ಬಳ್ಳಾರಿ / ಕಂಪ್ಲಿ : ಬಿಜೆಪಿಯವರ ರಾಜಕೀಯ ಷಡ್ಯಂತ್ರದಿಂದ ಕಂಪ್ಲಿ ಶಾಸಕರ ಮನೆ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಸಂಸದ, ಶಾಸಕರ ಮನೆ ಮೇಲೆ ದಾಳಿ ಮಾಡಿಸಿರುವುದು ಖಂಡನೀಯ ಎಂದು ಬಳ್ಳಾರಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಹಾಗೂ ಪುರಸಭೆ ಸದಸ್ಯ ಸಿ.ಆರ್.ಹನುಮಂತ ಆರೋಪಿಸಿದರು.
ಪಟ್ಟಣದ ಸಂತೆ ಮಾರುಕಟ್ಟೆ ಬಳಿಯಲ್ಲಿ ಕಾರಹುಣ್ಣಿಮೆ ಅಂಗವಾಗಿ ಎತ್ತುಗಳ ಕರಿ ಹರಿಸಿದ ನಂತರ ಮಾತನಾಡಿ, ಇ.ಡಿಯವರು ಕೇಂದ್ರದ ಬಿಜೆಪಿಯವರ ಕೈಗೊಂಬೆಯಾಗಿದ್ದಾರೆ, ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯವರಿಗೆ ಅಧಿಕಾರ ಇಲ್ಲದ ಪರಿಣಾಮ ಜನಪರವಾದ ಕಾಂಗ್ರೆಸ್ ಸರ್ಕಾರದ ಶಾಸಕರ ಮೇಲೆ ಇ.ಡಿ ದಾಳಿ ಮಾಡಿಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್ನವರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿಸುತ್ತಿರುವುದು ಶೋಭೆಯಲ್ಲ ಎಂದರು.
ನಾಡಿನಲ್ಲಿ ಉತ್ತಮ ಮಳೆ, ಬೆಳೆ ಹಾಗೂ ಲೋಕಕಲ್ಯಾಣಕ್ಕಾಗಿ ಹಲವು ವರ್ಷಗಳಿಂದ ಕಂಪ್ಲಿಯ ಸಂತೆಮಾರುಕಟ್ಟೆ ಬಳಿಯಲ್ಲಿ ಎತ್ತುಗಳ ಕರಿ ಹರಿಸುತ್ತಾ ಬರಲಾಗಿದೆ. ಅದೇ ತರದಲ್ಲಿ ಈ ಬಾರಿಯೂ ಸಹ ಕರಿ ಹರಿಸಲಾಗಿದ್ದು, ಸಮೃದ್ಧ ಮಳೆ, ಬೆಳೆಯೊಂದಿಗೆ ರೈತರ ಬದುಕು ಹಸನಾಗಿರಲಿ ಎಂದರು.
ಇಲ್ಲಿ ಹರಿ ಕರಿಯಲ್ಲಿ ಕೆ.ಮಂಜು ಅವರ ಎತ್ತುಗಳು ಪ್ರಥಮ ಸ್ಥಾನದೊಂದಿಗೆ ನಗದು ಬಹುಮಾನ, ಶೀಲ್ಡ್, ಯಾಸೀನ್ ಬಾಷಾ ಎಂಬ ರೈತರ ಎತ್ತುಗಳು ದ್ವಿತೀಯ ಸ್ಥಾನದೊಂದಿಗೆ ನಗದು ಬಹುಮಾನ ಮತ್ತು ಶೀಲ್ಡ್ ತನ್ನದಾಗಿಸಿಕೊಂಡರು.
ಕರಿ ಹರಿಯುವ ವೇಳೆ ಜನರ ಶಿಳ್ಳೆ, ಚಪ್ಪಾಳೆ ಮೊಳಗಿದವು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಮುಖಂಡರಾದ ಎಂ.ಸಿ.ಮಾಯಪ್ಪ, ಸಿ.ಎ.ವಿರೂಪಾಕ್ಷಿ, ಸಿ.ಜಗನ್ನಾಥ, ಸಿ.ಎಂ.ರಾಮು, ಹೊನ್ನಾಪುರ ಚನ್ನ, ಕೆ.ಚನ್ನಪ್ಪ, ಸಿ.ಶಿವು, ಎ.ರಾಘು, ನಾಗರಾಜ, ಮಹೇಶ, ರಾಜ, ಬಸುವ, ಶಶಿಕುಮಾರ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಯುವಕರು, ಮಕ್ಕಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
