ಲೋಕಾಯುಕ್ತ ನ್ಯಾಯಾಧೀಶರ ಆದೇಶದಂತೆ ಕಂದಾಯ ಕಡತಗಳ ಪರಿಶೀಲನೆ.
ಕೊರಟಗೆರೆ: ಲೋಕಾಯುಕ್ತ ನ್ಯಾಯಾಧೀಶರ ಆದೇಶದಂತೆ ಜಿಲ್ಲೆಯ ಹತ್ತು ತಾಲ್ಲೂಕುಗಳ ತಹಶೀಲ್ದಾರ್ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಬುಧವಾರ ದಿಢೀರ್ ಭೇಟಿ ನೀಡಿ ಕಂದಾಯ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ.
ಕೊರಟಗೆರೆ, ಮಧುಗಿರಿ, ಪಾವಗಡ, ಸಿರಾ, ತುಮಕೂರು, ಸೇರಿದಂತೆ ಹತ್ತು ತಾಲ್ಲೂಕಿನ ತಹಶೀಲ್ದಾರ್ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕರು, ಶಿರಸ್ತೆದಾರ್, ಕೇಸ್ ವರ್ಕರ್ಗಳ ನಿದ್ದೆ ಕೆಡಿಸಿದ್ದಾರೆ.
ಏಕಕಾಲದಲ್ಲಿ ದಿಢೀರ್ ಭೇಟಿ ನೀಡಿ:
ಲೋಕಾಯುಕ್ತ ನ್ಯಾಯಾಧೀಶರ ಆದೇಶದನ್ವಯ ಜಿಲ್ಲೆಯ ಲೋಕಾಯುಕ್ತ ಎಸ್.ಪಿ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಹತ್ತು ತಂಡಗಳನ್ನು ರೂಪಿಸಿಕೊಂಡು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕಂದಾಯ ಇಲಾಖೆ ಏಕಾಕಾಲದಲ್ಲಿ ಬೆ.೧೦:೪೫ಕ್ಕೆ ಧೀಡಿರ್ ಭೇಟಿ ನೀಡಿದ್ದು, ಮೇಲೆ ಏಕಕಾಲದ ದಿಡೀರ್ ಭೇಟಿ ನೀಡಿದ್ದು, ಬೆಳಗ್ಗೆ ೧೦:೪೫ಕ್ಕೆ ಲೋಕಾಯುಕ್ತ ಪೋಲಿಸರು ಕೊರಟಗೆರೆಯ ಕಂದಾಯ ಇಲಾಖೆ ಕಚೇರಿಗೆ ಭೇಟಿ ನೀಡಿದ ವೇಳೆ ಕಚೇರಿ ಶೌಚಾಲಯ, ಮೀಟಿಂಗ್ ಹಾಲ್, ಸಕಾಲ ಕೇಂದ್ರ, ಪಹಣಿ ವಿತರಣಾ ಕೇಂದ್ರ, ಭೂಮಿ ಕೇಂದ್ರ, ಸಿಬ್ಬಂದಿಗಳ ಹಾಜರಾತಿ ಪುಸ್ತಕವನ್ನು ಸೇರಿದಂತೆ ಎಲ್ಲವನ್ನು ಪರಿಶೀಲನೆ ಮಾಡಿದರು.
ಸಾಗುವಳಿ ಅರ್ಜಿ ಪರಿಶೀಲನೆ:
ಕೆಲಕಾಲ ಕಚೇರಿಯ ಒಳಗೆ ಸಾರ್ವಜನಿಕರ ಪ್ರವೇಶವನ್ನು ಸ್ಥಗಿತಗೊಳಿಸಿ ಕಚೇರಿಯ ಬಾಗಿಲಿನ್ನ ಬಂದ್ ಮಾಡಿ ಬಗರ್ ಹುಕ್ಕುಂ ಸಾಗುವಳಿಗೆ ಸಂಬಂಧಪಟ್ಟ ೫೦,೫೩,೫೭ ಅರ್ಜಿಗಳ ಕಡತಗಳ ಪರಿಶೀಲನೆ ಮಾಡಿದ ಲೋಕಾಯುಕ್ತ ಅಧಿಕಾರಿಗಳು. ನಂತರ ಸಾರ್ವಜನಿಕರು ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಕಛೇರಿ ಪ್ರವೇಶ ಮಾಡಲು ಸಹಕರಿಸಿದ್ದಾರೆ.
