
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು
ಕುಳಗೇರಿ ಕ್ರಾಸ್: ಇಲ್ಲಿಯ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಾವು ಕೆಲಸ ಮಾಡಿದ್ದೇವೆ. ನಮಗೆ ನಾಲ್ಕೈದು ವಾರಗಳಿಂದ ಕೂಲಿ ಹಣ ನೀಡಿಲ್ಲ, ಜೊತೆಗೆ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಚಿರ್ಲಕೊಪ್ಪ ಗ್ರಾಮದ ಕೂಲಿ ಕಾರ್ಮಿಕರು ಸಲಿಕೆ, ಬುಟ್ಟಿ, ಪಿಕಾಸಿ ಸೇರಿದಂತೆ ತಮ್ಮ ಸಲಕರಣೆಗಳನ್ನು ಹೊತ್ತು ತಂದು ಗ್ರಾ.ಪಂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಾವೆಲ್ಲಾ ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ ಆದರೆ ಕೂಲಿ ವೇತನ ಒಬ್ಬರಿಗೆ ಹೆಚ್ಚು ಒಬ್ಬರಿಗೆ ಕಡಿಮೆ ನೀಡುತ್ತಿದ್ದಾರೆ. ಕೆಲಸ ಮಾಡದವರ ಖಾತೆಗೆ ಕೂಲಿ ದುಡ್ಡು ಜಮಾ ಮಾಡುತ್ತಾರೆ. ಈ ಕುರಿತು ಇಂಜಿನಿಯರ್ ಅವರನ್ನು ಪೋನ್ ಮೂಲಕ ಸಂಪರ್ಕಿಸಿ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ನಾವು ದುಡಿದ ಕೂಲಿ ಹಣದಲ್ಲಿ ಲಂಚ ಕೇಳುತ್ತಿದ್ದಾರೆ ಎಂದು ಮಹಿಳಾ ಕೂಲಿ ಕಾರ್ಮಿಕರು ಆರೋಪಿಸಿದರು. ಈ ಇಂಜನಿಯರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೂರಾರು ಪುರುಷ ಹಾಗೂ ಮಹಿಳಾ ಕೂಲಿ ಕಾರ್ಮಿಕರು ಗ್ರಾ. ಪಂ. ಮುಖ್ಯದ್ವಾರದಲ್ಲಿ ಕುಳಿತು ಧರಣಿ ನಡೆಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಜಿಲ್ಲಾ ಸಂಚಾಲಕ ಶಂಕರ ಹೂಗಾರ ಮಾತನಾಡಿ ನಮ್ಮ ಕೂಲಿ ಕಾರ್ಮಿಕರ ಸಂಪೂರ್ಣ ಕೂಲಿ ಹಣ ನೀಡುತ್ತಿಲ್ಲ ನಮ್ಮ ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ಕೂಲಿ ಹಣ ಪಾವತಿಸದೆ, ಕಾರ್ಮಿಕರ ಎನ್ಎಮ್ಆರ್ ಜೀರೋ ಮಾಡಿ ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿ ಕಾರ್ಯ ನಿರ್ವಹಿಸುವ ಇಂಜಿನಿಯರ್ ನರೆಗಾ ಯೋಜನೆಯ ನಿಯಮಗಳನ್ನು ಗಾಳಿಗೆ ತೂರಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನ್ಯಾಯ ಸಿಗುವವರೆಗೂ ನಮ್ಮ ಕಾರ್ಮಿಕರ ಜೊತೆ ನಾವು ಪ್ರತಿಭಟಿಸುವುದಾಗಿ ಹೇಳಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮನವೊಲಿಸುವಲ್ಲಿ ಹರಸಾಹಸ ಪಟ್ಟರು. ಇದ್ಯಾವುದನ್ನೂ ಲೆಕ್ಕಿಸದ ಕಾರ್ಮಿಕರು ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಅಧಿಕಾರಿಗಳ ಭ್ರಷ್ಟಾಚಾರ ಕುರಿತು ಹಾಡಿನ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾ. ಪಂ ಅಧ್ಯಕ್ಷೆ ರೇಣುಕಾ ಹಿರಗನ್ನವರ, ಬಾದಾಮಿ ಪಿಎಸ್ಐ ವಿಠಲ ನಾಯಕ, ನರೆಗಾ ಎ.ಡಿ ಸತೀಶ, ತಾ. ಪಂ ಎಂಜನಿಯರ ಸಿದ್ದು ಹಿರೇಮಠ, ಪಿಡಿಒ ಎಸ್ ಜಿ ಪರಸನ್ನವರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದರು.
ಕೂಲಿ ಕಾರ್ಮಿಕರು ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸಿದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬರಲು ಹಿಂದೇಟು ಹಾಕಿದರು. ತಡವಾಗಿ ಎಂಟ್ರಿ ಕೊಟ್ಟ ಅಧಿಕಾರಿಗಳು ಕಾರ್ಮಿಕರನ್ನು ಸಮಾಧಾನ ಪಡಿಸಲು ಹರಸಾಹಸ ಪಡಬೇಕಾಯಿತು. ಪೊಲೀಸರು ಮದ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಅವಾಚ್ಯ ಶಬ್ದಗಳಿಂದ ಮಾತನಾಡುವ ಇಂಜನಿಯರ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯರು ಆಗ್ರಹಿಸಿದರು. ನಂತರ ಸಭೆ ನಡೆಸಿದ ಅದಿಕಾರಿಗಳು ಇಂಜನಿಯರ್ ಅವರನ್ನು ಕೂಡಲೇ ವರ್ಗಾವಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವರದಿ ನಿಂಬಯ್ಯ ಕುಲಕರ್ಣಿ, ಬಾದಾಮಿ
