾತು ಮದುವೆಗೆ ಬಂದವರು ಹೊಟ್ಟೆ ತುಂಬಾ ತಿಂದರೂ, ಬೀಗರು ಊರಿಗೆ ಅಲ್ಪಸ್ವಲ್ಪ ಹೊಯ್ದರು, ನೆರೆಹೊರೆಯವರಿಗೆ ಹಂಚಿದರೂ ಮದುವೆ ಮನೆಯಲ್ಲಿ ಬೂಂದಿ ಇನ್ನೂ ಬೇಕಾದಷ್ಟು.