ಲೋಕಾಯುಕ್ತ ಇನ್ಸ್ ಪೆಕ್ಟರ್ ನಿರ್ಮಲ.ವಿ, ರಮೇಶ್, ರಾಮಚಂದ್ರ, ಮಂಜುಳಾ, ಲಿಂಗರಾಜು ಸೇರಿದಂತೆ ಇತರೆ ಅಧಿಕಾರಿಗಳ ತಂಡ ಬುಧವಾರ ದಾಖಲೆಗಳ ಪರಿಶೀಲನೆಯಲ್ಲಿ ನಿರತರಾದರು.
ಲೋಕಾಯುಕ್ತ ಅಧಿಕಾರಿಗಳಿಂದ ಸಿಬ್ಬಂದಿಗಳ ತಪಾಸಣೆ:
ಕಚೇರಿಯಲ್ಲಿ ಹಾಜರಿದ್ದ ಕಂದಾಯ ಇಲಾಖೆಯ ಸಿಬ್ಬಂದಿಗಳಾದ ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷರು, ಕೇಸ್ ವರ್ಕರ್ ಗಳು, ಡಿ ಗ್ರೂಪ್ ನೌಕರರು ಸೇರಿದಂತೆ ಎಲ್ಲಾ ಸಿಬ್ಬಂದಿಗಳ ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಜೇಬು, ಬ್ಯಾಗ್, ಕೊಠಡಿ, ರೆಕಾರ್ಡ್ ರೂಂ, ಕೇಸ್ ವರ್ಕರ್ ಗಳ ಕಂಪ್ಯೂಟರ್ ಗಳನ್ನು ಸೇರಿದಂತೆ ಎಲ್ಲವನ್ನೂ ಪರಿಶೀಲಿಸಿದ್ದಾರೆ.
ಅರ್ಜಿಗಳ ಪರಿಶೀಲನೆ, ಅಗತ್ಯ ಕ್ರಮಕ್ಕೆ ಸೂಚನೆ:
ಸಕಾಲ ಅರ್ಜಿಗಳ ವಿಲೇವಾರಿ, ದುರಸ್ತು ಅರ್ಜಿಗಳ ಸ್ಥಿತಿ ಮತ್ತು ಕಾರ್ಯ, ಬಗರ್ ಹುಕ್ಕುಂ ಅಡಿ ಸಾಗುವಳಿ ಚೀಟಿ ನೀಡಿರುವ ರೈತರಿಗೆ ಪಹಣಿ ವಿತರಣೆ, ಪಿಂಚಣಿ, ರೈತರ ಜಮೀನುಗಳ ಪೋಡಿ, ಪೌತಿ ವಾರಸು ಮೇರೆಗೆ ಖಾತೆ ಮತ್ತು ಪಹಣಿ, ಆರ್ಆರ್ಟಿ ಕಡತಗಳ ವಿಲೇವಾರಿ, ಬಗರ್ ಹುಕ್ಕುಂ ನಮೂನೆ ೫೦,೫೩,೫೭ರ ಅರ್ಜಿಗಳ ವಿಲೇವಾರಿ, ರೈತರ ಸಮಸ್ಯೆಗಳ ಕುರಿತಾದ ಅರ್ಜಿಗಳ ವಿಲೇವಾರಿ ಸೇರಿದಂತೆ ಕಂದಾಯ ಇಲಾಖೆಯ ಎಲ್ಲ ಸರ್ಕಾರಿ ಸೌಲಭ್ಯಗಳು ನಾಗರೀಕರಿಗೆ ಕಾಲಹರಣ ಮಾಡದೆ ಕಾನೂನು ಕ್ರಮ ಕೈಗೊಂಡು, ಶೀಘ್ರ ಅಗತ್ಯ ಕ್ರಮ ವಹಿಸಬೇಕೆಂದು ಲೋಕಾಯುಕ್ತ ಇನ್ಸ್ಪೆಕ್ಟರ್ ವಿ ನಿರ್ಮಲ ತಹಶೀಲ್ದಾರ್ ಮಂಜುನಾಥ್ಗೆ ಮಾರ್ಗದರ್ಶನ ನೀಡಿದರು.
- ಕರುನಾಡ ಕಂದ
